ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಧ್ಯಾ ಕಿರಣ್


 ಸಂಧ್ಯಾ ಕಿರಣ್ - ಕಿರಣ್ ಸುಬ್ರಹ್ಮಣ್ಯಂ


ಕಿರಣ್ ಸುಬ್ರಹ್ಮಣ್ಯಂ -  ಸಂಧ್ಯಾ ಕಿರಣ್ ದಂಪತಿಗಳು ಭರತನಾಟ್ಯ ಕಲೆಗೆ ತಮ್ಮ ಕಲೆ, ಸೌಂದರ್ಯ ಮತ್ತು ಸುಂದರ ಅಭಿವ್ಯಕ್ತಿಗಳಿಂದ ಶೋಭೆ ತಂದವರು. ಅಕ್ಟೋಬರ್ 8 ಕಿರಣ್ ಅವರ ಜನ್ಮದಿನ.

ರಸಿಕಾ ಅಕಾಡೆಮಿ ಆಫ್ ಪರ್‌ಫಾರ್ಮಿಂಗ್ ಆರ್ಟ್ಸ್‌ ಸಂಸ್ಥೆಯ ಸ್ಥಾಪಕರಾಗಿರುವ ನೃತ್ಯ ಗುರುಗಳಾದ ಕಿರಣ್ ಸುಬ್ರಹ್ಮಣ್ಯಂ ಮತ್ತು ಸಂಧ್ಯಾ ಕಿರಣ್ ನೃತ್ಯಕಲೆಯ ಖ್ಯಾತ ದಂಪತಿಗಳು. ಇವರು ಭರತನಾಟ್ಯದ ಸಾಂಪ್ರದಾಯಿಕ ಚೌಕಟ್ಟಿನಲ್ಲೇ ನೃತ್ಯಕಲೆಗೆ ಹಲವು ಹೊಸ ಆಯಾಮ ನೀಡಿದ ಪ್ರಯೋಗಶೀಲ ದಂಪತಿಗಳೆಂದು ಹೆಸರಾದವರು. 

ಕಿರಣ್ ಸುಬ್ರಹ್ಮಣ್ಯಂ ಅವರು  ಪದ್ಮಿನಿ ರವಿ ಅವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದರು. ಅಲ್ಲಿ ನೃತ್ಯಾಭ್ಯಾಸಕ್ಕೆ ಬರುತ್ತಿದ್ದ ಸಂಧ್ಯಾ ಅವರ ಪರಿಚಯವಾಯಿತು. ನೃತ್ಯದ ಕುರಿತು ಇಬ್ಬರಿಗೂ ಇದ್ದ ಅತೀವ ಆಸಕ್ತಿ, ಸಮಾನ ದೃಷ್ಟಿಕೋನ, ಅದನ್ನೇ ವೃತ್ತಿಯಾಗಿಸಿಕೊಳ್ಳುವ ಹಂಬಲ ಇಬ್ಬರನ್ನೂ ಜೀವನದಲ್ಲೂ ಜೊತೆಯಾಗಿಸಿತು. ಆನಂತರ ಚೆನ್ನೈನ ಶಾಂತಾ ಧನಂಜಯನ್ - ಧನಂಜಯನ್ ದಂಪತಿಗಳ ಬಳಿ ನೃತ್ಯದಲ್ಲಿ ಹೆಚ್ಚಿನ ತರಬೇತಿ ಪಡೆದರು. ಯುಗಳ ನೃತ್ಯ ಶೈಲಿಯನ್ನು ತಮ್ಮದಾಗಿಸಿಕೊಂಡು ಅದರಲ್ಲೇ ಪ್ರಾವೀಣ್ಯತೆ ಪಡೆದರು.

