ಎಸ್. ಎ.ಕೃಷ್ಣಯ್ಯ
ಎಸ್. ಎ. ಕೃಷ್ಣಯ್ಯ
ಜಾನಪದ ತಜ್ಞ ಹಾಸನ ಜಿಲ್ಲೆಯ ಸಕಲೇಶಪುರದವರಾದ ಜಾನಪದ ತಜ್ಞ, ಹಿರಿಯ ಸಂಶೋದಕ ಎಸ್. ಎ. ಕೃಷ್ಣಯ್ಯ. ಅವರು ಉಡುಪಿಯ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರದಲ್ಲಿ ಮುಖ್ಯ ಸಂಶೋಧಕರಾಗಿ , ಕಲಾವಿದರಾಗಿ, ಇತಿಹಾಸ ತಜ್ಞರಾಗಿ ಮೂರೂವರೆ ದಶಕಗಳಿಗೂ ಹೆಚ್ಚು ಕಾಲದಿಂದ ಸೇವೆ ನೀಡುತ್ತಾ ಬಂದಿದ್ದಾರೆ.
ಕೃಷ್ಣಯ್ಯ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಜಾನಪದ ಹಾಗೂ ಶಾಸನ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವರು. 1988ರಲ್ಲಿ ಕರ್ನಾಟಕದ ಗೊಂಬೆಯಾಟಗಳ ಬಗ್ಗೆ ಕರ್ನಾಟಕ ಪಪೆಟ್ರಿ Karnataka Puppetry ಕೃತಿಯನ್ನು - ಆಂಗ್ಲ ಭಾಷೆಯಲ್ಲಿ ಹೊರತಂದಿರುವರು. 1992ರಲ್ಲಿ 'ಬಾಚಿಗೊಂಡನಹಳ್ಳಿ ಮತ್ತು ಏಣಿಗಿ ಬಸಾಪುರದ ಜನಪದ ಗೀತೆಗಳು'-ಎನ್ನುವ ಇವರ ಕೃತಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಉತ್ತಮ ಪುಸ್ತಕ ಬಹುಮಾನ ಲಭಿಸಿತು. ಕುವೆಂಪು ವಿಶ್ವವಿದ್ಯಾನಿಲಯ ಪ್ರಸಾರಂಗ ಮೂಲಕ 2004ರಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ ಕೃತಿ " ಜಾನಪದ ದಾಖಲಾತಿ ಸಂಗ್ರಹಾಲಯ" ಉತ್ತಮ ಕೃತಿಯಾಗಿ ಪ್ರಶಂಸೆ ಪಡೆಯಿತು. ಅಮೇರಿಕಾ ಗಾರ್ಲಾಂಡ್ ಪಬ್ಲಿಕೇಶನ್ ಮೂಲಕ ಪ್ರಕಟಣೆಯಾದ ವಿಶ್ವಕೋಶ, ಸೌತ್ ಏಷ್ಯಾನ್ ಫೋಕ್ಲೋರ್ ವಿಶ್ವಕೋಶ, ಮದ್ರಾಸ್ ಹೊರತಂದ ವಿಶ್ವಕೋಶ, ಮೈಸೂರು ವಿಶ್ವ ವಿದ್ಯಾನಿಲಯಗಳ ವಿಶ್ವಕೋಶದಲ್ಲಿ ಇವರ ಲೇಖನಗಳು ಪ್ರಕಟಣೆಯಾಗಿವೆ.
