ಕೆ. ಆರ್. ಸ್ವಾಮಿ
ಕೆ. ಆರ್. ಸ್ವಾಮಿ
ಕೆ. ಆರ್. ಸ್ವಾಮಿ ನಮ್ಮ ಕಾಲದ ಪ್ರಸಿದ್ಧ ವ್ಯಂಗ್ಯಚಿತ್ರಕಾರರು. ಸುಧಾ, ಮಯೂರ ನಿಯತಕಾಲಿಕಗಳು ನಮಗೆ ಬದುಕಿನ ದೊಡ್ಡ ಎಂಟರ್ಟೈನ್ಮೆಂಟ್ ಅನಿಸಿದ್ದ ಕಾಲದಲ್ಲಿ ಕೆ. ಆರ್. ಸ್ವಾಮಿಗಳು ಹಾಗೂ ಅಂದಿನ ಯುಗದ ಇತರ ವ್ಯಂಗ್ಯಚಿತ್ರಕಾರರು ನಮಗೆ ನೀಡಿರುವ ಸವಿಯ ನೆನಪುಗಳು ಮರೆಯಲಾರದಂತಹವು.
ಕೆ. ಆರ್. ಸ್ವಾಮಿ ಎಂದು ಪ್ರಸಿದ್ಧರಾಗಿರುವ ಕಮಕೋಡು ರಾಮಸ್ವಾಮಿ ಅವರು 1940ರ ಸೆಪ್ಟೆಂಬರ್ 28ರಂದು ಜನಿಸಿದರು. ಮಲೆನಾಡಿನ ತೀರ್ಥಹಳ್ಳಿ ಅವರ ಊರು. ತಂದೆ ಕಮಕೋಡು ನರಸಿಂಹ ಶಾಸ್ತ್ರಿಗಳು ತೀರ್ಥ ಹಳ್ಳಿ ಹೈಸ್ಕೂಲ್ನಲ್ಲಿ ಉಪಾಧ್ಯಾಯರಾಗಿದ್ದರು. ಅವರು ಕನ್ನಡ ಪಾಠವೊಂದನ್ನೇ ಹೇಳಿಕೊಡುವ ಮಾಸ್ತರು ಮಾತ್ರವೇ ಆಗಿರಲಿಲ್ಲ. ಸ್ವತಃ ಸಾಹಿತಿಗಳಾಗಿದ್ದರು. ಸಾಹಿತ್ಯಾಸಕ್ತರಿಗೆ ಮಾರ್ಗದರ್ಶಕರಾಗಿದ್ದರು. ಕೃಷಿಕರೂ ಆಗಿದ್ದರು. ಆ ಕಾಲದ ಸ್ವಾತಂತ್ರ್ಯ ಚಳುವಳಿಯ ಹೋರಾಟದಲ್ಲಿ ಭಾಗವಹಿಸುವ ಯುವಕರಿಗೆಲ್ಲಾ ಪ್ರೇರಕ ಶಕ್ತಿಯಾಗಿದ್ದರು. ಅಪ್ಪಟ ಗಾಂಧೀವಾದಿಯಾಗಿದ್ದ ಅವರು ಅಸ್ಪ್ರಶ್ರ್ಯತೆ ಹಾಗೂ ದಲಿತೋದ್ಧಾರವನ್ನು ಬೆಂಬಲಿಸುತ್ತಿದ್ದರು. ಅಂತರ್ಜಾತೀಯ ವಿವಾಹವನ್ನು ಪ್ರೋತ್ಸಾಹಿಸುತ್ತಿದ್ದರು. ಕಲೆ, ನಾಟಕ,ಸಿನಿಮಾ, ಕ್ರೀಡೆ ಇತ್ಯಾದಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ವಿಧ್ಯಾರ್ಥಿ ಗಳನ್ನು ಪ್ರೇರೇಪಿಸುತಿದ್ದರು. ಕನ್ನಡ ಮಾತ್ರವಲ್ಲದೆ ಸಂಸ್ಕೃತ, ಹಾಗೂ ಇಂಗ್ಲಿಷ್ ಭಾಷೆಗಳಲ್ಲೂ ಸಂಪೂರ್ಣ ಹಿಡಿತ ಸಾಧಿಸಿದ್ದರು. ಹೀಗಾಗಿ ಅಂದಿನ ಕಾಲದಲ್ಲಿ ಎಲ್ಲರಿಗೂ ಪ್ರಿಯರಾದ ವಂದನಾರ್ಹರಾಗಿದ್ದರು.
