ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಸಂತ ಕುಲಕರ್ಣಿ


 ವಸಂತ ಕುಲಕರ್ಣಿ


ವೃತ್ತಿಯಲ್ಲಿ ತಂತ್ರಜ್ಞರಾದ ವಸಂತ ಕುಲಕರ್ಣಿ ಅವರು ಕವಿಗಳಾಗಿ ಮತ್ತು ಅಂಕಣಕಾರರಾಗಿಯೂ ಹೆಸರಾಗಿದ್ದಾರೆ.

ಕುಂದಾನಗರ ಬೆಳಗಾವಿಯ ವಸಂತ ಕುಲಕರ್ಣಿ ಅವರು 1971ರ ಜನವರಿ 26ರಂದು ಜನಿಸಿದರು. ತಂದೆ ಗುರುರಾಜರಾವ್ ಮತ್ತು ತಾಯಿ ಸುಧಾ. ತಂದೆ ಪ್ರಸಿದ್ಧ ನಾಟಕಕಾರ ಕಂದಗಲ್ ಹನುಮಂತರಾಯರ ವಂಶದವರು.  ತಾಯಿಯವರ ಕಡೆಯಿಂದ ಪ್ರಸಿದ್ಧ ಕಾದಂಬರಿಕಾರ ಮತ್ತು ಕವಿ ಕುಸುಮಾಕರ ದೇವರಗೆಣ್ಣೂರು (ವಸಂತ ಅನಂತ ದಿವಾಣಜಿ) ಅವರುಗಳು ಬಂಧುಗಳು. ಮನೆಯಲ್ಲಿ ದಾಸಸಾಹಿತ್ಯ ಮತ್ತು ಶಾಸ್ತ್ರೀಯ ಸಂಗೀತದ ವಾತಾವರಣವಿತ್ತು. ಚಿಕ್ಕಂದಿನಿಂದಲೂ ತಂದೆ ತಾಯಿಯರು ಹಾಡುತ್ತಿದ್ದ ದಾಸರ ಪದಗಳು ಕಿವಿಯಲ್ಲಿ ಮೊಳಗುತ್ತಿತ್ತು.   ಜೊತೆಗೆ ಭೀಮಸೇನ್ ಜೋಷಿ, ಮಲ್ಲಿಕಾರ್ಜುನ ಮನ್ಸೂರ್ ಮತ್ತು ಗಂಗೂಬಾಯಿ ಹಾನಗಲ್ ಅವರಂತಹ ಮಹಾನ್ ಸಂಗೀತಜ್ಞರ ಗಾಯನಸುಧೆ ಕೂಡಾ ಮನೆಯಲ್ಲಿ ನಿರಂತರ ವ್ಯಾಪಿಸಿರುತ್ತಿತ್ತು.  ಮನೆಗೆ ಆಗಮಿಸುತ್ತಿದ್ದ ಸಾಹಿತ್ಯಕ ಬಂಧುಗಳು ಮತ್ತು ಆಪ್ತರೊಡನೆ ತಂದೆ ತಾಯಂದಿರು ನಡೆಸುತ್ತಿದ್ದ  ಕುಮಾರವ್ಯಾಸನ ಭಾರತದ ಬಗ್ಗೆ, ಬೇಂದ್ರೆ, ಕುವೆಂಪು ಅವರ ಸಾಧನೆಗಳ ಬಗೆಗಿನ ಮಾತುಗಳು ಬೆಳೆಯುವ ದಿಗಳಲ್ಲೇ ವಸಂತ ಕುಲಕರ್ಣಿ ಅವರ ಹೃದಯವನ್ನು ಸಂವೇದಿಸಿತ್ತು. 

ಗಡಿನಾಡು ಬೆಳಗಾವಿಯ ಅರೆಮಲೆನಾಡಿನ ಸಂಮೋಹಕ ಪರಿಸರದಲ್ಲಿ ಬೆಳೆದ ವಸಂತ ಕುಲಕರ್ಣಿ ಅವರಿಗೆ ಶಾಲೆಯ ಗಣಪತಿ ಉತ್ಸವ ಸಂದರ್ಭದಲ್ಲಿನ ನಿಬಂಧ ಸ್ಪರ್ಧೆಯಲ್ಲಿ,  ಬೇಂದ್ರೆಯವರ "ಮತ್ತೆ ಶ್ರಾವಣ ಬಂತು" ಕೃತಿ ಪ್ರಥಮ ಬಹುಮಾನವಾಗಿ ಬಂತು. ಈ 
ಸಂಕಲನದಲ್ಲಿನ ಕವಿತೆಗಳೇ ಇವರಿಗೆ  ಮೊದಲ ಪಾಠಗಳಾದವು. ಚಿಕ್ಕಂದಿನಲ್ಲಿ ಬರೆದ ಕತೆಗಳಿಗೆ ಖ್ಯಾತ ಸಾಹಿತಿ ಮತ್ತು ಚಿತ್ರ ಕಲಾವಿದ ಚಂದ್ರಕಾಂತ ಕುಸನೂರರ ಮೆಚ್ಚುಗೆ ಮತ್ತು ಮಾರ್ಗದರ್ಶನ ದೊರೆಯಿತು.