2011ರಲ್ಲಿ 'ಜಾನಪದ ಉಡುಪಿ ಜಿಲ್ಲೆ" ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್- ಉಡುಪಿ ಜಿಲ್ಲಾ ಘಟಕ ಪ್ರಕಟಣೆ ಮಾಡಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸೆಮಿನಾರುಗಳಲ್ಲಿ ಹಾಗೂ ಸ್ಥಳೀಯ ಅನೇಕ ವಿಚಾರ ಸಂಕಿರಣಗಳಲ್ಲಿ ಕೃಷ್ಣಯ್ಯನವರು ತಮ್ಮ ಪ್ರಬಂಧಗಳನ್ನು ಮಂಡಿಸಿರುವರು. ಇವರು ಕೇಂದ್ರ ಸಂಗೀತ ನಾಟಕ ಅಕಾಡೆಮಿ-ನವದೆಹಲಿ ವಿಭಾಗದ ಉತ್ಸವ ಸಮಿತಿಯ ಸದಸ್ಯರು ಹಾಗೂ ಕರ್ನಾಟಕ ಸರಕಾರದ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗಾಗಿ ತಯಾರಿಸಿರುವ ಕನ್ನಡ ತಂತ್ರಾಶ ಸಂಬಂಧವಾಗಿ ಸಲಹೆಗಾರರಾಗಿದ್ದರು (2000). ಹಂಪೆ ವಿಶ್ವವಿದ್ಯಾನಿಲಯದ ಮ್ಯೂಸಿಯಂ ಅಭಿವೃದ್ಧಿ ಆಯೋಗದಲ್ಲಿ ಸಲಹೆಗಾರರಾಗಿ ನಿಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ. 1984ರಲ್ಲಿ ಉನ್ನತ ಅಧ್ಯಯನಕ್ಕಾಗಿ ಫಿನಲ್ಯಾಂಡ್ಗೆ ಹೋಗಿ ಬಂದರು. ಮೂಡಲಪಾಯ, ಕರಪಾಲ ಮೇಳ, ಯಕ್ಷಗಾನ ಗೊಂಬೆಯಾಟ ಇವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಕಂಸಾಳೆ ಕಲೆಯನ್ನು ಇವರು ಸ್ವೀಡನ್ನಲ್ಲಿ ನಡೆದ 1988ರ ಭಾರತ ಉತ್ಸವದಲ್ಲಿ ಹಾಗೂ ಟರ್ಕಿ, ಟ್ಯುನೇಶಿಯಾ, ಮಾಲ್ಟ, ಸೈಪ್ರಸ್ ಮುಂತಾದ ದೇಶಗಳಿಗೆ ಪ್ರಥಮವಾಗಿ ಪರಿಚಯಿಸಿದ ಕೀರ್ತಿ ಇವರದಾಗಿದೆ. 2001ರಲ್ಲಿ ಪ್ರತಿಷ್ಠಿತ ರಾಕ್ ಫೆಲೋ ಫೌಂಡೇಶನ್ ಧನಸಹಾಯ ಪಡೆದು ನ್ಯೂಯಾರ್ಕ-ನಲ್ಲಿ ಗೊಂಬೆಯಾಟದ ಪ್ರಯೋಗ ಹಾಗೂ ಯಕ್ಷಗಾನ ತರಬೇತು ಕೊಡುವಲ್ಲಿ ಸಹಾಯಕರಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ. 2003-ಜೂನ್-ಜುಲೈನಲ್ಲಿ ಸ್ವಿಟ್ಜರ್ಲ್ಯಾಂಡ್-ನ ಜ್ಯೂರಿಕ್ ನಗರದಲ್ಲಿ ನಡೆದ ಭಾರತ ಉತ್ಸವದಲ್ಲಿ ಯಕ್ಷರಂಗ ಬ್ಯಾಲೆಯನ್ನು ಕರೆದೊಯ್ದಿದ್ದರು ಹಾಗೂ ಸ್ವೀಡನ್-ದೇಶದ ಜ್ಯೂರಿಕ್ ನಗರದ ಮ್ಯೂಸಿಯಂನ ಉತ್ಸವ-ಸಂಬಂಧವಾಗಿ ಸಲಹೆಗಾರರಾಗಿದ್ದರು. 