ಕಾದಂಬರೀತ್ರಯ
ದೇವುಡು ಕಾದಂಬರೀತ್ರಯ
ಕನ್ನಡ ಸಾರಸ್ವತ ಲೋಕಕ್ಕೆ ದೇವುಡುರವರ ಪೌರಾಣಿಕ ಕಾದಂಬರೀತ್ರಯ – ‘ಮಹಾಬ್ರಾಹ್ಮಣ’, ‘ಮಹಾಕ್ಷತ್ರಿಯ’ ಮತ್ತು ‘ಮಹಾದರ್ಶನ’ ಮರೆಯಲಾಗದ ಮಹಾಕಾಣಿಕೆಯಾಗಿವೆ. ತಮ್ಮ ಪ್ರತಿಭೆಗೆ ‘ದೈವ ಪ್ರೇರಣೆ’ ಎಂದು ದೇವುಡು ಅತ್ಯಂತ ನಿಷ್ಠೆಯಿಂದ ಹೇಳಿಕೊಂಡಿದ್ದಾರೆ.
‘ಮಹಾಬ್ರಾಹ್ಮಣ’ ಕಾದಂಬರಿಯ ಕಥೆ ವೇದಕಾಲದ ಪ್ರಸಿದ್ಧವಾದ ವಸಿಷ್ಠ – ವಿಶ್ವಾಮಿತ್ರರದು. ಹತ್ತು ಹಲವು ಮೂಲಗಳಲ್ಲಿ ದೊರೆಯುವ ಕಥಾನಕವಾದರೂ ಮುಖ್ಯವಾಗಿ ರಾಮಾಯಣದ ಕಥೆಯನ್ನು ಆಧರಿಸಿ ಪ್ರಾಸಂಗಿಕವಾಗಿ ಉಳಿದ ಅಂಶಗಳನ್ನು ಹೊಂದಿಸಿ, ಕಲ್ಪನೆಯ ಮೂಸೆಯಲ್ಲಿ ಎರಕಹೊಯ್ದ ಮಹಾಕೃತಿ ‘ಮಹಾಬ್ರಾಹ್ಮಣ’. ಮಹಾಕ್ಷತ್ರಿಯನಾಗಿ ಹುಟ್ಟಿ ಕಾಮಧೇನುವಿನ ಆಸೆಗೆ ಬಲಿಯಾಗಿ ವಸಿಷ್ಠರ ಬ್ರಹ್ಮ ತೇಜಸ್ಸಿನ ಮುಂದೆ ತಾನು ಏನೂ ಅಲ್ಲವೆಂದು ಅರಿವುಗಳಿಸಿ ಅದೇ ವಸಿಷ್ಠರಂತೆ ‘ಮಹಾಬ್ರಾಹ್ಮಣ’ನಾಗಲು ವಿಶ್ವಾಮಿತ್ರ ಕೈಗೊಳ್ಳುವ ಸಾಹಸಮಯ ಕಥೆ ಇಲ್ಲಿಯದು. ಸಾರ್ವಕಾಲಿಕ ಅನುಭವ ಸಾಂದ್ರತೆಯಿಂದ ಕೂಡಿದ ವಿಶ್ವಾಮಿತ್ರನ ಜೀವನ ಹಾಗೂ ಅವನಿಗುಂಟಾದ ಗಾಯತ್ರೀ ಸಾಕ್ಷಾತ್ಕಾರ ನಮ್ಮ ಸಂಸ್ಕೃತಿಯ ಒಂದು ಪ್ರತೀಕ; ಪರಿಪಾಕ. ಸ್ವಾನುಭವ, ಕಲ್ಪನಾಶಕ್ತಿ, ಶಾಸ್ತ್ರ ಪರಿಚಯದಿಂದ ಆಸ್ತಿಕರಿಗೆ ಮಾತ್ರವಲ್ಲದೆ ಸಾಹಿತ್ ಜಿಜ್ಞಾಸುಗಳಿಗೂ ಪ್ರಿಯವಾಗುವಂಥ ಮಹಾಕೃತಿಯನ್ನು ದೇವುಡು ನಿರ್ಮಿಸಿದ್ದಾರೆ.
