ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಿವಾನಂದ ಸರಸ್ವತಿ


 ಸ್ವಾಮಿ ಶಿವಾನಂದ  ಸರಸ್ವತಿ


ವೈದ್ಯರಾಗಿದ್ದ ಮಹನೀಯರೊಬ್ಬರು ತಮ್ಮೊಳಗೆ ಆಧ್ಯಾತ್ಮದ ಬೆಳಕನ್ನು ಕಂಡುಕೊಂಡು ಅದರಿಂದ ಲೋಕದ ಕತ್ತಲೆಯನ್ನೂ ಹೋಗಲಾಡಿಸಲು ನಿರತರಾದರು.  ಅವರೇ ಪೂಜ್ಯ ಸ್ವಾಮಿ ಶಿವಾನಂದ ಸರಸ್ವತಿಯವರು.

“ನಮ್ಮಲ್ಲಿರುವ ಆತ್ಮ ಇನ್ನೊಬ್ಬರಲ್ಲೂ ಇದೆ ಎಂಬುದನ್ನು ಮನಗಂಡಾಗ ನಮಗೆ ಬೇರೆಯವರನ್ನು ದ್ವೇಷಿಸಲು ಅವಕಾಶವಿರದು. ಹಾಗೇನಾದರೂ ಇತರರಿಗೆ ಕೆಟ್ಟದ್ದನ್ನು ಮಾಡಿದ್ದಲ್ಲಿ ಅದು ನಮಗೇ ಮಾಡಿಕೊಂಡಂತಾಗುತ್ತದೆ.” ಇದು ಸ್ವಾಮಿ ಶಿವಾನಂದರು ಬದುಕನ್ನು ಕಂಡುಕೊಂಡು ಬದುಕಿದ ಪರಿ.

ಸ್ವಾಮಿ  ಶಿವಾನಂದ  ಸರಸ್ವತಿ 1887ರ ಸೆಪ್ಟೆಂಬರ್ 8ರಂದು, ತಾಮ್ರಪರ್ಣಿ ನದಿ ತಟದಲ್ಲಿರುವ ಪಟ್ಟಮಾಡೈ ಎಂಬ ಸ್ಥಳದಲ್ಲಿ ಜನಿಸಿದರು. ಮಗು ಕುಪ್ಪುಸ್ವಾಮಿ ಮಾಮೂಲಿ ಮಕ್ಕಳಂತೆ ಬದುಕಲಿಲ್ಲ. ಅಮ್ಮ ಸಿಹಿ ಮಾಡಿ ಕೊಟ್ಟರೆ ಅದರ ಒಂದು ತುಣಕನ್ನೂ ಮುಟ್ಟುತ್ತಿರಲಿಲ್ಲ. ಬದಲಿಗೆ ಪಶುಪಕ್ಷಿಗಳಿಗೆ ಮತ್ತು ಜೊತೆಗಾರರಿಗೆ ನೀಡುತ್ತಿದ್ದರು. ಚಿಕ್ಕಂದಿನಲ್ಲೇ  ತ್ಯಾಗ ಮತ್ತು ಅಧ್ಯಾತ್ಮದ ಭಾವ ಅವರಲ್ಲಿ ಅಂತರ್ಗತವಾಗತೊಡಗಿತ್ತು.

ಓದಿನಲ್ಲೂ ಮುಂದಿದ್ದ ಕುಪ್ಪುಸ್ವಾಮಿ  ತಂಜಾವೂರಿನ ವೈದ್ಯಕೀಯ ಕಾಲೇಜಿಗೆ ಸೇರಿದರು. ರಜೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಗೆ ಹೊರಡುತ್ತಿದ್ದರೆ, ಕುಪ್ಪುಸ್ವಾಮಿ ಮಾತ್ರ ಕುತೂಹಲಿ. ಆಸ್ಪತ್ರೆಯಲ್ಲೇ ಕಾಲ ಕಳೆಯುತ್ತಿದ್ದರು. ಯಾರ ಅನುಮತಿಯೂ ಇಲ್ಲದೆ ಶಸ್ತ್ರಚಿಕಿತ್ಸಾ ಸ್ಥಳಕ್ಕೆ ತೆರಳುವಷ್ಟು ವರ್ಚಸ್ಸು ಬೆಳೆಸಿಕೊಂಡಿದ್ದರು. ಅಂತಿಮ ವರ್ಷದ ವಿದ್ಯಾರ್ಥಿಗಳೂ ಗಿಟ್ಟಿಸಿಕೊಳ್ಳಲಾಗದಷ್ಟು ವೈದ್ಯಕೀಯ ಜ್ಞಾನವನ್ನು ಪ್ರಥಮ ವರ್ಷದಲ್ಲೇ ದಕ್ಕಿಸಿಕೊಂಡಿದ್ದರು.

ಎಲ್ಲರಂತೆ ವೈದ್ಯರಾಗಿ ಇರಬಹುದಾಗಿದ್ದ ಡಾ. ಕುಪ್ಪುಸ್ವಾಮಿ ಅಷ್ಟಕ್ಕೇ ಸೀಮಿತರಾಗಲಿಲ್ಲ. ತಿರುಚ್ಚಿಯಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದಾಗಲೇ ಔಷಧ ಕ್ಷೇತ್ರಕ್ಕೆ ಸಂಬಂಧಿಸಿದ ಪತ್ರಿಕೆಯೊಂದನ್ನು ಹೊರತಂದರು.  ಅದನ್ನು ಆಸಕ್ತರಿಗೆ ಉಚಿತವಾಗಿ ಹಂಚುತ್ತಿದ್ದರು.

ಮಲೇಷ್ಯಾ ಪಯಣ ಅವರ ಬದುಕಿಗೆ ಮತ್ತೊಂದು ತಿರುವು ನೀಡಿತ್ತು. ಅಲ್ಲಿನ ರಬ್ಬರ್ ಎಸ್ಟೇಟ್‌ಗೆ ಸೇರಿದ ಆಸ್ಪತ್ರೆಯೊಂದರ ನಿರ್ವಾಹಕ  ವೈದ್ಯರಾದರು.  ಆಸ್ಪತ್ರೆಯ ಹೊಣೆಗಾರಿಕೆಯ ನಡುವೆಯೇ ಸಾಧು ಸಂತರು ಮತ್ತು ಭಿಕ್ಷುಕರ ಸೇವೆ ಮಾಡುತ್ತಿದ್ದರು. ಒಮ್ಮೆ  ಸಾಧುವೊಬ್ಬರು 'ಜೀವ ಬ್ರಹ್ಮ ಐಕ್ಯಂ' ಎಂಬ ಪುಸ್ತಕವನ್ನು  ನೀಡಿದರು. ಅದು ಸ್ವಾಮಿ ಸಚ್ಚಿದಾನಂದರು ಬರೆದ ಪುಸ್ತಕ. ಓದ ಓದುತ್ತಿದ್ದಂತೆ ಕುಪ್ಪೂಸ್ವಾಮಿ ತಮ್ಮನ್ನು ಮತ್ತೊಂದು ಲೋಕದಲ್ಲಿ ಕಂಡುಕೊಂಡರು. 1923ರಲ್ಲಿ ಮಲೇಷ್ಯಾದಿಂದ ಮರಳಿದ್ದೇ ಸ್ನೇಹಿತನ ಮನೆಯಲ್ಲಿ ತಮ್ಮ ಸರಕುಗಳನ್ನು ಎಸೆದು  ತೀರ್ಥಯಾತ್ರೆಗೆ ಹೊರಟರು.  ಕಾಶಿ, ಧಲಾಜ್, ಹೃಷಿಕೇಶಗಳಲ್ಲಿ ಅಲೆದಾಡಿದ ಅವರಿಗೆ, 1924ರಲ್ಲಿ ಹೃಷಿಕೇಶದ ಸ್ವಾಮಿ ವಿಶ್ವಾನಂದರ ಬಳಿ ಸನ್ಯಾಸ ದೀಕ್ಷೆ ದಕ್ಕಿತು. ಅವರಿಂದಲೇ ಸ್ವಾಮಿ ಶಿವಾನಂದ ಸರಸ್ವತಿ ಎಂಬ ಹೆಸರು ಸಂದಿತು.  ಹೀಗೆ ಸ್ವರ್ಗಾಶ್ರಮದಲ್ಲಿ ಅವರ ಅಲೌಕಿಕ ಬದುಕಿನ ಆರಂಭಗೊಂಡಿತು.

