ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆರ್. ನಾಗೇಂದ್ರರಾವ್


 ಆರ್. ನಾಗೇಂದ್ರರಾವ್


ಆರ್ ನಾಗೇಂದ್ರರಾವ್ ಕನ್ನಡ ಚಿತ್ರರಂಗದ ಭೀಷ್ಮರೆಂದು ಪ್ರಖ್ಯಾತಿ ಪಡೆದವರು. ಅವರು ಕನ್ನಡ   ರಂಗಭೂಮಿ ಮತ್ತು ಚಿತ್ರರಂಗಗಳಲ್ಲಲ್ಲದೆ ಇತರ ಭಾಷೆಗಳಲ್ಲೂ ಪ್ರಸಿದ್ಧಿ ಪಡೆದವರು.  ನಟನೆ,  ಚಿತ್ರ ನಿರ್ಮಾಣ, ನಿರ್ದೇಶನ ಮಾತ್ರವಲ್ಲದೆ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಅಂತಹ ಸಂಸ್ಥೆಯನ್ನೂ ಮೂಡಿಸಿದವರು.   ಅವರ ಮೂವರೂ ಮಕ್ಕಳಾದ ಆರ್ ಎನ್ ಜಯಗೋಪಾಲ್, ಕೃಷ್ಣ ಪ್ರಸಾದ್ ಮತ್ತು ಸುದರ್ಶನ್ ಕೂಡಾ ಚಿತ್ರರಂಗದಲ್ಲಿ ಮಹತ್ಸಾಧಕರು.

ರಟ್ಟೆಹಳ್ಳಿ ಕೃಷ್ಣರಾವ್ ಮತ್ತು ರುಕ್ಮಿಣಿದೇವಿ ದಂಪತಿಗಳಿಗೆ ಆರ್. ನಾಗೇಂದ್ರರಾವ್ ಎರಡನೆಯ ಮಗನಾಗಿ 1896ರ ಜೂನ್ 23ರಂದು ಜನಿಸಿದರು. ಅವರ ಜನ್ಮಸ್ಥಳ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ. ತಂದೆ ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು.  1900ರ ಸುಮಾರಿನಲ್ಲಿ ಕೃಷ್ಣರಾಯರು ಕಾರಾಣಾಂತರದಿಂದ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮೈಸೂರಿಗೆ ಬಂದರು. ನಾಗೇಂದ್ರರಾಯರು ಮೈಸೂರಿನಲ್ಲಿರುವಾಗ ಚಿಕ್ಕವಯಸ್ಸಿನಲ್ಲೇ ‘ಇಂದಿರಾನಂದ’ ಎಂಬ ನಾಟಕದಲ್ಲಿ ಪಾತ್ರವಹಿಸಿದ್ದರು. ಆಸ್ಥಾನ ವಿದ್ವಾಂಸರಾದ ಕರಿಗಿರಿರಾಯರಿಂದ ಸಂಗೀತ ಪಾಠವೂ ನಡೆಯಿತು.   ಮುಂದೆ ತಮ್ಮ ಕುಟುಂಬ  ಹೊಳೆನರಸೀಪುರಕ್ಕೆ ವಲಸೆ ಬಂದಾಗ ನಾಗೇಂದ್ರರಾವ್  ಅಲ್ಲಿ ನಡೆಯುತ್ತಿದ್ದ ನಾಟಕಗಳನ್ನು ನೋಡಿ ಪ್ರಭಾವಿತರಾಗಿ, ತಾವು ಕಂಡ ಪಾತ್ರಗಳನ್ನೇ ಯಥಾವತ್ತಾಗಿ  ಅಭಿನಯಿಸುತ್ತಿದ್ದರು.  ಇನ್ನೂ ಚಿಕ್ಕವರಿರುವಾಗಲೇ ತಂದೆ ನಿಧನರಾದರು.  ತಾಯಿ ಮತ್ತು ಸಹೋದರಿಯ ಜೊತೆ ಬೆಂಗಳೂರಿಗೆ ಬಂದರು.  ತಾಯಿ ಅಲ್ಲಿ ಇಲ್ಲಿ ಮನೆ ಕೆಲಸ ಮಾಡಿ ಹೊಟ್ಟೆ ತುಂಬುತ್ತಿತ್ತು.   

