ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದ ಉಪಾಧ್ಯಕ್ಷರುಗಳು



ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದ  ಉಪಾಧ್ಯಕ್ಷರುಗಳು

ಸಾಮಾನ್ಯವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಯನ್ನು ಅದರ ಅಧ್ಯಕ್ಷ ಸ್ಥಾನದಿಂದ ಅಳೆಯುವುದಿದೆ.  ಆದರೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಭದ್ರ  ಬುನಾದಿ ಹಾಕಿದವರು ಪ್ರಾರಂಭದಲ್ಲಿ ಅದರ ಉಪಾಧ್ಯಕ್ಷರಾಗಿದ್ದ ಶ್ರೇಷ್ಠ ವ್ಯಕ್ತಿಗಳು.  ಅಂದಿನ ದಿನಗಳಲ್ಲಿ ಕಾರ್ಯದರ್ಶಿಗಳಾಗಿದ್ದು ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಇಟ್ಟಿಗೆಯನ್ನೂ ಹೊತ್ತ    ಬೆಳ್ಳಾವೆ ಅಂತಹ ಹಿರಿಯರನ್ನು ಕೂಡಾ ನೆನೆಯದಿರಲು ಸಾಧ್ಯವಿಲ್ಲ.  

ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭಗೊಂಡು,  ಎಚ್. ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿದ್ದ ನಂತರದಲ್ಲಿ ಅಧ್ಯಕ್ಷರಾದವರು ಎಂ. ಕಾಂತರಾಜ ಅರಸು ಅವರು. (೧೯೨0-೧೯೨೩) ಅವರಾದ ಮೇಲೆ ಯುವರಾಜ ಕಂಠೀರವ ಚಾಮರಾಜೇಂದ್ರ ಒಡೆಯರ್ ಪರಿಷತ್ತಿನ ಅಧ್ಯಕ್ಷರಾದರು. ಇವರ ನಂತರ ಒಂಟಿಮುರಿ ಶ್ರೀಮಂತ ಬಸವಪ್ರಭು ಸರದೇಸಾಯಿ ಅವರು (೧೯೪೧-೧೯೪೬) ಆಮೇಲೆ ಜಸ್ಟೀಸ್ ಲೋಕೂರು ನಾರಾಯಣರಾವ್ ಸ್ವಾಮಿರಾವ್ ಅವರು ಅಧ್ಯಕ್ಷರಾಗಿದ್ದರು. ಆಗ ನಿಬಂಧನೆಯಲ್ಲಿ “ರಾಜ್ಯಾಧಿಪತಿಗಳು, ಶ್ರೀಮಂತರು, ಉನ್ನತ ಪದವಿಯಲ್ಲಿರುವವರು ಮಾತ್ರ ಮಹಾಪೋಷಕರು ಅಥವಾ ಪೋಷಕರು ಆಗಿರಬೇಕು” ಎಂಬ ನಿಯಮವಿದ್ದು, ಇವರ ಪೈಕಿ ಅಧ್ಯಕ್ಷರನ್ನು ಆರಿಸಲಾಗುತ್ತಿತ್ತು. ೧೯೪೭ರ ನಂತರ ಈ ನಿಯಮ ರದ್ದಾಯಿತು.
ಈ ಅರಸರು ಅಥವಾ ಶ್ರೀಮಂತರು ಪರಿಷತ್ತಿನ ಅಧ್ಯಕ್ಷರಾದ ಕಾಲದಲ್ಲಿ ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಹೊಂದಿರುವ ವಿದ್ವಾಂಸರನ್ನು ಪರಿಷತ್ತಿನ ಆಜೀವ ಗೌರವ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತಿತ್ತು. ಇವರ ಪೈಕಿ ಒಬ್ಬರು ಪರಿಷತ್ತಿನ ಉಪಾಧ್ಯಕ್ಷರಾಗಿರುತ್ತಿದ್ದರು. ಹೀಗೆ ಉಪಾಧ್ಯಕ್ಷರೆನಿಸಿಕೊಂಡವರು ಕ್ರಮವಾಗಿ ಕರ್ಪೂರ ಶ್ರೀನಿವಾಸರಾವ್, ಡಿವಿಜಿ, ಬಿಎಂಶ್ರೀ ಮತ್ತು ಮಾಸ್ತಿ. ಅವರು ವಾಸ್ತವಿಕದಲ್ಲಿ ಪರಿಷತ್ತಿನ ಕಾರ್ಯಗಳನ್ನೆಲ್ಲ ಅಧ್ಯಕ್ಷರ ಹೆಸರಿನಲ್ಲಿ ನಡೆಸಿದರು. ಈ ಮೊದಲು ಎಚ್.ವಿ. ನಂಜುಂಡಯ್ಯನವರು ಪರಿಷತ್ತಿನ ಅಧ್ಯಕ್ಷರಾಗಿದ್ದ ಕಾಲದಲ್ಲಿ ಉಪಾಧ್ಯಕ್ಷರಾಗಿದ್ದವರು ಎಂ. ಶಾಮರಾವ್ ಅವರು.

ಎಂ. ಶಾಮರಾವ್

ಪ್ರಸಿದ್ಧ ಶಿಕ್ಷಣತಜ್ಞರೂ, ಇತಿಹಾಸ ತಜ್ಞರು, ಪರಿಷತ್ತಿನ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರೂ ಆಗಿದ್ದ  ಎಂ. ಶಾಮರಾವ್ ಅವರು ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ೧೫-೮-೧೮೬0ರಲ್ಲಿ ಶೇಷಾಚಾರ್ ನಾರಾಯಣರಾಯರ ಪುತ್ರರಾಗಿ ಜನಿಸಿದರು. ೧೮೭೫ರಿಂದ ಮೈಸೂರು ರಾಜಾ ಸ್ಕೂಲಿನಲ್ಲಿ ಶಿಕ್ಷಣವನ್ನು  ಪಡೆದು ನಂತರ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ೧೮೮0ರಲ್ಲಿ ಬಿಎ ಪದವಿ ಗಳಿಸಿದರು. ೧೮೮೫ರಲ್ಲಿ ಎಂ.ಎ. ಪದವಿ ಗಳಿಸಿದ ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಹಾಯಕ ಅಧ್ಯಾಪಕರಾಗಿ ಸೇರಿ ಅನಂತರ ೧೮೯೫ರಲ್ಲಿ ಅಸಿಸ್ಟೆಂಟ್ ಕಮೀಷನರ್ ಆದರು. ಮೈಸೂರು ಸಂಸ್ಥಾನದ ವಿವಿಧ ಕ್ಷೇತ್ರಗಳಲ್ಲಿ ಅಧಿಕಾರಿಗಳಾಗಿ ದುಡಿದರು. ಕೊನೆಗೆ ವಿದ್ಯಾಇಲಾಖೆಯ ಮುಖ್ಯಸ್ಥರಾಗಿ ೬ ವರ್ಷ ಕೆಲಸ ಮಾಡಿ ೧೯೧೮ರಲ್ಲಿ ನಿವೃತ್ತರಾದರು.
ಶಾಮರಾಯರ ಸೇವಾಕಾರ್ಯಗಳನ್ನು ಗಮನಿಸಿದ ಬ್ರಿಟಿಷ್  ಸರ್ಕಾರ ೧೯೧೪ರಲ್ಲಿ ರಾವ್ ಬಹಾದ್ದೂರ್ ಪ್ರಶಸ್ತಿಯನ್ನು, ನಾಲ್ವಡಿ ಕೃಷ್ಣರಾಜ ಒಡೆಯರ್ ೧೯೧೭ರಲ್ಲಿ ರಾಜಕಾರ್ಯಪ್ರಸಕ್ತ ಪ್ರಶಸ್ತಿಯನ್ನು ನೀಡಿದರು. ತಮ್ಮ ಆಡಳಿತದ ಅವಧಿಯಲ್ಲಿ ರಾಜ್ಯಾದ್ಯಂತ ಸಹಕಾರ ಸಂಘಗಳನ್ನು ಸಹಕಾರ ಚಳವಳಿಯನ್ನು ಪ್ರವರ್ಧಮಾನಕ್ಕೆ ತಂದು ಮೈಸೂರು ಸಂಸ್ಥಾನದ ಸಹಕಾರ ಚಳವಳಿಯ ಜನಕರು ಎಂಬ ಮನ್ನಣೆಗೆ ಪಾತ್ರರಾದರು. ಅಂದಿನ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರಾಗಿದ್ದ ಇವರು ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಅಮೋಘ ಸೇವೆ ಸಲ್ಲಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣವಾದ ವಿದ್ಯಾಸಮಿತಿಯಲ್ಲಿ  ಪ್ರಮುಖ ಪಾತ್ರ ವಹಿಸಿದ್ದ ಶಾಮರಾವ್ ಅವರು  ಪರಿಷತ್ತಿನ ಪ್ರಥಮ ಉಪಾಧ್ಯಕ್ಷರಾಗಿ (೧೯೧೫-೧೯೧೯)  ಸೇವೆ ಸಲ್ಲಿಸಿದರು.  ಶಿಕ್ಷಣ ಮತ್ತು ಸಾಹಿತ್ಯರಂಗಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಶ್ಯಾಮರಾಯರು ಕರ್ಣಾಟಕ ಗ್ರಂಥ ಸಮಿತಿ ಎಂಬ ಸಾಹಿತ್ಯ ಪತ್ರಿಕೆಯನ್ನು ೧೮೯೩ರಲ್ಲಿ ಸ್ಥಾಪಿಸಿದರು. ವಿದ್ಯಾದಾಯಿನಿ ಎಂಬ ಶಿಕ್ಷಣ ಮಾಸಪತ್ರಿಕೆ ಸ್ಥಾಪನೆ ನಡೆಸಿದ ಶ್ರೇಯಸ್ಸು ಇವರದೇ. ಎಂ. ಶಾಮರಾಯರು, ಮೈಸೂರು ಸಂಸ್ಥಾನದ ಚರಿತ್ರೆ (ಕನ್ನಡ ಗ್ರಂಥ), ಟೆನ್ ಇಯರ್ಸ್ ಆಫ್ ನೇಟಿವ್  ಇನ್ ಮೈಸೂರು (೧೮೯೧) ದಿ ಇಂಡಿಯನ್ ಹಿರೋಸ್ (೧೯೨೨) ಮಾಡರ್ನ್ ಮೈಸೂರು ( ೨ ಸಂಪುಟಗಳು ೧೯೩೬) ಎಂಬ ಇಂಗ್ಲಿಷ್ ಗ್ರಂಥಗಳನ್ನು ರಚಿಸಿದ್ದರು. ಇವಲ್ಲದೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ರಚಿಸಿರುವ ಅನೇಕ ಲೇಖನಗಳು ಅಮೂಲ್ಯವಾಗಿವೆ.  ಶಾಮರಾಯರ  ಬಗ್ಗೆ ಮೊದಲು ವಿವರವಾಗಿ ಬರೆದಿರುವ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಅವರು ಹೇಳಿರುವ ಹಾಗೆ ಮಹಿಷಿ ಶಾಮರಾವ್ (ಎಂ. ಶಾಮರಾವ್) ಕನ್ನಡ ಭಾಷೆ ಸಾಹಿತ್ಯಗಳ ನವೋದಯ ಕಾಲದ ಅಗ್ರಗಣ್ಯ ಪುನರುಜ್ಜೀವಕರೂ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರೂ ಆಗಿದ್ದರು.