‘ಮಹಾಕ್ಷತ್ರಿಯ’ ಕಾದಂಬರಿಯ ನಾಯಕ ನಹುಷ ಮಹಾರಾಜ. ಪರಿಗ್ರಹಕ್ಕಿಂತ ತ್ಯಾಗವು ಹೆಚ್ಚೆಂದೂ, ಭೋಗಕ್ಕೆ ಅಂಟಿಕೊಳ್ಳುವ ದೇವತ್ವಕ್ಕಿಂತಲೂ ತ್ಯಾಗವನ್ನಾರಾಧಿಸುವ ಮನುಷ್ಯತ್ವವೇ ಅಧಿಕವೆಂದೂ ಲೋಕಕ್ಕೆ ಶ್ರುತಪಡಿಸಿದ ಮಹಾವ್ಯಕ್ತಿ ಈತ. ಯಜ್ಞಯಾಗಾದಿಗಳಿಂದ, ದಾನ ಬುದ್ಧಿ, ವೀರಗುಣಗಳಿಂದ ಇಂದ್ರನ ದರ್ಪವನ್ನು ತುಳಿದು ಇಂದ್ರಪಟ್ಟ ಪಡೆದವನು. ಉಪನಿಷತ್ತು, ಮಹಾಭಾರತ, ವಾಯುಪುರಾಣ ಮುಂತಾದ ಅನೇಕ ಮೂಲಗಳ ಕಥೆಯನ್ನು, ಪ್ರಸಂಗಗಳನ್ನು ಸ್ವೀಕರಿಸಿ, ಇದು ಹೀಗೇ ನಡೆಯಿತೋ ಎನ್ನುವಂತೆ ಸರ್ವಾಂಗ ಸುಂದರವನ್ನಾಗಿಸಿದ್ದಾರೆ ದೇವುಡು.
ದೇವುಡರವರ ‘ಮಹಾದರ್ಶನ’ – ಅಲೌಕಿಕತೆಯನ್ನು ಅತಿಶಯವಾಗಿ ಸಾಕ್ಷಾತ್ಕರಿಸಿಕೊಂಡು ಅದ್ಭುತ ಶೈಲಿಯಲ್ಲಿ ಅರಳಿದ ಕಡೆಯ ಬೃಹತ್ಕಾದಂಬರಿ. ಋಷಿ ಯಾಜ್ಞವಲ್ಕ್ಯರು ಬ್ರಹ್ಮವಿದ್ಯೆ ಸಾಧಿಸಿದ ಮಹಾನ್ ಕಥೆ. ‘ಮಹಾದರ್ಶನ’ ಎಂಬ ಹೆಸರು ಕಥಾವಸ್ತುವಿಗೆ ಪೂರಕವಾದ ಘಟನಾವಳಿಗಳಿಗೆ ತಕ್ಕಂತೆ ಅರ್ಥಸ್ವಾರಸ್ಯದಿಂದ ಬೆಳೆಯುತ್ತ ಹೋಗಿ ಯಜ್ಞವಲ್ಕ್ಯ ಹಾಗೂ ಯಾಜ್ಞವಲ್ಕ್ಯ ಇಬ್ಬರಿಗೂ ಅನ್ವಯಿಸುವಂತಿದೆ. ಕನ್ನಡ-ಸಂಸ್ಕೃತ ಸಂಪನ್ನ ಭಾಷಾಸತ್ವವನ್ನು ಪುರಾಣಸಿದ್ಧ ನಿರೂಪಣೆಯಲ್ಲಿ ಕನ್ನಡದಲ್ಲಿ ದೇವುಡುರವರಂತೆ ಬೆಳಗಿದವರು ಯಾರು ಎನ್ನುವಷ್ಟು ‘ಮಹಾದರ್ಶನ’ ಸಾಧಿಸಿ ತೋರಿಸಿದೆ.
1962ರಲ್ಲಿ ದೇವುಡು ಅವರ ಮರಣದ ವರ್ಷ ಅವರ ‘ಮಹಾಕ್ಷತ್ರಿಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿತು. ಹಸ್ತಪ್ರತಿಯ ರೂಪದಲ್ಲಿದ್ದ ‘ಮಹಾದರ್ಶನ’ ಮೇರುಕೃತಿ 1967ರಲ್ಲಿ ಪ್ರಕಾಶನಗೊಂಡಿತು.
ಕಾಮೆಂಟ್ಗಳು