1989ರಲ್ಲಿ ಸಂಧ್ಯಾ ಕಿರಣ್ ಸುಬ್ರಹ್ಮಣ್ಯಂ ದಂಪತಿಗಳು, ರಸಿಕ ಅಕಾಡೆಮಿ ಆರಂಭಿಸಿ ಬಾಲ ಪ್ರತಿಭೆ, ಯುವ ಪ್ರತಿಭೆಗಳನ್ನು ನೃತ್ಯಕ್ಷೇತ್ರಕ್ಕೆ ನೀಡತೊಡಗಿದರು. ಕಲೆ, ಕಲೆಗಾಗಿ ಮಾತ್ರ ಅಲ್ಲ; ಕಲೆಯನ್ನು ಸಾಮಾಜಿಕ ಉದ್ದೇಶಕ್ಕೂ ಮೀಸಲಿಡಬೇಕು ಎಂಬ ನಿಲುವು ಈ ಜೋಡಿಯದ್ದು. ಅದಕ್ಕಾಗಿ ಹಲವು ಸಾಮಾಜಿಕ ಸಮಸ್ಯೆ ಆಧರಿಸಿ ನೃತ್ಯರೂಪಕ ಸಂಯೋಜಿಸಿದ್ದಾರೆ. 'ಅಕ್ಷಯಪಾತ್ರೆ' ಯೋಜನೆಯಲ್ಲಿ ಇಸ್ಕಾನ್ ಜೊತೆ ಕೈಜೋಡಿಸಿ ಅವರಿಗಾಗಿ ನೃತ್ಯ ಸಂಯೋಜಿಸಿ, ಕಾರ್ಯಕ್ರಮದಿಂದ ಬಂದ ಹಣವನ್ನು 'ಅಕ್ಷಯಪಾತ್ರೆ'ಗಾಗಿ ನೀಡಿದ್ದಾರೆ.

ಸಂಧ್ಯಾ ಕಿರಣ್ ದಂಪತಿಗಳು ಹಿಂದೆ ದೂರದರ್ಶನದಲ್ಲಿ ನೃತ್ಯ ಆಧರಿಸಿದ 'ನಾಟ್ಯಾಂಜಲಿ' ಕಾರ್ಯಕ್ರಮ ನೀಡಿದ್ದರು. ನಂತರ ಕಸ್ತೂರಿ ಚಾನೆಲ್‌ನಲ್ಲಿ ಈ ದಂಪತಿಗಳ ನಿರ್ಮಾಣದ 'ಹೆಜ್ಜೆ ಮೇಲೆ ಗೆಜ್ಜೆ' ನೃತ್ಯ ಆಧರಿಸಿದ ಕಾರ್ಯಕ್ರಮ ಪ್ರಸಾರವಾಗಿತ್ತು. ಉದಯೋನ್ಮುಖ ಕಲಾವಿದರಿಗೆ ಮಾರ್ಗದರ್ಶಿಯಾಗಿದ್ದ ಈ ಕಾರ್ಯಕ್ರಮದಲ್ಲಿ ನೃತ್ಯದ ತಾಂತ್ರಿಕ ಅಂಶಗಳಷ್ಟೇ ಅಲ್ಲದೆ, ವೇದಿಕೆ ಸಿದ್ಧಪಡಿಸುವುದು, ನೃತ್ಯದ ಉಡುಗೆ, ತೊಡುಗೆ, ಕಾರ್ಯಕ್ರಮ ನಿರ್ವಹಣೆ  ಹೀಗೆ  ಎಲ್ಲ ಸೂಕ್ಷ್ಮ  ಅಂಶಗಳ ಮೇಲೂ ಬೆಳಕು ಚೆಲ್ಲಲಾಗಿತ್ತು. 

ಪಂಡಿತ್ ರವಿಶಂಕರ್ ಅವರ ಜೊತೆಯೂ ಸಂಧ್ಯಾ ಕಿರಣ್  ದಂಪತಿಗಳು ಕೆಲಸ ಮಾಡಿದ್ದು, ಅವರ ತಂಡದ ಭಾಗವಾಗಿ ವಿದೇಶಗಳಲ್ಲೂ ಕಾರ್ಯಕ್ರಮ ನೀಡಿದ್ದರು. ಖ್ಯಾತ ನೃತ್ಯ ಕಲಾವಿದೆ, ಚಿತ್ರನಟಿ ಹೇಮಾಮಾಲಿನಿ ಅವರ ಸಂಗಡವೂ ದಂಪತಿಗಳು  ಕೆಲಸ ಮಾಡುತ್ತ ಬಂದಿದ್ದಾರೆ.  ಹೇಮಾಮಾಲಿನಿ ಅವರು ಬೆಂಗಳೂರಿಗೆ ಬಂದಾಗಲಂತೂ ಕಿರಣ್ ಅವರ ಯುಗಳ ನೃತ್ಯದಲ್ಲಿ ಜೊತೆಯಾಗಿರುತ್ತಾರೆ. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಹೆಸರಾಂತ ಉತ್ಸವಗಳಲ್ಲಿ ಸಂಧ್ಯಾ ಕಿರಣ್ - ಕಿರಣ್ ಸುಬ್ರಹ್ಮಣ್ಯಂ ತಮ್ಮ ತಂಡದೊಡನೆ ಕಾರ್ಯಕ್ರಮ ನೀಡಿ ಮೆಚ್ಚುಗೆ ಗಳಿಸಿದ್ದಾರೆ.  ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳಿಗಾಗಿ ಹೊರದೇಶಗಳಿಂದ ನಿರಂತರ ಆಹ್ವಾನ ಪಡೆಯುತ್ತ ಬಂದಿದ್ದಾರೆ.