ನಾವು ಕೆ. ಆರ್. ಸ್ವಾಮಿ ಅವರ ರೇಖಾಚಿತ್ರಗಳನ್ನು ನೋಡಿ ಅದು ಕೊಡುತ್ತಿದ್ದ ಸಂತಸವನ್ನು ಸವಿದವರು. ಅವು ಬರಿಯ ಚಿತ್ರಗಳಾಗಿರದೆ ಅವುಗಳ ಹಿಂದೆ ಕಥಾನಕವಿದ್ದಂತೆ ನಮಗೆ ಭಾಸವಾಗುತ್ತಿತ್ತು.
ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್ನಲ್ಲಿ ಸ್ವಾಮಿ ಅವರು ಬರೆಯುತ್ತಿರುವ ನೆನಪುಗಳನ್ನು ಓದುವಾಗ ಉಂಟಾಗುವ ಸಂತೋಷ ಅಷ್ಟಿಷ್ಟಲ್ಲ. ಕರೋನಾ ಸಮಯದಲ್ಲಿ ಅವರು ಬರೆವಾಗ ಮೊದಲ ಸಾಲಿನಲ್ಲೇ, "ಈ ಲಾಕ್ ಡೌನ್ ಸಮಯದಲ್ಲಿ ನಿಮಗೆ ಬಿಡುವಿದ್ದರೆ ಓದಿ" ಎಂದು ಹೇಳುವಷ್ಟು ಸೌಜನ್ಯ ಅವರದು.
ಒಂದು ಕಾಲದ ಅವರ ಊರಿನ ಪರಿಸರ, ಪ್ರಕೃತಿ ಸಂಪತ್ತು, ಸಮಾಜದಲ್ಲಿದ್ದ ಸಾಮಾಜಿಕ ಮೌಲ್ಯಗಳು, ಹಿರಿಯ ತಲೆಮಾರು, ಇದ್ದದರಲ್ಲಿ ಅಪಾರ ತೃಪ್ತಿ, ಬದುಕಿದ್ದ ಸೊಬಗು ಇವೆಲ್ಲ ಅವರ ಕುರಿ ಹೊಡೆಯುವುದು, ಸಾವು ಗೆದ್ದವರು,ಕೃಷ್ಣಪ್ಪಯ್ಯನ ದೀಪ, ಕಮಾನು ಗಾಡಿ,ಕರೆಂಟ್ ಹಿಂದಿನ ಕತೆ, ಗಣಮಗನ ಎಡವಟ್ಟು, ಅ.ನ. ಕೃ ಹಾಗೂ ಅನುಭವ, ಇರಬೇಕು ಮನೆಗೊಂದು ಅಜ್ಜಿ, ಸಮಯಪ್ರಜ್ಞೆ, ವ್ಯಾಘ್ರ ಶಿಕಾರಿ, ಜಾತ್ರೆಯ ದಿನಗಳು, ಬದುಕೆಂದರೆ ಹೀಗೇ ಬರಹಗಳಲ್ಲಿ ಎದ್ದುಕಾಣುತ್ತವೆ. ಜೊತೆಗೆ ಈ ಬರಹಗಳಲ್ಲಿ ಕೆ. ಆರ್. ಸ್ವಾಮಿಗಳ ವ್ಯಕ್ತಿತ್ವ ಮತ್ತು ಅವರ ಕ್ರಿಯಾಶೀಲತೆ, ಪರಿಶುದ್ಧ ಹಾಸ್ಯಪ್ರಜ್ಞೆ, ಕಲಾತ್ಮಕ ಪ್ರವೃತ್ತಿಯ ಹಿಂದೆ ಕೆಲಸ ಮಾಡುತ್ತಿರುವ ಅವರ ಸಾಂಸ್ಕೃತಿಕ ಪ್ರಜ್ಞೆಯ ಅರಿವೂ ನಮಗಾಗುತ್ತೆ. ಅವರ 'ನೆನಪಿನಂಗಳದಿಂದ', 'ಕೆಲವು ಹಾಸ್ಯ ಪ್ರಸಂಗಗಳು' ಮುಂತಾದ ಸರಣಿ ಬರಹಗಳು ನಿರಂತರವಾಗಿ ಬರುತ್ತಿರುತ್ತದೆ ಎಂದು ಆಶಿಸುತ್ತೇನೆ.
