ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮುತ್ತಯ್ಯ ಭಾಗವತರು


 ಮುತ್ತಯ್ಯ ಭಾಗವತರು


ಸಂಗೀತ ಲೋಕದ ಮಹಾನ್ ತಾರೆಗಳಲ್ಲಿ ಮುತ್ತಯ್ಯ ಭಾಗವತರು ಪ್ರಥಮ ಸಾಲಿನಲ್ಲಿ ವಿರಾಜಿತರಾದವರು. ಭಾಗವತರು ಸಂಗೀತ ತ್ರಿಮೂರ್ತಿಗಳಾದ ಶ್ಯಾಮಶಾಸ್ತ್ರಿ, ಮುತ್ತುಸ್ವಾಮಿ ದೀಕ್ಷಿತರು ಮತ್ತು ತ್ಯಾಗರಾಜರ ನಂತರ ಬಂದಂಥ ರಚನಕಾರರಲ್ಲಿ ಅವರಷ್ಟೇ ವೈವಿಧ್ಯಮಯವಾದ ಕೃತಿಗಳನ್ನು ಒಳ್ಳೆಯ ಗುಣಮಟ್ಟ ಹಾಗೂ ಸಂಖ್ಯೆಯಲ್ಲಿ ರಚಿಸದವರೆಂದು ಹೆಸರಾದವರು.

ಹರಿಕೇಶನಲ್ಲೂರು ಮುತ್ತಯ್ಯ ಭಾಗವತರು.  ಸಂಗೀತಗಾರರೂ, ರಚನಕಾರರೂ, ಕಥಾ ಕೀರ್ತನಕಾರರೂ, ಶಿಕ್ಷಕರೂ, ಸಂಶೋಧಕರೂ, ಶಾಸ್ತ್ರಜ್ಞರೂ ಆಗಿ ಸಂಗೀತ ಲೋಕದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಕೀರ್ತನಕಲೆ ಮತ್ತು ಗ್ರಂಥ ಸಂಪಾದನೆಯಲ್ಲೂ ಅವರ ಸೇವೆ ಸ್ಮರಣೀಯವೆನಿಸಿದೆ. ಕಲೆಯ ಪ್ರಸಾರ, ಸಂಶೋಧನೆ, ಕಥಾಕೀರ್ತನ, ನವೀನ ಪ್ರಯೋಗ, ವಿದ್ಯಾದಾನ ಇವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ತಮ್ಮ ಬದುಕನ್ನು ಕಲಾಸೇವೆಗಾಗಿಯೇ ಮುಡಿಪಾಗಿಟ್ಟ ಮುತ್ತಯ್ಯ ಭಾಗವತರು ಮೈಸೂರಿನೊಡನೆ ಅವಿಭಾಜ್ಯ ಸಂಬಂಧ ಹೊಂದಿದ್ದರು.

ಮುತ್ತಯ್ಯ ಭಾಗವತರು 1877ರ ನವೆಂಬರ್ 15ರಂದು ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ತಿರುನೆಲ್ವೇಲಿಯಲ್ಲಿ ಜನಿಸಿದರು. ತಂದೆ ಲಿಂಗಂ ಅಯ್ಯರ್. ತಾಯಿ ಆನಂದಾಂಬಾಳ್‌. ಭಾಗವತರ ತಾತ ಸುಬ್ಬ ಭಾರತಿಯವರು ತಮಿಳು ಹಾಗೂ ಸಂಸ್ಕೃತ ವಿದ್ವಾಂಸರಾಗಿದ್ದರು. 

