ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತೀಸುತ


 ಭಾರತೀಸುತ


ಭಾರತೀಸುತ ಗ್ರಾಮೀಣ ಪರಿಸರದ ಹಿನ್ನೆಲೆಯ ಕಾದಂಬರಿಕಾರರಾಗಿ ನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಮೂಲ ಹೆಸರು ಶಾನಭಾಗ ರಾಮಯ್ಯ ನಾರಾಯಣರಾವ್. 

ಭಾರತೀಸುತ  ಮಡಿಕೇರಿಯ ಬಳಿಯ ಬಿಳಿಗೇರಿ ಗ್ರಾಮದಲ್ಲಿ 1915ರ ಮೇ 15 ರಂದು ಜನಿಸಿದರು. ತಂದೆ ರಾಮಯ್ಯನವರು ಮತ್ತು  ತಾಯಿ ಸುಬ್ಬಮ್ಮನವರು. 

ಭಾರತಿಸುತರು ಏಳನೆಯ ತರಗತಿ ಓದುತ್ತಿದ್ದಾಗಲೇ ತಂದೆಯ ಪ್ರೀತಿಯಿಂದ ವಂಚಿತರಾದರು. ಪ್ರೌಢಶಾಲೆ ವ್ಯಾಸಂಗ ಮಾಡುವಾಗ ಪಂಜೆಯವರ ಶಿಷ್ಯರಾಗಿ  ಸಾಹಿತ್ಯ ಸಂಸ್ಕಾರ ಪಡೆದ ಭಾಗ್ಯ ಅವರದ್ದಾಗಿತ್ತು.

ಸ್ವಾತಂತ್ರ್ಯ ಚಳವಳಿಯ ಕಾವಿನಿಂದ ಓದಿಗೆ ತಿಲಾಂಜಲಿ ಕೊಟ್ಟ ಭಾರತೀಸುತರು ಕಣ್ಣಾನೂರು ಹಾಗೂ ತಿರುಚನಾಪಳ್ಳಿ ಸೆರೆಮನೆಗಳಲ್ಲಿದ್ದಾಗ ಗಾಂಧೀ ತತ್ತ್ವಗಳನ್ನು ಮೈಗೂಡಿಸಿಕೊಂಡರು. ಸತ್ಯಾಗ್ರಹಿಯಾದರೂ ಅವರು ರಾಜಕೀಯ ವ್ಯಕ್ತಿಯಾಗಲಿಲ್ಲ. ಬಿಡುಗಡೆಯ ನಂತರ ಕೆಲಕಾಲ ಕಾಫಿ ಎಸ್ಟೇಟಿನಲ್ಲಿ ಗುಮಾಸ್ತೆ ಕೆಲಸ ಮಾಡಿದರು.  1942ರಲ್ಲಿ ಶಾಲಾ ಶಿಕ್ಷಕರಾಗಿ ನೇಮಕಗೊಂಡರು. 1945ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ ಪಡೆದರು.  1973ರವರೆಗೂ ಪ್ರೌಢಶಾಲೆಯಲ್ಲಿ  ಕನ್ನಡ ಪಂಡಿತರಾಗಿ ಸೇವೆ ಸಲ್ಲಿಸಿದರು.

