ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಡುಕೋಣೆ ಸೀತಾದೇವಿ


 ಪಡುಕೋಣೆ ಸೀತಾದೇವಿ


ಪಡುಕೋಣೆ ಸೀತಾದೇವಿಯವರು ಕಳೆದ ಶತಮಾನದ ಮಹತ್ವದ ಸಾಹಿತಿಯಾಗಿ ಹೆಸರಾದವರು. ಪತಿ ರಮಾನಂದರಾಯರೊಡನೆ ಸಾಹಿತಿಗಳಿಗೆ ಆತಿಥ್ಯ ನೀಡಿ ಪೋಷಿಸಿ, ಮಕ್ಕಳನ್ನು ಮಹಾನ್ ಕಲಾವಿರಾಗಿ ಲೋಕಕ್ಕೆ ಕೊಡುಗೆ ನೀಡಿ ತಾವೂ ಸಾಹಿತ್ಯ ಕಲೆಗಳಿಗೆ ನೇರ ಸೇವೆ ಸಲ್ಲಿಸಿದರು.

ಪಡುಕೋಣೆ ಸೀತಾದೇವಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ 1903ರ ಜೂನ್ 5 ರಂದು ಜನಿಸಿದರು.  ಸೀತಾದೇವಿಯವರ ತಂದೆ ದೇಶಭಕ್ತ ಮೊಳಹಳ್ಳಿ ಶಿವರಾಯರು.  ಇವರು ವಕೀಲ ವೃತ್ತಿಯ ಜೊತೆಗೆ ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ದುಡಿದರು. ತಾಯಿ ಉಮಾದೇವಿ ಅವರು. 

ಸೀತಾದೇವಿ ಅವರು ಓದಿದ್ದು ಮಾಧ್ಯಮಿಕ ಶಾಲೆಯವರೆಗೆ.  ಆದರೆ ಅವರಿಗೆ ಸಾಹಿತ್ಯಾಭಿರುಚಿ ಮೂಡಿ, ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಗಳ ಕೃತಿಗಳನ್ನು ಅರ್ಥಮಾಡಿಕೊಳ್ಳುವುದಷ್ಟೇ ಅಲ್ಲದೆ ಅವುಗಳನ್ನು ಕನ್ನಡಕ್ಕೆ ಅನುವಾದ ಮಾಡುವಷ್ಟು ಸಾಮರ್ಥ್ಯವನ್ನು ತಂದು ಕೊಟ್ಟವರು ಅವರ ಪತಿ ಪಡುಕೋಣೆ ರಮಾನಂದರಾಯರು. 

ಸೀತಾದೇವಿ ಅವರಿಗೆ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಮದುವೆಯಾದುದರಿಂದ ಮುಂದೆ ಓದು ಸಾಗಲಿಲ್ಲ. ಇಂಟರ್‌ಮಿಡಿಯೇಟ್ ಓದುತ್ತಿದ್ದ ಪಡುಕೋಣೆ ರಮಾನಂದರಾಯರೊಡನೆ ಮದುವೆ ಆಯಿತು. ರಮಾನಂದರಾಯರು ಮದುವೆಯ ನಂತರ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿ.ಎ., ಎಂ.ಎ., ಎಲ್.ಟಿ. ಪದವಿ ಪಡೆದು ಉದ್ಯೋಗಕ್ಕಾಗಿ ಸೇರಿದ್ದು ರಾಜಮಹೇಂದ್ರಿಯ ಕಾಲೇಜಿನಲ್ಲಿ.  ಅವರು ರಸಾಯನ ಶಾಸ್ತ್ರದ ಉಪನ್ಯಾಸಕರಾದರು. 

ಸೀತಾದೇವಿಯವರು  ಹೊತ್ತು ಕಳೆಯಲು ಪುಸ್ತಕ ಭಂಡಾರದಿಂದ  ಪತಿ ರಮಾನಂದರಾಯರು ತಂದುಕೊಡುತ್ತಿದ್ದ ಇಂಗ್ಲಿಷ್ ಪುಸ್ತಕಗಳನ್ನೇ ಓದಿ ಅರ್ಥಮಾಡಿಕೊಳ್ಳತೊಡಗಿದರು. 