ಸಾಧನೆ :
ಗ್ರಂಥ ಪ್ರಕಟನೆ : ನಂಜುಂಡಯ್ಯನವರು ಮತ್ತು ಶಾಮರಾಯರ  ಕಾಲದಲ್ಲಿ ಗ್ರಂಥಪ್ರಕಟನೆ ಸಾಹಸದ ಕೆಲಸವಾಗಿತ್ತು. ಜೇಂಸ್ ಅಬ್ರಹಾಂ ಗಾರ್‍ಫೀಲ್ಡ್‍ನ ಚರಿತ್ರೆಯನ್ನು ಪ್ರಕಟಿಸಲು ಮತ್ತು ಪರಿಷತ್ ಪತ್ರಿಕೆ ಮುದ್ರಣಕ್ಕಾಗಿ ೪೨00ರೂಗಳಿಗಾಗಿ ಸಾರ್ವಜನಿಕ ಪ್ರಕಟಣೆ ಕೊಟ್ಟದ್ದನ್ನು ಕಾಣಬಹುದು.

ಇನ್ನು ವಿದ್ವಾಂಸರು ಪ್ರಕಟಿಸಲು ಉತ್ತಮ ಹಸ್ತಪ್ರತಿಗಳನ್ನು ತಂದರೂ ಆರ್ಥಿಕ ಕೊರತೆ ಕಾರಣದಿಂದ ತಿರಸ್ಕರಿಸಬೇಕಾದ ಪರಿಸ್ಥಿತಿ ಇತ್ತು. ಉದಾಹರಣೆಗೆ ಹೇಳುವುದಾದರೆ ನಂಜುಂಡಯ್ಯನವರ ಕಾಲದಲ್ಲಿ ಹೊಸಕೆರೆ ಚಿದಂಬರಯ್ಯನವರು ಬೊಬ್ಬೂರು ರಂಗನ ಪರಶುರಾಮ ರಾಮಾಯಣವೆಂಬ ಅಪ್ರಕಟಿತ ಗ್ರಂಥವನ್ನು ಪ್ರಕಟಣೆಗಾಗಿ ಪರಿಷತ್ತಿಗೆ ಸಲ್ಲಿಸಿದಾಗ ಪ್ರಕಟಣೆಯ ಕಾರ್ಯ ನೋಡಿಕೊಳ್ಳುತ್ತಿದ್ದ ಬೆಳ್ಳಾವೆ ಅವರು. “ಕನ್ಯೆಯೇನೋ ಸಾಲಂಕೃತಳಾಗಿ ಯೋಗ್ಯಳಾಗಿದ್ದಾಳೆ. ಆದರೆ ಆಕೆಯ ಕಲ್ಯಾಣ ನಮ್ಮಿಂದ ಸಾಧ್ಯವಿಲ್ಲ ಎಂದು ವಿಷಾದದಿಂದ ತಿಳಿಸಬೇಕಾಗಿದೆ” ಎಂದು ಕಾವ್ಯಾತ್ಮಕ ಭಾಷೆಯಲ್ಲಿ ಹೇಳಿಕಳಿಸಿದರಂತೆ.

ಇವರ ಕಾಲದಲ್ಲಿ ಕರ್ನಾಟಕ ಭಾಷೆಯ ಉದ್ಗ್ರಂಥಗಳಾದ ಪಂಪಭಾರತ ಪಂಪರಾಮಾಯಣ ಗ್ರಂಥಗಳನ್ನು ಪರಿಶೋಧಿಸಿ ಶುದ್ಧಪ್ರತಿಗಳನ್ನು ಸಿದ್ಧಪಡಿಸಿ ಮುದ್ರಿಸಿಕೊಡಲು ಸರ್ಕಾರ ಪರಿಷತ್ತನ್ನು ಕೇಳಿತು. ಗಾರ್‍ಫೀಲ್ಡ್‍ನ ಗ್ರಂಥ ಪಠ್ಯವಾದದ್ದರಿಂದ (೧೯೧೯ರಲ್ಲಿ) ಪರಿಷತ್ತಿಗೆ ಸ್ವಲ್ಪಮಟ್ಟಿಗೆ ನೆರವು ಸಿಕ್ಕಿತು.

ನಂಜುಂಡಯ್ಯನವರು ಮತ್ತು ಶಾಮರಾಯರು ಪರಿಷತ್ತಿನ ಧ್ಯೇಯವಾದ “ಕನ್ನಡ ನಾಡಿನ ಏಕೀಕರಣ ಮತ್ತು ಭಾಷಾ ಪ್ರಗತಿಗೆ, ಲೇಖಕರಿಗೆ ಪ್ರೋತ್ಸಾಹ ಗ್ರಂಥ ಪ್ರಕಟನೆಗೆ ಸಹಾಯ” ಈ ಧ್ಯೇಯಗಳಿಗೆ ಶ್ರಮಿಸಿದರು.

ಈ ಮಹನೀಯರ ಕಾಲದಲ್ಲಿ ಪರಿಷತ್ತಿನಿಂದ ಪಠ್ಯಗಳನ್ನು ವಿದ್ಯಾಇಲಾಖೆಗಾಗಿ ಸಿದ್ಧಪಡಿಸಲಾಗುತ್ತಿತ್ತು, ಆ ರೀತಿ ಸಿದ್ಧವಾದ ಗ್ರಂಥಗಳಿವು: ಕನ್ನಡ ಭಾಗವತದ ೪ನೇ ಸ್ಕಂಧ,    ಕನ್ನಡ ಭಾರತದ ಅರಣ್ಯ ಪರ್ವ, ಕನ್ನಡ ಭಾರತದ ದ್ರೋಣಪರ್ವ. ಇವುಗಳನ್ನು ಪಾಠಾಂತರ, ಟಿಪ್ಪಣಿಗಳೊಂದಿಗೆ ಪಂಡಿತರ ಸಹಾಯದಿಂದ ಸಿದ್ಧಪಡಿಸಲಾಗಿತ್ತು.

ಸಮ್ಮೇಳನಗಳು : ಪರಿಷತ್ತಿನ ಅಧ್ಯಕ್ಷರಾಗಿದ್ದ ಎಚ್.ವಿ. ನಂಜುಂಡಯ್ಯನವರೇ  ೧, ೨, ೩ ನೇ ಸಮ್ಮೇಳನಗಳ ಅಧ್ಯಕ್ಷರೂ ಆಗಿದ್ದರು. ಆರ್. ನರಸಿಂಹಾಚಾರ್ ಅಧ್ಯಕ್ಷತೆಯ ಧಾರವಾಡದ ೪ನೇ ಸಮ್ಮೇಳನವನ್ನು ಶಾಮರಾಯರು  ೧೯೧೯ರಲ್ಲಿ ನಡೆಸಿದರು.