ಶಾಲೆ ಓದುತ್ತಿದ್ದ ದಿನಗಳಲ್ಲೇ ನಾಟಕದಲ್ಲಿ ಅಭಿನಯಿಸುತ್ತಿದ್ದ ನಾಗೇಂದ್ರರಾಯರ  ಪ್ರತಿಭೆ ನಾಟಕ ಸಂಸ್ಥೆಗಳನ್ನು ಆಕರ್ಷಿಸಿತು.  ಶಿರಹಟ್ಟಿ, ಲಕ್ಷ್ಮೀವಿಲಾಸ ಮುಂತಾದ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿ ನಾಟಕ ಶಿರೋಮಣಿ ವರದಾಚಾರ್ಯರ ಜೊತೆ ಸೇರಿಕೊಂಡರು. ‘ಪ್ರಹ್ಲಾದ ಚರಿತ್ರೆ’, ‘ರತ್ನಾವಳಿ, ‘ಸುಗ್ರೀವ ಸಖ್ಯ’, ‘ಲಂಕಾದಹನ’, ‘ಸಂಪೂರ್ಣ ರಾಮಾಯಣ’, ‘ವಿಷ್ಣುಲೀಲಾ’, ‘ಹರಿಶ್ಚಂದ್ರ’  ಮುಂತಾದ ನಾಟಕಗಳಲ್ಲಿ ಅವರ ಪಾತ್ರ ನಿರ್ವಹಣೆ ಪ್ರಸಿದ್ಧಿ ಪಡೆದಿತ್ತು. ವರದಾಚಾರ್ಯರ ನಿಧನಾನಂತರ ‘ಚಾಮುಂಡೇಶ್ವರಿ ನಾಟಕ ಸಭಾ’ದಲ್ಲಿ  ‘ರಾಜಸೂಯ ಯಾಗ’, ‘ದಾನಶೂರ ಕರ್ಣ’ , ‘ವೀರ ಅಭಿಮನ್ಯು’ ಮತ್ತು ‘ತುಕಾರಾಂ’ ಮುಂತಾದ ನಾಟಕಗಳನ್ನು ಸ್ವಯಂ  ನಾಗೇಂದ್ರರಾಯರೇ ಬರೆದು, ನಾಟಕ ರಚನೆಯಲ್ಲಿ ಕೂಡ ಪ್ರಸಿದ್ಧರಾದರು. ‘ಮೃಚ್ಛಕಟಿಕ’ ನಾಟಕದ ಕನ್ನಡ ರೂಪ ‘ವಸಂತಸೇನಾ’ ನಾಟಕವನ್ನು ಯಶಸ್ವಿಯಾಗಿ ಅಭಿನಯಿಸಿದರು. 

ಭಾರತದಲ್ಲಿ 1931ರ ಸುಮಾರಿಗೆ ಚಲನಚಿತ್ರಗಳ ಯುಗ ಆರಂಭವಾಯಿತು. ಮೊದಲು ಮೂಖಚಿತ್ರಗಳು ಅನಂತರ ಕ್ರಮೇಣ ಸಂಭಾಷಣಾ ಚಿತ್ರಗಳು ಬರತೊಡಗಿದ್ದವು. ನಾಗೇಂದ್ರರಾಯರಿಗೆ ಚಲನಚಿತ್ರರಂಗ ಕೈಬೀಸಿ ಕರೆಯುತ್ತಿತ್ತು. ಆಗ ಮುಂಬೈ ಚಲನಚಿತ್ರಗಳ ಕೇಂದ್ರವಾಗಿತ್ತು. ರಾಯರು ಅಲ್ಲಿಗೆ ಹೋಗಿ ತಮ್ಮ ಅದೃಷ್ಟ ಪರೀಕ್ಷಿಸಲು ನಿರ್ಧರಿಸಿದರು. ಅವರದು ಸಾಹಸದ ಸ್ವಭಾವ. ಅಪರಿಚಿತವಾದ ಊರು,  ಭಾಷೆ,  ಕ್ಷೇತ್ರ ಎಂದು ಹಿಂಜರಿಯಲಿಲ್ಲ. ಕೆಲವರು ಹಿರಿಯರಿಂದ ಪರಿಚಯ ಪತ್ರ ತೆಗೆದುಕೊಂಡು, ಖರ್ಚಿಗೆ ಸ್ವಲ್ಪ ಹಣ ಸಂಗ್ರಹಿಸಿಕೊಂಡು ಮುಂಬಯಿಗೆ ಹೊರಟೇಬಿಟ್ಟರು. ಈ ನಿರ್ಧಾರದಿಂದ ನಾಗೇಂದ್ರರಾಯರ ಹೊಸ ಭವಿಷ್ಯದ ಬಾಗಿಲು ತೆರೆಯಿತು.

ಮುಂಬಯಿಯಲ್ಲಿ ಟಿ.ಕೆ ರಾಜಾ ಸ್ಯಾಂಡೋ ಅವರ ನೆರವಿನಿಂದ ‘ಇಂಪೀರಿಯಲ್ ಕಂಪನಿ’ಯ ಅರ್ದೇಷಿರ್ ಇರಾನಿ ಅವರ ಪರಿಚಯವಾಯಿತು.  ಇರಾನಿ ಮೊದಲ ಹಿಂದಿ ವಾಕ್ಚಿತ್ರ ‘ಆಲಂ ಅರಾ’  ತಯಾರಿಸಿ ಪ್ರಸಿದ್ಧರಾದವರು.  ‘ಪಾರಿಜಾತ ಪುಷ್ಪಾಪಹರಣಂ’ ಎಂಬ ತಮಿಳು ಚಿತ್ರವನ್ನು ತಯಾರಿಸಲು ನಿರ್ಧರಿಸಿದ ಆವರು ನಾಗೇಂದ್ರರಾಯರಿಗೆ ಮುಖ್ಯವಾದ ನಾರದನ ಪಾತ್ರ ಕೊಟ್ಟರು. ಚಿತ್ರ ಮದರಾಸು ಮತ್ತು ಇತರ ಕೇಂದ್ರಗಳಲ್ಲಿ ಬಿಡುಗಡೆಯಾಗಿ ತುಂಬಾ ಯಶಸ್ವಿಯಾಯಿತು. ನಾರದನ ಪಾತ್ರಾಭಿನಯವನ್ನು ಜನ ಮೆಚ್ಚಿಕೊಂಡರು. ಹೀಗೆ ಈ ಕನ್ನಡ ಕಲಾವಿದರ ಚಲನಚಿತ್ರರಂಗ ಪ್ರವೇಶ ತಮಿಳು ಚಿತ್ರದ ಮೂಲಕ ಆಯಿತು. ಇರಾನಿಯವರು ಮುಂದಿನ ಚಿತ್ರವನ್ನು ತೆಲುಗಿನಲ್ಲಿ ತೆಗೆಯಲು ನಿರ್ಧರಿಸಿ ‘ಭಕ್ತ ರಾಮದಾಸ’ ಕತೆಯನ್ನು ಆರಿಸಿದರು. ಈ ಚಿತ್ರದಲ್ಲಿ ನಾಗೇಂದ್ರರಾಯರಿಗೆ ರಾಮದಾಸರ ಪಾತ್ರ. ಈ ಚಿತ್ರವೂ ಯಶಸ್ವಿಯಾಯಿತು.

