ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೀಣಾ ಬನ್ನಂಜೆ


 ವೀಣಾ ಬನ್ನಂಜೆ


ಡಾ. ವೀಣಾ ಬನ್ನಂಜೆ ಅವರು ಅಧ್ಯಾತ್ಮ ಸಾಧಕಿ, ಬಹುಮುಖಿ ಸುಜ್ಞಾನಿ, ಬರಹಗಾರ್ತಿ ಹಾಗೂ ಪ್ರಭಾವಿ ಉಪನ್ಯಾಸಕಿ. 

ಡಾ. ವೀಣಾ ಬನ್ನಂಜೆ ಅವರು ಹುಟ್ಟಿದ್ದು 1968ರ ಜೂನ್ 23ರಂದು.  ಹುಟ್ಟಿದ ಊರು ಉಡುಪಿ ಜಿಲ್ಲೆಯ ಅಂಬಲಪಾಡಿ. ತಂದೆ ಬನ್ನಂಜೆ ಗೋವಿಂದಾಚಾರ್ಯ. ತಾಯಿ ಅಹಲ್ಯಾ. ಪದ್ಮಶ್ರೀ ವಿದ್ಯಾವಾಚಸ್ಪತಿ  ಬನ್ನಂಜೆ ಗೋವಿಂದಾಚಾರ್ಯರು ಪ್ರಖಾಂಡ ಪಂಡಿತರು, ವಿದ್ವಾಂಸರು, ಲೇಖಕರು, ಸಾಹಿತಿ, ಕವಿ, ಪತ್ರಕರ್ತರು, ಎಲ್ಲಕ್ಕಿಂತಲೂ ಮಿಗಿಲಾಗಿ ಇಪ್ಪತ್ತು-ಇಪ್ಪತ್ತೊಂದನೇ ಶತಮಾನದಲ್ಲಿ ನಾವು ಕಂಡ ಅತ್ಯಪೂರ್ವ ಜ್ಞಾನಿ. ಅಂಥಾ ಮಹಾನ್ ವ್ಯಕ್ತಿಯ ಮಗಳಾಗಿ ಹುಟ್ಟಿದ ವೀಣಾ ಬನ್ನಂಜೆಯವರು ಇಂದಿನ ಪೀಳಿಗೆಯ ಅತ್ಯಪೂರ್ವ ಮಹಿಳಾ ಸಾಧಕಿಯಲ್ಲೊಬ್ಬರು. ತನ್ನ ತಂದೆಯವರ ವ್ಯಕ್ತಿತ್ವ, ಸಾಧನೆ ಅವರ ನಡೆದ ದಾರಿಯ ಹೊರತಾಗಿಯೂ ಅಧ್ಯಾತ್ಮ ಕ್ಷೇತ್ರದಲ್ಲಿ ಅವರದೇ ಹಾದಿಯಲ್ಲಿ ನಡೆಯುತ್ತಾ ತನ್ನದೇ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಇಂದಿನ ಪೀಳಿಗೆಯ ಮಹಿಳಾ ಉಪನ್ಯಾಸಕಿಯರಲ್ಲಿ ಅಗ್ರ ಶ್ರೇಣಿಯಲ್ಲಿರುವ ವೀಣಾ ಬನ್ನಂಜೆಯವರು ಶ್ರೀಮದ್ಭಾಗವತ, ಭಗವದ್ಗೀತೆ, ರಾಮಾಯಣ, ಮಹಾಭಾರತ ಗ್ರಂಥಗಳ ಬಗ್ಗೆ ಮಾತ್ರವಲ್ಲದೆ ಅಷ್ಟೇ ನಿರರ್ಗಳವಾಗಿ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿಯವರಂಥಾ ಸಾಧಕರ ಸಂತರ ಬಗ್ಗೆಯೂ ನಿಖರವಾದ ಸಂಶೋಧನೆಯನ್ನು ನಡೆಸಿ ಅದ್ಭುತವಾದ ಉಪನ್ಯಾಸಗಳನ್ನು ನೀಡುವ ವಿರಳ ವ್ಯಕ್ತಿಗಳಲ್ಲಿ ಓರ್ವರಾಗಿ ಗುರುತಿಸಲ್ಪಡುತ್ತಾರೆ. ಹಾಗೆಯೆ ಆಚಾರ್ಯ ರಜನೀಶರ ಮತ್ತು ಶ್ರೀ ಅರವಿಂದರ ಉಪನ್ಯಾಸಗಳ ಬಗ್ಗೆಯೂ ಇವರ ವ್ಯಾಖ್ಯಾನ ಅತ್ಯಂತ ಅಪೂರ್ವ ಮತ್ತು ಅಪರೂಪವಾದದ್ದು.  

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಿಂದ ಬಿಎ ಪದವಿ ಮತ್ತು  ಮಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂಎ ಪದವಿ ಪಡೆದ ವೀಣಾ ಬನ್ನಂಜೆಯವರು  ಅಕ್ಕಮಹಾದೇವಿಯ ವಚನಗಳ ಮೇಲೆ ಎಂಫಿಲ್ ಅಧ್ಯಯನವನ್ನು ನಡೆಸಿದವರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಆಚಾರ್ಯ ರಜನೀಶ್ ಮತ್ತು ಸತ್ಯಕಾಮರ ಸಾಹಿತ್ಯದಲ್ಲಿ ತಂತ್ರಮಾರ್ಗ ವಿಷಯದ ಮೇಲೆ ಪಿಹೆಚ್‍.ಡಿ ಪದವಿಯನ್ನು ಪಡೆದಿದ್ದಾರೆ. 1991-94 ತನಕ ಕನ್ನಡ ಉಪನ್ಯಾಸಕಿ, ಉಪ ಪ್ರಾಂಶುಪಾಲೆಯಾಗಿ ಉಡುಪಿಯ ಉಪೇಂದ್ರ ಮೆಮೋರಿಯಲ್ ಕಾಲೇಜಿನಲ್ಲಿ ಸೇವೆ. 94ರಲ್ಲಿ ಸ್ವಯಂ ನಿವೃತ್ತಿ. 94ರಿಂದ 98ರ ತನಕ ಸತ್ಯಕಾಮರ ಜೊತೆ ಹಿಮಾಲಯದಲ್ಲಿ ವಾಸ.

98ರಿಂದ 2007ರ ತನಕ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲ್ಲಹಳ್ಳಿಯಲ್ಲಿ ಸತ್ಯಕಾಮ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಸೇವೆ. ಕಲ್ಲಹಳ್ಳಿ ಗ್ರಾಮಕ್ಕೆ 80 ಲಕ್ಷ ವೆಚ್ಚದ ಕುಡಿಯುವ ನೀರಿನ ಕರೆ ನಿರ್ಮಾಣ. ಅನೇಕ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳ ಆಯೋಜನೆ.

 2007ರಲ್ಲಿ ಕಲ್ಲಹಳ್ಳಿಯಿಂದ ನಿರ್ಗಮಿಸಿ ಮೂರು ತಿಂಗಳ ಅಲೆಮಾರಿ ಬದುಕು ಮುಗಿಸಿ ಬೆಂಗಳೂರಿಗೆ ನೆಲೆ ಬದಲಾವಣೆ. 2007ರಲ್ಲಿ ಪಿಹೆಚ್‍ಡಿ ಪದವಿಗೆ ನೊಂದಾವಣೆ.

ಎಚ್ಚರದ ಕನಸು (ಕಥಾ ಸಂಕಲನ), ತಂದೆ-ಮಗಳು (ಪತ್ರ ಸಂಹಿತೆ), ಸಂತೆಯಲೊಂದು ಮನೆ, ಲೋಕಾಂತ (ಅಂಕಣ ಬರಹಗಳು), ಹುಡುಕಾಟ (ಲೇಖನಗಳ ಸಂಗ್ರಹ), ಒಂದಿಷ್ಟು ಪ್ರೇಮಾಲಾಪ (ಕವನ ಸಂಕಲನ), ಅಕ್ಕನ ಹಾದಿ(ಕವನ ಸಂಕಲನ) ಅಂತರ್ಮುಖ (ವ್ಯಕ್ತಿ ಪರಿಚಯ) ಸತ್ಯಕಾಮರೊಡನೆ ಸಾವಿರದ ದಿನಗಳು (ಅನುಭವ ಕಥನ) ಇವು ಅವರ ಕೃತಿಗಳು.

ಅಕ್ಕ ಮಹಾದೇವಿಯ ದ್ವೈತ ( ಎಂ ಫಿಲ್ ಪ್ರೌಢ ಪ್ರಬಂಧ)

