ಗಂಗಾಧರ ಮೊದಲಿಯಾರ್
ಗಂಗಾಧರ ಮೊದಲಿಯಾರ್
ಗಂಗಾಧರ ಮೊದಲಿಯಾರ್ ಕನ್ನಡ ಪತ್ರಿಕಾಲೋಕದಲ್ಲಿ ಪ್ರಸಿದ್ಧ ಹೆಸರು.
ಗಂಗಾಧರ ಮೊದಲಿಯಾರ್ 1954 ಜೂನ್ 22ರಂದು ಜನಿಸಿದರು. ಅವರ ಪ್ರಾಥಮಿಕ ವಿದ್ಯಾಭ್ಯಾಸ ಚಾಮರಾಜನಗರದ ಬಳಿಯ ಪಣ್ಯದ ಹುಂಡಿ ಹಾಗೂ ಬದನಗುಪ್ಪೆಯಲ್ಲಿ ನಡೆಯಿತು. ತಂದೆ ಸ್ಟೇಷನ್ ಮಾಸ್ಟರ್ ಆಗಿದ್ದರು. ಮಾನಸಗಂಗೋತ್ರಿಯಲ್ಲಿ ಕನ್ನಡ ಎಂ.ಎ. ಪದವಿ ಗಳಿಸಿದ ಇವರು ಜಾನಪದ ವಿಷಯದಲ್ಲಿ ಚಿನ್ನದ ಪದಕ ಗಳಿಸಿದರು. ಭಾರತೀಯ ಭಾಷೆಗಳ ಡಿಪ್ಲೊಮೊ, ಜರ್ನಲಿಸಂ ಡಿಪ್ಲೊಮೊ, ರಾಷ್ಟ್ರಭಾಷಾ ವಿದ್ವಾನ್ ಮುಂತಾದ ವಿದ್ಯಾರ್ಹತೆಗಳನ್ನೂ ಗಳಿಸಿಕೊಂಡರು.
1976ರಲ್ಲಿ 'ಸಂಯುಕ್ತ ಕರ್ನಾಟಕ' ದಿನಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯಲ್ಲಿ ವರದಿಗಾರರಾಗಿ, ವೃತ್ತಿ ಪ್ರವೇಶಿಸಿದ ಗಂಗಾಧರ ಮೊದಲಿಯಾರ್ ಅವರಿಗೆ ಹಿರಿಯ ಪತ್ರಕರ್ತರಾದ ಖಾದ್ರಿ ಶಾಮಣ್ಣ, ಎಸ್.ವಿ. ಜಯಶೀಲರಾವ್, ಸುರೇಂದ್ರ ದಾನಿ ಅವರುಗಳಿಂದ ಮಾರ್ಗದರ್ಶನ ದೊರಕಿತು. ಉತ್ತರ ಕನ್ನಡ ಜಿಲ್ಲಾ ವರದಿಗಾರನಾಗಿ ಒಂದು ವರ್ಷದ ಸೇವಾವಧಿಯಲ್ಲಿ ಹಲವರು ವಿಶೇಷ ವರದಿಗಳ ಮೂಲಕ ಅಭಿವೃದ್ಧಿ ಕೆಲಸಗಳಿಗೆ ಮುನ್ನುಡಿ ಹಾಡಿದರು. ಕಾಳಿನದಿಗೆ ಸೇತುವೆ ವಿಷಯದಲ್ಲಿ ಜನಪರ ದನಿ ವರದಿಮಾಡಿದರು. ಮೀನುಗಾರರ ಸಮಸ್ಯೆಗಳಿಗೆ ಕನ್ನಡಿ ಹಿಡಿದರು. ಸೀಗಡಿ ಮೀನು ವ್ಯಾಪಾರ ವಹಿವಾಟಿನ ಮೇಲೆ ಕ್ಷಕಿರಣ ಬೀರಿದರು. ಹುಬ್ಬಳ್ಳಿ-ಕಾರವಾರ ರೈಲು ಮಾರ್ಗ ಹೋರಾಟಕ್ಕೆ ಪೂರಕ ಲೇಖನ ಮಾಲೆ ಮೂಡಿಸಿದರು. ಗಂಗಾಧರ ಮೊದಲಿಯಾರ್ 1977-78 ರಲ್ಲಿ ಸಂಯುಕ್ತ ಕರ್ನಾಟಕದ ಧಾರವಾಡ ವರದಿಗಾರರಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾನಿಲಯದ ಸಮಸ್ಯೆಗಳು, ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ, ಹುಬ್ಬಳ್ಳಿ ಧಾರವಾಡ ರಸ್ತೆ ಸಂಪರ್ಕ ಅವ್ಯವಸ್ಥೆಗಳ ಮೇಲೆ ಇವರು ಮೂಡಿಸಿದ ವಿಶ್ಲೇಷಣಾತ್ಮಕ ವರದಿಗಳು ಜನರ ಗಮನ ಸೆಳೆದವು.
ಗಂಗಾಧರ ಮೊದಲಿಯಾರ್ 1979ರಲ್ಲಿ 'ಕರ್ಮವೀರ' ವಾರಪತ್ರಿಕೆಗೆ ಬಂದರು. ಕವರ್ಸ್ಟೋರಿ ಕಾನ್ಸೆಪ್ಟ್ ಮೂಲಕ 'ಕರ್ಮವೀರ' ವಾರ ಪತ್ರಿಕೆಗೆ ಹೊಸರೂಪ ಕೊಡುವ ಹೊಣೆಗಾರಿಕೆ ನಿರ್ವಹಿಸಿ ಯಶ ಸಾಧಿಸಿದರು.
'ಪ್ರಜಾವಾಣಿ'ಯಲ್ಲಿ ಮೂವತ್ತನಾಲ್ಕು ವರ್ಷಗಳ ಕಾಲ ಸುದೀರ್ಘ ಸೇವಾವಧಿಯಲ್ಲಿ ಗಂಗಾಧರ ಮೊದಲಿಯಾರ್ ಅವರು ಮಾಡಿದ ಸಾಧನೆಗಳು ಹಲವು. ಗಂಗಾಧರ ಮೊದಲಿಯಾರ್ 1980ರಲ್ಲಿ ‘ಪ್ರಜಾವಾಣಿ' ಬಳಗದ 'ಸುಧಾ' ವಾರಪತ್ರಿಕೆಗೆ ಆಹ್ವಾನ ಪಡೆದರು. ಅವರಿಗೆ ಎಂ.ಬಿ.ಸಿಂಗ್ ಅವರ ಮಾರ್ಗದರ್ಶನ ದೊರೆಯಿತು. 'ಸುಧಾ' ವಾರಪತ್ರಿಕೆಯನ್ನು ಕೂಡ ಕವರ್ಸ್ಟೋರಿ ಕಾನ್ಸೆಪ್ಟ್ನಲ್ಲಿ ರೂಪಿಸುವ ಹೊಣೆಗಾರಿಕೆ ಹೊತ್ತರು. 'ಸುಧಾ' ಇಂದಿಗೂ ಅದೇ ರೂಪದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಇದರೊಂದಿಗೆ 'ಮಯೂರ' ಮಾಸಿಕದ ಹೊಣೆಗಾರಿಕೆ ಕೂಡ ಅವರದಾಯಿತು. ಈ ಜನಪ್ರಿಯ ಮಾಸಿಕಕ್ಕೆ ಆಗ ಗಂಗಾಧರ ಮೊದಲಿಯಾರ್ ವಿಶೇಷ ಸಂಚಿಕೆಗಳ ಮೂಲಕ ಹೊಸ ಆಯಾಮ ನೀಡಿದರು. ಜನಪದ ವಿಶೇಷ, ವೈಜ್ಞಾನಿಕ ಕಥಾ ವಿಶೇಷ, ಪತ್ತೇದಾರಿ ಕತೆಗಳ ವಿಶೇಷಾಂಕ, ಮಹಿಳಾ ಸಂಚಿಕೆ... ಹೀಗೆ ಪತ್ರಿಕೆಗೆ ಹೊಸ ಆಯಾಮಗಳನ್ನು ನೀಡಿದ ಕೀರ್ತಿ ಇವರದು.
ಗಂಗಾಧರ ಮೊದಲಿಯಾರ್ 1983ರಲ್ಲಿ ಸುಧಾ ವಿಭಾಗದಿಂದ 'ಪ್ರಜಾವಾಣಿ'ಗೆ ಗ್ರಾಮೀಣ ವಿಭಾಗದ ಉಪಸಂಪಾದಕರಾಗಿ ಬಂದರು. ಜನರಲ್ ಡೆಸ್ಕ್ ಸೇವೆ, ವರದಿಗಾರಿಕೆ, ಪುಟವಿನ್ಯಾಸ, ವಿದೇಶಿ ಸುದ್ದಿಗಳ ವಿಭಾಗ, ವಾಣಿಜ್ಯ, ವ್ಯಾಪಾರ ವಿಭಾಗ,ಸಿನಿಮಾ ವರದಿಗಾರಿಕೆ ಹೀಗೆ ಪತ್ರಿಕೆಯ ಎಲ್ಲ ವಿಭಾಗಗಳಲ್ಲೂ ಸೇವೆ ಸಲ್ಲಿಸಿದರು. 1989ರಿಂದ 1995 ರವರೆಗೆ ತುಮಕೂರು ಜಿಲ್ಲೆಯಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸಿದರು. ಪಾವಗಡದಲ್ಲಿ ನಕ್ಸಲೀಯರ ಸಮಸ್ಯೆಂದು ಬಿಂಬಿಸಲಾಗಿದ್ದ ವಿಷಯವನ್ನು ಸಾಮಾಜಿಕ ಆರ್ಥಿಕ ಸಮಸ್ಯೆಯ ಮಗ್ಗುಲಿನಿದ್ದ ವಿಶ್ಲೇಷಾಣಾತ್ಮಕವಾಗಿ ಬರೆದ ವರದಿಯ ಫಲ, ಬರಪೀಡಿತ ಪಾವಗಡ ತಾಲ್ಲೂಕು ಅಭಿವೃದ್ಧಿಗೆ ಸರ್ಕಾರ ಪ್ರತೀ ವರ್ಷ ಎರಡು ಕೋಟಿ ರೂಪಾಯಿ ಅನುದಾನ ನೀಡಲಾರಂಭಿಸಿತು. ಹೇಮಾವತಿ ಕುಡಿಯುವ ನೀರು ಯೋಜನೆ ಶೀಘ್ರ ಕಾರ್ಯಗತಕ್ಕೆ ಒತ್ತಾಯ ಮಾಡಿ, ಅದಕ್ಕಿರುವ ಅಡ್ಡಿ ಆತಂಕಗಳ ಬಗ್ಗೆ ವಿಶ್ಲೇಷಣಾತ್ಮಕ ವರದಿ, ಸಾಕ್ಷರತಾ ಆಂದೋಲನ ಅಡ್ಡದಾರಿಗೆ ಹಿಡಿದಾಗ ಅದರ ಬಗ್ಗೆ ತನಿಖಾ ವರದಿ ಮಾಡಿದರು. ಇದರಿಂದ ಸರ್ಕಾರದಿಂದ ಕ್ರಮ ಜರುಗುವಂತಾಯಿತು.
ಗಂಗಾಧರ ಮೊದಲಿಯಾರ್ 1996ರಿಂದ 'ಪ್ರಜಾವಾಣಿ' ಕೇಂದ್ರ ಕಚೇರಿಯಲ್ಲಿ ಮುಖ್ಯ ಉಪಸಂಪಾದಕರಾಗಿ ಡೆಸ್ಕ್ ಮುಖ್ಯಸ್ಥರಾದರು. ನಂತರ ಪ್ರಜಾವಾಣಿ 'ಸಾಪ್ತಾಹಿಕ ಪುರವಣಿ' ಹಾಗೂ 'ಸಿನಿಮಾ ರಂಜನೆ' ಪುರವಣಿ ಮುಖ್ಯಸ್ಥರಾದರು. ಬಹುತೇಕ ಪುರವಣಿಗಳ ನಿರ್ವಹಣೆ ಹೊಣೆಗಾರಿಕೆ ನಿರ್ವಹಿಸಿದರು. ಸುದ್ದಿ ಸಂಪಾದಕರಾಗಿ ಪ್ರಜಾವಾಣಿ ಮುದ್ರಣದ ಹೊಣೆಗಾರಿಕೆ ಮಾಡಿದರು. ಸಹಾಯಕ ಸಂಪಾದಕರಾಗಿ ಸಂಪಾದಕೀಯ ಪುಟದ ಹೊಣೆ ನಿರ್ವಹಿಸಿದರು. 12 ವರ್ಷಗಳ ಕಾಲ ಸತತವಾಗಿ ಪ್ರಜಾವಾಣಿಯಲ್ಲಿ ಫಿಲಂ ಡೈರಿ ಅಂಕಣ ಬರೆದರು.
ಕನ್ನಡ ಪತ್ರಿಕೋದ್ಯಮದಲ್ಲಿ ಟಿಎಸ್ಆರ್ ಅವರ 'ಛೂಬಾಣ' ಅಂಕಣಕ್ಕೆ ವಿಶಿಷ್ಟ ಸ್ಥಾನವಿದೆ. ಹಲವು ವರ್ಷಗಳ ಅಂತರದಲ್ಲಿ 'ಪ್ರಜಾವಾಣಿ'ಯಲ್ಲಿ `ಚೂ ಬಾಣ' ಎನ್ನುವ ಶೀರ್ಷಿಕೆಯಲ್ಲಿ ಈ ಕಾಲಂ ಪುನರಾರಂಭಿಸಿದವರು ಗಂಗಾಧರ ಮೊದಲಿಯಾರ್. ಜಿಎಮ್ಮಾರ್ ಎನ್ನುವ ಕಾವ್ಯನಾಮದಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾದ ಈ ಕಾಲಂ ಶೈಲಿ, ಭಾಷಾಪ್ರಯೋಗ, ಚುಚ್ಚುವ ಗುಣ, ವಿಮರ್ಶಾತ್ಮಕ ನೋಟ, ವ್ಯಂಗ್ಯ ಮೊದಲಾದ ಎಲ್ಲ ಗುಣಗಳಿಂದಾಗಿ ಜನಪ್ರಿಯವಾಯಿತು.
ಗಂಗಾಧರ ಮೊದಲಿಯಾರ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮುಖವಾಣಿ 'ಪತ್ರಕರ್ತ'ದಲ್ಲಿ ಆರುವರ್ಷ ಸತತ ವಾಗಿ ನ್ಯೂಸ್ ಡೆಸ್ಕ್' ಅಂಕಣ ಬರೆದರು.
ಗಂಗಾಧರ ಮೊದಲಿಯಾರ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರಾಜ್ಯದ ಪತ್ರಕರ್ತರ ಸಂಘಟನೆಗೆ ಶ್ರಮಿಸಿದರು. ರಾಜ್ಯದಾದ್ಯಂತ ಉಪನ್ಯಾಸ, ಸಂವಾದ, ಚರ್ಚೆ, ಗ್ರಾಮೀಣ ಪತ್ರಕರ್ತರಿಗೆ ಶಿಬಿರಗಳು ಮೊದಲಾದವುಗಳ ಮೂಲಕ ವ್ಯಾಪಕ ಅರಿವು ಮೂಡಿಸಿದರು. ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಉಪಾಧ್ಯಕ್ಷರಾಗಿ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರಾಗಿ, ಭಾರತೀಯ ಪತ್ರಕರ್ತರ ಒಕ್ಕೂಟದ ಸದಸ್ಯರಾಗಿ , ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಹೀಗೆ ಪತ್ರಕರ್ತರ ಎಲ್ಲ ಸಂಘಟನೆಗಳಲ್ಲೂ ಅವರ ಸೇವೆ ಸಂದಿದೆ. ಅನೇಕ ಸಲಹಾ ಸಮಿತಿಗಳಲ್ಲಿಯೂ ಅವರ ಸೇವೆ ಸಂದಿದೆ.
ಗಂಗಾಧರ ಮೊದಲಿಯಾರ್ ಅವರ ಪ್ರಕಟಿತ ಕೃತಿಗಳಲ್ಲಿ ಇವುಗಳು ಸೇರಿವೆ :
1. ಚಲನಚಿತ್ರ ಇತಿಹಾಸದ ಪುಟಗಳಲ್ಲಿ (ಕನ್ನಡ ಚಲನಚಿತ್ರ ಇತಿಹಾಸ ಕುರಿತು ಕನ್ನಡದಲ್ಲಿ ರಚನೆಯಾದ ಮೊದಲ ಪುಸ್ತಕ) 1998;
2. ಬಂಡಾಯ ಸಾಹಿತ್ಯ ನೆಲೆಬೆಲೆ ವಿಮರ್ಶಾ ಕೃತಿ;
3. ನಾಲ್ಕು ಜನರಿಗೆ ನಮಸ್ಕಾರ (ಪ್ರಬಂಧ ಸಂಕಲನ) (2005 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ);
4. ನಂದನಾರ್ 5 ನೇ ಶತಮಾನದ ಸಂತನ ಆತ್ಮ ವೃತ್ತಾಂತ;
5. ಸೂರ್ಯ ಹುಟ್ಟಿದ ದೇಶ (ಸಣ್ಣ ಕತೆಗಳ ಸಂಕಲನ);
6. ಸಿನಿಮಾ ಸಮಯ (ಸಿನಿಮಾ ಅಂಕಣಗಳ ಸಂಕಲನ) 2017 (ರಾಜ್ಯ ಸರ್ಕಾರದ ಅತ್ಯುತ್ತಮ ಸಿನಿಮಾ ಪುಸ್ತಕ ಪ್ರಶಸ್ತಿ ಪಡೆದ ಕೃತಿ;
7. ಚಲನಚಿತ್ರ ಪತ್ರಿಕೋದ್ಯಮ;
8. ಮಾದ್ಯಮ ಅಕಾಡೆಮಿಗಾಗಿ 30 ಪತ್ರಿಕೋದ್ಯಮ ಕುರಿತ ಪುಸ್ತಕಗಳ ಸಂಪಾದನೆ;
9. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೊರತಂದ ಅಮೃತ ಮಹೋತ್ಸವ ಪುಸ್ತಕ ಮಾಲಿಕೆಯ ಸಂಪಾದಕ ಬಳಗದ ಸದಸ್ಯರಾಗಿ 75 ಪುಸ್ತಕಗಳ ಪ್ರಕಟಣೆ;
10. ಶಂಕರ್ ಸಿಂಗ್ ಹಾಗೂ ಅನಕೃ ಪುಸ್ತಕಗಳು;
11. ಹೊಸ ದಿಕ್ಕು: ಹೊಸ ನೋಟ ಚಲನಚಿತ್ರ ಅಕಾಡೆಮಿ ಪ್ರಕಟಣೆ.
ಗಂಗಾಧರ ಮೊದಲಿಯಾರ್ ಅವರಿಗೆ ಪತ್ರಿಕೋದ್ಯಮದ ಜೀವಮಾನ ಸಾಧನೆಗಾಗಿ ಕರ್ನಾಟಕ ರಾಜ್ಯ ಸರ್ಕಾರದ ಟಿಎಸ್ಆರ್ ಪ್ರಶಸ್ತಿ 2014, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ 2010, ಕೆಂಪೇಗೌಡ ಪ್ರಶಸ್ತಿ 2011, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2005, ಬರಗೂರು ಪ್ರಶಸ್ತಿ , ಆರ್ಯಭಟ ಪ್ರಶಸ್ತಿ, ಹೂಗಾರ ಪ್ರಶಸ್ತಿ, ಬೆಹರಿನ್ ಕನ್ನಡ ಸಂಘ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅತ್ಯುತ್ತಮ ಪತ್ರಕರ್ತ ಪ್ರಶಸ್ತಿ, ಬೆಸ್ಟ್ ಕ್ರೈಂ ರಿಪೋರ್ಟರ್ ಪ್ರಶಸ್ತಿ ಪ್ರೆಸ್ ಕ್ಲಬ್ 1992, ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ 2022 ಮುಂತಾದ ಅನೇಕ ಗೌರವಗಳು ಸಂದಿವೆ.
ಕೃತಜ್ಞತೆ: Bharathi Hegde🌷🙏🌷
On the birthday of great name in journalism Gangadhara Modaliyar
ಕಾಮೆಂಟ್ಗಳು