ಪದ್ಮಶ್ರೀ2025
ಪದ್ಮಶ್ರೀ ಪ್ರಶಸ್ತಿಗೇ ಸಂದ ಗೌರವಗಳು
ಈ ವರ್ಷದ ಪದ್ಮಶ್ತೀ ಪ್ರಶಸ್ತಿಗಳು ಈ ಮಹನೀಯರಿಗೆ ಸಂದಿರುವುದು, ಆ ಪ್ರಶಸ್ತಿಗೇ ಒಂದು ಗೌರವ ಸಂದ ಭಾವ ಮೂಡಿಸುತ್ತಿದೆ.
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ
ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ತೊಗಲುಗೊಂಬೆ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರು ತೊಗಲುಗೊಂಬೆಯಾಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. 96 ವರ್ಷದ ಹಿರಿಯರಾದ ಇವರು ತಮ್ಮ14ನೇ ವಯಸ್ಸಿನಿಂದ ಮೊದಲ್ಗೊಂಡು ತೊಗಲುಗೊಂಬೆಯಾಟವನ್ನು ಕುಲಕಸುಬಾಗಿ ಮಾಡುತ್ತಾ ಬಂದಿದ್ದಾರೆ. ಅಮೇರಿಕ, ಪ್ಯಾರಿಸ್, ಇಟಲಿ, ಇರಾನ್, ಇರಾಕ್, ಸ್ವಿಟ್ಜರ್ಲೆಂಡ್, ಹಾಲೆಂಡ್ ಸೇರಿದಂತೆ ಅನೇಕ ದೇಶಗಳಲ್ಲಿ ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳನ್ನು ಹಾಗೂ ಪ್ರಸ್ತುತ ವಿದ್ಯಮಾನಗಳನ್ನೂ ತೊಗಲುಗೊಂಬೆ ಕಲೆಯಲ್ಲಿ ಮೂಡಿಸಿರುವುದು ಇವರ ಹೆಗ್ಗಳಿಕೆಯಾಗಿದೆ. ಇದೀಗ ಅವರಿಗೆ ಪದ್ಮಶ್ತೀ ಗೌರವ ಸಂದಿರುವುದು ಈ ಜಾನಪದ ಕಲೆಗೇ ಸಂದ ಗೌರವವಾಗಿದೆ.
ವೆಂಕಪ್ಪ ಅಂಬಾಜೀ ಸುಗಟ್ಕೇರ್
ವೆಂಕಪ್ಪ ಅಂಬಾಜೀ ಸುಗಟ್ಕೇರ್ ಅವರು ಕರ್ನಾಟಕದ ಜಾನಪದ ಗಾಯಕರಾಗಿ ಹೆಸರಾಗಿದ್ದಾರೆ. 81 ವರ್ಷದ ವೆಂಕಪ್ಪ ಅಂಬಾಜೀ ಸುಗಟ್ಕೇರ್ ಅವರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸಹ ತಮ್ಮ ಮನ್ ಕಿ ಬಾತ್ನಲ್ಲಿ ಉಲ್ಲೇಖಿಸಿದ್ದರು. ಈ ಮಹಾನ್ ಜಾನಪದ ಕಲಾವಿದರಿಗೆ ಪ್ರಶಸ್ತಿ ಸಂದಿರುವುದು ಸಂತಸದ ವಿಷಯವಾಗಿದೆ.
ಡಾ. ವಿಜಯಲಕ್ಷ್ಮೀ ದೇಶಮಾನೆ
ಕಲಬುರಗಿ ಮೂಲದ ಕ್ಯಾನ್ಸರ್ ತಜ್ಞರಾದ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರು ರೋಗಿಗಳ ಪಾಲಿನ ಸಾಕ್ಷಾತ್ ಧನ್ವಂತರಿ ಎಂದೇ ಹೆಸರುವಾಸಿಯಾಗಿದ್ದಾರೆ.
1980ರಲ್ಲಿ ಹುಬ್ಬಳ್ಳಿಯ ಕಿಮ್ಸ್ನಲ್ಲಿ ವೈದ್ಯಕೀಯ ಪದವಿ ಪಡೆದ ವಿಜಯಲಕ್ಷ್ಮೀ ಅವರು 1985ರಲ್ಲಿ ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಡಾ.ವಿಜಯಲಕ್ಷ್ಮೀ ಅವರು 1985ರಲ್ಲಿ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವೃತ್ತಿ ಆರಂಭಿಸಿದರು. 1989ರಲ್ಲಿ ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ತರಬೇತಿ ಪಡೆದ ಅವರು 1993ರಲ್ಲಿ ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ ಎಫ್ಎಐಎಸ್ ಫೆಲೋಶಿಪ್ ಗಳಿಸಿದರು. ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಮತ್ತು ಸಂಸ್ಥೆಯ ನಿರ್ದೇಶಕರಾಗಿ ಅವರ ಸೇವೆ ಸಂದಿದೆ. ಇವರು ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಅಭಿಯಾನ ಆರಂಭಿಸಿದರು. ಕರ್ನಾಟಕ ಕ್ಯಾನ್ಸರ್ ಸೊಸೈಟಿಯ ಉಪಾಧ್ಯಕ್ಷೆಯಾದರು. ರಾಜ್ಯೋತ್ಸವ ಪ್ರಶಸ್ತಿ, ಮಹಿಳಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಅಂತಾರಾಷ್ಟ್ರೀಯ ವಲಯ ರಾಷ್ಟ್ರೀಯರತ್ನ, ಕೆಂಪೇಗೌಡ ಪ್ರಶಸ್ತಿ ಮುಂತಾದವುಗಳಿಗೆ ಭಾಜನರಾಗಿದ್ದ ಡಾ. ವಿಜಯಲಕ್ಷ್ಮೀ ಅವರಂತಹ ಹೃದಯವಂತ ವೈದ್ಯರಿಗೆ ಪದ್ಮಶ್ರೀ ಗೌರವ ಸಂದಿರುವುದು ಖಂಡಿತವಾಗಿಯೂ ಆ ಪ್ರಶಸ್ತಿಗೇ ಒಂದು ಹಿರಿಮೆ ಎಂದರೆ ತಪ್ಪಾಗಲಾರದು.
ಕಾಮೆಂಟ್ಗಳು