ಮುತ್ತುವಿಗೆ ತಂದೆಯವರಿಂದ ಸಾಹಿತ್ಯ, ಹಾಗೂ ಅಪ್ಪುಕ್ಕುಡಂ ಶಾಸ್ತ್ರಿಗಳಿಂದ ಸಂಗೀತ ಶಿಕ್ಷಣ ದೊರಕಿತು. ಸದಾ ಕಿವಿಯ ಮೇಲೆ ಬೀಳುತ್ತಿದ್ದ ಜಾನಪದ ಗೀತೆಗಳು ಎಳವೆಯಲ್ಲಿಯೇ ಮುತ್ತುವಿನ ಮನವನ್ನು ಸಂಗೀತದೆಡೆಗೆ ಆಕರ್ಷಿಸಲು ಸಹಾಯಕವಾಯಿತು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಸೋದರಮಾವನ ರಕ್ಷಣೆಯಲ್ಲೇ ಬೆಳೆದ ಇವರು ಸಂಸ್ಕೃತ ಕಲಿಕೆಗೆ ಹೆಚ್ಚು ಒತ್ತುಕೊಟ್ಟರು. ಮುಂದೆ ಸಂಗೀತದ ಸೆಳೆತದಿಂದ ತಿರುವಯ್ಯಾರಿಗೆ ಬಂದು ವಿದ್ವಾನ್‌ ಸಾಂಬಶಿವ ಅಯ್ಯರ್ ಅವರ ಶಿಷ್ಯರಾದರು. ಸುಮಾರು ಆರುವರ್ಷಗಳ ಗುರುಕುಲವಾಸದಲ್ಲಿ ಸಂಗೀತದ ಒಳ ಹೊರಗಿನ ಪರಿಚಯ ಮಾಡಿಕೊಂಡರು.

