ರಾಮಚಂದ್ರದೇವ
ರಾಮಚಂದ್ರದೇವ
ರಾಮಚಂದ್ರದೇವ ಕನ್ನಡದ ಮಹತ್ವಪೂರ್ಣ ಬರಹಗಾರರಲ್ಲೊಬ್ಬರು. ತಮ್ಮ ಊರಾದ ಕಲ್ಮಡ್ಕ ಎಂಬಲ್ಲಿ ಬೋಧಿ ಟ್ರಸ್ಟ್ ಸ್ಥಾಪಿಸಿ, ಅದರ ಮೂಲಕ ಪ್ರಕಟಣೆಗಳನ್ನೂ ಸಾಂಸ್ಕ್ರತಿಕ ಕಾಯಕಗಳನ್ನು ನಡೆಸಿ ವಿಶೇಷ ರೀತಿಯಲ್ಲಿ ಸಾರ್ವಜನಿಕ ಜೀವನದಲ್ಲಿ ಗಮನಸೆಳೆದಿದ್ದ ರಾಮಚಂದ್ರದೇವ ಅವರು ತಮ್ಮ ಪ್ರಖ್ಯಾತ ನಾಟಕಗಳಿಂದ, ಕಥೆ ಕವನಗಳಿಂದ, ರೂಪಾಂತರಗಳಿಂದ, ವಿಮರ್ಶೆಗಳಿಂದ, ಅಂಕಣಗಳಿಂದ ಮತ್ತು ವಿದ್ವತ್ಪೂರ್ಣ ಉಪನ್ಯಾಸಗಳಿಂದ ಕನ್ನಡ ಜನತೆಗೆ ಚಿರಪರಿಚಿತರಾಗಿದವರು.
ರಾಮಚಂದ್ರದೇವ 1948ರ ಮಾರ್ಚ್ 22ರಂದು
ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪಡೆದಿದ್ದ ಡಾ. ರಾಮಚಂದ್ರ ದೇವ ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ನಂತರ ಅಮೆರಿಕ ರಾಯಭಾರ ಕಚೇರಿಯ ಲೈಬ್ರರಿ ಆಫ್ ಕಾಂಗ್ರೆಸ್ಸಿಗೆ ಪ್ರತಿನಿಧಿಯಾಗಿ ನೇಮಕಗೊಂಡಿದ್ದರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರು.
ನಗರ ಜೀವನ ಬಿಟ್ಟು ಗ್ರಾಮೀಣ ಪ್ರದೇಶದ ಕಡೆ ಆಕರ್ಷಿತರಾಗಿದ್ದ ರಾಮಚಂದ್ರ ದೇವ ಅವರು ಹುಟ್ಟೂರು ಕಲ್ಮಡಕಕ್ಕೆ ತೆರಳಿ ಕೃಷಿ ಚಟುವಟಿಕೆ ಆರಂಭಿಸಿ ಸಾಹಿತ್ಯ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿದ್ದರು. ಹುಟ್ಟೂರು ಕಲ್ಮಡ್ಕದಲ್ಲಿ ಬೋಧಿವೃಕ್ಷ ಎಂಬ ಟ್ರಸ್ಟ್ ಸ್ಥಾಪಿಸಿ ಪುಸ್ತಕ ಪ್ರಕಟಣೆ ಆರಂಭಿಸಿದ್ದರು.
ಕಥೆಗಾರರಾಗಿ ರಾಮಚಂದ್ರದೇವರು ಬರೆದಿರುವ ಬಹುತೇಕ ಕಥೆಗಳು ಅವರು ‘ಸಮಗ್ರ ಕಥೆಗಳು’ ಕಥಾಸಂಕಲನದಲ್ಲಿವೆ. 'ಅರ್ಬುದ ಮತ್ತು ಪುಣ್ಯಕೋಟಿ', 'ಭೇತಾಳ ಕಥೆ', 'ಜೀವಪಕ್ಷಿಯ ಕತೆ', 'ರಿಸಾರ್ಟ್' ಮುಂತಾದ ಕಥೆಗಳು ತಮ್ಮ ವೈಶಿಷ್ಟ್ಯತೆಗಳಿಗೆ ಹೆಸರಾಗಿವೆ.
