ದೇವರಾಜ ಅರಸು
ಡಿ. ದೇವರಾಜ ಅರಸು
ಡಿ. ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದವರು.
ದೇವರಾಜ ಅರಸು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ 1915ರ ಆಗಸ್ಟ್ 20ರಂದು ಜನಿಸಿದರು. ಇವರು ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಪದವಿ ಪಡೆದರಾದರೂ ವಿದ್ಯಾಭ್ಯಾಸ ಮುಗಿದ ಮೇಲೆ ತಮ್ಮ ಹಳ್ಳಿಯಲ್ಲಿ ವ್ಯವಸಾಯದಲ್ಲಿ ನಿರತರಾದರು.
ಜೊತೆಗೆ ಇವರಿಗೆ ರಾಜಕಾರಣದಲ್ಲೂ ಆಸಕ್ತಿ ಮೂಡಿತು.
ದೇವರಾಜ ಅರಸು ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯಲ್ಲಿ 1941ರಿಂದ 1948ರ ವರೆಗೆ ಸದಸ್ಯರಾಗಿದ್ದರು. 1942ರಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಭಾರತಾದ್ಯಂತ ನಡೆದ 'ಬ್ರಿಟಿಷರೆ ಭಾರತ ಬಿಟ್ಟು ತೊಲಗಿ' ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದರು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ 1947ರಲ್ಲಿ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರಕ್ಕಾಗಿ ನಡೆದ ಮೈಸೂರು ಚಲೋ ಹೋರಾಟದಲ್ಲೂ ಭಾಗಿಯಾಗಿದ್ದರು.
ದೇವರಾಜ ಅರಸು ಸ್ವತಂತ್ರ ಭಾರತದಲ್ಲಿ ನಡೆದ ಪ್ರಥಮ ಮಹಾ ಚುನಾವಣೆಗಳಲ್ಲಿ (1952) ಹುಣಸೂರು ಕ್ಷೇತ್ರದಿಂದ ರಾಜ್ಯ ವಿಧಾನ ಸಭೆಗೆ ಆಯ್ಕೆ ಹೊಂದಿದರು. ಆಗಿನಿಂದ ವಿಧಾನ ಸಭೆಯ ಸದಸ್ಯರಾಗಿದ್ದರು. 1956ರಲ್ಲಿ ರಾಜ್ಯ ಪುನರ್ವಿಂಗಡಣೆ ