ಕಬೀರದಾಸ
ಕಬೀರದಾಸ
ಕಬೀರದಾಸರ ಕಾಲ 1440-1518.
ಕಬೀರದಾಸರು ಭರತ ವರ್ಷದ ಉತ್ತರ ಭಾಗಗಳಲ್ಲಿ, ಬಹಳವಾಗಿ ಪ್ರಚಾರಕ್ಕೆ ಬಂದ ಒಂದು ಧರ್ಮ ಪಂಥದ ಸ್ಥಾಪಕರು.
ಕಬೀರದಾಸರು ವಾರಾಣಸಿಯಲ್ಲಿ ಜನಿಸಿದರು. ಅಲ್ಲಿಯ ಮುಸಲ್ಮಾನ ನೇಯ್ಗೆಕಾರನೊಬ್ಬ ಊರಿಂದ ಕೆಲವು ಮೈಲಿಗಳ ದೂರದ ಲಹರ್ ತಲಾವ್ ಎಂಬ ಕೆರೆಯಲ್ಲಿ ತೇಲುತ್ತಿದ್ದ ಮಗುವೊಂದನ್ನು ಕಂಡು ಎತ್ತಿಕೊಂಡು ಮನೆಗೆ ತಂದನಂತೆ. ಅವನ ಹೆಂಡತಿ ಮಗುವನ್ನು ಸಾಕಿದಳು. ಅವರು ಅದಕ್ಕೆ ಕಬೀರ್ ಎಂದು ಹೆಸರಿಟ್ಟರು. ಕಬೀರ್ ಎಂದರೆ ಅರಬ್ಬೀಭಾಷೆಯಲ್ಲಿ ಮಹಿಮಾನ್ವಿತ ಎಂದು ಅರ್ಥ. ಬೆಳೆಯುವ ದಿನದಲ್ಲಿ ಗೋಸಾಯಿ ಅಷ್ಟಾವಂದ್ ಎಂಬಾತನ ಪ್ರಭಾವದಿಂದ ಕಬೀರ್ ದೇವರನ್ನು ಹರಿ ಎಂದೂ ರಾಮ ಎಂದೂ ಕರೆದ. ಮುಸ್ಲಿಂ ಜನ ಇವರನ್ನು ಧರ್ಮಭ್ರಷ್ಟ ಎಂದು ದೂರಿದರು. ಧರ್ಮಭ್ರಷ್ಟ ನಾನಲ್ಲ, ಕೆಟ್ಟ ಬಾಳು ನಡೆಸುವ ಜನ ಧರ್ಮಭ್ರಷ್ಟರು ಎಂದು ಪ್ರತಿ ಹೇಳಿದರು. ಜಾತಿಮುಖ್ಯವಲ್ಲ. ಗುಣ ಮುಖ್ಯ ಎಂಬ ನಂಬಿಕೆಯಲ್ಲಿ ನಡೆದು ಕಬೀರ್ ಜನರಲ್ಲಿ ಒಬ್ಬ ಪ್ರಮುಖನಾಗಿ ನಿಂತರು.
ಕಬೀರ್ ಒಮ್ಮೆ ಜನಿವಾರ ಹಾಕಿಕೊಂಡು ತಾನು ದ್ವಿಜನಾದೆ ಎಂದರಂತೆ. ಒಬ್ಬ ಬ್ರಾಹ್ಮಣ ಈ ನಡತೆಯನ್ನು ನಿಷೇಧಿಸಿದ. ಜನಿವಾರ ಹೃದಯದಲ್ಲಿ ದೇವರಿರುವುದರ ಗುರುತು. ನನ್ನ ಹೃದಯದಲ್ಲಿ ದೇವರಿದ್ದಾನೆ. ನಿನ್ನ ಹೃದಯದಲ್ಲಿಲ್ಲ. ಇದನ್ನು ಹಾಕಿಕೊಳ್ಳುವುದಕ್ಕೆ ನಿನಗಿಂತ ನನಗೆ ಹೆಚ್ಚು ಅಧಿಕಾರ-ಎಂದು ಕಬೀರ್ ಹೇಳಿದರಂತೆ. ದಿನ ಕಳೆದಂತೆ ಜನ ಇವರನ್ನು ಒಬ್ಬ ಸಂತನೆಂದು, ಗುರು ಎಂದು ಒಪ್ಪಿಕೊಂಡರು.
ಶುಷ್ಕ ಆಚಾರ, ಭಾವಹೀನ ಪೂಜನ ಇಂಥ ವ್ಯರ್ಥವರ್ತನವನ್ನು ಕಬೀರ್ ಖಂಡಿಸಿ, ನಿಷ್ಕಾಮಕರ್ಮದ ಉಪದೇಶಕರಾದರು. ರಾಮಾನಂದರಲ್ಲಿಗೆ ಹೋಗಿ ಅವರನ್ನು ಗುರುವಾಗಿ ಸ್ವೀಕರಿಸಿದರು. ದೇವರನ್ನು ರಾಮ ಎಂದು ರಹೀಮ್ ಎಂದು ಹೇಗೆ ಕರೆದರೂ ಸರಿಯೇ, ಭಕ್ತಿಯಿಂದ ಕರೆಯಿರಿ, ಎಂದು ಹೇಳಿ ಕಬೀರ್ ಆಚಾರವಂತ ಹಿಂದೂ ಆಚಾರವಂತ ಮುಸಲ್ಮಾನ ಇವರ ಎರಡು ಸಮುದಾಯವನ್ನೂ ಹಗೆ ಮಾಡಿಕೊಂಡರು. ಆದರೆ ಇವರನ್ನು ಮೆಚ್ಚಿ ಅನೇಕ ಜನ ಇವರ ಅನುಯಾಯಿಗಳಾದರು. ತಮ್ಮ ಶುದ್ಧ ಜೀವನದಿಂದ ಕಬೀರ್ ಅನೇಕ ಸಿದ್ಧಿಗಳನ್ನು ಗಳಿಸಿದರು. ಇವರ ಮಹಿಮೆಯನ್ನು ಕೇಳಿ ಬಾದಷಹ ಸಿಕಂದರ್ ಲೋದಿ ಇವರಿಗೆ ಹಣವನ್ನು, ನೆಲವನ್ನು ಕೊಡುವೆನೆಂದ. ಕಬೀರ್ ಅವನ್ನು ಸ್ವೀಕರಿಸಲಿಲ್ಲ.
ಕಬೀರರನ್ನು ಕುರಿತು ಅನೇಕ ಪವಾಡ ಕಥೆಗಳಿವೆ. ಧರ್ಮವನ್ನು ಕುರಿತು ವಾದಿಸಲು ಬಂದ ಅನೇಕರನ್ನು ಕಬೀರ್ ಸೋಲಿಸಿದರು. ಅದಕ್ಕೂ ಹೆಚ್ಚಿನ ಸಂಗತಿ ಇವರ ಹಗೆಗಳು ಇವರಿಗೆ ಒಡ್ಡಿದ ಪ್ರಲೋಭನ, ವಿಷಪರೀಕ್ಷೆಗಳಲ್ಲಿ ಇವರು ಸೋಲದೆ ನಿಂತದ್ದು. ವಾರಾಣಸಿ ಪುಣ್ಯಕ್ಷೇತ್ರ, ಅಲ್ಲಿ ಸತ್ತವರಿಗೆ ಮುಕ್ತಿ-ಎಂಬ ಮಾತಿನಲ್ಲಿ ಹುರುಳಿಲ್ಲ ಎಂದು ತೋರಿಸುವುದಕ್ಕೆ ಕಬೀರ್ ಇಲ್ಲಿ ಸತ್ತವರು ಕತ್ತೆಯಾಗಿ ಹುಟ್ಟುತ್ತಾರೆ ಎಂದು ಪ್ರತೀತಿ ಪಡೆದಿದ್ದ ಮಗಹರ ಎಂಬ ಸ್ಥಳದಲ್ಲಿ ನಿಂತು ಅಲ್ಲಿ ತೀರಿಕೊಂಡರಂತೆ. ಜನ ಮಹನೀಯರೆಂದು ಗಣಿಸಿರುವ ಇಂಥ ಇತರ ಹಿರಿಯರ ವಿಷಯದಲ್ಲಿ ಬೆಳೆದಿರುವಂತೆ ಇವರ ವಿಷಯದಲ್ಲೂ ಒಂದು ಕಥೆ ಬೆಳೆದಿದೆ. ಶಿಷ್ಯರಲ್ಲಿ ಹಿಂದೂಗಳಾದವರು ಇವರ ದೇಹವನ್ನು ಸುಡಬೇಕೆಂದೂ ಮುಸಲ್ಮಾನರು ಹೂಳಬೇಕೆಂದೂ ಅಪೇಕ್ಷಿಸಿದರು. ದೇಹ ಇವರಿಗೂ ಸಿಕ್ಕಲಿಲ್ಲ. ಅವರಿಗೂ ಸಿಕ್ಕಲಿಲ್ಲ. ಅದಕ್ಕೆ ಹೊದಿಸಿದ್ದ ಹಚ್ಚಡವನ್ನು ತೆಗೆದು ನೋಡಿದಾಗ ಅದರಡಿ ಒಂದಿಷ್ಟು ಹೂವಿನ ರಾಶಿ ಮಾತ್ರ ಇತ್ತು. ಶಿಷ್ಯವರ್ಗದವರು ಇದರ ಮೇಲೆ ಒಂದು ಮಂದಿರವನ್ನೂ ಒಂದು ಸಮಾಧಿಯನ್ನೂ ಅಕ್ಕಪಕ್ಕದಲ್ಲಿ ಕಟ್ಟಿದರು. ಮೃತರಾದ ಕಬೀರ್ ಆಮೇಲೆ ಮರಳಿ ಎದ್ದರಂದೂ ತನ್ನ ಅನಂತರ ಗುರುವಾಗಿರಲು ತಾವೇ ನೇಮಿಸಿದ ಧರ್ಮದಾಸನಿಗೆ ಇತರ ಕೆಲವು ಶಿಷ್ಯರಿಗೆ, ಕಂಡರೆಂದೂ ಇನ್ನೊಂದು ಕಥೆ ಹೇಳುತ್ತದೆ. ಹೀಗೆ ಕಂಡಾಗ ಅವರು ತಮ್ಮ ಪಂಥದ ಆಧಾರ ಸೂತ್ರಗಳೆಂದು 42 ಸಂಗತಿಗಳನ್ನು ಹೇಳಿ ಅನಂತರ ದಿವ್ಯವನ್ನು ಸೇರಿದರಂತೆ.
ಕಬೀರರ ಗೀತೆಗಳು ನೂರಾರು. ಕನ್ನಡ ದೇಶದಲ್ಲೂ ಭಕ್ತಜನರು ಭಜನೆಗಳಲ್ಲಿ ಇವರ ಗೀತಗಳನ್ನು ಹಾಡುತ್ತಾರೆ. ಕಹತ ಕಬೀರಾ ಸುನೋ ಭೈ ಸಾಧು-ಎಂಬ ಕೊನೆಯ ಪಲ್ಲವಿಯನ್ನುಳ್ಳ ಹಲವು ಹಾಡುಗಳು ನಮಗೆಲ್ಲ ಪರಿಚಿತವಾಗಿವೆ.
ಬೆತ್ತಲೆ ನಡೆದಾಡಿ ಸಾಯುಜ್ಯ ಪಡೆಯುವುದಾದರೆ ಅರಣ್ಯದ ಮೃಗಗಳೆಲ್ಲ ಮುಕ್ತ ಜೀವಿಗಳೆ. ಬೆತ್ತಲೆ ನಡೆದೂ ಇಲ್ಲ; ತೊಗಲನ್ನು ಹೊದೆದೂ ಏನೂ ಫಲವಿಲ್ಲ. ಒಳಗೆ ದೈವಸಿದ್ಧಿ ಆಗಬೇಕು. ತಲೆ ಬೋಳಿಸಿಕೊಂಡಷ್ಟಕ್ಕೆ ಒಬ್ಬ ಪುರ್ಣನಾಗಬಹುದಾದರೆ ಉಣ್ಣೆ ಕತ್ತರಿಸಿದ ಕುರಿಗಳು ಏಕೆ ಪುರ್ಣ ಅಲ್ಲ? ಇಂದ್ರಿಯ ಸುಖವನ್ನು ಕಾಣದವ ಮುಕ್ತನೆನ್ನುವುದಾದರೆ ಷಂಡರು ಷಂಡರಾದ ಕಾರಣದಿಂದಲೆ ಬ್ರಹ್ಮವನ್ನು ಮುಟ್ಟಿರಬೇಕು. ಕಬೀರ ಹೇಳುತ್ತಾನೆ, ಕೇಳಿ, ಸಾಧು ಸಹೋದರರೆ ಭಗವಂತನ ಪಾವನ ನಾಮದ ಮೂಲಕ ಹೊರತು ಯಾರಿಗೂ ಮುಕ್ತಿ ದೊರಕಿಲ್ಲ. ಇದು ಒಂದು ಕಬೀರವಚನ.
ಕಬೀರರ ಉಪದೇಶಗಳಲ್ಲಿ ಸೂಫಿಪಂಥದ ಮತ್ತು ವೇದಾಂತಧರ್ಮದ ಸಾಮರಸ್ಯವನ್ನು ಕಾಣಬಹುದು. ಇವರಿಗೆ ಕರ್ಮ ಮತ್ತು ಪುನರ್ಜನ್ಮಗಳಲ್ಲಿ ನಂಬಿಕೆ ಇದ್ದಂತೆ ತೋರುತ್ತದೆ. ಇವರ ಪದ್ಯಗಳಲ್ಲಿ ಭಗವದ್ಭಕ್ತಿ ತುಳುಕಾಡುತ್ತದೆ. ಕಬೀರರ ಪದ್ಯಗಳು ಹಿಂದೀ ಭಾಷೆಯ ರೂಪಾಂತವಾದ ಅವಧಿ ಭಾಷೆಯಲ್ಲಿದೆ. ಇವರ ಕವಿತೆಗಳು ಕೃತಕ ಶೈಲಿಯಲ್ಲಿರದೆ ಸಹಜವಾಗಿ ಹೃದಯದಿಂದ ಹೊರಹೊಮ್ಮಿದ ಮಾತುಗಳಂತೆ ಇವೆ.
ಸುಮಾರು 1570ರಲ್ಲಿ ಕಬೀರರ ಪದ್ಯಗಳ ವಚನಗಳ ಸಂಕಲನ ಬೀಜಕ್ ಎಂಬ ಹೆಸರಿನಿಂದ ಪ್ರಕಟವಾಯಿತು. ಇದಾದ ಸುಮಾರು 30 ವರ್ಷಗಳ ಅನಂತರ ಇವರ ವಚನಗಳು ಸಿಖ್ಖರ ಗ್ರಂಥದೊಳಗೆ ಅಳವಡಿತಗೊಂಡವು. ಸಿಖ್ ಧರ್ಮದ ಸ್ಥಾಪಕರಾದ ನಾನಕ್ ಮತ್ತು ದಾದು ಎಂಬ ಸಂತರ ಮೇಲೆ ಕಬೀರರ ಪ್ರಭಾವ ವಿಶೇಷವಾಗಿ ಬಿದ್ದಿದೆ. ಕಬೀರರಿಂದ ಸ್ಫೂರ್ತಿಗೊಂಡ ಈ ಎಲ್ಲ ಪಂಥಗಳಿಗೆ ಸಮಾನವಾದ ಅಭಿಪ್ರಾಯಗಳು ಹೀಗಿವೆ:
1. ಜಗತ್ತಿಗೆಲ್ಲ ದೇವರು ಒಬ್ಬನೇ. ಅವನನ್ನೇ ಆರಾಧನೆ ಮಾಡಬೇಕು.
2. ಅಧ್ಯಾತ್ಮ ಸಾಧನೆ ಜಾತಿ ಕುಲ ಭೇದಗಳಿಲ್ಲದೆ ಎಲ್ಲರಿಗೂ ತೆರೆದ ದಾರಿಯಾಗಿದೆ.
3. ಭಕ್ತಿಪಂಥ ಹಿಂದೂಗಳಿಗೂ ಮುಸಲ್ಮಾನರಿಗೂ ಸಮಾನವಾಗಿ ತೆರೆದಿಟ್ಟ ಪಂಥ.
4. ಅಧ್ಯಾತ್ಮ ಜೀವನದಲ್ಲಿ ಮುಂದುವರಿಯಬೇಕಾದರೆ ಸದ್ಗುರುವಿನ ಸಾನ್ನಿಧ್ಯ ಆವಶ್ಯಕ.
5. ಭಕ್ತಿ ಸಾಹಿತ್ಯವೆಲ್ಲ ಪಂಡಿತರ ಭಾಷೆಯಲ್ಲಿಲ್ಲದೆ ಸಾಮಾನ್ಯ ಜನಕ್ಕೆ ಎಟುಕಬಲ್ಲ ಸಾಮಾನ್ಯ ದೇಶಭಾಷೆಯಲ್ಲಿರಬೇಕು.
ಬರಬರುತ್ತ ಕಬೀರನ ಪಂಥ ಹಿಂದೂಧರ್ಮದ ಇತರ ಭಾವ ಭಾವನೆಗಳನ್ನು ಅಳವಡಿಸಿಕೊಂಡು ಹಿಂದೂಧರ್ಮದ ಇತರ ಪಂಥಗಳಂತೆ ಅದರ ಒಂದು ಶಾಖೆಯಾಗಿ ಪರಿವರ್ತಿತವಾಯಿತು.
ರವೀಂದ್ರನಾಥ ಠಾಕೂರರು ಕಬೀರರ 100 ಆರಿಸಿದ ಪದ್ಯಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದ್ದಾರೆ. ಕನ್ನಡದಲ್ಲೂ ಅನೇಕ ವಚನಗಳು ಅನುವಾದವಾಗಿವೆ.
ಕಬೀರರು ತನ್ನ ಭಾಷೆಯನ್ನು ಪುರಬೀ (ಪುರ್ವದ ಭಾಷೆ) ಎಂದಿದ್ದಾರೆ. ಭೋಜಪುರೀ ಭಾಷೆಗೆ ಪುರಬೀ ಎಂದು ಹೆಸರಿದೆ. ವಾರಾಣಸಿಯಿಂದ ಗೋರಖ್ಪುರದವರೆಗಿನ ಭಾಷೆ ಭೋಜಪುರೀ. ಕಬೀರ ಬಾಳಿ ಬದುಕಿದ್ದುದು ವಾರಾಣಸಿಯಲ್ಲಿ. ಆದರೆ ಇವರ ಭಾಷೆಯ ಮೇಲೆ ಪಂಜಾಬೀ ಭಾಷೆಯ ಪ್ರಭಾವ ಎದ್ದುಕಾಣುತ್ತದೆ. ಇವರ ಪಂಜಾಬದತ್ತಣ ಲಿಪಿಕಾರಶಿಷ್ಯರ ಕಾರ್ಯ ಇದಾಗಿರಬೇಕೆಂದು ರಾಮಕುಮಾರವರ್ಮರ ಅಭಿಮತವಾಗಿದೆ.