ನಾನು ಈ ಲೇಖನ ಬರೆಯುವ ಸಿದ್ಧತೆಯಲ್ಲಿದ್ದಾಗ ಅವರ ಕುರಿತು ಅಲ್ಲಲ್ಲಿ ವಿವರ ಹುಡುಕುತ್ತಿದ್ದಾಗ ಇಂಗ್ಲಿಷಿನಲ್ಲಿ ಅವರ ವ್ಯಂಗ್ಯಚಿತ್ರ ಸಂಗ್ರಹ Laughter Dose ಎಂಬುದು ಇರುವದು ನನ್ನ ಗಮನಕ್ಕೆ ಬಂತು. ನನ್ನ ಪೆದ್ದುತನವೋ ಅಥವಾ ವ್ಯಂಗ್ಯಚಿತ್ರ ಬರೆಯುವವರನ್ನು ಓರೆಯಾಗಿ ನೋಡುವ ರೀತಿಯೋ, ಇವೆಲ್ಲವನ್ನೂ ಮೀರಿದ ನನ್ನ ಹೊಟ್ಟೆಬಾಕ ತನವೋ ಅರಿಯೆ. ಇದನ್ನು ನಾನು ಓದಿದ್ದು 'ಲಾಫ್ಟರ್ ದೋಸೆ' ಅಂತ! ಆಮೇಲೆ ಕನ್ಡಡದ ಅವರ ಸಂದರ್ಶನವೊಂದರಲ್ಲಿ ಅದು 'ಲಾಪ್ಟರ್ ಡೋಸ್' ಎಂದು ತಿಳಿದಾಗ ನಗು ಬಂತು. ಆಮೇಲೆ ಸ್ವಾಮಿ ಅವರ 'ಕೃಷ್ಣಪ್ಪಯ್ಯನ ಹೋಟೆಲ್ ದೋಸೆ' ಕುರಿತ ವರ್ಣನೆ ಓದಿದ ಮೇಲೆ, ನಾ ಓದಿದ್ದು ತುಂಬಾ ತಪ್ಪೇನಲ್ಲ, ಅವರಿಗೂ 'ಬೆಣ್ಣೆ ಮಸಾಲೆ ದೋಸೆ ಮೇಲೆ ಅಪಾರ ಪ್ರೀತಿ' ಅಂತ ಗೊತ್ತಾಯ್ತು!
ಕೆ. ಆರ್. ಸ್ವಾಮಿಗಳು ವೃತ್ತಿಯಲ್ಲಿ ಇಂಜಿನಿಯರ್ ಆಗಿ ಕರ್ನಾಟಕ ವಿದ್ಯುತ್ ಶಕ್ತಿ ನಿಗಮದಲ್ಲಿ 32 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದವರು. ಹೈಸ್ಕೂಲಿನಲ್ಲಿದ್ದಾಗಲೇ ವ್ಯಂಗ್ಯಚಿತ್ರ ರಚಿಸುವಲ್ಲಿ ಅವರಿಗೆ ಆಸಕ್ತಿ ಮೂಡಿತ್ತು. ಅನಂತರ ಅಮೆರಿಕದಲ್ಲಿನ 'ರೇ ಬರ್ನ್ ಕೋರ್ಸ್ ಆಫ್ ಕಾರ್ಟೂನಿಂಗ್' ಮೂಲಕ ಅಂಚೆ ಶಿಕ್ಷಣ ಪಡೆದರು. ವ್ಯಂಗ್ಯಚಿತ್ರ ಕಲೆ ಅವರ ಪ್ರವೃತ್ತಿಯಾಯ್ತು.