ಮುಂದಿನ ಚಿತ್ರದ ಚಿತ್ರೀಕರಣ ಆರಂಭವಾಗಲು ಒಂದೆರಡು ತಿಂಗಳು ಸಮಯವಿದ್ದುದರಿಂದ ರಾಯರು ಮೈಸೂರಿಗೆ ಹಿಂದಿರುಗಿದರು. ಆ ವೇಳೆಗಾಗಲೇ ಅವರಿಗೆ ಮದುವೆಯಾಗಿತ್ತು. ಹೆಂಡತಿ ರತ್ನಾಬಾಯಿ ಮತ್ತು ಇಬ್ಬರು ಮಕ್ಕಳ ತಮ್ಮ ಪುಟ್ಟ ಸಂಸಾರದಲ್ಲಿ ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆಯಲು ಅವರಿಗೆ ಅವಕಾಶವೇ ಸಿಗುತ್ತಿರಲಿಲ್ಲ. ಈಗ ಬಿಡುವಿನಲ್ಲಿ ಮಡದಿ ಮಕ್ಕಳೊಡನೆ ಸಂತೋಷವಾಗಿರಲು ಮೈಸೂರಿಗೆ ಬಂದರು. ಅವರು ಮೈಸೂರಿನಲ್ಲಿದ್ದಾಗ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ’ಯ ಸಂಸ್ಥಾಪಕ ಮತ್ತು ಪ್ರಸಿದ್ಧ ನಟರಾದ ಎಂ.ಬಿ.ಸುಬ್ಬಯ್ಯ ನಾಯ್ಡು ಅವರು  ನಾಗೇಂದ್ರರಾಯರನ್ನು ಭೇಟಿಮಾಡಿದರು. ಅವರು ತಮ್ಮೊಡನೆ ಪಾಲುದಾರರಾಗಿ ತಮ್ಮ ನಾಟಕ ಸಂಸ್ಥೆಗೆ ಸೇರುವಂತೆ ಒತ್ತಾಯಿಸಿದರು. ನಾಗೇಂದ್ರರಾಯರು ಮತ್ತೆ ತಾವು ಮುಂಬಯಿಗೆ ಹೋಗಬೇಕಾಗಿದೆಯೆಂದು ಎಷ್ಟು ಹೇಳಿದರೂ ನಾಯ್ಡು ಅವರು ಒಪ್ಪಲಿಲ್ಲ. ಅವರ ವಿಶ್ವಾಸಕ್ಕೆ ಮಣಿದು ಮುಂಬಯಿಯ ತಮ್ಮ ಮುಂದಿನ ಚಿತ್ರದ ಕರಾರನ್ನು ರದ್ದುಪಡಿಸಿ, ರಾಯರು ನಾಯ್ಡು ಅವರೊಡನೆ ಪಾಲುದಾರರಾಗಿ ಸೇರಿದರು. ಇಬ್ಬರೂ ಆಪ್ತ ಮಿತ್ರರಾದರು.