ವಸಂತ ಕುಲಕರ್ಣಿ ಅವರು 1992ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನೀಯರಿಂಗ್ ಪದವಿ ಪಡೆದು, ರಿಲಾಯನ್ಸ್ ಇಂಡಸ್ಟ್ರೀಸ್, ಲಾರ್ಸನ್ ಅಂಡ್  ಟೋಬ್ರೋ ಸಂಸ್ಥೆಗಳಲ್ಲಿ ಕೆಲಸ ಮಾಡಿ 2002ರಲ್ಲಿ ಕೆಲಸದ ನಿಮಿತ್ತ ಸಿಂಗಪುರಕ್ಕೆ ಹೋದರು. 2012ರಲ್ಲಿ ಇಂಗ್ಲೆಂಡಿನ ಯೂನಿವರ್ಸಿಟಿ ಆಫ್  ಹಲ್‍ನಿಂದ  ಉಚ್ಛಮಟ್ಟದ ಸಾಧನೆಯೊಂದಿಗೆ ಎಮ್‍ಬಿಎ ಪದವಿ ಗಳಿಸಿದರು.  ಇವರಿಗೆ ಎಮ್‍ಬಿಎ ಪದವಿಯೊಂದಿಗೆ ಯೂನಿವರ್ಸಿಟಿಯಿಂದ "ಆಫ್ ಕ್ಯಾಂಪಸ್ ಅವಾರ್ಡ್ ಫಾರ್ ಅಕ್ಯಾಡೆಮಿಕ್ ಎಕ್ಸಲೆನ್ಸ್" ಪುರಸ್ಕಾರ ಸಹಾ ಸಂದಿತು. 2019ರಲ್ಲಿ ದೇಶಕ್ಕೆ ಮರಳಿದ ವಸಂತ ಕುಲಕರ್ಣಿ ಅವರು ಪ್ರಸ್ತುತ ಚೆನ್ನೈ ನಿವಾಸಿಯಾಗಿದ್ದು, ಅಲ್ಲಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿನ ಮುಖ್ಯ ಎಂಜಿನೀಯರ್ ಜವಾಬ್ಧಾರಿ  ನಿರ್ವಹಿಸುತ್ತಿದ್ದಾರೆ.

ಸಿಂಗಪುರದಲ್ಲಿ ಸುಮಾರು ಹದಿನೇಳು ವರ್ಷಗಳ ಕಾಲ ವಾಸವಾಗಿದ್ದ ವಸಂತ ಕುಲಕರ್ಣಿ ಅವರ ಸಾಹಿತ್ಯಾಸಕ್ತಿಗೆ ಸಿಂಚನ ನೀಡಿದ್ದು 'ಸಿಂಗಪುರ ಕನ್ನಡ ಸಂಘ'.  ಕುಲಕರ್ಣಿ ಅವರು ಈ ಸಂಘದ 'ಸಿಂಗಾರ' ಮತ್ತು 'ಸಿಂಚನ' ಪತ್ರಿಕೆಗಳಿಗೆ ನಿರಂತರವಾಗಿ ಕವಿತೆಗಳು, ಸಣ್ಣ ಕಥೆ ಮತ್ತು ಲೇಖನಗಳನ್ನು ಬರೆದರು. ಜೊತೆಗೆ  ಈ ಪತ್ರಿಕೆಗಳ ಸಂಪಾದಕ ಮಂಡಳಿಯಲ್ಲಿ ಸಹಾ ಕೆಲಸ ಮಾಡಿ ಅನೇಕ ಪ್ರತಿಭೆಗಳಿಗೆ ಪೋಷಣೆ ನೀಡಿದರು. ಸಿಂಗಪುರದ ಸಿಂಚನ ಮಾಸಪತ್ರಿಕೆಗಾಗಿ 'ಚಿಂತನ ಚಾವಡಿ' ಎಂಬ ಅಂಕಣ ಬರೆಯುತ್ತಿದ್ದರು. ನಂತರ ಒನ್ ಇಂಡಿಯಾ ಕನ್ನಡ ಅಂತರ್ಜಾಲ ಪತ್ರಿಕೆಯಲ್ಲಿ ಸತತ ಎರಡು ವರ್ಷಗಳ ಕಾಲ 'ಅಂತರ್ಮಥನ' ಎಂಬ ಸಾಪ್ತಾಹಿಕ ಅಂಕಣವನ್ನು ಬರೆದರು. ಇವರ ಕವನ ಮತ್ತು ಲೇಖನಗಳು ವಿಜಯಕರ್ನಾಟಕ ಅಂತರ್ಜಾಲ ಪತ್ರಿಕೆಯಲ್ಲಿ ಮತ್ತು ವಿಶ್ವವಾಣಿ ವಿಶೇಷಾಂಕಗಳಲ್ಲಿ ಪ್ರಕಟಗೊಂಡಿವೆ. 