'ಸುಧಾ' ಹಾಗೂ 'ಮಯೂರ' ನಿಯತಕಾಲಿಕಗಳಲ್ಲಿ ಕೆ. ಆರ್. ಸ್ವಾಮಿ ಅವರ ವ್ಯಂಗ್ಯಚಿತ್ರಗಳು ಸದಾ ಜಾಗ ಪಡೆದುಕೊಳ್ಳುತ್ತಿದ್ದವು. 'ಪ್ರಜಾವಾಣಿ'ಯಲ್ಲಿ 'ಸುದ್ದಿಗೆ ಗುದ್ದು' ಹಾಗೂ 'ಸುಧಾ'ದಲ್ಲಿ 'ಮಾತಾಡುವ ಗೆರೆಗಳು' ಎಂಬ ಶಿರ್ಷಿಕೆಯಲ್ಲಿ ಅವರು ಬರೆದ ವ್ಯಂಗ್ಯಚಿತ್ರಗಳು ಅಪಾರ ಜನಪ್ರಿಯತೆ ಪಡೆದವು.
'ಕೆಇಬಿ'ಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ, ಅಲ್ಲಿನ ಏರಪೇರುಗಳನ್ನು ಸ್ವಾಮಿ ಅವರು ನಗೆಚಿತ್ರಗಳಾಗಿ ಚಿತ್ರಿಸುತ್ತಿದ್ದುದು 'ಕೆಇಬಿ ನ್ಯೂಸ್ ಲೆಟರ್' ಅಲ್ಲಿ ಪ್ರಕಟವಾಗುತ್ತಿದ್ದು, ಇಲಾಖೆಯಲ್ಲೂ ಇವರ ಕಲೆಗೆ ಗೌರವವಿತ್ತು.
ಅಂದಿನ ಕಾಲದ ಪ್ರಸಿದ್ಧ ಪತ್ರಿಕೆಗಳಾದ 'ಶಂಕರ್ಸ್ ವೀಕ್ಲಿ', 'ಕ್ಯಾರವಾನ್', ಹಾಗೂ ಹಿಂದಿಯ 'ಸರಿತಾ'ಗಳಲ್ಲೂ ಕೆ. ಆರ್. ಸ್ವಾಮಿಗಳ ಕಾರ್ಟೂನುಗಳು ಪ್ರಕಟಗೊಂಡು ಜನಪ್ರಿಯತೆ ಗಳಿಸಿದ್ದವು.
ಕಾಲಮಿತಿಗೆ ಒಳಪಡುವ ರಾಜಕೀಯ ವಿಡಂಬನೆಗಳಿಗಿಂತ ಕೆ. ಆರ್. ಸ್ವಾಮಿ ಅವರು ರಾಜಕೀಯೇತರ ವ್ಯಂಗ್ಯಚಿತ್ರಗಳನ್ನು ಹೆಚ್ಚು ರಚಿಸಿದವರು. ಸಾಮಾನ್ಯವರ್ಗದವರ ದಿನನಿತ್ಯದ ಆಗುಹೋಗುಗಳನ್ನು ವಸ್ತುವನ್ನಾಗಿಸಿ ಅವರು ರೇಖೆಗಳನ್ನು ಹೆಚ್ಚು ಮೂಡಿಸಿದರು. ಅವು ಸಾರ್ವಕಾಲಿಕವಾಗಿದ್ದು ಇಂದಿಗೂ ಪ್ರಸ್ತುತವೆನಿಸಿವೆ. ಅಲ್ಲದೆ ಅವು ಶ್ರೀಸಾಮಾನ್ಯರನ್ನು ಬೇಗ ತಲುಪಿ ಜನಪ್ರಿಯವೂ ಆಗಿವೆ.
ಕೆ. ಆರ್. ಸ್ವಾಮಿಗಳಿಗೆ ವ್ಯಂಗ್ಯಚಿತ್ರದ ಗುರಿ ಕೇವಲ ನಗಿಸುವುದಷ್ಟೇ ಅಲ್ಲ. "ನಗುವಿನ ಹಿಂದೆ ನೋವಿದೆ. ಸಂತಸದ ಹಿಂದೆಯೇ ದುಃಖವಿರುತ್ತದೆ. ಮಾನವೀಯತೆಯೇ ಮರೆಯಾಗುತ್ತಿರುವ ಈ ಕಾಲದಲ್ಲಿ ಬದುಕಿನ ವಿಪರ್ಯಾಸಗಳನ್ನು ಬಿಂಬಿಸುವಂತಹ ಸಂದೇಶಗಳನ್ನು ನನ್ನ ಕಾರ್ಟೂನ್ಗಳ ಮೂಲಕ ಕೊಟ್ಟಿದ್ದೇನೆ. ನಗು ಲೇಪನವಷ್ಟೇ!" ಎನ್ನುತ್ತಾರೆ.