ಸೀತಾದೇವಿ-ರಮಾನಂದರಾಯ ದಂಪತಿಗಳಿಗೆ ಜನಿಸಿದ ಮಕ್ಕಳೆಲ್ಲ ಅಸಾಮಾನ್ಯ ಪ್ರತಿಭಾವಂತರು. ಚಂದ್ರಭಾಗಾದೇವಿ ನೃತ್ಯಕಲೆಯಲ್ಲಿ ಪ್ರಸಿದ್ಧರಾದರು. ಪ್ರಭಾಶಂಕರ ದೊಡ್ಡ ಎಂಜನಿಯರ್ ಆದರು. ಶಾಂತಿ ಚಿತ್ರಕಲೆಯಲ್ಲಿ, ಜಯವಂತಿ ಹಿಂದೂಸ್ಥಾನಿ ಸಂಗೀತ ಗಾಯಕಿಯಾಗಿ, ಯಶೋಧರ ಸಂಗೀತ, ನೃತ್ಯ, ಸಾಹಿತ್ಯದಲ್ಲಿ ಹೀಗೆ ಎಲ್ಲರೂ ಸಾಧಕರು. 

ರಮಾನಂದರಾಯರಿಗೆ ಮಂಗಳೂರಿಗೆ ವರ್ಗವಾಗಿ ಬಂದಾಗ,  ಮನೆ ಸಾಹಿತಿಗಳ ಬೀಡಾಗಿತ್ತು. ಜಿ.ಪಿ. ರಾಜರತ್ನಂರವರು ನಾಲ್ಕು ತಿಂಗಳ ಕಾಲ ಇವರ ಮನೆಯಲ್ಲಿಯೇ ಇದ್ದು ರಚಿಸಿದ ಗ್ರಂಥ ‘ಬೌದ್ಧ ಧರ್ಮ’. ಸಿದ್ಧಾರ್ಥ ಹೆಂಡತಿ ಮಕ್ಕಳನ್ನು ತೊರೆದು ಬಂದಂತೆ ನೀವು ಬೌದ್ಧಗ್ರಂಥ ರಚಿಸಲು ಅವರನ್ನೆಲ್ಲ ಬಿಟ್ಟು ಬಂದಿಲ್ಲವಷ್ಟೆ ಎಂದು ರಾಜರತ್ನಂರವರಿಗೆ ಹೆಂಡತಿ, ಮಕ್ಕಳ ಬಗ್ಗೆ ನಯವಾಗಿ ಎಚ್ಚರಿಸಿದರಂತೆ. ಕೈಲಾಸಂರವರು ಬಂದು ಹದಿನೆಂಟು ದಿನಗಳು ತಂಗಿದ್ದಾಗ ಕೊಠಡಿಯನ್ನು ಸ್ವಚ್ಛಗೊಳಿಸಲೂ ಬಿಡದೆ, ಯಾವ ಶಿಸ್ತಿಗೂ ಒಳಪಡದೆ, ಹೊತ್ತಿಗೆ ಸರಿಯಾಗಿ ತಿಂಡಿ, ಕಾಫಿ, ಊಟದ ಪರಿವೆ ಇರದೆ ಅಲ್ಲಿದ್ದರಂತೆ. ಕೈಲಾಸಂರವರು ಹದಿನೆಂಟು ದಿನಗಳ ಆತಿಥ್ಯ ಮುಗಿದಾಗ ‘ಒಂದು ಕುರುಕ್ಷೇತ್ರ ಮಾಡಿ ಗೆದ್ದ ಅನುಭವ’ ಎಂದು ಉದ್ಗರಿಸಿದರಂತೆ. ಹೀಗೆ ಇವರ ಮನೆ ಸಾಹಿತಿಗಳಿಗೆ ಸದಾ ತೆರೆದಿರುತ್ತಿತ್ತು. 