ಚೇಳುಗಳೇ ತುಂಬಿದ್ದ, ಮತ್ತೊಬ್ಬರು ಬಂದರೆ ಕುಳಿತುಕೊಳ್ಳಲು ತಾವಿಲ್ಲದ ಒಂದು ಕುಟೀರ ಅಂದಿನ ಶಿವಾನಂದರ ಧ್ಯಾನಸ್ಥಾನವಾಗಿತ್ತು.   ತಪಸ್ಸಿನ ನಡುವೆಯೂ ರೋಗಿಗಳ ಆರೈಕೆಯನ್ನು ಅವರು ನಿಲ್ಲಿಸಲಿಲ್ಲ. ಕಾಲರಾ, ಸಿಡುಬಿಗೆ ಮದ್ದು ನೀಡುತ್ತಿದ್ದರು. ತಮ್ಮಲ್ಲಿದ್ದ ಹಣದಿಂದ  ದತ್ತಿ ಚಿಕಿತ್ಸಾಲಯವೊಂದನ್ನು ತೆರೆದಿದ್ದರು.

ಯೋಗಾಭ್ಯಾಸ, ತಾಳೆಗರಿಗಳ ಪಠಣ, ಪರಿವ್ರಾಜಕರಾಗಿ  ದೇಶದ ಉದ್ದಗಲಕ್ಕೂ ಯಾನ ಹೀಗೆ ಅವರ ಬದುಕು ವಿಶಾಲ ವಿಶ್ವಕ್ಕೆ ತೆರೆದುಕೊಳ್ಳತೊಡಗಿತ್ತು. ಅರವಿಂದರ ಆಶ್ರಮ, ಮಹರ್ಷಿ ಶುದ್ಧಾನಂದ ಭಾರತಿ ಆಶ್ರಮ ಮತ್ತು ರಮಣ ಮಹರ್ಷಿಗಳ ಆಶ್ರಮಗಳನ್ನು ಸಂದರ್ಶಿಸಿದರಲ್ಲದೆ, ಕೈಲಾಸ-ಮಾನಸ ಸರೋವರ ಹಾಗೂ ಬದರಿಗಳಲ್ಲೂ ಸಂಚರಿಸಿದರು.

ಶಿವಾನಂದರು ಹುಟ್ಟುಹಾಕಿದ ಪ್ರಸಿದ್ಧ  ಸಂಘಟನೆ ‘ದಿ ಡಿವೈನ್ ಲೈಫ್ ಸೊಸೈಟಿ'. ಗಂಗೆಯ ತೀರದಲ್ಲಿದ್ದ ಅವರ ಪುಟ್ಟ ಕುಟೀರದಲ್ಲಿ ಪ್ರಾರಂಭಗೊಂಡ ಈ ಸಂಘಟನೆ, ಒಂದೇ ವರ್ಷ ಕಳೆಯುವುದರೊಳಗೆ ಭಕ್ತರು ಮತ್ತು  ಅನುಯಾಯಿಗಳ ಮಹಾಪೂರವಾಗಿ ಮುಂದೆ ವಿಶ್ವವ್ಯಾಪಿಯಾಯಿತು.