ಮುತ್ತಯ್ಯ ಭಾಗವತರ್ ಅವರು ಕೇವಲ ಹದಿನಾರು ವರ್ಷ ವಯಸ್ಸಿನಲ್ಲೇ ಆಕರ್ಷಕ ತರುಣರಾಗಿ ತಮ್ಮ ಸೊಗಸಾದ ಕಂಠಶ್ರೀಯಿಂದ, ಲವಲವಿಕೆಯ ಹಾಡುಗಾರಿಕೆಯಿಂದ ಕೇಳುಗರನ್ನು ಸೆಳೆಯುತೊಡಗಿ ಜನಪ್ರಿಯ ಸಂಗೀತಗಾರರೆನಿಸಿದರು.  ರಾಮನಾಡು, ತಿರುವಾಂಕೂರ್ ಮುಂತಾದ ಕಡೆಗಳಿಂದ ಅವರಿಗೆ ಕಚೇರಿಗೆ ಆಹ್ವಾನ ಬರತೊಡಗಿತು. 1899ರಲ್ಲಿ ಶಿವ ಗಾಮಿ ಅಮ್ಮಾಳರೊಂದಿಗೆ ವಿವಾಹವೂ ಆಯಿತು. ಆದರೆ ಅವರ ವೃತ್ತಿ ಬದುಕಿನಲ್ಲಿ ಆದ ಒಂದು ಆಕಸ್ಮಿಕದಿಂದ ಅವರ ಕಂಠವು ತೊಂದರೆಗೊಳಗಾಯಿತು. ಈ ಕುತ್ತನ್ನು ಬಹಳ ಆತ್ಮಸ್ಥೈರ್ಯದಿಂದ ಎದುರಿಸಿದ ಭಾಗವತರು ಕಚೇರಿಯಿಂದ ಕಥಾಕೀರ್ತನದತ್ತ ಹೊರಳಿದರು. ಇದು ಎರಡೂ ಕ್ಷೇತ್ರಕ್ಕೂ ಲಾಭಕರವಾಗಿ ಪರಿಣಮಿಸಿತು.ಅವರಲ್ಲಿ ಅಡಗಿದ್ದ ಕೃತಿ ರಚನಾ ಕೌಶಲವು ಬೆಳಕಿಗೆ ಬರಲು ಕೀರ್ತನ ಕಲೆ ಸಹಕಾರಿಯಾಯಿತು. ಅದುವರೆಗೆ ರೂಢಿಯಲ್ಲಿರದಿದ್ದ ಪ್ರಸಂಗಗಳನ್ನು ಆರಿಸಿಕೊಂಡು ಅದಕ್ಕೆ ಪೂರಕವಾಗಿ ಬೇಕಾಗಿದ್ದ ಹಾಡುಗಳನ್ನು ತಾವೇ ರಚಿಸಿದ್ದಲ್ಲದೆ, ಬಾಲ್ಯದಿಂದಲೂ ಕೇಳುತ್ತಿದ್ದ ಜನಪದ ರೂಪವಾದ ಕಾವಡಿ ಚಿಂದುಗಳನ್ನು ಸೇರಿಸಿ ಒಟ್ಟಾರೆ ಕಥಾಕೀರ್ತನ ಬಹಳ ಆಕರ್ಷಕವಾಗುವಂತೆ ಮಾಡಿದರು. ‘ವಲ್ಲೀ ಪರಿಣಯ’, ಆನಂದ ರಾಮಾಯಣದಿಂದ ಆರಿಸಿಕೊಂಡಿದ್ದ ‘ಸತೀ ಸುಲೋಚನ’ ಮುಂತಾದವು ಭಾಗವತರು ನೀಡಿದ ಹೊಸ ಕೊಡುಗೆಗಳು. ಹೊಸ ಹೊಸ ಕತೆಗಳನ್ನು, ವಿಷಯಗಳನ್ನು ಆರಿಸಿಕೊಂಡು ವೈವಿಧ್ಯಮಯವಾಗಿ, ಸ್ವಾರಸ್ಯಕರವಾಗಿರುತ್ತಿದ್ದ ಇವರ ಹರಿಕತೆಯು ತಮಿಳುನಾಡಿನಲ್ಲಿ ಮನೆಮಾತಾಯಿತು. ಎಲ್ಲ ಕಡೆಗಳಿಂದಲೂ ಇವರಿಗೆ ಆಹ್ವಾನ ಬರತೊಡಗಿತು. ಚೆಟ್ಟಿನಾಡು, ಬರ್ಮಾ, ಶ್ರೀಲಂಕಾಗಳಿಂದ ವಿಶೇಷ ಆಹ್ವಾನಿತರಾಗಿ ಹೋಗಿ ರಾಮಾಯಣದ ಅನೇಕ ಪ್ರಸಂಗಗಳನ್ನು ಪ್ರಚಾರಕ್ಕೆ ತಂದರು. ಈ ಮಧ್ಯೆ ಒಬ್ಬಳೇ ಮಗಳಾದ ಕಾಂತಿಮತಿ ಮೃತಳಾದಳು. ಇದು ಅವರ ಮನಸ್ಸಿಗೆ ತೀವ್ರ ಆಘಾತವನ್ನುಂಟು ಮಾಡಿತು. ಆಗ ಮನಶ್ಯಾಂತಿಯನ್ನು ಅರಸುತ್ತಾ ಉತ್ತರ ಭಾರತದ ಯಾತ್ರಾಸ್ಥಳಗಳಿಗೆ ಭೇಟಿಕೊಟ್ಟರು. ಕಾಶಿಯಲ್ಲೂ ಕೆಲವು ಕಾಲ ತಂಗಿದ್ದರು. ಆ ಸಮಯದಲ್ಲಿಯೂ ನಾದಕ್ಕೆ ಮನಸೋತ ಅವರ ಮನಸ್ಸು ಹಿಂದುಸ್ತಾನೀ ಸಂಗೀತದತ್ತ ಮುಖಮಾಡಿತು. ಹಂಸಾನಂದಿ, ಗೌಡ ಮಲ್ಹಾರ್, ಮೋಹನಕಲ್ಯಾಣಿ ಮುಂತಾದ ರಾಗಗಳಲ್ಲಿ ಅವರು ಕೃತಿ ರಚಿಸಿದ್ದು ಇದರ ಪರಿಣಾಮವಾಗಿಯೇ. ಅವರು ಹರಿಕಥೆಗಾಗಿಯೇ ಅನೇಕ ಕೃತಿಗಳನ್ನು ಬರೆದರು. ಕಾಪಿ ರಾಗದ ‘ಕಲಿಲೋ ಹರಿ ಸ್ಮರಣ’, ಹಂಸಾನಂದಿ ರಾಗದ ‘ನೀದು ಮಹಿಮಾ’, ‘ಸಹಜ ಗುಣ ರಾಮ’, ‘ಶರಣಾಗತ ವತ್ಸಲ’ ಇವೆಲ್ಲವೂ ಕಥಾಕೀರ್ತನಕ್ಕೆ ಪೂರಕವಗಿ ರಚಿತವಾದವು. ಇದರಿಂದಾಗಿ ಪರೋಕ್ಷವಾಗಿ ಅವರಲ್ಲಿಯ ವಾಗ್ಗೇಯಕಾರನೂ ಬೆಳೆಯುತ್ತಿದ್ದ. ಅಸಂಖ್ಯಾತ ಕಾರ್ಯಕ್ರಮದಿಂದಾಗಿ ಒಮ್ಮೆ ಕುಂಠಿತವಾಗಿದ್ದ ಅವರ ಕಂಠಸಿರಿಯೂ ಮತ್ತೆ ಮಧುರಗೊಂಡು, ವಿಜೃಂಭಿಸಲಾರಂಭಿಸಿತು. ಹೀಗಾಗಿ ಮತ್ತೆ ಅವರು ಸಂಗೀತ ಕಚೇರಿಗಳನ್ನು ಮಾಡತೊಡಗಿದರು. ಅನೇಕ ಸಂಸ್ಥಾನ, ಗುರುಮನೆ, ಅರಮನೆಗಳಿಂದ ಸನ್ಮಾನಿತರಾದರು.

ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರಿದ ಮುತ್ತಯ್ಯ ಭಾಗವತರಿಗೆ ತ್ಯಾಗರಾಜರ ಮೇಲೆ ಅಪಾರ ಗೌರವ. ಮಧುರೆಯಲ್ಲಿ 1920ರಲ್ಲಿ ತ್ಯಾಗರಾಜ ಸಂಗೀತ ವಿದ್ಯಾಲಯವನ್ನು ಪ್ರಾರಂಭಿಸಿದ್ದಲ್ಲದೆ, ತಾವು ಭೇಟಿಕೊಟ್ಟ ಸ್ಥಳಗಳಲ್ಲೆಲ್ಲಾ ತ್ಯಾಗರಾಜ ಆರಾಧನಾ ಮಹೋತ್ಸವ ನಡೆಯುವಂತೆ ಏರ್ಪಾಡು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ತ್ಯಾಗರಾಜರ ಕೀರ್ತನೆಗಳನ್ನೆಲ್ಲಾ ಅಧ್ಯಯನ ಮಾಡಿ, ಅವುಗಳನ್ನು ಬಳಸಿಯೇ ತ್ಯಾಗರಾಜರ ಜೀವನ ಚರಿತ್ರೆಯನ್ನು ತ್ಯಾಗರಾಜ ಆರಾಧನಾ ಮಹೋತ್ಸವದಲ್ಲಿ ಪ್ರಸ್ತುತ ಪಡಿಸುತ್ತಿದ್ದರು. ಇದು ಅವರ ವಿಮರ್ಶಾತ್ಮಕ ಅಧ್ಯಯನದ ಫಲ. ಮುಂದೆ ಅವರು ಮೈಸೂರಿನಲ್ಲಿ ಸಹಾ 'ತ್ಯಾಗರಾಜ ಸಂಗೀತ ಸಭಾ'ವನ್ನು ಪ್ರಾರಂಭಿಸಿದರು.

1927ರಲ್ಲಿ ದಸರಾ ಹಬ್ಬದಲ್ಲಿ ಭಾಗವತರು ಮೈಸೂರಿನಲ್ಲಿ ಕಚೇರಿ ನೀಡಿದರು. ಒಂದು ದಿನ ಚಾಮುಂಡಿ ಬೆಟ್ಟದ ಮೇಲೆ ದೇವಿಯ ಸನ್ನಿಧಿಯಲ್ಲಿ ‘ತಪ್ಪಲನ್ನಿಯು ತಾಳುಕೊಮ್ಮು ಚಾಮುಂಡೇಶ್ವರಿ ನಾದು’ ಎಂಬ ತಮ್ಮ ರಚನೆಯನ್ನು ಭಕ್ತಿಯಿಂದ ಮೈ ಮರೆತು ಹಾಡುತ್ತಿದ್ದಾಗ ಅನಿರೀಕ್ಷಿತವಾಗಿ ಅಲ್ಲಿಗೆ ಮಹಾರಾಜರು ಆಗಮಿಸಿ ಭಾಗವತರ ಸಂಗೀತ ಸುಧೆಯನ್ನು ಸವಿದರು. ಮೆಚ್ಚುಗೆಯಿಂದ ಅವರನ್ನು ಅರಮನೆಗೆ ಬರಮಾಡಿಕೊಂಡು ಮತ್ತೆ ಅವರ ಸಂಗೀತವನ್ನು ಕೇಳಿ ಸಂಭಾವನೆಯ ಜೊತೆಗೆ ವಜ್ರದುಂಗುರವನ್ನು ನೀಡಿದುದೇ ಅಲ್ಲದೆ ಅವರನ್ನು ಆಸ್ಥಾನ ವಿದ್ವಾಂಸರನ್ನಾಗಿಯೂ ಮಾಡಿದರು. 

