ಕೆ.ಎನ್. ವೆಂಕಟಸುಬ್ಬರಾವ್
ಕೆ. ಎನ್. ವೆಂಕಟಸುಬ್ಬರಾವ್
ಕಳಲೆ ನಾಗರಾಜರಾವ್ ವೆಂಕಟಸುಬ್ಬರಾವ್ ಅವರು ನಾಡಿನ ಹಿರಿಯ ಪತ್ರಕರ್ತರಾಗಿ, ಲೇಖಕರಾಗಿ ಮತ್ತು ಚಿತ್ರಕಥೆಗಾರರಾಗಿ ಹೆಸರಾದವರು.
ವೆಂಕಟಸುಬ್ಬರಾವ್ ಅವರು 1951ರ ಜೂನ್ 5ರಂದು ಜನಿಸಿದರು. ಇವರ ಊರು ನಂಜನಗೂಡಿನ ಬಳಿ ಇರುವ ಕಳಲೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ 1975ರಲ್ಲಿ ಬಿ.ಎ. ಪದವಿ ಪಡೆದು 1977ರಲ್ಲಿ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಎo.ಎ. ಪದವಿ ಪಡೆದರು.
ವೆಂಕಟಸುಬ್ಬರಾವ್ ಅವರು 1978ರಲ್ಲಿ ಉಪಸಂಪಾದಕರಾಗಿ ‘ಕನ್ನಡಪ್ರಭ’ ದೈನಿಕದಲ್ಲಿ ವೃತ್ತಿಜೀವನ ಆರಂಭಿಸಿದರು. 1993ರ ವರೆಗೂ ಆ ಪತ್ರಿಕೆಯ ಪ್ರಮುಖ ವಿಭಾಗಗಳಲ್ಲಿ ಕೆಲಸಮಾಡಿದ ಬಳಿಕ 1993 ರಲ್ಲಿ ರಾಷ್ಟ್ರೀಯ ಇಂಗ್ಲಿಷ್ ದೈನಿಕ 'ದಿ ಹಿಂದೂ' ಬೆಂಗಳೂರು ಆವೃತ್ತಿಯಲ್ಲಿ ಹಿರಿಯ ವರದಿಗಾರರಾಗಿ ಪ್ರವೇಶಿಸಿ 2೦11ರಲ್ಲಿ ವಿಶೇಷ ವರದಿಗಾರರಾಗಿ ನಿವೃತ್ತರಾದರು.
ಸಾಹಿತ್ಯ, ಸಂಸ್ಕೃತಿ ಮತ್ತು ಸಿನಿಮಾಗಳಂತಹ ಹಲವು ಪ್ರಕಾರಗಳಲ್ಲಿ ವೆಂಕಟಸುಬ್ಬರಾವ್ ಅವರ ಅವರ ಲೇಖನಗಳು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಕಟವಾಗಿವೆ. ವೆಂಕಟಸುಬ್ಬರಾವ್ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಚಲನಚಿತ್ರ ಸಹಾಯಧನ ಸಮಿತಿ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ಚಲಚಿತ್ರೋತ್ಸವಕ್ಕೆ ಕನ್ನಡ ಚಲನಚಿತ್ರಗಳನ್ನು ಆಯ್ಕೆ ಮಾಡುವ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
ವೆಂಕಟಸುಬ್ಬರಾವ್ ಸಾಹಿತಿಗಳಾಗಿಯೂ ಮಹತ್ವದ ಬರಹ ಮಾಡಿದ್ದಾರೆ. ಅವರ ಪ್ರಕಟಿತ ಕಾದಂಬರಿಗಳಲ್ಲಿ ಝೂಲಾಘಾಟ್ (1988), ತಂತ್ರ (2೦೦೦), ಮೃಗ (ಯು.ಆರ್. ಅನಂತಮೂರ್ತಿ ಅವರ ವಿಸ್ತೃತ ಮುನ್ನುಡಿಯೊಂದಿಗೆ) (2೦೦3).