2008-ಜೂನ್ 27ರಿಂದ ಜುಲೈ 7 ರತನಕ ಸ್ಚಿಟ್ಜರ್ಲ್ಯಾಂಡ್-ನ ಜ್ಯೂರಿಕ ನಗರದ ರೈಟ್ಬರ್ಗ ಮ್ಯೂಸಿಯಂ ಆಯೋಜಿಸಿದ ರಾಮಾಯಣ ಪೈಂಟಿಂಗ್ಸ್ ಉತ್ಸವದಲ್ಲಿ ಕರ್ನಾಟಕದ ಚಿಕ್ಕ ತೊಗಲುಗೊಂಬೆಯಾಟ ಮತ್ತು ದೊಡ್ಡ ತೊಗಲುಗೊಂಬೆಯಾಟ ಪ್ರಕಾರವನ್ನು (ಶ್ರೀ ಬೆಳಗಲ್ ವೀರಣ್ಣ ಇವರ ತಂಡ ಮತ್ತು ಶ್ರೀ ಎಡ್ರಾಮನಹಳ್ಳಿ ನಿಂಗಪ್ಪ ಇವರ ತಂಡ) ಕರೆದೊಯ್ದಿದ್ದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಥೆಯನ್ನು ನೆರಳು ಗೊಂಬೆಯಾಟದಲ್ಲಿ ಸಿದ್ಧಪಡಿಸಿ ನಿರ್ದೇಶನ ನೀಡಿದ ಕೀರ್ತಿ ಇವರದಾಗಿದೆ. 2008ರಲ್ಲಿ ಜರ್ಮನಿ, ಚೆನೈ ಈ ಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರುಗಳಿಗೆ ಆಯೋಜಿಸಲ್ಪಟ್ಟ ಅಂತರ್ರಾಷ್ಟ್ರೀಯ ಜಾನಪದ ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾಗಿ, ಕ್ಷೇತ್ರಕಾರ್ಯ ಸಂಘಟಕರಗಾಗಿ ಜಾನಪದ ಸಂಬಂಧವಾಗಿ ಕೆಲಸ ನಿರ್ವಹಿಸಿದ್ದರು. 2008ನೇ ಇಸವಿಯಲ್ಲಿ ಜರ್ಮನಿಯ ಹೈಡಲ್ಬರ್ಗ್-ನಲ್ಲಿ ನಡೆದ ಅಂತರ್ರಾಷ್ಟ್ರೀಯ ಸಮ್ಮೇಳನದಲ್ಲಿ (ಆ ಬಳಿಕ ವೂರ್ಜ್ ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಜಾನಪದ ಸಂಪನ್ಮೂಲ ಭಂಡಾರ ಸಂರಕ್ಷಣೆ ಹಾಗೂ ಜಾಗತಿಕ ಸವಾಲುಗಳು ಈ ಸಂಬಂಧವಾಗಿ ಪಠ್ಯ-ಪ್ರವಚನ ನೀಡುವುದರ ಮೂಲಕ ಕಮ್ಮಟವನ್ನು ಏರ್ಪಡಿಸಿದ ಕೀರ್ತಿ ಇವರದಾಗಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸುವರ್ಣ ಕರ್ನಾಟಕ ಯೋಜನೆಯಡಿ ತುಳು ಲಿಪಿ ಹಾಗೂ ತುಳು ಭಾಷೆಯಲ್ಲಿ ಲಭ್ಯವಾಗಿರುವ ಏಳು ತಾಡವಾಲೆ ಹಸ್ತಪ್ರತಿಗಳನ್ನು ಸಂಕಲನಗೊಳಿಸಿ ಡಿಜಿಟಲ್ ಪುಸ್ತಕವಾಗಿ ಮಾರ್ಪಡಿಸಿದರು. 'ಮರೆಯಲಾರದ ತುಳು ಮಹನೀಯರು' ಸಂಬಂಧವಾಗಿ ವಿಡಿಯೋ ಚಿತ್ರೀಕರಣದ ಮೂಲಕ ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿ ಸುವರ್ಣ ಕರ್ನಾಟಕ ಯೋಜನೆಯ ಭಾಗವಾಗಿ ಸಿ.ಡಿ. ನಿರ್ಮಾಣ ಮಾಡಿದರು. ಎಪ್ಪತ್ನಾಲ್ಕನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ 1800 ಛಾಯಾಚಿತ್ರಗಳನ್ನು ವ್ಯವಸ್ಥಿತವಾಗಿ ಸಿ.ಡಿ. ಮಾಧ್ಯಮದ ಮೂಲಕ ಐದು ಆಲ್ಬಂಗಳನ್ನು ನಿರ್ಮಾಣ ಮಾಡಿದರು. ಸಿರಿ ಅಧ್ಯಯನ ಹಿನ್ನೆಲೆಯಲ್ಲಿ ಒಂದು ಕ್ಷೇತ್ರದ ಆರಾಧನ ಪದ್ಧತಿಯಲ್ಲಿ ಕಂಡುಬರುವ ಅಬ್ಬಗ-ದಾರಗ ಕಾವ್ಯವನ್ನು ಸತತವಾಗಿ 10 ವರ್ಷಗಳ ಕಾಲ ಮರು ಅಧ್ಯಯನ ನಡೆಸಿದ ಹೆಗ್ಗಳಿಕೆ ಇವರದಾಗಿದೆ.