ಕೆ. ಆರ್. ಸ್ವಾಮಿ ಅವರು ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘಕ್ಕೆ ಪ್ರಾರಂಭದಿಂದಲೂ ಜೊತೆಗೂಡಿದ್ದವರು. ಅವರು ಸಂಘದ ಪ್ರಥಮ ಕಾರ್ಯದರ್ಶಿಯಾಗಿದ್ದವರು. ‘ಭಾರತೀಯ ವ್ಯಂಗ್ಯಚಿತ್ರ ಸಂಸ್ಥೆ'ಯಲ್ಲಿ ಅವರ ವ್ಯಂಗ್ಯಚಿತ್ರಗಳ ಪ್ರದರ್ಶನ ನಡೆದಿತ್ತು. ಶಿವಮೊಗ್ಗ, ಮೈಸೂರು, ಧಾರವಾಡ ಮುಂತಾಗಿ ಅನೇಕ ಕಡೆ ಅವರ ವ್ಯಂಗ್ಯಚಿತ್ರ ಪ್ರದರ್ಶನಗಳು ನಡೆದಿವೆ.
ಕೆ. ಆರ್. ಸ್ವಾಮಿ ಅವರ ವ್ಯಂಗ್ಯಚಿತ್ರಗಳಿಂದ ಆಯ್ದ ಕಾರ್ಟೂನ್ ಕೃತಿಗಳಾದ 'ಬ್ರಹ್ಮಗಂಟು' ಮತ್ತು 'Laughter Dose' ಪ್ರಖ್ಯಾತಗೊಂಡಿವೆ. ಅವರ ವ್ಯಂಗ್ಯಕಂಗಳಿಂದ ಮೂಡಿರುವ ನೆನಪಿನ ಕಥನ ಕೃತಿಯನ್ನು 'ಚಿಗುರು ಚಿತ್ತಾರ' ಹೆಸರಿನಿಂದ ಅಂಕಿತ ಪ್ರಕಾಶನ ಪ್ರಕಟಿಸಿದೆ.
ಗಿರೀಶ್ ಕಾಸರವಳ್ಳಿಯವರು ತಮ್ಮ ಸೋದರಮಾವಂದಿರಾದ ಕೆ. ಆರ್. ಸ್ವಾಮಿಗಳ ಕಥೆ ಹೇಳುವ ಶೈಲಿಯ ಮೆಚ್ಚುಗರಲ್ಲೊಬ್ಬರಾಗಿದ್ದು, ತಮ್ಮ ಕೆಲವು ಚಲನಚಿತ್ರಗಳಲ್ಲಿ ಸ್ವಾಮಿ ಅವರ ವ್ಯಂಗ್ಯಚಿತ್ರ ವಸ್ತುಗಳನ್ನು ಬಳಸಿದ್ದಾರೆ.
ಕೆ. ಆರ್. ಸ್ವಾಮಿ ಅವರಿಗೆ ಕೆಇಬಿ ಇಲಾಖೆ ಸಾಂಸ್ಕೃತಿಕ ಸಮಾರಂಭಗಳಲ್ಲಿ, ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಮಾರಂಭದಲ್ಲಿ, ವ್ಯಂಗ್ಯಚಿತ್ರ ಸಮ್ಮೇಳನಗಳಲ್ಲಿ ಗೌರವಗಳು ಸಂದಿವೆ. ಇನ್ನೂ ಹೆಚ್ಚಿನ ರೀತಿಯ ಗೌರವಗಳು ಸಲ್ಲಬೇಕು ಎಂಬುದು ಅವರ ಅಭಿಮಾನಿಗಳ ಆಶಯ.
ಹಿರಿಯರೂ, ನಮ್ಮೆಲ್ಲರ ಆತ್ಮೀಯರು, ನಿರಂತರ ಕ್ರಿಯಾಶೀಲರೂ ಆದ ಕೆ. ಆರ್. ಸ್ವಾಮಿಗಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday K. R. Swamy Sir🌷🙏🌷
ಕಾಮೆಂಟ್ಗಳು