ಕರ್ಪೂರ ಶ್ರೀನಿವಾಸರಾವ್ (೧೯೨0-೧೯೩೩)

ಕರ್ನಾಟಕ ಸಾಹಿತ್ಯ ಪರಿಷತ್ತಿನ ಕನ್ನಡ ನಿರ್ಮಾಪಕರಲ್ಲಿ ಅಗ್ರಗಣ್ಯರು ಕರ್ಪೂರ ಶ್ರೀನಿವಾಸರಾಯರು. ಅವರು ಪರಿಷತ್ತಿಗೆ ಮೊದಲು ಸ್ವಂತನೆಲೆ ಒದಗಿಸಿದವರು. ಡಿವಿಜಿ ಹೇಳಿರುವಂತೆ “ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಕಟ್ಟುವುದಕ್ಕಾಗಿ ಕರ್ಪೂರ ಶ್ರೀನಿವಾಸರಾಯರು ಪಟ್ಟಶ್ರಮ ಅಸಾಧ್ಯವಾದುದು. ಅವರು ಎಲ್ಲಿಂದಲೋ ಸದಸ್ಯರನ್ನೂ ಹಣವನ್ನೂ ತಂದು ಸೇರಿಸುತ್ತಿದ್ದರು. ಸಮಸ್ತ ಕರ್ನಾಟಕದ ವಿದ್ವಜ್ಜನದ ಪರಿಚಯವೂ ಅವರಿಗಿತ್ತು. ಅವರು ಪರಿಷತ್ತಿನ ಒಂದು ಸಮ್ಮೇಳನವನ್ನೂ ತಪ್ಪಿಸಿಕೊಂಡವರಲ್ಲ. ಪ್ರತಿಯೊಂದು ಸಮ್ಮೇಳನದಲ್ಲಿಯೂ ಹಾಜರಿದ್ದು ಭಾಷಣ ಮಾತ್ರದಿಂದಲೇ ಅಲ್ಲದೆ, ತಮ್ಮ ವ್ಯಕ್ತಿ ಪ್ರಭಾವದಿಂದಲೂ ಕಳೆಕಟ್ಟಿಸುತ್ತಿದ್ದರು” (ಜ್ಞಾ ಚಿಶಾ ಪು೬೬). ಈ ರೀತಿಯ ಶ್ರಮವಿದ್ದುದರಿಂದಲೇ ಶ್ರೀಕೃಷ್ಣರಾಜ ಪರಿಷನ್ಮಂದಿರ ನಿರ್ಮಾಣವಾಯಿತು.  ಪರಿಷತ್ತಿನ ಹಿತದ ಬಗ್ಗೆ ಹಗಲೂರಾತ್ರಿ ಚಿಂತಿಸುತ್ತಿದ್ದವರು ಅಧ್ಯಕ್ಷರಾದ ಕರ್ಪೂರರು. ಪರಿಷತ್ತಿನ ಹಳೆಯ ಕಟ್ಟಡದ ಶಂಕುಸ್ಥಾಪನೆ ಅವರಿಂದಲೇ ಆಗಿದೆ.   ಕರ್ಪೂರ ಶ್ರೀನಿವಾಸರಾಯರ ಅಧಿಕಾರಾವಧಿಯಲ್ಲಿ ನಡೆದ ಮತ್ತೊಂದು ಪ್ರಮುಖ ಕೆಲಸ  ಹಳಗನ್ನಡ ಗ್ರಂಥಗಳ ಸಂಪಾದನೆ.

ಇವರು ಪಂಪನ ವಿಕ್ರಮಾರ್ಜುನ ವಿಜಯವನ್ನು ತಾಳೆಗರಿಗಳ ಆಧಾರದಲ್ಲಿ ಸಂಶೋಧಿಸಿ ಪ್ರಕಟಿಸಿದರು. ಪಂಪಭಾರತ, ಪಂಪ ರಾಮಾಯಣಗಳನ್ನು ವಿದ್ಯಾ ಇಲಾಖೆಗಾಗಿ ಸಿದ್ಧಪಡಿಸಿದರು. ಇವರ ಅವಧಿಯಲ್ಲಿ ಪಂಪರಾಮಾಯಣ, ಸೋಮೇಶ್ವರ ಶತಕ, ಶಬ್ದಮಣಿದರ್ಪಣ, ಚಾವುಂಡರಾಯ ಪುರಾಣ, ಷಟ್ಪದಿ ಕಾವ್ಯಗಳ ನಿಘಂಟು, ಜ್ಯೋತಿರ್ವಿನೋದಿನಿ ಮುಂತಾದ ಗ್ರಂಥಗಳು  ಸಂಶೋಧಿತವಾಗಿ ಪ್ರಕಟಗೊಂಡವು.

ಕರ್ಪೂರರ ಅವಧಿಯಲ್ಲಿ ಬಹುಕಾಲ ಕಾರ್ಯದರ್ಶಿಗಳೂ, ೬ವರ್ಷಗಳ ಕಾಲ ಕೋಶಾಧಿಕಾರಿಗಳೂ ಆದವರು ಬೆಳ್ಳಾವೆ ವೆಂಕಟನಾರಣಪ್ಪನವರು. ಅವರ ದುಡಿಮೆ ಎಷ್ಟಿತ್ತು ಎಂದರೆ ಡಿ.ವಿ.ಜಿ. ಹೇಳುವಂತೆ ಬೆಳ್ಳಾವೆ ವೆಂಕಟ ನಾರಣಪ್ಪ ಎಂದರೆ ಪರಿಷತ್ತು ಎಂಬಷ್ಟರಮಟ್ಟಿಗೆ ಅವರು ದುಡಿಯುತ್ತಿದ್ದರು. ಇಂಥ ನಿಸ್ವಾರ್ಥ ಸೇವಕರ ಕಾಲ ಕರ್ಪೂರ ಶ್ರೀನಿವಾಸರಾಯರ ಅಧಿಕಾರಾವಧಿ ಆಗಿತ್ತು.

ಸಮ್ಮೇಳನಗಳು: ಕರ್ಪೂರ ಶ್ರೀನಿವಾಸರಾಯರು ಉಪಾಧ್ಯಕ್ಷರಾಗಿ ೧೯೨0ರಿಂದ ೧೯೩೩ರವರೆಗೆ ೧೩ವರ್ಷಗಳ ಕಾಲ ಪರಿಷತ್ತನ್ನು ಮುನ್ನಡೆಸಿದರು. ಅವರ ಕಾಲದಲ್ಲಿ ಅಧ್ಯಕ್ಷರಾಗಿ ಎಂ. ಕಾಂತರಾಜ ಅರಸು (೧೯೨0-೧೯೨೩) ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಪ್ರೋತ್ಸಾಹಕರಾಗಿ ಹಾಗೂ ನಂತರ ಪರಿಷತ್ತಿನ ಅಧ್ಯಕ್ಷರಾಗಿ ಇದ್ದರು. ೬ನೇ ಸಮ್ಮೇಳನದಿಂದ ೧೮ನೇ ಸಮ್ಮೇಳನದವರೆಗೆ ೧೩ ಸಮ್ಮೇಳನಗಳನ್ನು ನಡೆಸಿದರು. ಇದುವರೆಗೆ ಯಾವ ಪರಿಷತ್ತಿನ ಅಧ್ಯಕ್ಷರೂ ತಮ್ಮ ಅಧಿಕಾರಾವಧಿಯಲ್ಲಿ ಇಷ್ಟೊಂದು ಸಮ್ಮೇಳನಗಳನ್ನು ನಡೆಸಿಲ್ಲ.

ಡಿ. ವಿ. ಗುಂಡಪ್ಪ 

ವಿದ್ವಾಂಸರು, ಪತ್ರಿಕಾಸಂಪಾದಕರು, ಸಾಹಿತ್ಯ ವಿದ್ವಾಂಸರ ನಿಕಟ ಪರಿಚಯವಿದ್ದ ಡಿ.ವಿ. ಗುಂಡಪ್ಪನವರು ೧೯೩೩ರಲ್ಲಿ  ಪರಿಷತ್ತಿಗೆ ಉಪಾಧ್ಯಕ್ಷರಾಗಿ ಬಂದ ಮೇಲೇ ಪರಿಷತ್ತಿಗೆ ನವದೆಸೆ ಉಂಟಾಯಿತು. ಪರಿಷತ್ತಿಗೆ ಭವ್ಯವಾದ ಶ್ರೀಕೃಷ್ಣರಾಜಪರಿಷ್ಮನಂದಿರ ಕಟ್ಟಡ ನೆಲೆಯಾಗಿ ಸಿಕ್ಕಿತು. ಪರಿಷತ್ತಿನ ಕಾರ್ಯಾಲಯವನ್ನು ಸುವ್ಯವಸ್ಥೆಗೊಳಿಸಿದರು. ಪ್ರತಿವಾರವೂ ಪರಿಷತ್ತಿನಲ್ಲಿ ಸಾರ್ವಜನಿಕವಾಗಿ ಭಾಷಣ, ಕಾವ್ಯವಾಚನ ಇತ್ಯಾದಿ ನಡೆಯತೊಡಗಿತು.
ಪರಿಷತ್ತು ಜನಪ್ರಿಯವಾಗಲು ಹೆಚ್ಚು ಹೆಚ್ಚು ಜನರು ಸದಸ್ಯರಾಗಬೇಕು ಎಂಬುದು ಡಿವಿಜಿ ಅವರ ಆಶಯವಾಗಿತ್ತು. ಅದಕ್ಕಾಗಿ ಸದಸ್ಯರ ಸಂಖ್ಯೆ ಹೆಚ್ಚಿಸಿದರು.