 ಸುಮ್ಮನೆ-ಸತ್ಯಕಾಮರ ಒಡನಾಟ (ಸತ್ಯಕಾಮರ ಒಡನಾಟ ಬಲ್ಲವರ ಲೇಖನಗಳು) ಹಾಗೂ ಬನ್ನಂಜೆ ಷಡ್ದರ್ಶನ (ಬನ್ನಂಜೆಯವರ ಕುರಿತು ಬಲ್ಲವರ ಲೇಖನಗಳು) ಇವು ವೀಣಾ ಬನ್ನಂಜೆಯವರ ಸಂಪಾದಿತ ಕೃತಿಗಳು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ 'ಸಾಹಿತ್ಯಶ್ರೀ' ಪ್ರಶಸ್ತಿ, ಜಿಟಿ ದೇಸಾಯಿ ಪ್ರಶಸ್ತಿ, ಎಂ ಕೆ ಇಂದಿರಾ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಶಿವರಾತ್ರೀಶ್ವರ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ವೀಣಾ ಅವರಿಗೆ ಸಂದಿವೆ‍. 
ಸತ್ಯಕಾಮರ ನೆನಪಿಗಾಗಿ ಕಲ್ಲಹಳ್ಳಿಯಲ್ಲಿ ಉಪವಾಸ ಸಭಾಂಗಣ ನಿರ್ಮಾಣವಾಗಿದೆ. ಅಲ್ಲಿಗೆ ಬರುವ ಅತಿಥಿಗಳಿಗೆ ನಿಮ್ಮನೆ ಎಂಬ ಅತಿಥಿಗೃಹ ನಿರ್ಮಾಣ ಹಾಗೂ ಓದುಗರಿಗಾಗಿ ಮನನ ಎಂಬ ಗ್ರಂಥಾಯಲದ ನಿರ್ಮಾಣದ ಹೊಣೆ  ಮುಗಿಸಿದ್ದಾರೆ.

ವೀಣಾ ಬನ್ನಂಜೆ ಎಂಬುದು ನನ್ನ ದೇಹಕ್ಕೆ ಇಟ್ಟ ಹೆಸರು. ನಾನಿನ್ನು ಹುಟ್ಟಿಯೇ ಇಲ್ಲ. ಊರು ಎಂದರೆ ತೊಡೆ. ನನ್ನನ್ನು ಸಲುಹುವ ತಾಯಿಯ ತೊಡೆ ಎಲ್ಲಾ ಕಡೆ ಇರುವುದರಿಂದ ಎಲ್ಲವೂ ನನ್ನ ಹುಟ್ಟೂರು. ನನ್ನದು ನಿರ್ಲಿಂಗ. ವಿಶ್ವವೇ ನನ್ನ ದೇಶ. ಕನ್ನಡ, ಇಂಗ್ಲೀಷ್, ತುಳು ಹಾಗೂ ಹಿಂದಿ ಬರುವ ನನಗೆ ಇನ್ನೂ ಮನುಷ್ಯ ಭಾಷೆಯೇ ಬಂದಿಲ್ಲ. ನನ್ನ ಬದುಕು-ಬರಹಗಳೆಲ್ಲವೂ ಸಮಯ ಸಾಧನೆಯ, ಅಹಂಕಾರದ ಪ್ರತಿಫಲಗಳು. ನಾನು ಬರೆದ ಅಕ್ಕಮಹಾದೇವಿಯ ದ್ವೈತ ಕೃತಿಗೆ ಪ್ರಶಸ್ತಿ ಬಂದಿದೆ. ಆದರೆ ದೇವ ಪ್ರಶಸ್ತಿಗೆ ಇನ್ನೂ ಸಮಯ ಬಂದಿಲ್ಲ. ಮಾಡಲು ಬೇರೆ ಕೆಲಸವಿಲ್ಲವಾಗಿ ಮನೆ ಕೆಡಿಸುವ ಕೆಲಸ ಮಾಡಬಾರದೆಂದು ಕಲ್ಲಹಳ್ಳಿಯಲ್ಲಿ ಕೆಲವೊಂದು ಕೆಲಸಮಾಡುತ್ತಿದ್ದೇನೆ ಎಂದು ತಮ್ಮನ್ನು ತಾವೆ ಬಣ್ಣಿಸಿಕೊಳ್ಳುವ ಡಾ ವೀಣಾ ಬನ್ನಂಜೆಯವರು ನುಡಿಯುವ ಪ್ರತಿಮಾತು ಅರ್ಥಗರ್ಭಿತ ಹಾಗೂ ಹೊಳಹುಪೂರ್ಣ. ಕನ್ನಡ ಸಾಹಿತ್ಯ-ಸಾಂಸ್ಕ್ರತಿಕ-ಆದ್ಯಾತ್ಮಿಕ ಪರಂಪರೆಯಲ್ಲಿ ಅವರದ್ದು ಅತ್ಯಂತ ವಿಭಿನ್ನ ಹಾದಿ. ಕನ್ನಡ ಸಾರಸತ್ವಲೋಕ ಅವರಿಂದ ಇನ್ನೂ ಶ್ರೀಮಂತವಾಗಲಿ ಎಂಬುದು ನಮ್ಮೆಲ್ಲರ ಆಶಯ.

ಲೇಖನ ಕೃಪೆ: ಶ್ರೀವತ್ಸ ಬಲ್ಲಾಳ Shrivathsa Ballal 

Happy birthday  Dr. Veena Bannanje 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