ಈ ಸಮಯದಲ್ಲಿ ಬೆಂಗಳೂರಿನ ‘ಸೌತ್ ಇಂಡಿಯನ್ ಫಿಲ್ಮ್ ಕಂಪನಿ’ ಕನ್ನಡದಲ್ಲಿ ‘ಸತಿ ಸುಲೋಚನಾ’ ಚಿತ್ರ ತಯಾರಿಸಲು ಮುಂದೆ ಬಂದು, ನಾಗೇಂದ್ರರಾಯರನ್ನು ಅಭಿನಯಿಸಲು ಕೇಳಿತು. ಇದರಲ್ಲಿ ರಾಯರದು ರಾವಣನ ಪಾತ್ರ, ಜೊತೆಗೆ ಸಂಗೀತ ನಿರ್ದೇಶನದ ಹೊಣೆ. ಚಿತ್ರ ಮುಗಿದ ನಂತರ ರಾಯರು ಮೈಸೂರಿಗೆ ಹಿಂದಿರುಗಿ, ನಾಯ್ಡು ಅವರೊಂದಿಗೆ ತಮ್ಮ ಹೊಸ ನಾಟಕ ಸಂಸ್ಥೆಯನ್ನು ಉತ್ತಮಪಡಿಸಲು ಪ್ರಯತ್ನಿಸಿದರು. ಬೆಳಕಿನ ವ್ಯವಸ್ಥೆಯ ಬಗೆಗೆ ಹೊಸ ಪ್ರಯೋಗಗಳನ್ನು ಮಾಡಲು ಆರಂಭಿಸಿದರು. ಅವರು ಆರಿಸಿಕೊಂಡಿದ್ದ ನಾಟಕ ‘ಭೂಕೈಲಾಸ’.   ಅದರ ಮೂಲಪ್ರತಿ ನಾಟಕಕ್ಕೆ ಆಗುವಷ್ಟು ವ್ಯಾಪಕವಾಗಿರಲಿಲ್ಲವಾದ್ದರಿಂದ ರಾಯರೇ ಹೊಸ ಅಂಶಗಳನ್ನು ಸೇರಿಸಿ ‘ಭೂಕೈಲಾಸ’ ನಾಟಕ ಬರೆದರು. ರಂಗದಲ್ಲಿ ದೀಪದ ವ್ಯವಸ್ಥೆ ಹೇಗಿರಬೇಕೆಂಬುದಕ್ಕೆ ಅನೇಕ ಪುಸ್ತಕಗಳನ್ನು ಓದಿ ಅಗತ್ಯವಾದ ಏರ್ಪಾಡುಗಳನ್ನು ಮಾಡಿಕೊಂಡರು. ಅಲೆ ಅಲೆಯಾದ ಬೆಳಕು, ವಿವಿಧ ವರ್ಣ ಮತ್ತು ಬೆಳಕುಗಳ ಮಿಶ್ರಣ, ಅಗತ್ಯ ಪಾತ್ರದ ಮೇಲಷ್ಟೇ ಬೆಳಕನ್ನು ಕೇಂದ್ರೀಕರಿಸುವುದು ಮುಂತಾದ ವ್ಯವಸ್ಥೆಗಳನ್ನು ಮಾಡಿಕೊಂಡರು. ಅಗತ್ಯವಾದ ವಿದ್ಯುತ್ ಬಲ್ಬುಗಳನ್ನು ಕೊಂಡರು. ಮಾರುಕಟ್ಟೆಯಲ್ಲಿ ದೊರಕದ ಕೆಲವು ಉಪಕರಣಗಳನ್ನು ತಾವೇ ರೂಪಿಸಿದರು. ನಾಗೇಂದ್ರರಾಯರ ಪ್ರತಿಭೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೆಲಸ ಮಾಡಬಲ್ಲುದಾಗಿತ್ತು.

1937ರಲ್ಲಿ ಮೈಸೂರಿನಲ್ಲಿ ಮೊದಲ ಬಾರಿಗೆ ‘ಭೂ ಕೈಲಾಸ’ ನಾಟಕ ಪ್ರದರ್ಶನವಾದಾಗ ಅದರ ರಂಗ ವೈಭವ, ಬೆಳಕಿನ ಮಾಯಲೋಕ, ಅಭಿನಯ ವೈಶಿಷ್ಟ್ಯಗಳನ್ನು ನೋಡಿ ಜನ ಬೆರಗಾಗಿ ಹೋದರು. ನಾಟಕ ಪ್ರಚಂಡ ಯಶಸ್ಸುಗಳಿಸಿ ಆರುತಿಂಗಳ ಕಾಲ, ತುಂಬಿದ ನಾಟಕ ಗೃಹದಲ್ಲಿ ಪ್ರದರ್ಶಿತವಾಯಿತು. ಮುಂದೆ ತುಮಕೂರು, ಬೆಂಗಳೂರು ಮತ್ತು ಮದರಾಸಿನಲ್ಲಿಯೂ ಆರುತಿಂಗಳ ಕಾಲ ನಡೆಯಿತು.  ಮುಂದೆ ‘ಭೂಕೈಲಾಸ’ವನ್ನು ತಮಿಳುನಲ್ಲಿಯೂ ನಾಟಕವಾಗಿ ಅಭಿನಯಿಸಿ ಮದರಾಸಿನಲ್ಲಿ ಹೆಸರು ಗಳಿಸಿದರು. ಎಚ್ಚಮ ನಾಯಕನ ಕಥೆಯನ್ನು ಆಧರಿಸಿದ ‘ರಾಷ್ಟ್ರವೀರ’ ನಾಟಕ ಅವರ ಕಂಪನಿಯ ಪ್ರಸಿದ್ಧ ನಾಟಕಗಳಲ್ಲಿ ಒಂದು. ಅದನ್ನೂ ತಮಿಳಿಗೆ ಅನುವಾದಿಸಿ ಆಡಿದರು. ಇದರಲ್ಲಿ ರಾಯರು ಚಾಂದಾಖಾನನ ಪಾತ್ರ ಮಾಡುತ್ತಿದ್ದರು.