2012ರಲ್ಲಿ ವಸಂತ ಕುಲಕರ್ಣಿ ಅವರ  "ಅಂತರ ಮತ್ತು ಇತರ ಕವನಗಳು" ಎಂಬ ಕವನ ಸಂಕಲನ ಪ್ರಕಟಗೊಂಡಿತು. 2016ರಲ್ಲಿ ವಸಂತ ಕುಲಕರ್ಣಿ ಮತ್ತು  ಸಿಂಗಪುರದ ಮತ್ತೊಬ್ಬ ಯುವ ಕವಿ ವೆಂಕಟ್ ಅವರ ಆಯ್ದ ಕವನಗಳಿಗೆ ಹೆಸರಾಂತ ಸಂಗೀತ ಸಂಯೋಜಕರಾದ ಉಪಾಸನಾ ಮೋಹನ್ ಅವರು ಸಂಗೀತ ನೀಡಿ "ಪ್ರೇಮ ಪ್ರಣತಿ" ಎಂಬ ಭಾವಗೀತೆಗಳ ಧ್ವನಿ ಸುರುಳಿಯನ್ನು ಹೊರತಂದಿದ್ದಾರೆ.

ಪ್ರಸಕ್ತದಲ್ಲಿ ವಸಂತ ಕುಲಕರ್ಣಿ ಅವರು ವಿಜಯ ಕರ್ನಾಟಕದ  ಅಂತರ್ಜಾಲ ಪತ್ರಿಕೆಯಲ್ಲಿ ವಿಜ್ಞಾನ ವಿಷಯಗಳನ್ನು ಕುರಿತು ಪಾಕ್ಷಿಕ ಅಂಕಣವನ್ನು ಬರೆಯುತ್ತಿದ್ದಾರೆ. ಈ ವರ್ಷ (2021)ದಲ್ಲಿ ವಿಜ್ಞಾನ ಲೇಖನಗಳ ಸಂಕಲನವೊಂದನ್ನು ಪ್ರಕಟಿಸುವ ಯೋಜನೆ ಹೊಂದಿದ್ದಾರೆ. 

ಕನ್ನಡ ಸಂಘ (ಸಿಂಗಪುರ) 20013ರಲ್ಲಿ ವಸಂತ ಕುಲಕರ್ಣಿ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ "ಸಿಂಗಾರ ಪ್ರಶಸ್ತಿ" ಮತ್ತು 2016ರಲ್ಲಿ "ಸಿರಿಗನ್ನಡ ಕವಿ" ಪ್ರಶಸ್ತಿ ನೀಡಿ ಗೌರವಿಸಿತು. 2018ರಲ್ಲಿ ಸಿಂಗಪುರದಲ್ಲಿ ನಡೆದ ಎರಡನೇ ಅಂತರರಾಷ್ಟ್ರೀಯ ನಾಡಪ್ರಭು ಕೆಂಪೇಗೌಡರ ಉತ್ಸವದ ಆಯೋಜನೆ ಸಮಿತಿ ಅವರನ್ನು "ವಿಶ್ವಕನ್ನಡ ರತ್ನ" ಪ್ರಶಸ್ತಿ ನೀಡಿ ಗೌರವಿಸಿತು.

ವೃತ್ತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳೊಂದಿಗೆ ಸಾಗುತ್ತಲೇ ಪ್ರವೃತ್ತಿಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗಳೊಂದಿಗಿನ ಬೇರಿನೊಂದಿಗೆ ನಿರಂತರವಾದ ಆಪ್ತ ಸಂವೇದನಾ ಸಂಪರಕಗಳನ್ನು ಬೆಸೆದುಕೊಂಡಿರುವ ವಸಂತ ಕುಲಕರ್ಣಿ ಅವರ ನಡೆ ಮೆಚ್ಚುವಂತದ್ದು. ಆತ್ಮೀಯರೂ ಸಾಧಕರೂ, ಉತ್ಸಾಹಿಗಳೂ ಆದ ವಸಂತ ಕುಲಕರ್ಣಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Vasant Kulkarni Sir



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