ರಾಮಚಂದ್ರದೇವ ಅವರು ಶೆಕ್ಸ್ಪಿಯರ್ ನಾಟಕಮಾಲೆಗಾಗಿ ಬರೆದ ಹ್ಯಾಮ್ಲೆಟ್; ಅಶ್ವತ್ಥಾಮ, ಹುಲಿಯ ಕಥೆ, ದಂಗೆ, ಪುಟ್ಟಿಯ ಪಯಣ, ಸುದರ್ಶನ, ಡಾಗ್ ಶೋ, ಜರಾಸಂಧ ಮುಂತಾದ ನಾಟಕಗಳು ವಿದ್ವಾಂಸರ ಮೆಚ್ಚುಗೆ ಪಡೆದು ಅನೇಕ ಪ್ರಯೋಗಗಳನ್ನೂ ಕಂಡಿವೆ. ರಾಮಚಂದ್ರದೇವ ಅವರು ಅನೇಕ ಕವನಗಳನ್ನೂ ಬರೆದಿದ್ದು, ಏಳುಶತಕೋಟಿ ಪ್ರೇತಗಳನ್ನು ಕುರಿತ ‘ಪ್ರೇತಲೋಕ’ ಎಂಬ ಸುದೀರ್ಘ ಕವನವೂ ಸೇರಿದಂತೆ ಅವರ ಐದು ಪ್ರಮುಖ ಕವನಗಳು ಒಂದು ಕವನಸಂಕಲನವಾಗಿ ಹೊರಹೊಮ್ಮಿದೆ. ‘ಮಾತನಾಡುವ ಮರ’, ‘ಇಂದ್ರಪ್ರಸ್ಥ ಮತ್ತು ಇತರ ಕವನಗಳು’ ಅವರ ಇತರ ಪ್ರಸಿದ್ಧ ಕವನ ಸಂಕಲನಗಳು.
ಮುಚ್ಚು ಮತ್ತು ಇತರ ಲೇಖನಗಳು, ವಡ್ಡಾರಾಧನೆ, ಮಹಾಭಾರತ, ಶಿವರಾಮಕಾರಂತ ಇವೇ ಮುಂತಾದ ವೈವಿಧ್ಯಪೂರ್ಣ ಲೇಖನಗಳನ್ನೂ ರಾಮಚಂದ್ರದೇವ ಬರೆದಿದ್ದಾರೆ.
ರಾಮಚಂದ್ರದೇವ ಅವರ ಮತ್ತೊಂದು ಮಹತ್ವದ ಕೃತಿ ‘ಶೇಕ್ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ’ ಪರಿಷ್ಕೃತಗೊಂಡು ವಿಸ್ತೃತವಾಗಿ ಓದುಗರ ಕೈಸೇರಿದೆ. ಈ ಕೃತಿಯ ಕುರಿತಂತೆ ಡಾ. ಯು. ಆರ್ ಅನಂತಮೂರ್ತಿ ಹೇಳುತ್ತಾರೆ “ನನಗೆ ತಿಳಿದಂತೆ ಈ ಬಗೆಯ ಕೃತಿ ಕನ್ನಡದಲ್ಲಾಗಲೀ ಇಂಗ್ಲಿಷಿನಲ್ಲಾಗಲೀ ಇದುವರೆಗೆ ಪ್ರಕಟವಾಗಿಲ್ಲ ಮತ್ತು ಇದು ತೌಲನಿಕ ವಿಮರ್ಶೆಗೆ ನೀಡಿದ ಹೊಸ ಕೊಡುಗೆಯಾಗಿದೆ."
ಹೀಗೆ ಕನ್ನಡ ಸಾಹಿತ್ಯಲೋಕದಲ್ಲಿ ಸಾಂಸ್ಕೃತಿಕ ಲೋಕಗಳಲ್ಲಿ ತಮ್ಮ ವಿಶಿಷ್ಟ ಕೊಡುಗೆಗಳಿಂದ ಪ್ರಸಿದ್ಧರಾದ ರಾಮಚಂದ್ರದೇವ 2013ರ ಸೆಪ್ಟೆಂಬರ್ 11ರಂದು ಈ ಲೋಕವನ್ನಗಲಿದರು.
Ramachandra Deva
ಕಾಮೆಂಟ್ಗಳು