ಪ್ರಗತಿ ಪಿಕ್ಜರ್ಸ್ ಅವರು ‘ಭೂಕೈಲಾಸ’ವನ್ನು ತೆಲುಗಿನಲ್ಲಿ ಚಲನಚಿತ್ರವಾಗಿ ತಯಾರಿಸಿದರು. ಅದು ಆ ವರ್ಷದ ಅತ್ಯುತ್ತಮ ತೆಲುಗು ಚಿತ್ರವೆಂದು ಹೆಸರು ಗಳಿಸಿತು. ಇದರ ನಂತರ 1949ರಲ್ಲಿ ನಾಗೇಂದ್ರರಾಯರು ಪಾಲುದಾರರೊಡನೆ ತಯಾರಿಸಿದ ‘ವಸಂತಾಸೇನಾ’ ಚಲನಚಿತ್ರ ಅಪಾರ ಜನಮನ್ನಣೆಗಳಿಸಿ ಪ್ರಸಿದ್ಧಿಯಾಯಿತು. ಈ ಚಿತ್ರದಲ್ಲಿ ನಾಗೇಂದ್ರರಾಯರು ಶಕಾರನ ಪಾತ್ರದ ಮೂಲಕ ನೀಡಿದ ಅಭಿನಯ ಇಂದಿಗೂ ಒಂದು ಅತ್ಯುಚ್ಚ ಮಾದರಿಯಾಗಿ ಉಳಿದಿದೆ. ಅಭಿನಯದ ಜೊತೆಗೆ ಚಿತ್ರಕಥೆ, ಸಂಭಾಷಣೆ, ಗೀತೆಗಳನ್ನು ರಾಯರೇ ಬರೆದರು. ಈ ಚಿತ್ರಕ್ಕೆ ಹೆಸರಿಗೆ ಮಾತ್ರ ಒಬ್ಬ ಕನ್ನಡ ಬಾರದ ನಿರ್ದೇಶಕರು ಇದ್ದರು. ಎಲ್ಲ ಕೆಲಸವನ್ನು ನಾಗೇಂದ್ರರಾಯರೇ ನಿರ್ವಹಿಸಿದ್ದರು. ಈ ಚಿತ್ರದಿಂದ ಮೊದಲುಗೊಂಡಂತೆ  ಒಮ್ಮೆ ಚಿತ್ರಿಕರಣವಾದ ದೃಶ್ಯಕ್ಕೆ ಅನಂತರ ಹಾಡನ್ನು ಅಳವಡಿಸುವ ‘ಪೋಸ್ಟ್ ಸಿಂಕ್ರೊನೈಸೇಷನ್’ ಎಂಬ ವಿಧಾನ ರೂಢಿಗೆ ಬಂತು.

ಅನಂತರ ‘ಹರಿಶ್ಚಂದ್ರ’ವನ್ನು ಬೇರೆಯ ನಿರ್ಮಾಪಕರಿಗಾಗಿ ನಾಗೇಂದ್ರರಾಯರು ಕನ್ನಡದಲ್ಲಿ ನಿರ್ದೇಶಿಸಿದರು. ಅದರಲ್ಲಿ ಅವರು ವಹಿಸಿದ ವಿಶ್ವಾಮಿತ್ರನ ಪಾತ್ರಸೃಷ್ಟಿಯೂ ಚಿತ್ರದೊಡನೆ ಹಾಸು ಹೊಕ್ಕಾಗಿ ಬರುವ ಹಾಸ್ಯವೂ ಅಪೂರ್ವವಾದವು. ಈ ಚಿತ್ರ ಅನೇಕ ಕೇಂದ್ರಗಳಲ್ಲಿ ನೂರು ದಿನಕ್ಕೂ ಹೆಚ್ಚು ಕಾಲ ಯಶಸ್ವಿಯಾಗಿ ನಡೆಯಿತು. ಈ ಚಿತ್ರವನ್ನು ತಮಿಳಿಗೆ ಡಬ್ ಮಾಡಲಾಯಿತು.  ಭಾರತದಲ್ಲಿ ಇದೇ ಮೊದಲನೆಯ ಪ್ರಯತ್ನ. ಇದು ಹೊಸ ದಾಖಲೆಯಾಯಿತು. ಅದರ ಕೀರ್ತಿ ನಾಗೇಂದ್ರರಾಯರದು. ಇದರ ನಂತರ ರಾಯರು ‘ಭಕ್ತ ಕಬೀರ್’ ನಿರ್ದೇಶಿಸಿದರು, ವಿವಾದ ಉಂಟು ಮಾಡಬಹುದಾದ ಇದರ ವಸ್ತುವನ್ನು ರಾಯರು ಜಾಣತನದಿಂದ ನಿರೂಪಿಸಿದರು. ಚಿತ್ರ ಬಿಡುಗಡೆಯಾದ ಮೇಲೆ ಬಹಳ ಜನಪ್ರಿಯವಾಯಿತು. ಈ ಚಿತ್ರದ ನಂತರ ಸುಬ್ಬಯ್ಯ ನಾಯುಡು ಅವರಿಗೂ ನಾಗೇಂದ್ರರಾಯರಿಗೂ ಒಂದು ಸಣ್ಣ ಕಾರಣಕ್ಕಾಗಿ ಭಿನ್ನಾಭಿಪ್ರಾಯ ಬಂತು. ರಾಯರು ಪಾಲುದಾರಿಕೆಯಿಂದ ಹೊರಬಂದರು. 

