ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಣಬ್ ಸಂಸ್ಮರಣೆ


 ಪ್ರಣಬ್ ಸಂಸ್ಮರಣೆ


ಮಾಜಿ ರಾಷ್ಟ್ರಪತಿ ಭಾರತರತ್ನ ಪ್ರಣಬ್ ಮುಖರ್ಜಿ ಒಬ್ಬ ಮಹತ್ವದ ರಾಜಕಾರಣಿಯಾಗಿದ್ದವರು. ಇಂದು ಅವರ ಸಂಸ್ಮರಣಾ ದಿನ. 

ಅವರನ್ನು ರಾಷ್ಟ್ರಪತಿಗಳಾಗಿ ಮಾಡಿದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿಲ್ಲದಿರುವಾಗ,  ಭಾರತೀಯ ಜನತಾಪಕ್ಷದ ಅಧಿಕಾರದ ಅವಧಿಯಲ್ಲಿ ಅವರಿಗೆ ಭಾರತರತ್ನ ಪ್ರಶಸ್ತಿ ಸಂದಿತು.  ಇದು  ಹಲವು ರೀತಿಯಲ್ಲಿ ಮನಸ್ಸಿಗೆ ಇಷ್ಟವಾದ ಘಟನೆ ಆಗಿತ್ತು.  ಅಂತಹ ವರ್ಚಸ್ಸು ಪ್ರಣಬ್ ದಾ ಅವರದು.

ಪ್ರಣಬ್‌ ಕಾಮುದಾ ಕಿಂಕರ್‌ ಮುಖರ್ಜಿ 1935ರ ಡಿಸೆಂಬರ್ 11ರಂದು ಬೀರ್‌ಭೂಮ್ ಜಿಲ್ಲೆಯ ಮಿರತಿ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಕಾಮದಾ ಕಿಂಕರ್‌ ಮುಖರ್ಜಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದರು. ತಾಯಿ ರಾಜಲಕ್ಷ್ಮಿ.

ಪ್ರಣಬ್‌ ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಶಾಸ್ತ್ರದಲ್ಲಿನ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1963ರಲ್ಲಿ ಕೋಲ್ಕತ್ತಾದ ಕಾಲೇಜೊಂದರಲ್ಲಿ ಶಿಕ್ಷಕರಾಗಿ ಕೆಲಸಮಾಡಿ, ನಂತರ ಪತ್ರಕರ್ತರಾಗಿ ಕೆಲಸ ಮಾಡಿದರು. ಬಂಗಾಲಿ ಭಾಷೆಯ ಮಾಸಪತ್ರಿಕೆ, ವಾರಪತ್ರಿಕೆಗೆ ಸಂಪಾದಕರೂ ಆಗಿದ್ದರು.

ಪ್ರಣಬ್‌ ಮುಖರ್ಜಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಸಲಹೆಯ ಮೇರೆಗೆ 1969ರಲ್ಲಿ ಬಾಂಗ್ಲಾ ಕಾಂಗ್ರೆಸ್‌ನಿಂದ ರಾಜ್ಯಸಭೆ ಸ್ಥಾನಕ್ಕೆ ಸ್ಪರ್ಧಿಸಿದರು.  ಮುಂದೆ ಬಾಂಗ್ಲಾ ಕಾಂಗ್ರೆಸ್‌ ಕಾಂಗ್ರೆಸ್‌ ಪಕ್ಷದೊಂದಿಗೆ ವಿಲೀನವಾಯಿತು. ನಂತರ, ನಾಲ್ಕು ಅವಧಿಗೆ ಪ್ರಣಬ್‌ ರಾಜ್ಯಸಭಾ ಸದಸ್ಯರಾಗಿ ಮುಂದುವರೆದರು.

ಪ್ರಣಬ್ ಮುಖರ್ಜಿ 1966–77 ಮತ್ತು 1980–84ರ ಅವಧಿಯಲ್ಲಿ ಪ್ರಧಾನಿ ಇಂದಿರಾಗಾಂಧಿಯವರ ಆಡಳಿತದಲ್ಲಿದ್ದರು. 1973ರ ತುರ್ತು ಪರಿಸ್ಥಿತಿ ಅವಧಿಯಲ್ಲೂ ಇಂದಿರಾ ಅವರ ಕಾರ್ಯಗಳಿಗೆ ಒತ್ತಾಸೆಯಾಗಿ ನಿಂತಿದ್ದರು. 1982ರಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರ ಸಂಪುಟದಲ್ಲಿ ವಿತ್ತ ಸಚಿವರಾದರು. 1984ರಲ್ಲಿ ಇಂದಿರಾ ಗಾಂಧೀ ಹತ್ಯೆಯ ನಂತರ  ರಾಜೀವ್‌ಗಾಂಧಿ ಪ್ರಧಾನಿಯಾದರು. ಪ್ರಣಬ್ ಮುಖರ್ಜಿ ಹೆಸರು ಪ್ರಧಾನಿ ಹೆಸರಾಗಿ ಕೆಲವು ವಲಯದಲ್ಲಿತ್ತು ಎಂದು ರಾಜೀವ್ ಗಾಂಧಿ ಅವರನ್ನು ಮಂತ್ರಿ ಪದವಿಗೇ ಪರಿಗಣಿಸಲಿಲ್ಲ.

