ಮಂಜುಳಾ
ಮಂಜುಳಾ
ಕನ್ನಡ ಚಲನಚಿತ್ರಗಳಲ್ಲಿ ವಿಶಿಷ್ಟ ರೀತಿಯಲ್ಲಿ ಕಂಗೊಳಿಸಿದ ನಾಯಕಿಯರಲ್ಲಿ ಮಂಜುಳಾ ಪ್ರಮುಖರ ಸಾಲಿನಲ್ಲಿ ನಿಲ್ಲುತ್ತಾರೆ. ಇಂದು ಅವರ ಜನ್ಮದಿನ ಅಂತ ಕೆಲವು ಮೂಲ ಹೇಳುತ್ತೆ. ನಾನು ಏಪ್ರಿಲ್ 5 ಅಂದುಕೊಂಡಿದ್ದೆ. ಇರಲಿ ಇಷ್ಟವಾದ ಸಾಧಕರನ್ನು ನೆನೆಯೋಕೆ ದಿನ ಒಂದು ನೆಪ ಅಷ್ಟೇ.
ಮಂಜುಳಾ ಹುಟ್ಟಿದ ವರ್ಷ 1951. ಕೇವಲ ತಮ್ಮ 35 ವರ್ಷದ ಅಲ್ಪಾಯುಷ್ಯದಲ್ಲೇ ಅವರು ತಮ್ಮ ಅಚ್ಚಳಿಯದ ಛಾಪನ್ನು ಬಿಟ್ಟು ಹೋದರು.
ಮಂಜುಳಾ ತಮ್ಮ ಓದಿನ ದಿನದಲ್ಲೇ ನೃತ್ಯ ಪ್ರವೀಣೆಯಾಗಿ ಹಲವಾರು ನೃತ್ಯ ರೂಪಕಗಳಲ್ಲಿ ಕಂಗೊಳಿಸಿದ್ದರು. ಕಾಲೇಜಿನ ದಿನಗಳಲ್ಲಿ ಹಲವು ಸಿನಿಮಾ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರು, ಮುಂದೆ ಶೀಘ್ರಗತಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶ ಪಡೆದರು. ಸಿನಿಮಾ ರಂಗದಲ್ಲಿ ಸಾಮಾನ್ಯವಾಗಿ ನಟಿಯರಲ್ಲಿ ಎರಡು ರೀತಿಯ ವಿಂಗಡನೆ ಕಾಣುವುದಿದೆ. ಒಂದು ರೀತಿಯ ನಟಿಯರು, ನಾಯಕಿಯರಿಗಾಗಿ ಹೆಣೆದ ಪಾತ್ರಗಳಲ್ಲಿ ಹೆಸರು ಮಾಡಿದ್ದರೆ, ಮತ್ತೊಂದು ರೀತಿಯ ನಟಿಯರು ನಾಯಕರೊಂದಿಗೆ ಮರಸುತ್ತುವ ಪಾತ್ರಗಳಲ್ಲಿ ಒಂದಷ್ಟು ಬಣ್ಣದ ಮೆರುಗಿನಲ್ಲಿ ಪ್ರಾಧಾನ್ಯತೆ ಪಡೆದವರು.
