ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಲಕಾಡು ಶ್ರೀನಿಧಿ


 ತಲಕಾಡು ಶ್ರೀನಿಧಿ 


ಆತ್ಮೀಯರಾದ ನಮ್ಮ ತಲಕಾಡು ಶ್ರೀನಿಧಿ ಹವ್ಯಾಸಿ ಕವಿ.  ಇವರು ಹನಿ, ಚುಟಕ, ಕವಿತೆ, ಹಾಸ್ಯ ಬರಹಗಳನ್ನು ನಿರಂತರವಾಗಿ ಮೂಡಿಸುತ್ತಾ ಬಂದಿದ್ದಾರೆ.  ಜೂನ್ 23 ನಮ್ಮ ಶ್ರೀನಿಧಿ ಅವರ ಜನ್ಮದಿನ.

ತಲಕಾಡಿನವರಾದ ಟಿ.ಕೆ. ಶ್ರೀನಿಧಿ ಮೈಸೂರಲ್ಲಿ ಓದಿ ಬೆಂಗಳೂರಲ್ಲಿ ವೃತ್ತಿ ಮಾಡಿ, ನಿವೃತ್ತರಾಗಿ ಕ್ರಿಯಾಶೀಲ ಬದುಕು ನಡೆಸುತ್ತಿದ್ದಾರೆ.

ಪ್ರತಿನಿತ್ಯ ಶ್ರೀನಿಧಿ ಅವರ ಸಕಾರಾತ್ಮ ಮನೋಭಾವದ ಕವಿತೆಗಳು, ಚುಟಕಗಳು, ಹನಿಗಳು, ಹಾಸ್ಯಗಳು ಫೇಸ್ಬುಕ್ ಗೋಡೆಯ ಮೇಲೆ ಫಳಫಳಿಸುತ್ತವೆ. ಪತ್ರಿಕೆಗಳಲ್ಲೂ ಇವು ಮೂಡುತ್ತವೆ.  ಎಲ್ಲೇ ಕ್ರಿಕೆಟ್ ನಡೆದರೂ ಅದರ ವೀಕ್ಷಣಾ ಮುಖ್ಯಾಂಶಗಳು ಇವರ ಫೇಸ್ಬುಕ್ ಗೋಡೆಯ ಮೇಲೆ ಪ್ರತ್ಯಕ್ಷ. ಅಂತೆಯೇ ಕುಟುಂಬ ವತ್ಸಲರಾದ ಇವರ ಚಿತ್ರಗಳು ಕುಟುಂಬದೊಂದಿಗೆ, ಹಾಗೂ ಸ್ನೇಹಪ್ರಿಯರಾದ ಇವರ ಚಿತ್ರಗಳು ಸ್ನೇಹಿತರೊಂದಿಗೆ ನಿರಂತರ ಕಾಣುವಂತದ್ದು.

ಶ್ರೀನಿಧಿ ಅವರನ್ನು ಸಮಾರಂಭಗಳಲ್ಲಿ ಕಂಡಾಗ ನನಗೆ ಅವರಲ್ಲಿ ಕಂಡಿರುವ ಗುಣವೆಂದರೆ ಗಾಂಭೀರ್ಯ. ಪರಿಚಯ ಮತ್ತು ಸ್ನೇಹ ಮೂಡುತ್ತಿರುವಂತೆ ನಿಧಾನವಾಗಿ ನಗೆಮೊಗದೊಂದಿಗೆ ಅರಳುವ ಹಾಸ್ಯಲೇಪನದ ಆದರೆ, ಎಲ್ಲೆ ಮೀರದ ಜೇನಿನಂತ ಸವಿಮಾತು.  ಜೊತೆಗೆ,  ಇಲ್ಲಿ ನಾನು ಯಾರಿಗಾದರೂ ಏನಾದರೂ ಕೆಲಸ ಮಾಡಿಕೊಟ್ಟು ಉಪಯುಕ್ತನಾಗಬಹುದೆ ಎಂಬ ಸೂಕ್ಷ್ಮ ಸಂವೇದನಾ ಮನೋಭಾವದ ನೋಟ ಮತ್ತು ಅವಕಾಶ ಇದ್ದಲ್ಲಿ ಕೆಲಸ ಮಾಡಲು ಎಲ್ಲರಿಗೂ ಮೊದಲು ಇವರೇ ಮುಂದು.  ಸದಾ ಸಂತೃಪ್ತ ಭಾವ.

ಶ್ರೀನಿಧಿ ಅವರ ಆಶಯ ಎಂಬ ಒಂದು ಕವಿತೆ ಅವರನ್ನು ಒಂದಷ್ಟು ಪರಿಚಯಿಸುತ್ತದೆ:

ಬೆರೆಯಬೇಕೆನಿಸುತ್ತದೆ ಕೆಲವೊಮ್ಮೆ
ಬೇರೆ ಇರಬೇಕೆನಿಸುತ್ತದೆ ಇನ್ನು ಕೆಲವೊಮ್ಮೆ
ಬಿರಿದ ಹೂವಾಗುತ್ತದೆ ಮನ ಕೆಲವೊಮ್ಮೆ
ಬರಿದೆ ಮೊಗ್ಗಾಗಿಯೇ ಇರುತ್ತದೆ ಮತ್ತೆ ಕೆಲವೊಮ್ಮೆ
ಬುರುಬುರನೆ ಉಕ್ಕುವ ಉತ್ಸಾಹ ಕೆಲವೊಮ್ಮೆ
ಬರದೆ ಮೊಂಡು ಹಿಡಿದು ನಿಂತ ದನದಂತೆ ಕೆಲವೊಮ್ಮೆ
ಬೇರೆ ಬೇರೆಯದೇ ಆಯಾಮಗಳು ಬದುಕಿನುದ್ದಕೂ
ಬೇರಿಗೆ ಬೆಸೆದುಕೊಂಡ ನೂರು ಕೊಂಡಿಗಳು
ಬರಸೆಳೆದೋ ಬರೆ ಎಳೆದೋ ನಾ
ಬರಿದಾಗುವವರೆಗೆ ಬರೆಸುತ್ತಲೇ ಇರಬೇಕು!

ನಾನು ಶ್ರೀನಿಧಿ ಅವರೊಡನೆ ಕಳೆದ ಸಮಯ ಕಡಿಮೆ.  ಆದರೆ ಅವರೊಡನೆ ಇದ್ದ ಕೆಲವು ಕ್ಷಣಗಳೆಲ್ಲ ಅನಿಸಿತ್ತು 'ಈ ಉಪಸ್ಥಿತಿ ಪ್ರಭಾವಯುತ'.  ಆತ್ಮೀಯ ಶ್ರೀನಿಧಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.

Happy birthday Srinidhi Tk Sir 🌷🙏🌷

ಕಾಮೆಂಟ್‌ಗಳು

  1. ತಲಕಾಡು ಶ್ರೀನಿಧಿ ನನ್ನನ್ನು ಮಗುವಿನಿಂದ ಎತ್ತಿ ಬೆಳೆಸಿದ ಅಣ್ಣ! ಅವರ ಕುರಿತು ಈ ತಾಣದಲ್ಲಿ ಓದಿದ್ದು ಖುಷಿಯಾಯಿತು. ಅವರ ಪ್ರೊಫ಼ೈಲ್ ಫ಼ೋಟೋಗಳಲ್ಲಿ ನಾನೂ ಇರುವುದು ಇನ್ನೂ ಖುಷಿ.. 😍👌

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