ಸಂಸ್ಥೆಯ ನಿಬಂಧನೆ ಎಂಬುದು ಸಂಸ್ಥೆಗೆ ದಿಕ್ಸೂಚಿ – ಅಂಕುಶವಿದ್ದಂತೆ. ಅದು ಸಕಾಲಿಕವಾಗಿರಬೇಕು, ಸಮರ್ಪಕವಾಗಿರಬೇಕು, ಮತ್ತು ಸಮಗ್ರವಾಗಿರಬೇಕು ಎಂದು ಅದುವರೆಗೆ ಹಲವಾರು ವಾರ್ಷಿಕಾಧಿವೇಶನಗಳಲ್ಲ್ಲಿ ಆಗಿದ್ದ ನಿಬಂಧನೆಯ ತಿದ್ದುಪಡಿಗಳನ್ನೆಲ್ಲ ಸೇರ್ಪಡೆ ಮಾಡಿ ಒಂದೂಗೂಡಿಸಿ ನಿಬಂಧನಾವಳಿಯನ್ನು ಪ್ರಕಟಿಸಿದರು.

ಕನ್ನಡ ಕಾವ್ಯಗಳು ಜನರಲ್ಲಿ ಪ್ರಚಾರವಾಗಬೇಕಾದರೆ ಗಮಕ ಕಲೆಯೊಂದೇ ದಾರಿ. ಗಮಕವಾಚನದಿಂದಲೇ ಹಳಗನ್ನಡ ನಡುಗನ್ನಡ ಕಾವ್ಯಗಳು ಜನಕ್ಕೆ ತಲುಪಲು ಸಾಧ್ಯ. ಗ್ರಂಥಗಳ ಮೂಲಕ ಜನಸಾಮಾನ್ಯರಿಗೆ ಕಾವ್ಯ ತಲುಪುವುದಿಲ್ಲ. ಕಾವ್ಯ ದೊರೆತರೂ ಜನಸಾಮಾನ್ಯರೂ ಅರ್ಥೈಸಿಕೊಳ್ಳಲಾರರು, ಆನಂದಿಸಲಾರರು. ಗಮಕವಾಚನ ವ್ಯಾಖ್ಯಾನ ಕಾರ್ಯಕ್ರಮದಿಂದ ಅದು ಸಾಧ್ಯ ಎಂದು ನಂಬಿದ್ದರು. ಡಿ.ವಿ.ಜಿ. ಅದಕ್ಕಾಗಿ ಪರಿಷತ್ತಿನಲ್ಲಿ ಗಮಕ ತರಗತಿಗಳನ್ನು ಪ್ರಾರಂಭಿಸಿದರು. ಗಮಕಿಗಳು ತಯಾರಾಗತೊಡಗಿದರು. ಈ ತರಗತಿಗಳಿಂದ ಉತ್ತೀರ್ಣರಾಗಿ ಬಂದವರಲ್ಲಿ ನಾಡಿನ ಪ್ರಸಿದ್ದ ಗಮಕ ಕಲಾವಿರಾದ ಶಕುಂತಲಾ ಬಾಯಿ, ಬಿಂದೂರಾವ್ ಅವರೂ ಸೇರಿದ್ದಾರೆ.  ಅನೇಕ ಪ್ರಖ್ಯಾತ ಗಮಕಿಗಳು ಬಿಂದೂರಾಯರ ಶಿಷ್ಯರು ಎಂಬುದು ಗಮನಾರ್ಹ ಸಂಗತಿಯಾಗಿದೆ.

ಕಚೇರಿ ವ್ಯವಸ್ಥೆ: ಪರಿಷತ್ತಿನ ಕಾರ್ಯಾಲಯವನ್ನು ಪುನರ್‍ಘಟಿಸಿ ವ್ಯವಸ್ಥಿತಗೊಳಿಸಿದರು. ಸಮಯ ಪಾಲನೆ, ವೇಷಭೂಷಣಗಳಲ್ಲಿ ಶಿಸ್ತನ್ನು ತಂದರು. ಒಮ್ಮೆ ಪರಿಷತ್ತಿನ ಸಿಬ್ಬಂದಿಯಲ್ಲಿದ್ದ ಪ್ರಸಿದ್ಧ ನಾಟಕಕಾರ ಕೈವಾರ ರಾಜಾರಾವ್ ಕಚ್ಚೆಪಂಚೆ ಉಡದೆ ದಟ್ಟಿಪಂಚೆಯನ್ನು ಉಟ್ಟು ಬಂದಾಗ, ಅವರನ್ನು ಒಳಕೋಣೆಗೆ ಕರೆದು ಕಚ್ಚೆ ಹಾಕಿಸಿ ಕಳಿಸಿದ್ದರು. ಕಚೇರಿಯಲ್ಲಿ ಕೆಲಸ ಮಾಡುವವರು ವೇಷಭೂಷಣಗಳ ಕಡೆ ನಿಗಾ ಕೊಡಬೇಕು ಎಂದರು.

ವಾರದ ಕಾರ್ಯಕ್ರಮ: ಪ್ರತಿವಾರವೂ ಸಾರ್ವಜನಿಕ ಕಾರ್ಯಕ್ರಮವಾಗಿ ಉಪನ್ಯಾಸ, ಕಾವ್ಯವಾಚನಗಳ ಕಾರ್ಯಕ್ರಮಗಳನ್ನು  ಇಟ್ಟುಕೊಂಡಿದ್ದಕ್ಕೆ ಪರಿಷತ್ತಿಗೆ ಬರುವ ಜನರು ಹೆಚ್ಚಾದರು. ಪರಿಣಾಮವಾಗಿ ಸದಸ್ಯರ ಸಂಖ್ಯೆ ಅಧಿಕವಾಯಿತು.

ಗ್ರಂಥ ಪ್ರದರ್ಶನ: ವಸಂತೋತ್ಸವ ಕಾರ್ಯಕ್ರಮವನ್ನು ಬೇಸಿಗೆ ಕಾಲದಲ್ಲಿ ನಡೆಸುವ ಪದ್ಧತಿಯನ್ನು ಜಾರಿಗೆ ತಂದಾಗ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ನವೀನ ಉಪನ್ಯಾಸಗಳ ಜತೆಗೆ ಮನರಂಜನಾ ಕಾರ್ಯಕ್ರಮಗಳನ್ನೂ ಏರ್ಪಡಿಸುತ್ತಿದ್ದರು. ಮನೋವಿಲಾಸದ ಈ ಕಾರ್ಯಕ್ರಮದಲ್ಲೇ ಮನೋವಿಕಾಸದ ಅಂಗವಾಗಿ ಕನ್ನಡ ಗ್ರಂಥ ಪ್ರದರ್ಶನ ಏರ್ಪಾಟಾಯಿತು. ೧೯೩೪ರಲ್ಲಿ ಒಂದು ವಾರ ನಡೆದ ಗ್ರಂಥ ಪ್ರದರ್ಶನದಲ್ಲಿ ೨೪೩೨ ಕನ್ನಡ ಗ್ರಂಥಗಳ ಪ್ರದರ್ಶನವೆಂದರೆ ಆ ಕಾಲಕ್ಕೆ ಅದು ದೊಡ್ಡ ಗ್ರಂಥಪ್ರದರ್ಶನವೇ ಸರಿ. ಪರಿಷತ್ತಿನ ಎದುರಿಗಿರುವ ಸಂಸ್ಕೃತ ಕಾಲೇಜಿನಲ್ಲಿ ಏರ್ಪಾಟಾಗಿತ್ತು. ಜನರಿಗೆ ವಿನೂತನ ಅನುಭವವನ್ನು ಆ ಪ್ರದರ್ಶನ ಒದಗಿಸಿತು.
ವಸಂತೋತ್ಸವ: ಸಮಕಾಲೀನ ಜಗತ್ತಿನಲ್ಲಿ ಸಾಹಿತ್ಯ, ವಿಜ್ಞಾನ ಕಲೆಗಳ ಕ್ಷೇತ್ರಗಳಲ್ಲಿ ಆಗಿರುವ ಹೊಸಬೆಳವಣಿಗೆಗಳು ಜನಕ್ಕೆ ತಿಳಿಯಬೇಕೆಂದು ವಸಂತೋತ್ಸವವೆಂಬ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿದರು. ನಾಟಕ, ನೃತ್ಯ ಸಂಗೀತಗಳ ಮನರಂಜನೆ ಕಾರ್ಯಕ್ರಮಗಳು ಇದರ ಜತೆ ಇದ್ದುದರಿಂದ ಜನರು ಆಕರ್ಷಿತರಾದರು.