1986ರಲ್ಲಿ ಪ್ರಣಬ್  ಹೊಸ ಪಕ್ಷ ಸ್ಥಾಪಿಸಿದರು.  ತಮ್ಮ ಪ್ರಧಾನಿಹುದ್ದೆ ಹೋದನಂತರ ರಾಜೀವ್‌ ಗಾಂಧಿ ಪ್ರಣಬ್‌ ಮನವೊಲಿಸಿದರು. 1989ರಲ್ಲಿ ಪ್ರಣಬ್ ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದರು.  1991ರಲ್ಲಿ ರಾಜೀವ್ ಗಾಂಧಿ ಹತ್ಯೆಯಾದ ನಂತರ, ಪಿ.ವಿ. ನರಸಿಂಹ ರಾವ್ ಅವರು ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡರು. 1996ರಲ್ಲಿ ಪಿ.ವಿ. ನರಸಿಂಹರಾವ್‌ ಪ್ರಧಾನಿಯಾದರು. ಪ್ರಣಬ್ ಮುಖರ್ಜಿ 1993–95 ಅವಧಿಯಲ್ಲಿ ವಾಣಿಜ್ಯ, 1995–96 ವಿದೇಶಾಂಗ ವ್ಯವಹಾರಖಾತೆ ನಿರ್ವಹಿಸಿದರು.

1998ರಲ್ಲಿ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷರಾದರು. ಯುಪಿಎ ಮೊದಲ ಆಡಳಿತಾವಧಿಯಲ್ಲೂ ಪ್ರಧಾನಿ ಹುದ್ದೆಗೆ ಪ್ರಣಬ್‌ ಅವರ ಹೆಸರು ಕೇಳಿಬಂದಿತ್ತು. ಆದರೆ 2004ರಲ್ಲಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿಸಿದರು.

‌ರಾಜ್ಯಸಭೆಯಲ್ಲೇ ಹೆಚ್ಚು ಕಾಲವಿದ್ದ ಪ್ರಣಬ್ ಮುಂದೆ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿ, ಜನರಿಂದ ಆಯ್ಕೆಯಾಗಿ ಸಂಸತ್ ಪ್ರವೇಶಿಸಿ ವಿದೇಶಾಂಗ ಸಚಿವರಾದರು. ಯುಪಿಎ2ರ ಅವಧಿಯಲ್ಲಿ ಹಣಕಾಸು ಸಚಿವರಾದರು. ಪ್ರತಿಭಾ ಪಾಟೀಲ್ ಅಧಿಕಾರಾವಧಿ ಪೂರ್ಣಗೊಂಡ ನಂತರ 2012ರಲ್ಲಿ ಪ್ರಣಬ್‌ ಮುಖರ್ಜಿ ದೇಶದ 13ನೇ ರಾಷ್ಟ್ರಪತಿಗಳಾಗಿ ಆಯ್ಕೆಗೊಂಡರು.

ಆರ್ಥಿಕ ತಜ್ಞ, ಉತ್ತಮ ಹಣಕಾಸು ಸಚಿವ, ರಾಜಕೀಯ ಮುತ್ಸದ್ದಿ, ಸಂಭಾವಿತ ರಾಜಕಾರಣಿ, ರಾಜನೀತಿ ನಿಪುಣ, ಸಮಸ್ಯೆಗಳ ಪರಿಹಾರಕ ಇಂಥ ಹಲವು ಗುಣ ವಿಶೇಷಣಗಳಿಂದ  ಪ್ರಣಬ್  ಗೌರವಾನ್ವಿತರಾಗಿದ್ದರು. ರಾಜ್ಯಸಭಾ ಸದಸ್ಯರಾಗಿ ರಾಜಕೀಯ ಪಯಣ ಆರಂಭಿಸಿ, ಸಂಪುಟಗಳಲ್ಲಿ ವಿತ್ತ, ವಿದೇಶಾಂಗ, ರಕ್ಷಣೆ, ಗೃಹ ಸಚಿವಾಲಯದಂತಹ ದೊಡ್ಡ ದೊಡ್ಡ ಖಾತೆಗಳನ್ನು ನಿಭಾಯಿಸಿ, ದೇಶದ ಅತ್ಯುನ್ನತ ಪದವಿಯಾದ ‘ರಾಷ್ಟ್ರಪತಿ‘ ಹುದ್ದೆಯನ್ನೂ ಅಲಂಕರಿಸಿದರು.  ಇಷ್ಟೆಲ್ಲ ಸ್ಥಾನಗಳನ್ನು ಅಲಂಕರಿಸಿದರೂ ಎಲ್ಲೂ ತಾವು ನಂಬಿದ ತತ್ವ ಸಿದ್ಧಾಂತಗಳನ್ನು ಬಿಟ್ಟು ಬದುಕಲಿಲ್ಲ. ಸಾಂವಿಧಾನಿಕ ಮೌಲ್ಯಗಳ ಬದ್ಧತೆಯನ್ನೂ ಎಂದೂ ಬಿಟ್ಟುಕೊಡಲಿಲ್ಲ. ಪಕ್ಷದ ನಾಯಕತ್ವ ಅವರನ್ನು ಕಡೆಗಣಿಸಿ ಮೂಲೆಗುಂಪು ಮಾಡಿದ ಸಮಯದಲ್ಲೂ ಅವರು ಸಂಯಮದಿಂದ ವರ್ತಿಸಿದರು. ರಾಷ್ಟ್ರಪತಿಗಳಾಗಿದ್ದಾಗ ಕಾಂಗ್ರೆಸ್ ಆಡಳಿತ ಮತ್ತು ಮುಂದೆ ಬಿಜೆಪಿ ಆಡಳಿತ, ಈ  ಎರಡೂ ಕಾಲದಲ್ಲೂ ಅವರು ಘನತೆಯಿಂದ ವರ್ತಿಸಿದರು.