ಇಂದ್ರಪ್ರಸ್ಥ (2೦೦9 ಮತ್ತು 2೦22), ಜೂಜು (2೦2೦) ಮತ್ತು ತರುವಾಯ (2೦24) ಸೇರಿವೆ.
ವೆಂಕಟಸುಬ್ಬರಾವ್ ಅವರು ಹಲವು ಮಹತ್ವದ ಕೃತಿಗಳನ್ನು ಅನುವಾದಿಸಿದ್ದಾರೆ. ಅವುಗಳಲ್ಲಿ 'ದ ಪ್ರಿನ್ಸ್-ರಾಜನೀತಿಯ ಕೈಪಿಡಿ' ಎಂಬ ಇಟಲಿಯ ರಾಜತಂತ್ರಜ್ಞ ನಿಕೊಲೊ ಮೆಖೈವಿಲ್ಲಿಯ ಕೃತಿ 'ದ ಪ್ರಿನ್ಸ್'ನ ಭಾವಾನುವಾದ (2೦21) ಹಾಗೂ ಯೂರೋಪಿನ (ಸ್ಟೇನ್ನ) ಮಹಾನ್ ವಿದ್ವಾಂಸ ಹೋಸೆ ಒರ್ಟೆಗಾ ಯಿ ಗಾಸೆತ್ ಅವರ 'ದ ರಿವೋಲ್ಟ್ ಆಫ್ ದಿ ಮಾಸಸ್'ನ ಕನ್ನಡ ಸಂಗ್ರಹಾನುವಾದ 'ಜನ ಸಮೂಹದ ದಂಗೆ' (2021), ವಿಲ್ ಡುರಾಂಟ್ ಅವರ ‘ದ ಕೇಸ್ ಫಾರ್ ಇಂಡಿಯಾ’ದ ಅನುವಾದ ‘ಇಂಡಿಯಾ ಅಂದು’ (2024) ಸೇರಿವೆ.
ವೆಂಕಟಸುಬ್ಬರಾವ್ ಅವರು ಪ್ರಖ್ಯಾತ ನಿರ್ದೇಶಕರಾದ ಕೆ.ಎಸ್.ಎಲ್.ಸ್ವಾಮಿ (ರವೀ) ಅವರ ಈTvಯಲ್ಲಿ ಪ್ರಸಾರಗೊಂಡ ಟೆಲಿ ಧಾರಾವಾಹಿ 'ಸೃಷ್ಟಿ'ಗೆ ಚಿತ್ರಕಥೆ ಬರೆದರು. ಕೆ.ಎಸ್.ಎಲ್.ಸ್ವಾಮಿ ಅವರ ಮಹತ್ವಾಕಾಂಕ್ಷೆಯ ಆದಿ ಶಂಕರರ ಬದುಕು ಮತ್ತು ತತ್ವಗಳ ಆಧಾರಿತ 'ಶಂಕರ ದಿಗ್ವಿಜಯ'ಕ್ಕೂ ಚಿತ್ರಕಥೆ ಬರೆದರು. ದುರದೃಷ್ಟವಶಾತ್ ಕೆ.ಎಸ್.ಎಲ್.ಸ್ವಾಮಿ ಅವರ ಅಕಾಲಿಕ ಮರಣದಿಂದ ಆ ಧಾರಾವಾಹಿ ಮೂಡಿಬರಲಿಲ್ಲ. ವೆಂಕಟಸುಬ್ಬರಾವ್ ಅವರು ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ ಎಸ್. ಎಲ್. ಭೈರಪ್ಪನವರ 'ಗೃಹಭಂಗ' ಕಾದಂಬರಿ ಆಧಾರಿತ ಟೆಲಿ ಧಾರಾವಾಹಿಯ ಕೆಲವು ಎಪಿಸೋಡ್ಗಳಿಗೂ ಚಿತ್ರಕಥೆ ಬರೆದರು.
ಹಿರಿಯರಾದ ಆತ್ಮೀಯ ವೆಂಕಟಸುಬ್ಬರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday to our Great Journalist, Novelist and scriptwriter Venkatasubba Rao Sir 🌷🙏🌷
ಕಾಮೆಂಟ್ಗಳು