ನಗರದಲ್ಲಿ ನಡೆದ ವಸಂತೋತ್ಸವ ಜನಪ್ರಿಯವಾಗಿ ಗ್ರಾಮಾಂತರ ಪ್ರದೇಶಗಳಲ್ಲೂ ನಡೆಸಲು ಒತ್ತಡ ಬಂದಿತು. ಅನವಟ್ಟಿ, ಗದಗ, ಕೊಳ್ಳೆಗಾಲ, ಹುಬ್ಬಳ್ಳಿ, ಶಿರಾಳಕೊಪ್ಪ ಮೊದಲಾದ ಕಡೆಗಳಲ್ಲಿ ವಸಂತೋತ್ಸವಗಳು ನಡೆದವು. ಅಲ್ಲೆಲ್ಲಾ ಪರಿಷತ್ತನ್ನು ಪರಿಚಯಿಸುವ ಕಾರ್ಯಕ್ರಮಗಳು ಏರ್ಪಟ್ಟವು. ಅಲ್ಲಿಯೂ ಗ್ರಂಥ ಪ್ರದರ್ಶನಗಳು ನಡೆದವು.

ಪರಿಷತ್ಪತ್ರಿಕೆ ವಿದ್ವತ್‍ಪತ್ರಿಕೆಯಾಗಿ ಪ್ರಕಟವಾಗಲು ಒಂದು ವ್ಯವಸ್ಥೆ ಮಾಡಬೇಕೆಂದು ಇಡೀ ಕರ್ನಾಟಕಕ್ಕೆ ಪ್ರಾತಿನಿಧ್ಯವಿರುವಂತೆ ೧೫ ಜನರ ಸಂಪಾದಕ ಮಂಡಲಿಯನ್ನು ಏರ್ಪಡಿಸಿದರು.

ಸಾಹಿತ್ಯ ಪರಿಷತ್ತಿನ ಕಾರ್ಯಗಳು ಮತ್ತು ಸಾಹಿತ್ಯ ಪರಿಚಯಗಳು ನಾಡಿನ ಮೂಲೆಮೂಲೆಗಳಲ್ಲಿ ಹಳ್ಳಿಹಳ್ಳಿಗೂ ಹಬ್ಬಬೇಕು ಎಂದು ಡಿವಿಜಿ ಅವರು ಒಂದು ಯೋಜನೆಯನ್ನು ರೂಪಿಸಿದರು. ಅದೇ “ಸಂಚಾರೋಪನ್ಯಾಸ ಯೋಜನೆ”. ಹೀಗೆ ಹತ್ತು ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಷತ್ತಿನ ವ್ಯಾಪಕತೆಯನ್ನೂ ಪ್ರಭಾವವನ್ನೂ ಹೇಗೆ ಬೆಳೆಸಬಹುದು ಎಂಬುದನ್ನು ಡಿ. ವಿ. ಗುಂಡಪ್ಪನವರು ತೋರಿಸಿಕೊಟ್ಟರು.

ಕನ್ನಡದ ಕೆಲಸವನ್ನು ಎಲ್ಲರೂ ಸೇರಿ ಒಟ್ಟೊಟ್ಟಾಗಿ ಮಾಡಬೇಕು. ಆಗ ಸಾರ್ಥಕ ಸೇವೆ ಸಾಧ್ಯ. ಹೆಚ್ಚು ಜನರನ್ನು ಕಾರ್ಯಕ್ರಮಗಳು ತಲುಪುತ್ತವೆ ಎಂಬ ಹಿನ್ನೆಲೆಯಲ್ಲಿ ಕನ್ನಡಕ್ಕಾಗಿ ಶ್ರಮಿಸುತ್ತಿದ್ದ ಹಲವು ಹತ್ತು ಸಂಸ್ಥೆಗಳನ್ನು ಒಗ್ಗೂಡಿಸಿ, ಅಖಿಲ ಕರ್ಣಾಟಕ ಸಂಘಗಳ ಸಮ್ಮೇಳನವನ್ನು ಸಂಘಟಿಸಿದರು.

ಕರ್ನಾಟಕ ಸಂಘಗಳ ಸಮ್ಮೇಳನ: ಕರ್ಣಾಟಕ ಸಂಘ ಮೊದಲು ಪ್ರಾರಂಭವಾದುದು ಸೆಂಟ್ರಲ್ ಕಾಲೇಜಿನಲ್ಲಿ ಎ.ಆರ್.ಕೃ. ಅವರು ಅದರ ಪ್ರಾರಂಭಕರ್ತರು. ಅನಂತರ ನಾಡಿನ ನಾನಾ ಕಡೆ ಕರ್ನಾಟಕ ಸಂಘಗಳು ಹುಟ್ಟಿಕೊಂಡವು. ಆಗ ಕನ್ನಡಕ್ಕಾಗಿ ದುಡಿಯುವ ಸಂಘ ಸಂಸ್ಥೆಗಳನ್ನು ಸೇರಿಸಿ ಡಿವಿಜಿ ಅವರು ಅಖಿಲ ಕರ್ಣಾಟಕ ಸಂಘಗಳ ಸಮ್ಮೇಳನ ಏರ್ಪಡಿಸಿದರು. ಇದರಿಂದ ಯುವ ಸಂಘಟನೆಯನ್ನು ವ್ಯವಸ್ಥಿತವಾಗಿ ಮಾಡಲು ಸಾಧ್ಯವಾಯಿತು. ಸಂಘ ಸಂಸ್ಥೆಗಳನ್ನು ಅಂಗಸಂಸ್ಥೆಗಳ ಸದಸ್ಯತ್ವವನ್ನು ಕುರಿತಂತೆ ಪರಿಷತ್ತು ತನ್ನ ನಿಬಂಧನೆಯಲ್ಲಿ ಸೇರ್ಪಡೆ ಮಾಡಿತ್ತು.

೧೯೩೪ರಲ್ಲಿ ಕನ್ನಡ ಸಂಘಗಳ ಸಮ್ಮೇಳನ ನಡೆದ ಮೇಲೆ ಡಿವಿಜಿ ಅವರು ಆ ಬಗ್ಗೆ ವಿಶೇಷ ಕಾಳಜಿವಹಿಸಿದರು. ೧೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿಯಲ್ಲಿ ನಡೆದಾಗ ಸಮ್ಮೇಳನದ ಅಧ್ಯಕ್ಷರಾದ ಡಿವಿಜಿ ಅವರು ಸ್ವಾಗತ ಸಮಿತಿಯವರಿಂದ ತಮಗೆ ಬರಬೇಕಾದ ಹಣವನ್ನು ಮತ್ತು ಪರಿಷತ್ತಿಗೆ ಬರಬೇಕಾದ ಹಣವನ್ನು ಕೊಡಗಿನ ಕರ್ನಾಟಕ ಸಂಘದ ಸ್ಥಾಪನೆಗೆ ನೀಡಿದರು. ಹೀಗೆ ಸ್ಥಾಪಿತವಾದ ಕರ್ಣಾಟಕ ಸಂಘಗಳು ಸಾಕಷ್ಟು ಕೆಲಸ ಮಾಡಿವೆ. ಶಿವಮೊಗ್ಗ ಕರ್ನಾಟಕ ಸಂಘ ೨೭ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವ್ಯವಸ್ಥೆ ಮಾಡಿದರೆ ಮೈಸೂರು ಮಹಾರಾಜ ಕಾಲೇಜ್  ಸಂಘ ೧೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನಡೆದಾಗ ವ್ಯವಸ್ಥೆಯ ಭಾರವನ್ನೆಲ್ಲ ಹೊತ್ತಿಕೊಂಡಿತ್ತು. ಬಿಎಂಶ್ರೀ ಮತ್ತು ಮಾಸ್ತಿ ಅವರು ಕರ್ನಾಟಕವನ್ನೆಲ್ಲ ಸುತ್ತುವಾಗ ಕರ್ಣಾಟಕ ಸಂಘಗಳನ್ನು ಸಾಧ್ಯವಿದ್ದೆಡೆಗಳಲ್ಲಿ ಸ್ಥಾಪಿಸಲು ಪ್ರಯತ್ನಿಸಿದರು. ಈ ಪ್ರಯತ್ನಗಳ ಫಲವಾಗಿ ೧೯೫೬ರಲ್ಲಿ ಪರಿಷತ್ತಿನ ಅಂಗಸಂಸ್ಥೆಗಳ ಸಂಖ್ಯೆ ೧0 ಇದ್ದುದ್ದು ೫0ಕ್ಕೆ ಏರಿತು. ಕೆಲವು ಕಡೆ ಕರ್ನಾಟಕ ಸಂಘಗಳಿಗೆ ಅಂಗಸಂಸ್ಥೆಗಳಿದ್ದವು. ೧೯೪೫ರಲ್ಲಿ ಸ್ಥಾಪಿತವಾದ ಹೈದರಾಬಾದಿನ ಕರ್ನಾಟಕದ ಸಾಹಿತ್ಯ ಪರಿಷತ್ತಿಗೆ ಹಲವಾರು ಅಂಗ ಸಂಸ್ಥೆಗಳಿದ್ದವು. ಕರ್ನಾಟಕ ಸಂಘಗಳು ಸ್ಥಾಪನೆಗೊಂಡು ಪ್ರವರ್ಧಮಾನಕ್ಕೆ ಬಂದಿದ್ದರಿಂದ ಜನರಲ್ಲಿ ಕನ್ನಡ ಜಾಗೃತಿ ಹೆಚ್ಚಲು ಸಾಧ್ಯವಾಯಿತು. ಪರಿಷತ್ತಿನ ಕೆಲಸವನ್ನು ಈ ಸಂಸ್ಥೆಗಳು ಮಾಡಿದವು.