ಕಬೀರರು ಲೋಕಸಂಚಾರಿ. ಜನತೆಯ ಮಡಿಲಲ್ಲಿಯೇ ಮೆರೆದವರು. ಹೋದ ಹೋದ ಕಡೆಯ ಜನಭಾಷೆಯ ಪ್ರಭಾವ ಅವರ ಭಾಷೆಯ ಮೇಲೆ ಬಿದ್ದಿರುವುದು ಸಹಜವಾದದ್ದು. ಹೀಗಾಗಿ ಅವರದು ಭೋಜಪುರೀ, ಪಂಜಾಬೀ, ವ್ರಜ, ಅವಧೀ ಹಾಗೂ ಖಡಿಬೋಲಿಯಗಳ ಸಮ್ಮಿ ಶ್ರವಾದ ಲೋಕಭಾಷೆಯಾಗಿದೆ. ಇದನ್ನು ರಾಮಚಂದ್ರ ಶುಕ್ಲ ಸಾಧುಕ್ಕಡೀ (ಸಾಧುಗಳ ಭಾಷೆ) ಎಂದಿದ್ದಾರೆ. ಕಬೀರರು ಸರ್ವಜ್ಞನಂತೆ ನಿರಂತರ ವಾಗ್ವಿಭೂತಿಯ ಚೆಲುವನ್ನು ಬೆಳಗುವ ದೇವದೂತನಾಗಿದ್ದರು. ಇವರ ಸಾಹಿತ್ಯ ಅಪಾರವಾದದ್ದು. ತಾವೇ ಹೇಳಿಕೊಂಡಿರುವಂತೆ ಈತ ಮಸಿ ಕಾಗದ ಮುಟ್ಟಿಲ್ಲ, ಕರದಲ್ಲಿ ಲೇಖನಿ ಹಿಡಿದಿಲ್ಲ. ಆದರೆ ನಾಲ್ಕು ಯುಗಗಳ ಮಹಾತ್ಮ್ಯವನ್ನು ಬಾಯ ಮಾತಿನಿಂದಲೇ ಸಾರಿದ್ದಾರೆ. ಶಿಷ್ಯರು ಅವನ್ನು ಸಂಗ್ರಹಿಸಿದರು, ಅಷ್ಟೇ.
ಕಬೀರರ ಕೃತಿಗಳು : 1. ಕಬೀರ ಸಾಹಬಕೀ ಶಬ್ದಾವಲಿ, 2. ಕಬೀರನಕೇ ಪದ, 3. ಸಾಖಿಯಾಂ, 4. ಬೀಜಕ್, 5. ಸಂತಕಬೀರ, 6. ಕಬೀರ ವಚನಾವಲಿ ಹಾಗೂ 7. ಕಬೀರ ಗ್ರಂಥಾವಲಿ.
ಇವರ ಕೃತಿಗಳು ಹಾಡುಗಳ ಹಾಗೂ ಪದ್ಯಗಳ ರೂಪವಾಗಿ ರಚಿಸಲ್ಪಟ್ಟಿವೆ. ಅವನ್ನು ಮೂರು ವಿಧವಾಗಿ ವಿಂಗಡಿಸಿದ್ದಾರೆ. 1. ಸಾಖೀ, 2. ಸಬದ ಅಥವಾ ಸಬದೀ 3. ರಮೈನೀ.