ನಾಯಕ ನಟರಿಗೆ ಪ್ರಾಧಾನ್ಯತೆಗಳಿದ್ದ ಚಿತ್ರಗಳಲ್ಲೂ ಅದಕ್ಕೆ ಸರಿ ಸಮಾನವಾಗಿ ಜೊತೆ ಜೊತೆಯಾದ ಪಾತ್ರಗಳನ್ನು, ಅಷ್ಟೇ ಸಮ ಮಹತ್ವದಲ್ಲಿ ನಟಿಸಿದ ಅಪರೂಪದ ನಟಿ ಎಂದರೆ ಮಂಜುಳಾ ಒಬ್ಬರೇ. ಈ ನಿಟ್ಟಿನಲ್ಲಿ ಅವರು ರಾಜ್ ಕುಮಾರ್ ಅವರೊಂದಿಗೆ ನಟಿಸಿದ ‘ಸಂಪತ್ತಿಗೆ ಸವಾಲ್’; ವಿಷ್ಣುವರ್ಧನ್ ಜೊತೆ ನಟಿಸಿದ ‘ಗಲಾಟೆ ಸಂಸಾರ’, ‘ಸೊಸೆ ತಂದ ಸೌಭಾಗ್ಯ’, ‘ವಸಂತ ಲಕ್ಷ್ಮಿ’; ಶ್ರೀನಾಥ್ ಜೊತೆ ನಟಿಸಿದ ‘ಬದುಕು ಬಂಗಾರವಾಯ್ತು’, ‘ಹುಡುಗಾಟದ ಹುಡುಗಿ’, ‘ಬೆಸುಗೆ’; ಶಂಕರ್ ನಾಗ್ ಜೊತೆ ನಟಿಸಿದ ‘ಸೀತಾ ರಾಮು’ ಇವು ಪ್ರಮುಖವಾಗಿ ನೆನಪಿನಲ್ಲಿ ಉಳಿಯುವ ಚಿತ್ರಗಳು.
ಮಂಜುಳಾ ಅವರು ಬಜಾರಿ ಪಾತ್ರಗಳಲ್ಲಿ ಮಾಡಿದ್ದರೂ ಆ ಪಾತ್ರಗಳಲ್ಲಿ ಅವರು ಬೆರೆಸುತ್ತಿದ್ದ ಹಿತ ಮಿತವಾದ ಗಡಸುತನ, ಹಾಸ್ಯ ಪ್ರವೃತ್ತಿ, ಸೂಕ್ಷ್ಮ ಸ್ತ್ರೀ ಸಂವೇದನೆ, ಮುಗ್ದತೆ, ಮುಖಭಾವದ ಅಭಿವ್ಯಕ್ತಿ ಇವೆಲ್ಲಾ ಒಂದಕ್ಕೊಂದು ಪೂರಕವಾಗಿ ಬೆರೆತ ಬಗೆ ವಿಶಿಷ್ಟವಾದದ್ದು. ಕನ್ನಡವನ್ನೂ ಸೇರಿ ಹಲವು ಭಾಷೆಗಳಲ್ಲಿ ಮಂಜುಳಾ ಅವರು ನಿರ್ವಹಿಸಿದ ಇಂತಹ ಪಾತ್ರಗಳ ಪುನರಾವರ್ತನೆಯ ಪ್ರಯತ್ನಗಳು ಅಲ್ಲಲ್ಲಿ ನಡೆದವಾದರೂ ಅದು ಇನ್ಯಾರಲ್ಲೂ ಇಷ್ಟು ಹದವಾದ ಸಂಮಿಶ್ರತೆಯಲ್ಲಿ ಕಂಗೊಳಿಸಲಿಲ್ಲ.
ಮಂಜುಳಾ ಅವರು ಕಾದಂಬರಿ ಆಧಾರಿತ ಮತ್ತು ಭಾವ ಪೂರ್ಣ ಪಾತ್ರಗಳಲ್ಲಿ ಸಹಾ ಮನೋಜ್ಞ ಅಭಿನಯ ನೀಡಿ ಪ್ರಸಿದ್ಧರಾಗಿದ್ದರು ಎಂಬುದು ಮಹತ್ವದ ಅಂಶವಾಗಿದೆ. ಅವರ ‘ಬೆಸುಗೆ’, ‘ಎರಡು ಕನಸು’, ‘ಸವತಿಯ ನೆರಳು’, ‘ದೀಪಾ’, ‘ದೇವರ ಗುಡಿ’, ‘ಕುಂಕುಮ ರಕ್ಷೆ’, ‘ನಿನಗಾಗಿ ನಾನು’, ‘ಮಯೂರ’ ಮುಂತಾದ ಚಿತ್ರಗಳು ಪ್ರೇಕ್ಷಕರು ಮತ್ತು ವಿಮರ್ಶಾ ವಲಯಗಳೆರಡರಲ್ಲೂ ಅಪಾರ ಮೆಚ್ಚುಗೆ ಪಡೆದಿದ್ದವು ಎಂಬುದು ಗಮನಾರ್ಹವಾಗಿದೆ.