ಹತ್ತು ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಷತ್ತಿನ ವ್ಯಾಪಕತೆಯನ್ನು ಪ್ರಭಾವವನ್ನು ಹೇಗೆ ಬೆಳೆಸಬಹುದೆಂಬುದನ್ನು  ಡಿವಿಜಿ ತೋರಿಸಿಕೊಟ್ಟರು.ಸಮ್ಮೇಳನಗಳು: ಡಿವಿಜಿ ಅವರು ಉಪಾಧ್ಯಕ್ಷರಾಗಿದ್ದ ಕಾಲದಲ್ಲಿ ನಾಲ್ಕು ಸಮ್ಮೇಳನಗಳು ನಡೆದವು.

ಬಿ. ಎಂ. ಶ್ರೀಕಂಠಯ್ಯ 

ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಲ್ಲಿ ಹೊಸಶಕೆಯನ್ನು ಡಿ.ವಿ.ಜಿ ಪ್ರಾರಂಭಿಸಿದರು.  ಅನಂತರ ಬಿ.ಎಂ.ಶ್ರೀ ಅವರು ನವಚೈತನ್ಯದ ನವೀನ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಪ್ರಾರಂಭಿಸಿದರು.  ಡಿ.ವಿ.ಜಿ. ಅವರು ಇದ್ದ ಕಡೆಯೇ ಬೆಂಗಳೂರಿನಲ್ಲಿ ಪರಿಷತ್ತನ್ನು ಪ್ರಬಲಗೊಳಿಸಿದರು. ಪರಿಷತ್ತಿಗೆ ಹೊಸಕಳೆ ತಂದರು.  ಬಿ.ಎಂ.ಶ್ರೀ ಅವರು ನಾಡಿನಾದ್ಯಂತ ಸಂಚರಿಸಿ ತಮ್ಮ ಅಸಾಧಾರಣ ಪಾಂಡಿತ್ಯ, ಅಮೋಘ ಕಂಠ, ಅದ್ಭುತ ವಾಗ್ವೈಖರಿಗಳಿಂದ ಕನ್ನಡನಾಡಿನ ಜನರನ್ನು ಹುರಿದುಂಬಿಸಿ ಜಾಗೃತಗೊಳಿಸಿದರು. ಆ ಮೂಲಕ ಪರಿಷತ್ತನ್ನು ಜನಮಾನಸದಲ್ಲಿ ಉಳಿಯುವಂತೆ  ಮಾಡಿದರು.  ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಕನ್ನಡ ಜನತೆಯಲ್ಲಿ ಆಸಕ್ತಿ ಅಭಿಮಾನ ಮೂಡುವಂತೆ ಮಾಡಿದವರಲ್ಲಿ ಬಿಎಂಶ್ರೀ ಅಗ್ರಗಣ್ಯರು. ಮೂಲೆಯೊಂದರಲ್ಲಿ ವಿದ್ವಜ್ಜನರ ಮಂಡಳಿಗೆ ಸೀಮಿತವಾದ ಸಂಸ್ಥೆಯನ್ನು ಜನತಾ ಸಂಸ್ಥೆಯಾಗಲು ಶ್ರಮಿಸಿದರು.
ಪರಿಷತ್ತಿನ ಬಗ್ಗೆ ನಿರ್ದಿಷ್ಟ ಗುರಿಗಳನ್ನು ಇಟ್ಟುಕೊಂಡು ಬಿಎಂಶ್ರೀ ಕೆಲಸ ಮಾಡಿದರು. ಅವರು ತಿಳಿಸಿದ ಪರಿಷತ್ತಿನ ಗುರಿಗಳು ಹೀಗಿವೆ:
 ಕನ್ನಡವನ್ನು ಬೆಳೆಸಿ, ಕನ್ನಡ ನಾಡಿನಲ್ಲೆಲ್ಲಾ ಒಂದು ರೂಪಕ್ಕೆ ತಂದು, ಅದರ ಮೂಲಕ ಕನ್ನಡಿಗರನ್ನೆಲ್ಲಾ ಒಂದು ಗೂಡಿಸುವುದು.
 ಈ ಹೊಸಕಾಲದಲ್ಲಿ ಕನ್ನಡಿಗರಿಗೆ ಬೇಕಾದ ತಿಳಿವಳಿಕೆಯನ್ನೆಲ್ಲಾ ಕೊಟ್ಟು ಅದರ ಮೂಲಕ ಕನ್ನಡಿಗರನ್ನೆಲ್ಲಾ ಒಂದುಗೂಡಿಸುವುದು.
 ಹಳೆಯ ಸಾಹಿತ್ಯ ಪ್ರಚಾರ, ಹೊಸ ಸಾಹಿತ್ಯದ ಪೋಷಣೆ, ವ್ಯಾಸಂಗ ಗೋಷ್ಠಿ, ಪರೀಕ್ಷೆ, ವಿಮರ್ಶೆ, ಪರಿಶೋಧನೆ.
 ಸಮ್ಮೇಳನ, ವಸಂತೋತ್ಸವ, ಉಪನ್ಯಾಸ, ನಾಟಕ, ಗಮಕ ಕಲೆ ಜನ ಸಂಸ್ಕೃತಿ, ವಿನೋದ, ಸ್ಪರ್ಧೆ, ಮಕ್ಕಳ ನಲಿವು, ಕನ್ನಡ ಸಂಘಗಳ ಒಕ್ಕೂಟ, ಮತ್ತು ಕೈವಾಡದಿಂದ ಊರೂರು ಹಳ್ಳಿಹಳ್ಳಿಗಳಲ್ಲಿ ಬೆಳಕು, ಹುರುಪು, ಹೊಸಬಾಳು, ಹಬ್ಬ ಇತ್ಯಾದಿ.
 ಒಂದು ಮಾತಿನಲ್ಲಿ ಕನ್ನಡಿಗರ ಪುನರುಜ್ಜೀವನ ಒಟ್ಟಿನಲ್ಲಿ ಪರಿಷತ್ತು ಕನ್ನಡಿಗರ ಸಾರ್ವಜನಿಕ ವಿದ್ಯಾಪೀಠ
ಹೀಗೆ ನಿರ್ದಿಷ್ಟ ಗುರಿಯಲ್ಲಿ ಪರಿಷತ್ತಿನ ಕೆಲಸವನ್ನು ಬಿಎಂಶ್ರೀ ಪ್ರಾರಂಭಿಸಿದರು. ಪ್ರಾರಂಭದಿಂದಲೂ ಪರಿಷತ್ತಿನ ಒಳಗನ್ನು ಹೊರಗನ್ನು ಚೆನ್ನಾಗಿ ಬಲ್ಲವರಾಗಿದ್ದರು ಬಿಎಂಶ್ರೀ.

ಅಚ್ಚುಕೂಟ ಸ್ಥಾಪನೆ: ಪರಿಷತ್ತಿನ ಪ್ರಕಟಣೆಗಳಲ್ಲದೆ, ನುಡಿ, ಪರಿಷತ್ಪತ್ರಿಕೆಗಳನ್ನು ಪರಿಷತ್ತಿನಿಂದ ಹೊರಗೆ ಅಚ್ಚಿಗೆ ಕೊಡುತ್ತಿದ್ದುದರಿಂದ ಕಾರ್ಯವಿಳಂಬದ ಜತೆಗೆ ಅಚ್ಚಿನ ವೆಚ್ಚ ಅಧಿಕವಾಗುತ್ತಿತ್ತು ಹೀಗಾಗಿ ಪರಿಷತ್ತಿಗೇ ಒಂದು ಸ್ವಂತ ಅಚ್ಚುಕೂಟ ಆವಶ್ಯಕತೆ ಇದೆ ಎಂಬುದನ್ನು ಬಿಎಂಶ್ರೀ ಮನಗಂಡರು. ಈ ಬಗ್ಗೆ ಕಾರ್ಯಕಾರಿ ಸಮಿತಿ ಚರ್ಚಿಸಿ ನಿರ್ಧಾರ ತೆಗೆದುಕೊಂಡ ನಂತರ ೬೫00 ರೂ ಅಂದಾಜು ವೆಚ್ಚದಲ್ಲಿ ಅಚ್ಚುಕೂಟವನ್ನು ಪ್ರಾರಂಭಿಸಲಾಯಿತು. ಆರಂಭದ ಬಂಡವಾಳಕ್ಕೆ ಬಿಎಂಶ್ರೀ ಅವರೇ ೫000ರೂ ಗಳನ್ನು ಮತ್ತೆ ಮರುವರ್ಷ ೧000ರೂಗಳನ್ನು ಕೊಟ್ಟರು. ಒಂದು ಕಾಲದಲ್ಲಿ ಅತಿಥಿ ಕೊಠಡಿಯಾಗಿದ್ದ ಭಾಗದಲ್ಲಿ ಮುದ್ರಣಾಲಯದ ಸ್ಥಾಪನೆ ಆಯಿತು. 