ಮಹಾರಾಜರ ಸೂಚನೆಯಂತೆ ಅವರ ಆರಾಧ್ಯದೇವತೆಯಾದ ಚಾಮುಂಡೇಶ್ವರಿಯ ಅಷ್ಟೋತ್ತರ ಶತನಾಮಾವಳಿಯ ಕೀರ್ತನೆಗಳನ್ನು ರಚಿಸಿದರು. ಕನ್ನಡದ ಈ ರಚನೆಗಳನ್ನು ದೇವಿಯ ಮುಂದೆ ಹಾಡಿ ಪ್ರಭುಗಳಿಗೆ ಅರ್ಪಿಸಿದರು. ಇವು ಬಹಳ ಅಪರೂಪದ ರಾಗಗಳಲ್ಲಿರುವುದಲ್ಲದೆ ಕೆಲವು ಹೊಸ ರಾಗಗಳಲ್ಲೂ ರಚಿತವಾಗಿರುವುದೊಂದು ವಿಶೇಷ. ನಿರೋಷ್ಠ, ವಿಜಯನಾಗರಿ, ಉರ್ಮಿಕಾ, ವೀಣಾಧರಿ ಮುಂತಾದ ರಾಗದ ಈ ರಚನೆಗಳು ಬಹು ಮುದ್ದಾಗಿವೆ. ಇವರ ಚಾಮುಂಡೇಶ್ವರಿ ಅಷ್ಟೋತ್ತರ ಕೀರ್ತನೆಗಳ ರಚನೆಗೆ ಬಹಳವಾಗಿ ಸಹಾಯ ಮಾಡಿದವರು ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್ ಅವರು. ಇದಾದ ನಂತರ ಶಿವಾಷ್ಟೋತ್ತರ ಕೃತಿಗಳನ್ನು ರಚಿಸಿದರು. ಇವರ ಅಂಕಿತ ಹರಿಕೇಶ. ತೆಲುಗು, ಸಂಸ್ಕೃತ, ಕನ್ನಡ, ತಮಿಳಿನಲ್ಲಿರುವ ನಾನೂರಕ್ಕೂ ಹೆಚ್ಚಿನ ಇವರ ಕೃತಿಗಳು ತಾನವರ್ಣ, ದರುವರ್ಣ, ಕೃತಿ, ರಾಗಮಾಲಿಕೆ, ತಿಲ್ಲಾನ, ಮುಂತಾದವುಗಳನ್ನು ಒಳಗೊಂಡಿವೆ.

ಸ್ವಾತಿ ತಿರುನಾಳರ ಕೃತಿಗಳ ಪ್ರಚಾರ ಕಾರ್ಯದಲ್ಲೂ ಮುತ್ತಯ್ಯ ಭಾಗವತರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು. ತಿರುವಾಂಕೂರು ಸಂಸ್ಥಾನದಲ್ಲಿ ಪ್ರಕಟವಾಗದೇ ಉಳಿದಿದ್ದ ಸ್ವಾತಿ ತಿರುನಾಳರ ಅನೇಕ ಕೃತಿಗಳನ್ನು ಪರಿಷ್ಕರಿಸಿ, ರಾಗ ತಾಳಗಳಿಗೆ ಅಳವಡಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ನಾಲ್ಕು ವರ್ಷಗಳ ಕಾಲ ಸತತವಾಗಿ ಶ್ರಮಪಟ್ಟು ಸ್ವಾತಿ ತಿರುನಾಳರ ನೂರಾರು ಕೀರ್ತನೆಗಳನ್ನು ಸ್ವರಪ್ರಸ್ತಾರದೊಡನೆ ಎರಡು ಸಂಪುಟಗಳಲ್ಲಿ ಪ್ರಕಟಿಸಿದರು. ತಿರುವಾಂಕೂರಿನಲ್ಲಿ ‘ಸ್ವಾತಿ ತಿರುನಾಳ್‌ಸಂಗೀತ ಕಲಾಶಾಲೆ’ಯು ಪ್ರಾರಂಭವಾದಾಗ ಇವರೇ ಅದರ ಪ್ರಥಮ ಪ್ರಾಚಾರ್ಯರಾದರು. 1940ರಲ್ಲಿ ಭಾಗವತರು ‘ಶ್ರೀಮತ್‌ ತ್ಯಾಗರಾಜ ವಿಜಯ’ ಎಂಬ ಸಂಸ್ಕೃತ ಕಾವ್ಯವನ್ನು ರಚಿಸಿದರು. ‘ಸಂಗೀತ ಕಲ್ಪ ದ್ರುಮಂ’ ಎಂಬುದು ಅವರು ಬರೆದ ಸಂಗೀತ ಲಕ್ಷಣ ಗ್ರಂಥ. ಈ ಎಲ್ಲಾ ಸಂಗೀತ ಸೇವೆಯನ್ನು ಪರಿಗಣಿಸಿ ತಿರುವಾಂಕೂರ್‌ ವಿಶ್ವವಿದ್ಯಾಲಯವು 1943ರಲ್ಲಿ ಅವರಿಗೆ ಗೌರವ ಡಾಕ್ಟರೇಟ್‌ ಅನ್ನು ಪ್ರದಾನ ಮಾಡಿತು. ಅದೇ ವರ್ಷ ತಿರುವಾಂಕೂರ್‌ ವಿಶ್ವವಿದ್ಯಾಲಯದಿಂದ ನಿವೃತ್ತರಾದರು.