ಅಧ್ಯಯನಶೀಲರಾದ ಮುಖರ್ಜಿ ಬರಹಗಾರರೂ ಆಗಿದ್ದರು. 'ಬಿಯಾಂಡ್‌ ಸರ್ವೈವಲ್‌: ಎಮರ್ಜಿಂಗ್‌ ಡೈಮೆನ್ಷನ್ಸ್‌ ಆಫ್‌ ಇಂಡಿಯನ್‌ ಇಕಾನಮಿ’, 'ಚಾಲೆಂಜಸ್‌ ಬಿಫೋರ್‌ ದಿ ನೇಷನ್‌’, 'ದಿ ಕೊಯಲೇಷನ್‌ ಇಯರ್ಸ್‌’ ಮುಂತಾದ ಕೃತಿಗಳನ್ನು ಅವರು ಬರೆದಿದ್ದಾರೆ.

ರಾಷ್ಟ್ರಪತಿ ಹುದ್ದೆ ಬೀಳ್ಕೊಡುಗೆ ಸಮಾರಂಭದಲ್ಲಿ,  ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡುತ್ತಾ, "ಪ್ರಣಬ್‌ ಮುಖರ್ಜಿ ಜನರ ನಡುವಿನಿಂದ ಬಂದವರು. ಅದಕ್ಕೆ ಅವರು ರಾಷ್ಟ್ರಪತಿಯಾದ ಮೇಲೆ ರಾಷ್ಟ್ರಪತಿ ಭವನವನ್ನು ಜನರ ಭವನವನ್ನಾಗಿ ಮಾಡಿದರು" ಎಂದು ಶ್ಲಾಘಿಸಿದರು.

ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ನಂತರ,  ಪ್ರಣಬ್ ಮುಖರ್ಜಿ ಅವರಿಗೆ ಭಾರತದ ಅತ್ಯುನ್ನದ ಗೌರವವಾದ ‘ಭಾರತ ರತ್ನ’ ಪುರಸ್ಕಾರ ನೀಡಿ ಗೌರವಿಸಲಾಯಿತು.
"ಭಾರತೀಯರಿಗೆ ಕೃತಜ್ಞತೆ ತೋರುತ್ತಲೇ ಈ ಪುರಸ್ಕಾರದ ಗೌರವವನ್ನು ಒಪ್ಪಿಕೊಳ್ಳುತ್ತೇನೆ. ನನ್ನ ದೇಶದ ಜನರಿಗೆ ನಾನು ನೀಡಿದ್ದಕ್ಕಿಂತಲೂ ಹೆಚ್ಚಿನದನ್ನು ಜನರಿಂದ ಪಡೆದಿದ್ದೇನೆ ಎಂದು ಪದೇಪದೆ ಹೇಳುತ್ತೇನೆ" ಎಂದು ಪ್ರಣಬ್‌ ಮುಖರ್ಜಿ ಹೇಳಿದ್ದರು.

2020ರ ಆಗಸ್ಟ್ 31ರಂದು ಪ್ರಣಬ್ ಅವರ ನಿಧನದಿಂದ ದೇಶ ಮತ್ತೊಂದು ಶ್ರೇಷ್ಠ ರಾಜಕೀಯ ಪರಂಪರೆಯ ವ್ಯಕ್ತಿಯನ್ನು ಕಳೆದುಕೊಂಡಿತು.  ಅದು ಸುಲಭವಾಗಿ ತುಂಬುವಂತದ್ದಲ್ಲ. ಆಕಾಶದಿಂದ ಬಂದ ಹನಿ ಸಾಗರವನ್ನು ಸೇರುವುದು ನಿಯಮ.  ಶ್ರೇಷ್ಠ ಮಳೆ  ಹನಿಗಳು ಸಾಗರವನ್ನು ಸೇರುವ ಮುಂಚೆ ಭುವಿಯ ಬದುಕನ್ನು ಬೆಳಗುವ ಸಂದರ್ಭಗಳು ಹೆಚ್ಚುತ್ತಿರಲಿ. 🌷🙏🌷

On death anniversary of Pranab Mukherjee 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