ಹೊಸ ಕಲ್ಪನೆಗಳು ಸೃಜನಕವಿಗಳಾದ ಬಿ.ಎಂ.ಶ್ರೀ ಅವರಲ್ಲಿ ಧಾರಾಳವಾಗಿದ್ದವು.  ಕನ್ನಡ  ಸಾಹಿತ್ಯ ಪರಿಷತ್ತಿಗೆ ಒಂದು ಲಾಂಛನ ಇರಬೇಕು. ಒಂದು ಧ್ಯೇಯವಾಕ್ಯ ಇರಬೇಕು ಎಂಬ ಉದ್ದೇಶದಿಂದ ಕಲಾವಿದ ಇನಾಮತಿ ಅವರಿಂದ ಪರಿಷತ್ತಿನ ಲಾಂಛನವೊಂದನ್ನು ಮಾಡಿಸಿದರು. ಅದರಲ್ಲೂ ‘ಸಿರಿಗನ್ನಡಂಗೆಲ್ಗೆ’ಯನ್ನು  ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರಾದ ರಾ.ಹ. ದೇಶಪಾಂಡೆಯವರು  ವಿಶೇಷವಾಗಿ ಬಳಸಿದರು. ಪರಿಷತ್ತು, ಬಿ.ಎಂ.ಶ್ರೀ ಹಾಗೂ ಇತರರು ಇದಕ್ಕೆ ವ್ಯಾಪಕ ಪ್ರಚಾರವನ್ನು ನೀಡಿದರು ಹಾಗಾಗಿ ಎಲ್ಲ ಕಡೆ ಇದು ಪ್ರಚಾರಕ್ಕೆ ಬಂದಿತು.

ಮಹಿಳಾ ಶಾಖೆ ಪಾರಂಭ: ಸಾಹಿತ್ಯ ಪರಿಷತ್ತು, ಸ್ಥಾಪನೆ ಆಗುವ ಕಾಲಕ್ಕೆ ತಿರುಮಲಾಂಬ ಎನ್ನುವ ಗಣ್ಯ ಲೇಖಕಿಯರು ಕನ್ನಡದಲ್ಲಿದ್ದರು. ಡಿ. ಬಿಂದೂಬಾಯಿ ಎನ್ನುವ ಉತ್ಸಾಹೀ ಲೇಖಕಿಯರಿದ್ದರು. ಆದರೆ ಅವರಿಗೆಲ್ಲ ವೇದಿಕೆ ಇರಲಿಲ್ಲ. ಅದರ ಕೊರತೆಯನ್ನು ಹೋಗಲಾಡಿಸಿದರು. ಬಿ.ಎಂ.ಶ್ರೀ ಅವರು  ಮೊದಲಬಾರಿಗೆ ೧೯೩೮ರಲ್ಲಿ ಮಹಿಳಾ ಶಾಖೆಯನ್ನು ಡಿ. ಬಿಂದೂಬಾಯಿ ಅವರ ನೇತೃತ್ವದಲ್ಲಿ, ಪರಿಷತ್ತಿನಲ್ಲಿ ಪ್ರಾರಂಭಿಸಿದರು. ಮಹಿಳಾ ಕಾರ್ಯಕ್ರಮಗಳಿಗೆ ಒಂದು ಸ್ವತಂತ್ರ ನೆಲೆಮಾಡಿಕೊಟ್ಟರು. ಡಿ. ಚಂಪಾಬಾಯಿ ಅವರು ಮೊದಲ ಕಾರ್ಯದರ್ಶಿನಿ ಆದರು. ಸಾಮಾಜಿಕ ಕಾರ್ಯಕರ್ತೆ ಆರ್. ಕಲ್ಯಾಣಮ್ಮನವರು ಸಕ್ರಿಯರಾಗಿ ಭಾಗವಹಿಸಿದರು.

ಕನ್ನಡ ಬಾವುಟ ಪ್ರಕಟಣೆ: ಪರಿಷತ್ತಿನ ವಿಶೇಷ ಕೊಡುಗೆಯಾಗಿ ಕನ್ನಡ ಬಾವುಟವೆಂಬ ಕಾವ್ಯ ಸಂಕಲನವೊಂದನ್ನು ಪರಿಶ್ರಮದಿಂದ  ಸಿದ್ಧಪಡಿಸಿದರು ಇದರ ಪ್ರಕಟಣೆಯ ಉದ್ದೇಶವನ್ನು ಹೀಗೆ ಹೇಳಿದ್ದಾರೆ :
“ಕನ್ನಡ ನಾಡು ಎಚ್ಚೆತ್ತು, ಕೂಡಿಕೊಳ್ಳುತ್ತಿರುವ ದೊಡ್ಡ ಸಡಗರದಲ್ಲಿ ಕನ್ನಡ ನಾಡಿನ ಹೆಮ್ಮೆಯನ್ನು ಹಾಡಿರುವ ಕವಿಗಳಿಂದ ಆಯ್ದ ತಿರುಳೊಂದನ್ನು ಹಂಚಬೇಕೆಂಬ ಬಯಕೆ ಬಹುಕಾಲದಿಂದ ಕಡೆದು ಕುದಿಯುತ್ತಿತ್ತು. ಕನ್ನಡ ತಾಯಿ ಪಾದದಲ್ಲಿ ಹಿಂದಿನ ಹಿರಿಯ ಕವಿಗಳು, ಈಗಿನ ಕವಿಗಳು ಒಪ್ಪಿಸಿದ ಹೂಗಳನ್ನು ಬಾಚಿ ತೆಗೆದು ೩0 ವರುಷಗಳಿಂದ ನನ್ನ ಎದೆಯಲ್ಲಿ ತುಂಬಿ ಚಿಮ್ಮುತ್ತಿದ್ದವುಗಳನ್ನು ಇಲ್ಲಿ ದಂಡೆಗಟ್ಟಿದ್ದೇನೆ…. ತಾಯಡಿಯ ಹೂವುಗಳಿವು ನಾನು ನಾರು”. ೭ನೇ ಶತಮಾನದಿಂದ ಇತ್ತೀಚಿನವರೆಗೆ ಶಾಸನಗಳು, ಪೂರ್ವಸಾಹಿತ್ಯ, ನಾಡಪದಗಳು, ಇಂದಿನ ಹೊಸ ಕವಿತೆ ಎಂಬ ನಾಲ್ಕು ತೆನೆಗಳಲ್ಲಿ ಆಯ್ದ ಕವನಗಳು ಇಲ್ಲಿವೆ. ಹತ್ತಾರು ಮರುಮುದ್ರಣಗಳಾದ ಈ ಜನಪ್ರಿಯ ಕೃತಿ, ಪರಿಷತ್ತಿನ ಹೆಮ್ಮೆಯ ಪ್ರಕಟಣೆಗಳಲ್ಲಿ ಒಂದು.

ಕನ್ನಡ ಸಾಹಿತ್ಯ ಪರೀಕ್ಷೆಗಳು: ಕನ್ನಡ ಸಾಹಿತ್ಯವನ್ನು ಶಾಲಾ ಕಾಲೇಜುಗಳಲ್ಲಿ ಓದಲಾಗದವರಿಗಾಗಿ ಅಕ್ಷರಾಭ್ಯಾಸದಿಂದ ಹಿಡಿದು ವಿಶ್ವವಿದ್ಯಾಲಯದ ಪದವೀಮಟ್ಟದವರೆಗೆ ಕನ್ನಡ ಸಾಹಿತ್ಯವನ್ನು ತಿಳಿಯುವ ಕಲಿಯುವ ಆಸಕ್ತರಿಗಾಗಿ ೧೯೪0 ಜೂನ್‍ನಲ್ಲಿ ಕನ್ನಡ ಅಣುಗ, ಕನ್ನಡ ಕಾವ, ಕನ್ನಡ ಜಾಣ, ಎಂಬ ಪರೀಕ್ಷೆಗಳನ್ನು ಬಿಎಂಶ್ರೀ ಪ್ರಾರಂಭಿಸಿದರು. ಈ ಪರೀಕ್ಷೆಗಳು ಒಂದು ಕಾಲದಲ್ಲಿ ಎಷ್ಟು ಜನಪ್ರಿಯವಾಗಿತ್ತು ಎಂದರೆ ಮನೆಯ ಮುಂದೆ ಕನ್ನಡ ಜಾಣ ಎಂದು ಬೋರ್ಡು ಹಾಕಿಕೊಳ್ಳುತ್ತಿದ್ದರು ಮತ್ತು  ಪುಸ್ತಕಗಳಲ್ಲಿ ಹಾಗೆಂದು ಅಚ್ಚು ಮಾಡಿಸಿಕೊಳ್ಳುತ್ತಿದ್ದರು.