ಆರಾಧನೆಗೆ ತದ್ವಿರುದ್ದವಾಗಿ ಸಿರಿ ದೈವಗಳ ದರ್ಶನ ಒಂದು ಅಣುಕು ಪ್ರದರ್ಶನ-ನಡೆಸಿದ ಅಪರೂಪದ ವಿಧಿಗಳನ್ನು ದಾಖಲೀಕರಿಸಿರುವ ಕೃಷ್ಣಯ್ಯ, ವೆಬ್ ಜಾಲದಲ್ಲಿ ಸಿರಿ ಅಧ್ಯಯನ ಮಾಡುವವರಿಗೆ ಪ್ರೊ. ಪೀಟರ್ ಜೆ. ಕ್ಲಾಸ್ ಇವರ ಜೊತೆಯಾಗಿ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಜನಪದ ಕ್ಷೇತ್ರಕಾರ್ಯದಲ್ಲಿ ಸಹಸ್ರಾರು ಘಂಟೆಗಳ ಬಹಮಾಧ್ಯಮಗಳ ದಾಖಲೀಕರಣ ನಡೆಸಿದ್ದಾರೆ. ತುಳು ಅಕಾಡೆಮಿ-ಹಾಗೂ ರಾ.ಗೋವಿಂದ ಪೈ ಸಂಶೋಧನ ಕೇಂದ್ರ ಆಯೋಜಿತ ತುಳು ಭಾಷೆಯ ತಾಳೇಗರಿ ಅನ್ವೇಷಣೆ ಹಿನ್ನೆಲೆಯಲ್ಲಿ ಕ್ಷೇತ್ರಕಾರ್ಯ ಹಾಗೂ ತಾಳೆಗರಿ ಕಡತಗಳ ದತ್ತಸೂಚಿ (ಇಂಡೆಕ್ಸ್) ಕರ್ನಾಟಕ ಥಿಯಾಲಜಿ ಗ್ರಂಥಾಲಯದಲ್ಲಿನ ಕಡತಗಳ ನಿರ್ವಹಣೆ ಸಂಬಂಧವಾಗಿ ಪ್ರೊ. ಶ್ರೀನಿವಾಸ ಹಾವನೂರು ಹಾಗೂ ಎಸ್.ಎ.ಕೃಷ್ಣಯ್ಯ ಹಾಗೂ ಗ್ರಂಥಪಾಲಕ ಬೆನೆಟ್ ಅಮ್ಮಣ್ಣ ಸಹಕಾರದಿಂದ ದ್ವಿಭಾಷೆಯ ದತ್ತಸೂಚಿ ನಿರ್ಮಾಣ ಹಾಗೂ 2008ರಲ್ಲಿ ಸುವರ್ಣ ಕರ್ನಾಟಕ ಯೋಜನೆಯ ಭಾಗವಾಗಿ ತುಳು ಲಿಪಿ ಹಾಗೂ ತುಳು ಭಾಷೆಯಲ್ಲಿ ಲಭ್ಯವಾಗಿರುವ ಎಲ್ಲಾ ತಾಳೆಗರಿ ಗ್ರಂಥಗಳನ್ನು ವಿಶೇಷ ಬಿಂಬಗ್ರಹಣದ ಮೂಲಕ ಸಿ.ಡಿ. ಮಾಧ್ಯಮದಲ್ಲಿ ಸಂಕಲನಗೊಳಿಸಿ ಹೊರತಂದಿರುವರು.
ಕೃಷ್ಣಯ್ಯನವರಿಗೆ 2006 ಶ್ರೀಕೃಷ್ಣಮಠದ ಸಪ್ತೋತ್ಸವ ಪ್ರಶಸ್ತಿ ಹಾಗೂ ಸಮ್ಮಾನ ಸಂದಿತು. ಜಾನಪದ ಮತ್ತು ಇತಿಹಾಸ ಸಂಶೋಧಕರಾದ ಇವರು ಪ್ರಸ್ತುತ ಅಸ್ಥಿತ್ವಕ್ಕೆ ಬರುತ್ತಿರುವ ಕೋಟಿ-ಚೆನ್ನಯ್ಯ ಥೀಂ ಪಾರ್ಕ ಯೋಜನೆ ತಯಾರಿಸಿಕೊಟ್ಟವರು. ಇವರ ಮಾರ್ಗದರ್ಶನದಲ್ಲಿ ನಾಡಿನ - ಹೊರ ನಾಡಿನ ಅನೇಕ ಮ್ಯೂಸಿಯಂಗಳಿಗೆ ಕ್ರಿಯಾಯೋಜನ ಸಲಹಾಕಾರರಾಗಿರುವರು. ಭೂಪಾಲ ಮ್ಯೂಸಿಯಂ, ಇಂದಿರಾಗಾಂಧಿ ರಾಷ್ಟ್ರೀಯ ಸಂಗ್ರಹಾಲಯ ಮೈಸೂರು, ಹಂಪಿ ವಿಶ್ವ ವಿದ್ಯಾಲಯ ಮ್ಯೂಸಿಯಂ, ಸುತ್ತೂರುಶ್ರೀ ಜಾನಪದ ಮ್ಯೂಸಿಯಂ ಇವುಗಳಲ್ಲಿ ಸೇರಿವೆ.