ನಾಗೇಂದ್ರರಾಯರದು ನಿರಂತರವಾದ ಸಾಹಸ ಪ್ರವೃತ್ತಿ. ‘ಚಂದ್ರಲೇಖಾ’ ಚಿತ್ರದ ಮೂಲಕ ಅಪಾರ ಖ್ಯಾತಿಯನ್ನು ಹಣವನ್ನೂ ಸಂಪಾದಿಸಿದ್ದ ಮದರಾಸಿನ ಜೆಮಿನಿ ಸ್ಟುಡಿಯೋದ ವಾಸನ್ ಅವರನ್ನು ಭೇಟಿಮಾಡಿ ತಮ್ಮನ್ನು ಪಾಲುದಾರರನ್ನಾಗಿ ಮಾಡಿಕೊಂಡು ಒಂದು ಚಿತ್ರ ತಯಾರಿಸಬೇಕೆಂದು ಕೇಳುವ ಸಾಹಸ ಮಾಡಿದರು. ರಾಯರು ಸಿದ್ಧಪಡಿಸಿದ್ದ ‘ಮೂವರು ತನಯರು’ ಚಿತ್ರ ಕಥೆಯನ್ನು ಕೇಳಿ ವಾಸನ್ ಈ ಯೋಜನೆಗೆ ಒಪ್ಪಿಕೊಂಡರು. ಆದರೆ ಬೇರೆ ಒಂದು ಚಿತ್ರದ ತಯಾರಿಕೆಯನ್ನು ತೆಗೆದುಕೊಂಡುದರಿಂದ ‘ಮೂವರು ತನಯರು’ ಕೂಡಲೇ ಸೆಟ್ ಏರಲಿಲ್ಲ. ತಮಿಳಿನಲ್ಲಿ ‘ಅಪೂರ್ವ ಸಹೋದರ್‌ಗಳ್’, ಹಿಂದಿಯಲ್ಲಿ ‘ನಿಶಾನ್’ ಎಂಬ ಹೆಸರಿನಲ್ಲಿ ತಯಾರಾದ ಒಂದು ಚಿತ್ರದಲ್ಲಿ ಖಳನಾಯಕ ಮಾರ್ತಾಂಡನ ಪಾತ್ರದಲ್ಲಿ ರಾಯರು ನೀಡಿದ ಅಭಿನಯ ಶ್ರೇಷ್ಠ ಮಟ್ಟದ್ದಾಗಿತ್ತು. ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ ರಾಯರ ಅಭಿನಯವನ್ನು ಹೊಗಳಿ ‘ವರ್ಷದ ಶ್ರೇಷ್ಠ ಖಳನಾಯಕ’ನೆಂದು ಬರೆಯಿತು. ಹೀಗೆ ನಾಗೇಂದ್ರರಾಯರ ಅಭಿನಯ ಅಖಿಲ ಭಾರತ ಮಟ್ಟದಲ್ಲಿ ಕೀರ್ತಿಯನ್ನು ಸಂಪಾದಿಸಿತು. ದೊಡ್ಡ ಪ್ರಮಾಣದಲ್ಲಿ ಹಣವೂ ಒದಗಿತು.

1952ರಲ್ಲಿ ರಾಯರು ತಮ್ಮದೇ ಆದ ಆರ್ ಎನ್ ಆರ್ ಲಾಂಛನದಲ್ಲಿ ಸ್ವಂತ ಚಿತ್ರಗಳನ್ನು ತಯಾರಿಸಲು ಆರಂಭಿಸಿದರು. ಹೀಗೆ ತಯಾರಿಸಿದ ಮೊದಲ ಚಿತ್ರ ‘ಜಾತಕ ಫಲ’ ಮೂರು ಭಾಷೆಗಳಲ್ಲಿ ತೆರೆಕಂಡಿತು. 1957ರಲ್ಲಿ ಕನ್ನಡದಲ್ಲಿ ತೆಗೆದ ‘ಪ್ರೇಮದ ಪುತ್ರಿ’  ಆ ವರ್ಷದ ಪ್ರಾಂತೀಯ ಭಾಷೆಯ ಅತ್ಯುತ್ತಮ ಚಿತ್ರವೆಂದು ರಾಷ್ಟ್ರಪತಿಗಳ ರಜತ ಪದಕ ಪಡೆಯಿತು. ಇಂಥ ಪ್ರಶಸ್ತಿ ಪಡೆದ ಕನ್ನಡ ಚಿತ್ರಗಳಲ್ಲಿ ‘ಪ್ರೇಮದ ಪುತ್ರಿ’ಯೇ ಮೊದಲನೆಯದು. ಈ ಚಿತ್ರದಲ್ಲಿ ನಾಗೇಂದ್ರರಾಯರ ಮಕ್ಕಳಾದ ಕೃಷ್ಣಪ್ರಸಾದ್ ಛಾಯಾಗ್ರಾಹಕರಾಗಿಯೂ, ಜಯಗೋಪಾಲ್ ಸಂಭಾಷಣೆ ಮತ್ತು ಗೀತ ರಚನೆಕಾರರಾಗಿಯೂ, ಸುದರ್ಶನ್ ನಟರಾಗಿಯೂ  ಪ್ರಸಿದ್ಧರಾದರು. 