ಭಾರತೀಸುತರ ಕಾದಂಬರಿಗಳಲ್ಲಿ ದಾಂಪತ್ಯ ಜೀವನದ ಸಮಸ್ಯೆಗಳ ಆಳವಾದ ವಿವೇಚನೆ, ಹೆಣ್ಣಿನ ಬಗೆಗಿನ ಸಹಾನುಭೂತಿಯುಳ್ಳ  ದೃಷ್ಟಿಕೋನಗಳು ಪ್ರಮುಖ ಪಾತ್ರವಹಿಸಿವೆ. ಎಡಕಲ್ಲು ಗುಡ್ಡದ ಮೇಲೆ ಮತ್ತು ಸಂತಾನ ಭಿಕ್ಷೆ ಮಾನವೀಯ ದೃಷ್ಟಿಕೋನದ ಕಾದಂಬರಿಗಳೆನಿಸಿವೆ. 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ ಕೀರ್ತಿ ಭಾರತೀಸುತರದು. ಹುಲಿಯ ಹಾಲಿನ ಮೇವು, ಗಿರಿಕನ್ನಿಕೆ, ಬಯಲುದಾರಿ, ಇಳಿದು ಬಾ ತಾಯಿ, ವಕ್ರರೇಖೆ, ಬೆಳಕಿನೆಡೆಗೆ, ಬೆಂಕಿಯ ಮಳೆ, ಅಮಾತ್ಯ ನಂದಿನಿ, ಗಿಳಿಯು ಪಂಜರದೊಳಿಲ್ಲ, ಸಾಧನ ಕುಟೀರ, ಹಾವಿನ ಹುತ್ತ, ದೊರೆ ಮಗಳು ಮುಂತಾದುವು ಭಾರತೀಸುತರ ಪ್ರಮುಖ ಕಾದಂಬರಿಗಳು. ಹುಲಿಬೋನು, ಗಿರಿಕನ್ನಿಕೆ, ಗಿಳಿಯು ಪಂಜರದೊಳಿಲ್ಲ ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕೃತ ಕಾದಂಬರಿಗಳು. ಅವರ ಬಯಲು ದಾರಿ, ಹುಲಿಯ ಹಾಲಿನ ಮೇವು, ಎಡಕಲ್ಲು ಗುಡ್ಡದ ಮೇಲೆ ಗಿರಿಕನ್ನಿಕೆ (ಗಿರಿಕನ್ಯೆ ಹೆಸರಿನಲ್ಲಿ) ಕೃತಿಗಳು ಚಲನಚಿತ್ರಗಳಾಗಿ ಪ್ರಖ್ಯಾತಗೊಂಡಿವೆ. ಇವರ ಮಿನಿಕಾದಂಬರಿ ‘ವಲ್ಮೀಕ' ಬಹಳಷ್ಟು  ಖ್ಯಾತಿ ಪಡೆದ ಕೃತಿ.

ಶಿಶು ಸಾಹಿತ್ಯದಲ್ಲೂ ಸಾಧನೆ ಮಾಡಿರುವ ಭಾರತೀಸುತರು 25ಕ್ಕೂ ಹೆಚ್ಚು ಶಿಶು ಸಾಹಿತ್ಯ ಕೃತಿಗಳನ್ನು  ರಚಿಸಿ ಮಕ್ಕಳ ಮನಸ್ಸನ್ನು ಗೆದ್ದಿದ್ದಾರೆ. ವಯಸ್ಕರ ಶಿಕ್ಷಣ ಬೆಳವಣಿಗೆಗೂ ಅವರು  ಹಲವಾರು ಕೃತಿ ರಚನೆ ಮಾಡಿದ್ದಾರೆ.  ಪತ್ರಿಕೋದ್ಯಮದಲ್ಲೂ ತಮ್ಮ ಶ್ರಮ ನೀಡಿರುವ ಭಾರತೀಸುತರು ರಾಷ್ಟ್ರಬಂಧು, ಗುರುವಾಣಿ ಮುಂತಾದ ಪತ್ರಿಕೆಗಳನ್ನು ಕೆಲಕಾಲ ನಡೆಸಿದರು.    

ಭಾರತೀಸುತರು 1976ರ ಏಪ್ರಿಲ್ 4ರಂದು  ಈ ಲೋಕವನ್ನಗಲಿದರು.  ಕರ್ಣಾಟಕ ರಾಜ್ಯ ಸಾಹಿತ್ಯ ಅಕಾಡಮಿಯು 1976ರಲ್ಲಿ ಭಾರತೀಸುತರಿಗೆ ಮರಣೋತ್ತರ ಗೌರವವನ್ನು ಘೋಷಿಸಿತು. ಭಾರತೀಸುತರ ಗೌರವಾರ್ಥವಾಗಿ ಸಾಹಿತ್ಯಾಭಿಮಾನಿಗಳು ‘ಬ್ರಹ್ಮಗಿರಿ’ ಎಂಬ ಸಂಸ್ಮರಣ ಗ್ರಂಥವನ್ನು ಹೊರತಂದರು.  

On the birth anniversary of our great novelist Bharatisuta 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