ಎಸ್. ಪಿ. ಪಾಟೀಲ್
ಎಸ್. ಪಿ. ಪಾಟೀಲ್
ಡಾ. ಎಸ್. ಪಿ. ಪಾಟೀಲ್ ಜೈನ ಸಾಹಿತ್ಯ, ಸಿದ್ಧಾಂತ, ಚರಿತ್ರೆಗಳ ಖ್ಯಾತ ವಿದ್ವಾಂಸರೆನಿಸಿದ್ದಾರೆ
ಎಸ್.ಪಿ.ಪಾಟೀಲರು 1939ರ ಮೇ 31ರಂದು ಮಹಾರಾಷ್ಟ್ರದ ಅಂಕಲಿ ಜಿಲ್ಲೆಯ ಸಾಂಗಲಿಯಲ್ಲಿ ಜನಿಸಿದರು. ತಂದೆ ಪೀರಗೌಡ ಧರ್ಮಗೌಡ ಪಾಟೀಲ. ತಾಯಿ ಪದ್ಮಾವತಿ. ಅವರ ಪ್ರಾಥಮಿಕ ವಿದ್ಯಾಭ್ಯಾಸ ಶೇಡಬಾಳದಲ್ಲಿ ನಡೆಯಿತು. ಮುಂದೆ ಸಾಂಗಲಿಯ ವಿಲ್ಲಿಂಗ್ಡನ್ ಕಾಲೇಜಿನಲ್ಲಿ ಬಿ.ಎ. ಮತ್ತು ಶ್ರೀ ರಂ.ಶ್ರೀ ಮುಗಳಿಯವರ ಮಾರ್ಗದರ್ಶನದಲ್ಲಿ ಎಂ.ಎ. ಪದವಿ ಪಡೆದರು. ‘ಚಾವುಂಡರಾಯ ಒಂದು ಅಧ್ಯಯನ’ ಮಹಾಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಗಳಿಸಿದರು.
ಎಸ್.ಪಿ.ಪಾಟೀಲರು ಪದವಿಯ ನಂತರ ಉದ್ಯೋಗ ಪ್ರಾರಂಭಿಸಿದ್ದು ಶೇಡಬಾಳ ಸನ್ಮತಿ ವಿದ್ಯಾಲಯದಲ್ಲಿ ಅಧ್ಯಾಪಕರಾಗಿ. ನಂತರ ಕಾಮರ್ಸ್ ಕಾಲೇಜಿನ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಸಹಾಯಕ ಸಂಶೋಧಕರಾಗಿ, ಆಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ, ಜೈನ ಶಾಸ್ತ್ರ ಪ್ರಾಧ್ಯಾಪಕರಾಗಿ, ಆ.ನೇ.ಉಪಾಧ್ಯೆ ಪ್ರಾಕೃತ ಮತ್ತು ಜೈನಶಾಸ್ತ್ರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಮತ್ತು ಜೈನ ಮಾಸಪತ್ರಿಕೆ ‘ಪ್ರಗತಿ ಮತ್ತು ಜನ ವಿಜಯ’ ಮಾಸಪತ್ರಿಕೆಯ ಸಂಪಾದಕರಾಗಿ ಅನೇಕ ಜವಾಬ್ಧಾರಿಗಳನ್ನು ನಿರ್ವಹಿಸಿದರು. ಅನೇಕ ವಿದ್ಯಾರ್ಥಿಗಳಿಗೆ ಪಿಎಚ್.ಡಿ, ಎಂ.ಫಿಲ್ ಮಾರ್ಗದರ್ಶನ ನೀಡಿದರು. ಹಲವಾರು ವಿಚಾರ ಸಂಕಿರಣ, ಕಮ್ಮಟ, ದತ್ತಿ ಉಪನ್ಯಾಸಗಳಲ್ಲಿ ಭಾಗಿಯಾದರು.