ಮದ್ರಾಸ್‌ ಮ್ಯೂಸಿಕ್‌ ಅಕಾಡಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಭಾಗವತರು ಸಂಗೀತ ಕಲಾನಿಧಿ ಬಿರುದಾಂಕಿತರಾದರು. ಅಕಾಡಮಿ ನಡೆಸುತ್ತಿದ್ದ ಸಂಗೀತ ಉಪಾಧ್ಯಾಯರ ತರಬೇತಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದರು.
ಅವರ ಅನೇಕ ಶಿಷ್ಯರು ಸಂಗೀತ ಕ್ಷೇತ್ರದಲ್ಲಿ ಖ್ಯಾತನಾಮರಾಗಿದ್ದಾರೆ. ಮಧುರೆ ಮಣಿ ಅಯ್ಯರ್, ಗೋಟುವಾದ್ಯ ನಾರಾಯಣ ಅಯ್ಯಂಗಾರ್, ಸ್ವರಮೂರ್ತಿ ವಿ.ಎನ್‌.ರಾವ್‌, ಬೂದಲೂರು ಕೃಷ್ಣಮೂರ್ತಿ ಶಾಸ್ತ್ರಿ ಮುಂತಾದವರೆಲ್ಲ ಅವರ ಗರಡಿಯಲ್ಲಿ ಪಳಗಿದವರೇ. ಗೋಟುವಾದ್ಯದಲ್ಲೂ ನಿಷ್ಣಾತರಾಗಿದ್ದ ಭಾಗವತರು ತಮ್ಮ ಕಚೇರಿಯ ಕೊನೆಯಲ್ಲಿ ಅದನ್ನು ನುಡಿಸಿ, ರಸಿಕರನ್ನು ರಂಜಿಸುತ್ತಿದ್ದರು. ಅವರ ದತ್ತು ಪುತ್ರರಾದ ವೈದ್ಯಲಿಂಗಂರವರು ಮದ್ರಾಸಿನ ಅಕಾಡಮಿಯ ನೆರವಿನಿಂದ ಮುತ್ತಯ್ಯ ಭಾಗವತರ ಎಲ್ಲಾ ರಚನೆಗಳನ್ನು ತಮಿಳಿನಲ್ಲಿ ಪ್ರಕಟಿಸಿದ್ದಾರೆ. 

ಮುತ್ತಯ್ಯ ಭಾಗವತರು ತಮ್ಮ ಅರವತ್ಮೂರನೇ ವಯಸ್ಸಿನಲ್ಲಿ 1945ರ ಜೂನ್ 30ರಂದು ಈ ಲೋಕವನ್ನಗಲಿದರು. ಸಂಗೀತ ಲೋಕದಲ್ಲಿ ಅವರ ಕೊಡುಗೆಗಳು ಅಜರಾಮರ.

On the birth anniversary of great  Carnatic music composer Muthiah Bhagavatar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