‘ಪ್ರೇಮದಪುತ್ರಿ’ ಬಿಡುಗಡೆಯಾದ ಸ್ವಲ್ಪ ದಿನಗಳಲ್ಲಿಯೇ ರಾಯರ ಪತ್ನಿ ರತ್ನಾಬಾಯಿಯವರು ದಿವಂಗತರಾದರು. ಇದರಿಂದ ರಾಯರು ತಮ್ಮ  ಸಂಸಾರವನ್ನು ಬೆಂಗಳೂರಿನಿಂದ ಮದರಾಸಿಗೆ ವರ್ಗಾಯಿಸಬೇಕಾಯಿತು.  ಅನಂತರ ತಯಾರಿಸಿದ ದುಬಾರಿ ವೆಚ್ಚದ ‘ವಿಜಯ ನಗರದ ವೀರಪುತ್ರ’ ಗುಣಮಟ್ಟದಿಂದ ಉತ್ತಮವಾಗಿದ್ದರೂ ಆರ್ಥಿಕವಾಗಿ ಯಶಸ್ವಿಯಾಗಲಿಲ್ಲ. ಇದರ ನಂತರ ಹಲವು ಚಿತ್ರಗಳಲ್ಲಿ ರಾಯರು ನಟಿಸಿದರು. ಹಿಂದಿ, ತಮಿಳು, ತೆಲುಗು ಭಾಷೆಯ ಅನೇಕ ಚಿತ್ರಗಳಲ್ಲಿ ಸ್ಮರಣೀಯ ಅಭಿನಯ ನೀಡಿದರು.  ಕನ್ನಡ ಚಿತ್ರ 'ಹಣ್ಣೆಲೆ ಚಿಗುರಿದಾಗ’ದಲ್ಲಿನ ರಾಯರ ಅಭಿನಯಕ್ಕೆ ಕನ್ನಡದಲ್ಲಿ 1968-69ವರ್ಷದ ಶ್ರೇಷ್ಠ ನಟ ಪ್ರಶಸ್ತಿ ದೊರೆಯಿತು. ಸರ್ಕಾರ ಅವರಿಗೆ ನಾಲ್ಕು ಸಾವಿರ ರೂಪಾಯಿಗಳನ್ನೂ, ಚಿನ್ನದ ಪದಕವನ್ನೂ ಕೊಟ್ಟು ಗೌರವಿಸಿತು. ಈ ಪಾತ್ರ ವಹಿಸಿದಾಗ ರಾಯರಿಗೆ 72ವರ್ಷ. ರಾಯರು ನಿರ್ದೇಶಿಸಿದ ‘ನಮ್ಮ ಮಕ್ಕಳು’  ನೂರು ದಿನ ನಡೆಯಿತಲ್ಲದೆ ಆ ವರ್ಷದ ದ್ವಿತೀಯ ಶ್ರೇಷ್ಠ ಚಿತ್ರವಾಗಿ ಪ್ರಶಸ್ತಿ ಗಳಿಸಿತು.

'ಸತಿ ಸುಲೋಚನಾ', 'ವಸಂತಸೇನಾ', 'ಗಾಳಿಗೋಪುರ', 'ವಿಜಯನಗರದ ವೀರಪುತ್ರ', 'ನಮ್ಮ ಮಕ್ಕಳು', 'ಹಣ್ಣೆಲೆ ಚಿಗುರಿದಾಗ', 'ಚಂದ್ರಹಾಸ', 'ಮದುವೆ ಮಾಡಿ ನೋಡು', 'ವೀರಕೇಸರಿ', 'ಕರುಳಿನ ಕರೆ', 'ನಮ್ಮ ಮಕ್ಕಳು', 'ಸಾಕ್ಷಾತ್ಕಾರ', 'ಪ್ರೊಫೆಸರ್ ಹುಚ್ಚೂರಾಯ' ಹೀಗೆ ನಾಗೇಂದ್ರರಾಯರ ಹಲವಾರು ಚಿತ್ರಗಳು ಅಭಿನಯ ನೆನಪಿಗೆ ಬರುತ್ತದೆ.

ನಾಗೇಂದ್ರರಾಯರು ಕಲಾಜೀವನದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಸಂಗೀತ ನಾಟಕ  ಅಕಾಡೆಮಿ 1967ರಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಬೆಂಗಳೂರು ನಗರದ ನಾಗರಿಕರು ಕರ್ನಾಟಕದ ಜನತೆಯ ಪರವಾಗಿ, ನಗರದ ಪುರಭವನದಲ್ಲಿ 1974ರಲ್ಲಿ ಸನ್ಮಾನ ಮಾಡಿ ಗೌರವಿಸಿದರು. ಅಂದು ನಾಗೇಂದ್ರರಾಯರ ಆತ್ಮಚರಿತ್ರೆ ‘ಇದು ನನ್ನ ಕಥೆ’ ಬಿಡುಗಡೆಯಾಯಿತು. ಇವರ ಕಲಾಸೇವೆಯನ್ನು ಗೌರವಿಸಿ ಭಾರತ ಸರ್ಕಾರ 1976ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ರಾಷ್ಟ್ರಮಟ್ಟದಲ್ಲಿ ಸನ್ಮಾನಿಸಿತು.