ಎಸ್.ಪಿ.ಪಾಟೀಲರಿಗೆ ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟವಿದೆ.ಅಖಿಲ ಭಾರತ ವರ್ಷೀಯ ದಿಗಂಬರಶಾಸ್ತ್ರಿ ಪರಿಷತ್, ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆ, ಕರ್ನಾಟಕ ಸರಕಾರದ ಪಠ್ಯಪುಸ್ತಕ ಸಮಿತಿ, ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ, ನ್ಯಾಷನಲ್ ಬುಕ್ಟ್ರಸ್ಟ್, ವಿಶ್ವವಿದ್ಯಾಲಯಗಳ ಜೈನಶಾಸ್ತ್ರ ಅಧ್ಯಯನ ಕೇಂದ್ರ ಮುಂತಾದುವುಗಳ ಸಂಪರ್ಕದಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಡಾ. ಎಸ್.ಪಿ.ಪಾಟೀಲರು ಜೈನ ಸಂಸ್ಕೃತಿಯ ಹಬ್ಬಗಳು, ಕವಿಬ್ರಹ್ಮಶಿವ, ಆದಿನಾಥ, ಜೈನ ಸಾಹಿತ್ಯ ಸಂಸ್ಕೃತಿ, ಜೈನದರ್ಶನ, ಜಿನವಾಣಿ ಚಿಂತನ, ಪೂರ್ವ ಪುರಾಣ, ಧ್ವನಿ, ಅಜಿತಪುರಾಣಸಾರ, ಸಿದ್ಧಶೇಷೆ, ಬಾಂಧವ್ಯ, ರಯಣಸಾರ, ದಾನಚಿಂತಾಮಣಿ ಅತ್ತಿಮಬ್ಬೆ, ಜಿನಮಾಣಿಕ್ಯ, ಆಧುನಿಕ ಕನ್ನಡ ಜೈನ ಲೇಖಕರು ಮುಂತಾದ ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ. ಅವರ ಸಂಪಾದಿತ ಕೃತಿಗಳಲ್ಲಿ ಮಹಾವಿರ ಭಕ್ತಿಗಂಗಾ, ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಹೆಣ್ಣು, ಅತಿಥಿ, ಬಾಡದ ಹೂ, ಮಹಿಳೆಯರ ಮರಾಠಿ ಕಥೆಗಳು ಮುಂತಾದವು ಸೇರಿವೆ. ಅವರು ಅನೇಕ ಅನುವಾದಿತ ಕೃತಿಗಳನ್ನೂ ರಚಿಸಿದ್ದಾರೆ.
ಎಸ್.ಪಿ.ಪಾಟೀಲರಿಗೆ ಸಿದ್ಧಶೇಷೆ ರಾಷ್ಟ್ರೀಯ ಭಾವೈಕ್ಯ ಪ್ರಶಸ್ತಿ, ಜೈನಧರ್ಮ ಕೃತಿಗೆ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಪ್ರಶಸ್ತಿ, ಕನ್ನಡ ಮರಾಠಿ ಬಾಂಧವ್ಯಕ್ಕೆ ಶ್ರೀ ವರದರಾಜ ಆದ್ಯ ಪ್ರಶಸ್ತಿ, ಜೈನ ಸಾಹಿತ್ಯ, ಸಂಸ್ಕೃತಿ ಸೇವೆಗೆ ಶ್ರೀ ಗೋಮಟೇಶ್ವರ ಪ್ರಶಸ್ತಿ, ಆಚಾರ್ಯ ಶ್ರೀ ಬಾಹುಬಲಿ ಕನ್ನಡ ಸಾಹಿತ್ಯ ಪ್ರಶಸ್ತಿ, ವರ್ಷದ ವ್ಯಕ್ತಿ ಪ್ರಶಸ್ತಿ, ಕ.ಸಾ.ಪ.ದ ಚಾವುಂಡರಾಯ ಪ್ರಶಸ್ತಿ, ಡಾ. ಆ. ನೇ. ಉಪಾಧ್ಯೆ ಸಂಶೋಧನ ಪ್ರಶಸ್ತಿ, ಆನಂದಕಂದ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
On the birthday of scholar Dr. S. P. Patil
ಕಾಮೆಂಟ್ಗಳು