ತಾಂಡವ, ಭವ್ಯರಾಮ, ಕಥಾ, ಲಯಂ ಲಾಸ್ಯಂ, ತನಿ ಆವರ್ತನಮ್, ಯಾತ್ರ, ರಂಗೋಲಿ, ಸ್ಕಂದ ಮುಂತಾದ ಅನೇಕ ಸಂಯೋಜನೆಗಳು ಸಂಧ್ಯಾ ಕಿರಣ್ ದಂಪತಿಗಳ ಪ್ರತಿಭಾನ್ವಿತ ಸಂಯೋಜನಾ ಸಾಮರ್ಥ್ಯವನ್ನು ನಿರೂಪಿಸುತ್ತಾ ಬಂದಿವೆ.

ಜಾಗತೀಕರಣಕ್ಕೆ ಅತಿಯಾಗಿ ತೆರೆದುಕೊಂಡಿರುವ ಯುವಜನತೆಯನ್ನು ಸಾಂಪ್ರದಾಯಿಕ ನೃತ್ಯ ಪ್ರಕಾರವಾದ ಭರತನಾಟ್ಯಕ್ಕೆ ಕರೆತರುವ ನಿಟ್ಟಿನಲ್ಲಿ ಸಂಧ್ಯಾ ಕಿರಣ್ ದಂಪತಿಗಳು ತಮ್ಮದೇ ಆದ ರೀತಿಯಲ್ಲಿ ಉತ್ತರ ಕಂಡುಕೊಂಡಿದ್ದಾರೆ. ನೃತ್ತ, ನೃತ್ಯ, ಅಭಿನಯದಂತಹ ಭರತನಾಟ್ಯದ ಮೂಲ ಅಂಶಗಳನ್ನು ದುರ್ಬಲಗೊಳಿಸದೆಯೇ ಅದನ್ನು ಸಮಕಾಲೀನವಾಗಿ ಪ್ರಸ್ತುತಪಡಿಸುವ ನಿಟ್ಟಿನಲ್ಲಿ, ಪ್ರಸ್ತುತ ವಿಚಾರಗಳನ್ನು ಸಹಾ ಭರತನಾಟ್ಯದ ಮೂಲಕ ಪ್ರದರ್ಶಿಸುವ 'ಸಂಪ್ರದಾಯ'ದಂತಹ ಹೊಸ ನೃತ್ಯರೂಪಕಗಳನ್ನು ಸಹಾ ಯಶಸ್ವಿಯಾಗಿ ನಿರೂಪಿಸಿದ್ದಾರೆ.

ಕಿರಣ್ ಮತ್ತು ಸಂಧ್ಯಾ ದಂಪತಿಗಳ ಮಾರ್ಗದರ್ಶನದಲ್ಲಿ ನೃತ್ಯ ಕಲಿತ ಅನೇಕರು ಪ್ರತಿಭಾವಂತ ಕಲಾವಿದರಾಗಿ ಪ್ರಸಿದ್ಧಿ ಗಳಿಸಿದ್ದಾರೆ.

ಕಿರಣ್ ಮತ್ತು ಸಂಧ್ಯಾ ದಂಪತಿಗಳಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಕರ್ನಾಟಕ ಕಲಾಶ್ರೀ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

ಸಂಧ್ಯಾ ಕಿರಣ್ - ಕಿರಣ್ ಸುಬ್ರಹ್ಮಣ್ಯಂ ದಂಪತಿಗಳನ್ನು ವೇದಿಕೆಯ ಮೇಲೆ ಒಂದಾಗಿ ನೋಡುವುದೇ ಕಲಾರಸಿಕರಿಗೆ ಆನಂದ.  ಈ ಆನಂದ ಸದಾ ದೊರಕುತ್ತಿರಲಿ.  ಈ ದಂಪತಿಗಳಿಗೆ ಶುಭವಾಗಲಿ.

Great Bharatanatyam couple Sandhya Kiran & Kiran Subrahmanyam 

 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