1.ಸಾಖೀ : ಇದು ಸಾಕ್ಷಿ ಶಬ್ದದ ವಿಕೃತರೂಪ. ಸಾಕ್ಷೀಭೂತವಾಗಿ ಕಂಡು ಅನುಭವಿಸಿದ ಈ ಉಕ್ತಿಗಳಿಗೆ ಸಾಕ್ಷಿ ಎಂದು ಹೆಸರು. ಸಾಕ್ಷಿಯೇ ಜ್ಞಾನದ ಅಕ್ಷಿ ಎಂದು ಇವರೇ ಒಂದೆಡೆ ಘೋಷಿಸಿದ್ದಾರೆ. ಇವೆಲ್ಲ ದೋಹಾ ಹಾಗೂ ಸೋರಠಾ ಎಂಬ ದ್ವಿಪದಿ ಛಂದಗಳಲ್ಲಿ ವ್ಯಕ್ತವಾಗಿದೆ. ಕಬೀರರ ಜ್ಞಾನದ ಭಂಡಾರಗಳೇ ಈ ಸಾಕ್ಷಿಗಳು. ಇವನ್ನು ಗುರುವಿನ ಅಂಗ, ವಿರಹ ವಿಚಾರ, ಸ್ಮರಣೆಯ ವಿಚಾರ-ಎಂದು ಮುಂತಾಗಿ ವಿಭಾಗಿಸಿದ್ದಾರೆ.
2. ಸಬದ್ ಅಥವಾ ಸಬದೀ : ಕಬೀರರು ಹಾಡಿದ ಪದಗಳ ಸಂಗ್ರಹಕ್ಕೆ ಸಬದ್ ಅಥವಾ ಸಬದೀ ಎನ್ನುತ್ತಾರೆ. ಕಬೀರರ ನಿಜವಾದ ರಸಸ್ರೋತವಿರುವುದೇ ಇವುಗಳಲ್ಲಿ. ಸಬದೀ ಎಂದರೆ ಧ್ವನಿ. ಅಂತರಂಗಸ್ಫೂರ್ತ ಆ ನಾದಧ್ವನಿಯೇ ಸಬದಿಯಾಗಿ ಹೊರಬಂದಿದೆ-ಎಂಬ ಭಾವ ಇದರದಾಗಿರಬೇಕು. ದಾಂಪತ್ಯಪ್ರೇಮಶೀಲವಾದ ಕಬೀರರ (ಮಧುರಾ) ಭಕ್ತಿಗೀತೆಗಳು ಲೋಕಪ್ರಸಿದ್ಧವಾಗಿವೆ.
ಘೂಂಘಟಕಾ ಪಟ ಖೋಲರೇ, ಅಬ ಪೀವ ಮಿಲೇಂಗೆ (ಮುಖದ ಸೆರಗನ್ನು ಸರಿಸು ರಮಣೀ, ಈಗ ಪ್ರಿಯತಮನ ಮಿಲನ ಸಮಯ) ಎಂಬ ಲೋಕವಿಖ್ಯಾತ ಗೀತ ಈ ಸಬದಿಯ ಒಂದು ರೂಪವೆನ್ನಬೇಕು.
3. ರಮೈನೀ : ಅಧ್ಯಾತ್ಮದಲ್ಲಿ ಸೂಕ್ಷ್ಮ ವಿಚಾರಗಳ ಉದ್ಘಾಟನೆಯೇ ರಮೈನೀಯಾ ಗಿರಬೇಕು. ರಮೈನೀಗಳು ದೋಹಾ (ದ್ವಿಪದಿ) ಹಾಗೂ ಚೌತಾಯಿ (ಚೌಪದಿ) ಗಳಲ್ಲಿ ರಚಿಸಲ್ಪಟ್ಟಿವೆ. ಜ್ಞಾನಮಾರ್ಗದ ಅನೇಕ ತತ್ತ್ವಗಳು ಇಲ್ಲಿ ನಿರೂಪಿತವಾಗಿವೆ.
Kabirdas
ಕಾಮೆಂಟ್ಗಳು