ಎರಡನೇ ಮಹಾಯುದ್ಧದ ಹಿಡಿತದಲ್ಲಿ ಜಗತ್ತು ಸಿಲುಕಿದ್ದಾಗ ಶಿವಾನಂದರು ಶಾಂತಿ ಹರಡಲು ಅಖಂಡ ಮಹಾಮಂತ್ರ ಪಠಿಸುವ ಹಾದಿ ಹಿಡಿದರು. ಅಲೋಪಥಿ ಚಿಕಿತ್ಸೆ ನೀಡುತ್ತಿದ್ದ ಅವರು ಆಯುರ್ವೇದದ ಮಹತ್ವ ಸಾರಿದ್ದು ಮತ್ತೊಂದು ಅಧ್ಯಾಯ. ಹಿಮಾಲಯದ ಗಿಡಮೂಲಿಕೆಗಳನ್ನು ಬಳಸಿ ಆಯುರ್ವೇದ ಚಿಕಿತ್ಸೆ ನೀಡತೊಡಗಿದರು. 1945ರಲ್ಲಿ ಶಿವಾನಂದ ಆಯುರ್ವೇದ ಫಾರ್ಮಸಿ ಆರಂಭವಾಯಿತು. ಅಲ್ಲದೆ ಸಾಧಕರಿಗೆ ವ್ಯವಸ್ಥಿತ ರೀತಿಯಲ್ಲಿ ಅಧ್ಯಾತ್ಮವನ್ನು ಸಾರುವ ಯೋಗ ವೇದಾಂತ ಅಕಾಡೆಮಿ ಕೂಡಾ  ಜನ್ಮತಾಳಿತು.

ಸ್ವಾಮಿ ಶಿವಾನಂದರು 1953ರಲ್ಲಿ ವಿಶ್ವ ಧಾರ್ಮಿಕ ಸಂಸತ್ತನ್ನು ಆಯೋಜಿಸಿದರು. ಶ್ರೀಲಂಕಾಗೆ ಹೋಗಿಬಂದರು.  ಸ್ವಾಮಿ ಶಿವಾನಂದರು   ಮುನ್ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದರು.   ಶಿವಾನಂದರ ಹೆಸರಿನಲ್ಲಿ ಆಸ್ಪತ್ರೆ, ನೇತ್ರ ಚಿಕಿತ್ಸೆ ಕೇಂದ್ರಗಳು ಆರಂಭವಾದವು. ಸ್ವಾಮಿ ಶಿವಾನಂದ ಅಂತರರಾಷ್ಟ್ರೀಯ ಯೋಗ ವೇದಾಂತ ಕೇಂದ್ರ 30 ಸಾವಿರಕ್ಕೂ ಹೆಚ್ಚು ಯೋಗ ಶಿಕ್ಷಕರನ್ನು ರೂಪಿಸಿದೆ. ಅವರ ಚಿಂತನೆಗಳು ಪಾಶ್ಚಾತ್ಯ ಜಗತ್ತನ್ನೂ  ಪ್ರಭಾವಿಸಿವೆ.

ಜಾತಿ ಮತ ಮೀರಿದ ಧರ್ಮವನ್ನು ಪ್ರತಿಪಾದಿಸಿದ, ಮಾನವೀಯತೆಯನ್ನು ಉಣಬಡಿಸಿದ, ರೋಗಿಗಳ ಮೂಲಕವೇ ನಾರಾಯಣನನ್ನು ಕಂಡ ಸ್ವಾಮಿ ಶಿವಾನಂದರು ವಿಶಿಷ್ಟರಾಗಿದ್ದಾರೆ. 1963ರ ಜುಲೈ 14 ಅವರು ಮಹಾಸಮಾಧಿಯಾದ ದಿನ.  

Remembrance Day of Swami Shivananda Saraswati 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