ಸೀತಾದೇವಿಯವರು ತಮಗೆ ಸದಾಕಾಲ ಕಂಡ ಸಾಹಿತಿಗಳ ಪ್ರೇರಣೆಯಿಂದ   ಮತ್ತು ರಮಾನಂದರಾಯರ ಪ್ರೋತ್ಸಾಹದಿಂದ ತಾವೂ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡು ಕನ್ನಡ, ಹಿಂದಿ, ಕೊಂಕಣಿ ಕೃತಿಗಳನ್ನು ರಚಿಸಿದರು. ಇವರು ಬರೆದ ಮೊದಲ ಕೃತಿ ‘ಹೀಗಾಗಬೇಕೆ!’ 1929 ರಲ್ಲಿ ಪ್ರಕಟವಾಯಿತು. ಇದು ವೇಶ್ಯಾ ಸಮಸ್ಯೆಯ ಬಗ್ಗೆ ಬರೆದ ಕೃತಿಯಾಗಿದ್ದು, ಮರಾಠಿಯಲ್ಲಿ ಪ್ರಕಟವಾಗಿದ್ದ ಸದಾಶಿವ ಸುಂಕ್ಥಣಕರರ ‘ಜಾಯಿ-ಜೋಯಿ’ ಎಂಬ ಕಥೆ ಆಧರಿಸಿದ್ದು.  ಅದೇ ವರ್ಷ A Day will come ಎಂಬ ಚಲನಚಿತ್ರದಿಂದ ಪ್ರೇರಿತರಾಗಿ ‘ಕಟುಕ ರೋಹಿಣಿ ಸಂವತ್ಸರದಲ್ಲಿ!’ ಎಂಬ ಪ್ರಹಸನವನ್ನು ರಚಿಸಿದರು. ಈ ಕಿರು ಪ್ರಹಸನವನ್ನು ಕಡೆಂಗೋಡ್ಲು ಶಂಕರಭಟ್ಟರು ತಮ್ಮ ಪತ್ರಿಕೆಯಾದ ‘ರಾಷ್ಟ್ರಬಂಧು’ವಿನ ಸಾಹಿತ್ಯ ಸಂಚಿಕೆಯಲ್ಲಿ ಪ್ರಕಟಿಸಿದಾಗ ಹಲವಾರು ಮಂದಿ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಲ್ಲದೆ ಶಿವರಾಮ ಕಾರಂತರು ತಮ್ಮ ವಸಂತ ಪುಷ್ಪಮಾಲೆಯ ಸಾಹಿತ್ಯ ಸಂಚಿಕೆಯಲ್ಲೂ ಪ್ರಕಟಿಸಿದರು. ಈ ಏಕಾಂಕ ನಾಟಕವು ಕೊಂಕಣಿ ಭಾಷೆಗೂ ಅನುವಾದಗೊಂಡು ಮುಂಬಯಿಯ ಆಕಾಶವಾಣಿಯಿಂದಲೂ ಪ್ರಸಾರಗೊಂಡಿತು. ಈ ನಾಟಕದಲ್ಲಿ ಹೆಂಗಸರು ಹೊರಗಡೆ ಕ್ಲಬ್ಬು, ಮೀಟಿಂಗು ಎಂದು ಓಡಾಡುತ್ತಿದ್ದರೆ ಗಂಡಸರು ಹೆಣ್ಣು ಹೃದಯಿಗಳಾಗಿ ಮನೆವಾರ್ತೆ ನೋಡಿಕೊಳ್ಳುವ ವಸ್ತುವಾಗುಳ್ಳ ನಾಟಕ. ಪುರುಷರ ಮತ್ತು ಮಹಿಳೆಯರ ಸ್ವಭಾವ, ವೈಚಿತ್ರ್ಯಗಳನ್ನು ಅದಲು ಬದಲು ಮಾಡಿ ಚಿತ್ರಿಸಿದ ಬಹುಶಃ ಮೊದಲ ಪ್ರಸಂಗವಾಗಿರಬಹುದು. ‘ಮೇರೇ ಗೋಪಾಲ್’ ಮತ್ತು ವಿ. ಸೀತಾರಾಮಯ್ಯನವರ ‘ಸೊಹ್ರಾಬ್-ರುಸ್ತುಂ’ ನಾಟಕವನ್ನು ಹಿಂದಿಗೆ ಅನುವಾದಿಸಿದರು. ಕೊಂಕಣಿ ಭಾಷೆಯಲ್ಲಿ ಹೆಣ್ಣುಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿದ ನಾಟಕ ‘ವಧು ಪರೀಕ್ಷೆ’, ‘ಕುಟ್ಟು ಮಕ್ಕಾರಿ ಫಜೀತಿ’ ಎಂಬ ಇನ್ನೊಂದು ನಾಟಕವನ್ನೂ ಕೊಂಕಣಿಯಲ್ಲಿ ರಚಿಸಿದರು. ಈ ನಾಟಕವನ್ನು ಮದರಾಸಿನಲ್ಲಿ ರಂಗದ ಮೇಲೆ ತಂದಾಗ ‘ಕುಟ್ಟು ಮಣ್ಣ’ ಎಂಬ ಪಾತ್ರಧಾರಿಯಾಗಿಯೂ ರಂಗದ ಮೇಲೆ ಬಂದಿದ್ದರು. ‘ಕದನ-ಕುತೂಹಲ’ ಎಂಬ ನಾಟಕವನ್ನು ‘ಲಡಾಯಿ ಮೂಳ’ ಎಂದು, ಕೈಲಾಸಂರವರ ಹೋಂರೂಲ್ ನಾಟಕವನ್ನು ಅದೇ ಹೆಸರಿನಿಂದ ಕೊಂಕಣಿ ಭಾಷೆಗೆ ಅನುವಾದಿಸಿದರು. ಸೀತಾದೇವಿ ಅವರು ರಚಿಸಿದ ಮತ್ತೊಂದು ನಾಟಕ ‘ವೇಣುಮಾಮ’ 1949 ರಲ್ಲಿ ಪ್ರಕಟವಾಯಿತು. ಇದು ಅಂಟನ್ ಚೆಕಾಫ್‌ರ ಅಂಕಲ್ ವಾನ್ಯಾ (Uncle Vanya) ಎಂಬ ನಾಟಕದ ರೂಪಾಂತರ. ಹೀಗೆ ಹಲವಾರು ನಾಟಕಗಳನ್ನು ರಚಿಸಿದ್ದಲ್ಲದೆ ಪತಿ ರಮಾನಂದ ರಾಯರೊಡನೆ ರಂಗದ ಮೇಲೂ ಅಭಿನಯಿಸಿ ತೀರಾ ಮಡಿವಂತಿಕೆಯ ಕಾಲದಲ್ಲೇ ರಂಗ ಪ್ರವೇಶಮಾಡಿದ ದಿಟ್ಟ ಮಹಿಳೆ. ಈ ನಾಟಕವು ಕೊಂಕಣಿಗೂ ಅನುವಾದಗೊಂಡು 1961ರಲ್ಲಿ ಮುಂಬಯಿಯಲ್ಲಿ ನಡೆದ ನಾಟಕೋತ್ಸವದಲ್ಲಿ ಪ್ರದರ್ಶಿತಗೊಂಡಿತು. 

ಹೀಗೆ ಪ್ರಗತಿಪರ ದೃಷ್ಟಿಧೋರಣೆಗಳುಳ್ಳ ದಿಟ್ಟ ಹೆಂಗಸಾಗಿ, ಹಲವಾರು ಸ್ವತಂತ್ರ ಕಥೆಗಳನ್ನು, ನಾಟಕಗಳ ರೂಪಾಂತರಗಳನ್ನು ಇಂಗ್ಲಿಷ್ ಮತ್ತು ಮರಾಠಿಯಿಂದ ಕನ್ನಡ ಮತ್ತು ಕೊಂಕಣಿಗೆ ತಂದ ಸೀತಾದೇವಿ ಪಡುಕೋಣೆಯವರು 1969ರ ಡಿಸೆಂಬರ್ 11 ರಂದು ಈ ಲೋಕವನ್ನಗಲಿದರು.

On the birth anniversary of writer Padukone Seethadevi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