ರಾಯರು ಚಿತ್ರರಂಗದಿಂದ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ ಮೇಲೂ ಈ ವಿಷಯದಲ್ಲಿ ಕಾಳಜಿ ಇಟ್ಟುಕೊಂಡಿದ್ದರು. ಹೊಸದಾಗಿ ತರಬೇತಿ ನೀಡುವ ಉದ್ದೇಶದಿಂದ ಬೆಂಗಳೂರು ನಗರದಲ್ಲಿ ‘ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದರು. ಚಿತ್ರರಂಗದ ವಿವಿಧ ಕಲಾಪ್ರಕಾರಗಳ ಬಗೆಗೆ ತರಬೇತಿ ಕೊಡಲು ಉದ್ದೇಶಿಸಿರುವ ಈ ಸಂಸ್ಥೆ ಇಂದೂ ನೂರಾರು ಕಲಾವಿದರನ್ನು ರೂಪಿಸುತ್ತಿದೆ.

ತಮ್ಮ ಜೀವನದ ಕೊನೆಯ ವರ್ಷಗಳಲ್ಲಿ ರಾಯರು ಗಡ್ಡಮೀಸೆಗಳನ್ನು ಬಿಟ್ಟಿದ್ದರು. ಅವರ ಮುಖಕ್ಕೆ ಬಿಳಿಯ ಗಡ್ಡ ಸೊಗಸಾಗಿ ಒಪ್ಪುತ್ತಿತ್ತು. ಈ ಕಲಾ ತಪಸ್ವಿಯನ್ನು ನೋಡುತ್ತಿದ್ದಂತೆಯೇ ಯಾರಿಗಾದರೂ ಗೌರವ ಭಾವನೆ ಹುಟ್ಟುತ್ತಿತ್ತು. ರಾಯರು ಸರಸಿಗಳು. ಬಾಲ್ಯದಲ್ಲಿ ಕಷ್ಟವನ್ನೂ ಬಡತನವನ್ನೂ ಅನುಭವಿಸಿದರು. ತಮ್ಮ ಸಾಹಸಪ್ರಿಯತೆ, ಪ್ರತಿಭೆ, ಕಷ್ಟಪಟ್ಟು ಕೆಲಸ ಮಾಡುವ ಶ್ರದ್ಧೆ ಇವುಗಳಿಂದ ಪ್ರಖ್ಯಾತರಾದರು. ಜೀವನದಲ್ಲಿ ಅನೇಕ ಬಗೆಯ ನೋವುಗಳನ್ನು ಅನುಭವಿಸಿದರೂ ನಗುನಗುತ್ತಾ ಬಾಳಿದರು. ಅವರದು ತುಂಬು ವ್ಯಕ್ತಿತ್ವದ ದಿಟ್ಟ ಜೀವನ, ಉದಾರ ಬುದ್ಧಿ.  ಇಂದು ಕನ್ನಡ ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿರುವ ಅನೇಕರಿಗೆ ರಾಯರು ಆರಂಭದಲ್ಲಿ ಅವಕಾಶ ನೀಡಿ, ತರಬೇತಿ ಕೊಟ್ಟು ಮುಂದೆ ತಂದರು. ಇಂದಿಗೂ ಅವರೆಲ್ಲಾ ರಾಯರ ಹೆಸರನ್ನು ಕೇಳಿದರೆ ಗುರುಸ್ವರೂಪರೆಂದು ಕೈ ಮುಗಿಯುತ್ತಾರೆ. ಪ್ರಾಮಾಣಿಕವಾದ ಜೀವನ ನಡೆಸಿ, ತಮ್ಮ ಪ್ರತಿಭೆಯ ಪ್ರಕಾಶಕ್ಕೆ ಎಲ್ಲ ಬಗೆಯ ಸಾಹಸ ಮಾಡಿ, ಭಾರತಾದ್ಯಂತ ಹೆಸರಾಗಿ, ಆ ಮೂಲಕ ಕನ್ನಡದ ಕೀರ್ತಿಯನ್ನು ಎತ್ತರಿಸಿದವರು ನಾಗೇಂದ್ರರಾಯರು. ಇಷ್ಟೆಲ್ಲ ಸಾಧನೆಗಳ ನಂತರವೂ ‘ನಾನಿನ್ನೂ ಕಲಿಯಬೇಕಾದುದು ಬಹಳ ಇದೆ’ ಎನ್ನುತ್ತಿದ್ದ ವಿನಯ ಅವರದು.

ಇಂಥ ಕನ್ನಡ ಚಲನಚಿತ್ರರಂಗದ ಭೀಷ್ಮರು ತಮ್ಮ 81ವರ್ಷಗಳ ಸಾರ್ಥಕವಾದ ತುಂಬು ಜೀವನವನ್ನು ಮುಗಿಸಿ 1977ರ ಫೆಬ್ರವರಿ 9ರಂದು ಬೆಂಗಳೂರಿನಲ್ಲಿ  ದಿವಂಗತರಾದರು. ಕನ್ನಡಿಗರೆಲ್ಲರೂ ಹೆಮ್ಮೆಪಡುವಂಥ ಸೇವಾಪೂರ್ಣವಾದ ಆದರ್ಶ ಬಾಳು ಅವರದು. ಈ ಮಹಾನ್ ಚೇತನಕ್ಕೆ ನಮ್ಮ ನಮನ.

On the birth anniversary of great name in cinema and theatre  R. Nagendra Rao 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