‘ಕನ್ನಡನುಡಿ’ ಪ್ರಾರಂಭ: ಮೊದಲು ಸಂಗ್ರಹ ಪತ್ರಿಕೆಯಾಗಿದ್ದ ಕನ್ನಡ ನುಡಿಯನ್ನು ಬಿಎಂಶ್ರೀ ಅವರು ಪ್ರತ್ಯೇಕ ಪತ್ರಿಕೆಯನ್ನಾಗಿ ಪ್ರಾರಂಭಿಸಿದರು. ೧೯೩೮ ಅಕ್ಟೋಬರ್ ೪ ವಿಜಯದಶಮಿ ದಿನದಂದು ‘ಕನ್ನಡ ನುಡಿ’ ವಾರಪತ್ರಿಕೆ ಪ್ರಾರಂಭವಾಯಿತು. ಅನಕೃ ಅವರು ಪ್ರಥಮ ಸಂಪಾದಕರಾದರು. 

ಬಿ.ಎಂ.ಶ್ರೀ ಅವರು ಉಪಾಧ್ಯಕ್ಷರಾಗಿದ್ದಾಗ ಪರಿಷತ್ತಿಗೆ ೨೫ ವರುಷ ತುಂಬಿತು. ೩0-೬-೧೯೪0ರಿಂದ ೧-೭-೧೯೪0 ರವರೆಗೆ ಬೆಂಗಳೂರು ಪುರಭವನದಲ್ಲಿ ಒಂದು ವಾರದ ಕಾಲ ವಿಜೃಂಭಣೆಯಿಂದ ಬೆಳ್ಳಿ ಹಬ್ಬದ ಕಾರ್ಯಕ್ರಮಗಳು ನಡೆದವು. ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾರಂಭವನ್ನು ಉದ್ಘಾಟಿಸಿದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ

‘ಕನ್ನಡದ ಆಸ್ತಿ’ ಎಂದೇ ಪರಿಗಣಿತರಾದ ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ (೧೯೪೩-೪೮) ಹಾಗೂ ಅಧ್ಯಕ್ಷರಾಗಿ (೧೯೫0-೬೪) ಅವಧಿಯಲ್ಲಿ ಸೇವೆ ಸಲ್ಲಿಸಿದರು.   
ಮೈಸೂರು ಸರ್ಕಾರದಿಂದ ನಿವೃತ್ತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರು (ರಾಜಾ ಲಕುಮನ ಗೌಡ ಸರದೇಸಾಯಿ ಅವರು ಅಧ್ಯಕ್ಷರಾದಾಗ)   ಪರಿಷತ್ತಿನ ಉಪಾಧ್ಯಕ್ಷರಾಗಿ ೧೯೪೩ರಲ್ಲಿ  ಬಿಎಂಶ್ರೀ ಅವರ ನಂತರ ಅಧಿಕಾರವನ್ನು ಸ್ವೀಕರಿಸಿದರು. ತಮ್ಮ ಸ್ವಂತ ವೆಚ್ಚದಿಂದಲೇ ಪ್ರವಾಸ ಮಾಡಿ ಪರಿಷತ್ತಿನ ಪ್ರಚಾರ ಮಾಡಿದರು. ಪರಿಣಾಮವಾಗಿ ಸದಸ್ಯರ ಸಂಖ್ಯೆ ಮೊದಲಬಾರಿಗೆ ೧೫00ವರೆಗೆ ಏರಿತು. ಸಾಹಿತ್ಯೋತ್ಸವ, ಗಮಕ ಪ್ರಚಾರ, ಪರೀಕ್ಷೆಗಳು ಮೊದಲಾದ ಕಾರ್ಯಕ್ರಮಗಳು ಮುಂದುವರೆದವು. ಜೊತೆಗೆ  ತಮ್ಮ ಪ್ರಭಾವದಿಂದ ಗಣ್ಯರಿಂದ ದತ್ತಿ ಪಡೆದು ದತ್ತಿಗಳನ್ನು ಹೆಚ್ಚಿಸಿದರು. 

ಗಮಕ ತರಬೇತಿಯಲ್ಲಿ ಪರಿಷತ್ತು ಪ್ರೌಢ ತರಗತಿಗಳನ್ನು ಆರಂಭಿಸಿತು. ಬೇರೆಬೇರೆ ಭಾಗಗಳಿಂದ ಆರಿಸಿದ ೬ ಜನ ಗಮಕ ಅಧ್ಯಾಪಕರನ್ನು ಆಯ್ಕೆಮಾಡಿ ತರಬೇತಿ ನೀಡಿತು. ೩ ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಲಾಯಿತು. ಹೀಗೆ ತರಬೇತಿ ಹೊಂದಿದ ಗಮಕಿಗಳು ಊರೂರಿಗೆ ಹೋಗಿ ಗಮಕ ಪ್ರಚಾರ ಮಾಡಬೇಕಾಗಿತ್ತು.

ಲೋಕೂರರು ಅಧ್ಯಕ್ಷರಾದಾಗಲೂ ಮಾಸ್ತಿ ಅವರು ಸ್ವಲ್ಪಕಾಲಕ್ಕೆ ಉಪಾಧ್ಯಕ್ಷರಾಗಿ ಮುಂದುವರೆದರು. ಕಾಸರಗೋಡು ಸಮ್ಮೇಳನದಲ್ಲಿ ತಿರುಮಲೆ ತಾತಾಚಾರ್ಯರು ಅಧ್ಯಕ್ಷರಾದಾಗ ಅವರಿಗೆ ಅಧಿಕಾರ ವಹಿಸಿಕೊಟ್ಟರು.

ಶರ್ಮರು ಅಧಿಕಾರ ಸ್ವೀಕಾರ ಮಾಡಿದ್ದು ೨೯-೧೨-೧೯೪೭ರಂದು (೬-೩-೧೯೪೯) ಅಲ್ಲಿಯವರೆಗೆ ಮಾಸ್ತಿ ಉಪಾಧ್ಯಕ್ಷರಾಗಿ ೨ನೇ ಬಾರಿಗೆ ಮುಂದುವರೆದಿದ್ದರು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳು ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಿದರು.

ಪರಿಷತ್ತಿನ ಕೆಲಸಕ್ಕಾಗಿ ಎಷ್ಟೇ ಪ್ರಯಾಣ ಕೈಗೊಳ್ಳುತ್ತಿದ್ದರೂ ಅದರ ಖರ್ಚು ವೆಚ್ಚಗಳಿಗಾಗಿ ಪರಿಷತ್ತಿನಿಂದ ಒಂದು ಕಾಸನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಹೀಗೆ ನಿಸ್ಪೃಹರಾಗಿ ಕೆಲಸ ಮಾಡಿದವರು ಮಾಸ್ತಿ.

ಉಪಾಧ್ಯಕ್ಷರಾಗಿ (೧೯೪೩-೧೯೪೭)ರಲ್ಲಿ  ಪರಿಷತ್ತಿನ ಕಾರ್ಯಕಲಾಪಗಳನ್ನು ಉಪಾಧ್ಯಕ್ಷರಾಗಿ ನಡೆಸಿದ ಮಾಸ್ತಿ ಅಧ್ಯಕ್ಷರಾಗಿ ಕಾರ್ಯಕಲಾಪಗಳನ್ನು ೮ ತಿಂಗಳು ಕಾಲ ನಡೆಸಲು ಬಂದಿದ್ದು ಆಕಸ್ಮಿಕ. ಏಕೆಂದರೆ ಅಧ್ಯಕ್ಷರಾಗಿದ್ದ ಎಂ. ಆರ್. ಶ್ರೀನಿವಾಸ ಮೂರ್ತಿ ಅವರು ಅವಧಿ ಮುಗಿಯುವ ಮೊದಲೇ ಅನಿರೀಕ್ಷಿತವಾಗಿ ದೈವಾಧೀನರಾದರು ಆಗ ಉಳಿದ ಅವಧಿಗೆ ೨ನೇ ಬಾರಿಗೆ ಮಾಸ್ತಿ ಆಯ್ಕೆಯಾದರು. ನಡುವಣ ಅವಧಿಯ ರಕ್ಷಕ ಎಂಬಂತೆ ಪರಿಷತ್ತಿನ ಚಟುವಟಿಕೆಗಳನ್ನು ನಿರ್ವಹಿಸಿದರು.
 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