ಹೇಮಂತ ಕುಲಕರ್ಣಿ
ಹೇಮಂತ ಕುಲಕರ್ಣಿ
ಕನ್ನಡ ಮತ್ತು ಇಂಗ್ಲಿಷಿನಲ್ಲಿ ಪ್ರಸಿದ್ಧ ಬರಹಗಾರರಾದ
ಹೇಮಂತ ಬಲವಂತರಾವ್ ಕುಲಕರ್ಣಿ ಅವರು ನವೆಂಬರ್ 25, 1916ರ ವರ್ಷದಲ್ಲಿ ಬಿಜಾಪುರದಲ್ಲಿ
ಜನಿಸಿದರು. ಅವರು ಕನ್ನಡಕ್ಕಿಂತ ಇಂಗ್ಲಿಷ್ನಲ್ಲಿಯೇ
ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದವರು.
ಹೇಮಂತ ಕುಲಕರ್ಣಿಯವರು ತಮ್ಮ ಪ್ರಾರಂಭಿಕ ವರ್ಷಗಳನ್ನು ಬಿಜಾಪುರ, ಹೈದರಾಬಾದ್,
ಮುಂಬಯಿಗಳಲ್ಲಿ ಕಳೆದರು.ಮುಂದೆ 1960ರ
ವೇಳೆಯಲ್ಲಿ ಅವರು ಅಮೆರಿಕದಲ್ಲಿ ನೆಲೆಸಿದರು
ವಾಸ. ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ
ಪಡೆದಿದ್ದ ಕುಲಕರ್ಣಿಯವರು ಅಮೆರಿಕದಲ್ಲಿ ಅನೇಕ ವರ್ಷಗಳವರೆಗೆ ಅಧ್ಯಾಪಕ ವೃತ್ತಿ
ಕೈಗೊಂಡಿದ್ದರು.
ಅಮೆರಿಕಾದ ಉಟ್ಹಾದಲ್ಲಿದ್ದಾಗ ಸ್ಟೀಫನ್ ಸ್ಪೆಂಡರ್ ಮೇಲೆ
ಆಳವಾದ ಅಧ್ಯಯನ ನಡೆಸಿ 1970ರ ವರ್ಷದಲ್ಲಿ ಆತನ ಕೃತಿಗಳ ವರ್ಣನಾತ್ಮಕ ಸೂಚಿಯನ್ನು (Stephen Spender: poet in crisis) ಪ್ರಕಟಿಸಿದರು.
‘ಮಾಬಿಡಿಕ್’ ಕೃತಿಯ ಅಧ್ಯಯನ ಮಾಡಿ ‘ಹಿಂದೂ ಅವತಾರ’ (Moby-Dick: A Hindu Avatar) ಎಂಬ ಹೆಸರಿನಲ್ಲಿ 1970ರಲ್ಲಿ
ಗ್ರಂಥ ಪ್ರಕಟಿಸಿದರು. ಹೇಮಂತರು ಸುಮಾರು 15 ಇಂಗ್ಲಿಷ್ ಕವನಸಂಕಲನಗಳನ್ನು ಪ್ರಕಟಿಸಿದ್ದು ಅವು ಅವರಿಗೆ ಅಂತರರಾಷ್ಟ್ರೀಯ ಖ್ಯಾತಿಯನ್ನು
ತಂದುಕೊಟ್ಟವು. Serpent in the Stars, The
flaming sword, Driftwood from the beach, Journey to Mother, Exploring Roots,
East Punjab in Crisis, Tilted Towards Dawn, In the Country of Black Mother,
Morning Dew: Poems, Welding Flames: New Poems, Burning with a Smile, At the
Well: Selected Poems, Barbed Wire, Double-headed Drum, Stepehe Spender, works
and Criticism ಮುಂತಾದವು ಹೇಮಂತ ಕುಲಕರ್ಣಿಯವರ ಇಂಗ್ಲಿಷ್ ಕೃತಿಗಳಲ್ಲಿ ಸೇರಿವೆ.
ಹೇಮಂತ ಕುಲಕರ್ಣಿಯವರು ಕನ್ನಡದಲ್ಲಿ ಬರೆದ ಮೊದಲ
ಕಾದಂಬರಿ 1952ರಲ್ಲಿ ಪ್ರಕಟಗೊಂಡ ‘ಭಗ್ನಮಂದಿರ’. ಅದು
ಹಲವಾರು ಮರುಮುದ್ರಣಗಳನ್ನು ಕಂಡಿದೆ. ಕನ್ನಡದಲ್ಲಿ ಅವರ ಮೊದಲ ಕವನ ಸಂಕಲನ ‘ಸ್ನೇಹ
ಸೂಕ್ತ’. ಮುಂದೆ 1969ರಲ್ಲಿ
‘ಗೋಪುರ’, 1987ರಲ್ಲಿ ‘ಹಿಮವೃಷ್ಟಿ’ ಕವನ ಸಂಕಲನಗಳನ್ನು ಪ್ರಕಟಿಸಿದರು. ತಪ್ಪಿದ ಹೆಜ್ಜೆ ಅವರ
ಅನುವಾದಿತ ನಾಟಕ. ಕೊನರಿದ ಕೊರಡು ಅವರ ಮತ್ತೊಂದು ಕಾದಂಬರಿ.
ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಹೇಮಂತ
ಕುಲಕರ್ಣಿಯವರ ಹಲವಾರು ಉಪನ್ಯಾಸಗಳು
ವ್ಯವಸ್ಥಿತಗೊಂಡಿದ್ದವು. ಈ ಮೂಲಕ ‘ಕಾವ್ಯದಲ್ಲಿ
ನವ್ಯತೆ’ ಎಂಬ ಉಪನ್ಯಾಸ ಸರಣಿಯು ಪ್ರಸಾರಾಂಗದಿಂದ
ಪ್ರಕಟಿತಗೊಂಡಿದೆ. ಕನ್ನಡದಲ್ಲಿ ನವ್ಯತೆಯನ್ನು ಕುರಿತು ಬರೆದವರೆಲ್ಲರೂ ಇಂಗ್ಲೆಂಡ್, ಫ್ರಾನ್ಸ್,
ಅಮೆರಿಕ ಕಾವ್ಯದಿಂದ ಪ್ರಭಾವಿತರಾಗಿದ್ದರೆ ಕುಲಕರ್ಣಿಯವರು ಇನ್ನೂ ಒಂದು ಹೆಜ್ಜೆ
ಮುಂದೆ ಹೋಗಿ ಮೆಕ್ಸಿಕೊ, ಚಿಲಿ, ಜಪಾನ್
ಮೊದಲಾದ ದೇಶಗಳ ಕಾವ್ಯವನ್ನು ಅಧ್ಯಯನಮಾಡಿ
ವಿವೇಚನೆ ನಡೆಸಿದವರು.
1984ರ ಸುಮಾರಿನಲ್ಲಿ ಭಾರತಕ್ಕೆ ಬಂದ ಹೇಮಂತ ಕುಲಕರ್ಣಿಯವರು ‘ಸೃಜನವೇದಿ’
ಎಂಬ ನಿಯತ ಕಾಲಿಕವನ್ನು ಸಿದ್ಧಲಿಂಗ ಪಟ್ಟಣಶೆಟ್ಟಿ, ಅರವಿಂದ
ನಾಡಕರ್ಣಿಯವರೊಡನೆ ಪ್ರಾರಂಭಿಸಿ ಹಲವಾರು ವರ್ಷಗಳ ಕಾಲ ಅದನ್ನು ನಡೆಸಿದರು.
ಹೇಮಂತ ಕುಲಕರ್ಣಿಯವರಿಗೆ ಹಲವಾರು ಅಂತಾರಾಷ್ಟ್ರೀಯ
ಮನ್ನಣೆಗಳು ಸಂದಿದ್ದವು. ಫ್ಲಾರೆನ್ಸಿನಲ್ಲಿ ನಡೆದ ಜಾಗತಿಕ ಕವಿ ಸಮ್ಮೇಳನಕ್ಕೆ ಆಹ್ವಾನ, ಅಮೆರಿಕದ
ಫ್ಲಾರಿಡಾ ಕವಿ ಸಮ್ಮೇಳನದಲ್ಲಿ ಬಹುಮಾನ, ಫ್ರೆಂಚ್ ಅಕಾಡಮಿಯಿಂದ ದೊರೆತ
ಕಂಚಿನ ಪದಕ, ನ್ಯಾಷನಲ್ ಅಕಾಡಮಿ ಆಫ್ ನ್ಯೂಯಾರ್ಕ್ ಸಂಸ್ಥೆಯಿಂದ ಗೌರವ
ಡಾಕ್ಟರೇಟ್, ಚೀನಾದಿಂದ ಹೋಚೌ ಸೆಂಚುರಿ ಆಫ್ ಪೊಯಟ್ಸ್ ಪ್ರಶಸ್ತಿ,
ಕಾವ್ಯದ ಮೂಲಕ ಶಾಂತಿ ಸೇವೆಗಾಗಿ ಅಂತಾರಾಷ್ಟ್ರೀಯ ಪದಕ, ಉಟ್ಹಾ ವಿಶ್ವವಿದ್ಯಾಲಯದಿಂದ ‘ಮಾನವತಾವಾದಿ’ ಪ್ರಶಸ್ತಿ. ಇಂಟರ್ ನ್ಯಾಷನಲ್ ಅಕಾಡಮಿ ಆಫ್ ಪೊಯೆಟ್ಸ್ ವತಿಯಿಂದ ಫೆಲೋಷಿಪ್ ಮುಂತಾದ ಅನೇಕ ಅಂತಾರಾಷ್ಟ್ರೀಯ ಗೌರವಗಳು
ಸಂದವು.
ಕವಿ ಹೇಮಂತ ಕುಲಕರ್ಣಿಯವರು ಜುಲೈ 22,
1994ರ ವರ್ಷದಲ್ಲಿ ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.
Tag: Hemanth Kulkarni.
ಕಾಮೆಂಟ್ಗಳು