ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಲ್ಲಾದರು ಇರು ಎಂತಾದರು ಇರು




ಎಲ್ಲಾದರು ಇರು; ಎಂತಾದರು ಇರು;
ಎಂದೆಂದಿಗು ನೀ ಕನ್ನಡವಾಗಿರು.
ಕನ್ನಡ ಗೋವಿನ ಓ ಮುದ್ದಿನ  ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!

ನೀ ಮೆಟ್ಟುವ ನೆಲ ಅದೆ ಕರ್ನಾಟಕ;
ನೀನೇರುವ ಮಲೆ ಸಹ್ಯಾದ್ರಿ.
ನೀ ಮುಟ್ಟುವ ಮರ ಶ್ರೀಗಂಧದ ಮರ;
ನೀ ಕುಡಿಯುವ ನೀರ್ ಕಾವೇರಿ.

ಪಂಪನನೋದುವ ನಿನ್ನಾ ನಾಲಗೆ
ಕನ್ನಡವೇ ಸತ್ಯ.
ಕುಮಾರವ್ಯಾಸನನಾಲಿಪ ಕಿವಿಯದು
ಕನ್ನಡವೇ ನಿತ್ಯ.
ಹರಿಹರ ರಾಘವರಿಗೆ ಎರಗುವ ಮನ,
ಹಾಳಾಗಿಹ ಹಂಪೆಗೆ ಕೊರಗುವ ಮನ,
ಪೆಂಪಿನ ಬನವಾಸಿಗೆ ಕರಗುವ ಮನ;
ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ,
ಜೋಗದ ಜಲಪಾತದಿ ಧುಮುಕುವ ಮನ
ಮಲೆನಾಡಿಗೆ ಹೊಂಪುಳಿವೋಗುವ ಮನ;
ಎಲ್ಲಿದ್ದರೆ ಏನ್? ಎಂತಿದ್ದರೆ ಏನ್?
ಎಂದೆಂದಿಗು ತಾನ್-
ಕನ್ನಡವೇ ಸತ್ಯ!
ಕನ್ನಡವೇ ನಿತ್ಯ!


ಕಾಜಾಣಕೆ ಗಿಳಿ ಕೋಗಿಲೆಯಿಂಪಿಗೆ,
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ,
ಮಾವಿನ ಹೊಂಗೆಯ ತಳಿರಿನ ತಂಪಿಗೆ,
ರಸರೋಮಾಂಚನಗೊಳುವಾತನ ಮನ
ಎಲ್ಲಿದ್ದರೆ ಏನ್? ಎಂತಿದ್ದರೆ ಏನ್?
ಎಂದೆಂದಿಗು ತಾನ್-
ಕನ್ನಡವೇ ಸತ್ಯ!
ಕನ್ನಡವೇ ನಿತ್ಯ!
ಅನ್ಯವನೆಲದೆ ಮಿಥ್ಯಾ!

ಸಾಹಿತ್ಯ: ಕುವೆಂಪು

Tag: Elladaru Iru, Enthadaru Iru



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