ಕೃಷ್ಣಯ್ಯನವರು 2013ರಿಂದ ಡಾ.ಶಿವರಾಮಕಾರಂತ ಪ್ರತಿಷ್ಠಾನ ಪಿಲಿಕುಳ ನಿಸರ್ಗಧಾಮದಲ್ಲಿ ಆಯೋಜಿತಗೊಂಡಿರುವ ಜಾನಪದ ಲೋಕ ಮ್ಯೂಸಿಯಂ ಸಂಬಂಧವಾಗಿ ತಜ್ಞ ಸಮಿತಿ ಸದಸ್ಯರಾಗಿ, ನವದೆಹಲಿಯ ಕೇಂದ್ರ ಸಂಸ್ಕೃತಿ ಸಚಿವಾಲಯ ನಿಕಟಪೂರ್ವ ತಜ್ಞಸಮಿತಿ ಸದಸ್ಯರಾಗಿ ಹಾಗೂ ಮಣಿಪಾಲ ವಿಶ್ವವಿದ್ಯಾನಿಲಯದ ಕಮ್ಯುನಿಕೇಶನ್ - ಪಿಎಚ್.ಡಿ. ತಜ್ಞ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಉಡುಪಿ ವಿಭಾಗದ ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿಗಳು, ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಪರಿಷತ್ತಿನ ಜಿಲ್ಲಾ ಅಧ್ಯಕ್ಷರು, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿರುವರು ಮತ್ತು ಡಿಜಿಟಲ್ ಶಿಕ್ಷಣ ಪ್ರಯೋಗಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿರುವರು. ಕರ್ನಾಟಕ ಪ್ರಾಧಿಕಾರ ಮತ್ತು ಜಾನಪದ ಅಕಾಡೆಮಿ ಪ್ರಕಟಣೆ ಮಾಡಿದ ಜಾನಪದ ನಿಘಂಟು ಸಂಬಂಧವಾಗಿ ಜಿಲ್ಲಾ ವಿಭಾಗದ (ಉಡುಪಿ, ದ.ಕ. ಮತ್ತು ಕೊಡಗು) ಸಂಪಾದಕರಾಗಿ, ಕರ್ನಾಟಕ ಜಾನಪದ ವಿಶ್ವ ವಿದ್ಯಾನಿಲಯ (ಗೋಟಗೋಡಿ ಹಾವೇರಿ ಜಿಲ್ಲೆ) ಸಿದ್ಧಪಡಿಸಿದ ಜಾನಪದ ನಿಘಂಟು ಸಂಬಂಧವಾಗಿ ಗಣಕ ತಂತ್ರಜ್ಞ ಹಾಗೂ ಕ್ಷೇತ್ರದ ತಜ್ಞ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2005ರಿಂದ ಕರ್ನಾಟಕ ಸರಕಾರ ತಂತ್ರಜ್ಞಾನ ಅಭಿವೃದ್ಧಿ ಘಟಕ (ಕನ್ನಡ ತಂತ್ರಾಶ) ಹೊರತಂದ ಕನ್ನಡ ತಂತ್ರಾಂಶದ ನಾಮನಿರ್ದೇಶಿತ ಸದಸ್ಯರೂ ಆಗಿದ್ದರು. ಭಾರತೀಯ ಜಾನಪದ ಸರ್ವೇಕ್ಷಣ ಕೇಂದ್ರದ ಅಧ್ಯಕ್ಷರು ಮತ್ತು ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದರು.
2020ರ ವರ್ಷ ಪ್ರೊ. ಎಸ್. ಎ. ಕೃಷ್ಣಯ್ಯನವರಿಗೆ ಕೇಂದ್ರ ಸಂಸ್ಕೃತಿ ಸಚಿವಾಲಯ ತಜ್ಞ ಸಮಿತಿ ಪುರಸ್ಕಾರ ಸಂದಿತು.
Prof. S. A. Krishnaiah, Oriental Archives Research Centre and Gallery, Udupi
ಕಾಮೆಂಟ್ಗಳು