ಸೊಬಗಿನ ಕಂಗಳ ಸುಂದರಿಯಾಗಿ, ವಿವಿಧ ಪಾತ್ರಗಳ ಅಭಿನಯವನ್ನು ಸುಲಲಿತವಾಗಿ ನಿರ್ವಹಿಸುವ ಚಾತುರ್ಯತೆಯಿಂದ ಕಂಗೊಳಿಸಿದ ಮಂಜುಳಾ ಅವರ ಇನ್ನಿತರ ಚಿತ್ರಗಳಲ್ಲಿ ಪ್ರಮುಖವಾದ ‘ದಾರಿ ತಪ್ಪಿದ ಮಗ’, ‘ಭಕ್ತ ಕುಂಬಾರ’, ‘ಪ್ರೊಫೆಸರ್ ಹುಚ್ಚೂರಾಯ’, ‘ಮಿಥುನ’, ‘ತಾಯಿಗಿಂತ ದೇವರಿಲ್ಲ’ , ‘ಕಿಟ್ಟು ಪುಟ್ಟು’, ‘ಸಿಂಗಾಪೂರಿನಲ್ಲಿ ರಾಜಾ ಕುಳ್ಳ’, ‘ಗುರು ಶಿಷ್ಯರು’, ‘ಬಯಸದೆ ಬಂದ ಭಾಗ್ಯ’ ಮುಂತಾದವು ಕೂಡಾ ಅಂದಿನ ದಿನದ ಯಶಸ್ವೀ ಚಿತ್ರಗಳೇ. ಎಂ. ಎಸ್. ಸತ್ಯು ಅವರ ‘ಚಿತೆಗೂ ಚಿಂತೆ’ಯಂತಹ ಚಿಂತನಾ ಪ್ರಧಾನ ಕಲಾತ್ಮಕ ಚಿತ್ರದಲ್ಲೂ ಅವರು ನಟಿಸಿದ್ದರು.
'ಜಗದೀಶ ಸರ್ವೇಶ, ಗೌರೀಶ ಮಲ್ಲೇಶ ನೂರಾರು ಹೆಸರೂ ಶಿವನೀಗೆ', ‘ಎಂದೆಂದೂ ನಿನ್ನನು ಮರೆತು’, ‘ಬೆಳ್ಳಿಯ ತೆರೆಯ ಮೋಡದ ಮರೆಯ’, ‘ವಸಂತ ಬರೆದನು ಒಲವಿನ ಓಲೆ’, ‘ಬೆಸುಗೆ ಬೆಸುಗೆ’, ‘ಮುತ್ತಿನ ಹನಿಗಳು ಸುತ್ತಲೂ ಮುತ್ತಲೂ’, ‘ಅಂತಿಂಥ ಹೆಣ್ಣು ನಾನಲ್ಲ’, ‘ನಿಲ್ಲಯ್ಯ ನಿಲ್ಲೋ’, ‘ಏಕೆ ಅವಸರವು ಹೇಳು’, ‘ದಾರಿ ಕಾಣದಾಗಿದೆ ರಾಘವೇಂದ್ರನೆ’, ‘ಈ ಮೌನವ ತಾಳೆನು’, ‘ಜೋಡಿ ಬೇಡೋ ಕಾಲವಮ್ಮ’ , 'ಶ್ರೀಕೃಷ್ಣ ಜನಿಸಿದ ಧರೆಯಲ್ಲಿ' ಹೀಗೆ ಅವರು ಮೋಡಿ ಮಾಡಿದ ಬಹಳಷ್ಟು ಹಾಡುಗಳು ಕಣ್ಮುಂದೆ ಸಾಲುಗಟ್ಟಿ ನಿಲ್ಲುತ್ತವೆ.
ಇಷ್ಟೆಲ್ಲಾ ಪ್ರತಿಭೆ, ಯಶಸ್ಸುಗಳು ಜೊತೆ ಇದ್ದರೂ ನಿಜ ಜೀವನದಲ್ಲಿ ಒಬ್ಬ ತಮಿಳು ನಿರ್ಮಾಪಕ-ನಿರ್ದೇಶಕನ ಎರಡನೇ ವೈವಾಹಿಕ ಬದುಕಿಗೆ ತಮ್ಮನ್ನು ಒಪ್ಪಿಸಿಕೊಂಡ ಈ ವಿಶಿಷ್ಟ ನಟಿ, ಹಲವು ದುರಂತಗಳ ದುಃಖದ ಪಾತ್ರವೂ ಆದದ್ದು ಬದುಕಿನ ವೈಪರೀತ್ಯದ ಮತ್ತೊಂದು ಆಯಾಮ. ಮಂಜುಳಾ 1986ರ ಸೆಪ್ಟೆಂಬರ್ 16ರಂದು ಬೆಂಕಿ ಆಕಸ್ಮಿಕ ಎಂದು ಸುದ್ದಿಯಾದ ಘಟನೆಯೊಂದರಲ್ಲಿ ನಿಧನರಾದರು.
ಅವರು ಕನ್ನಡ ಚಿತ್ರರಂಗದಲ್ಲಿ ರಾಜ್ಕುಮಾರ್, ಶ್ರೀನಾಥ್, ವಿಷ್ಣುವರ್ಧನ್, ಶಂಕರ್ ನಾಗ್ ಅಂತಹ ಪ್ರತಿಭೆ ಸೊಗಸುಗಳ ಹಿರಿಮೆಯ ಜೊತೆಗೆ ತಾನೂ ಸರಿಸಮಾನವಾಗಿ ಕಂಗೊಳಿಸಿದ ರೀತಿ ಅನನ್ಯವಾದದ್ದು. ಹೀಗಾಗಿ ಅವರು ಬಹಳ ಕಾಲದ ವರೆಗೆ ನೆನಪಿನಲ್ಲಿ ಉಳಿಯುವ ನಟಿ.
ಚಿತ್ರಕೃಪೆ: ಅಶ್ವತ್ಥನಾರಾಯಣ
Our lovely artiste Manjula
ಮಂಜುಳ ಅವರು ಕನ್ನಡ ಚಿತ್ರರಂಗ ಕಂಡ ಒಬ್ಬ ಅಪ್ರತಿಮ ಕಲಾವಿದೆ. ಯಾವುದೇ ಪಾತ್ರವಾದರೂ ಅದಕ್ಕೇ ಜೀವ ತುಂಬುತ್ತಿದ್ದರು. ಮಂಜುಳ ಅವರ ಬಗ್ಗೆ ತಿ. ರು. ಶ್ರೀಧರ್ ಒಳ್ಳೆಯ ಲೇಖನ ಬರೆದಿದ್ದಾರೆ. ಮಂಜುಳ ಅವರ ಬಗ್ಗೆ ವಿಸ್ತೃತ ವಾಗಿ ಬರೆಯ ಬೇಕೆಂದಿದ್ದೇನೆ. ಕನ್ನಡ ಚಿತ್ರರಂಗದ ದುರ್ಗಿಯ ಬಗ್ಗೆ ಉತ್ತಮ ಲೇಖನ ಬರೆದ ಲೇಖಕರಿಗೆ ಧನ್ಯವಾದಗಳು.
ಪ್ರತ್ಯುತ್ತರಅಳಿಸಿಗಂಗಾಧರ ಭಟ್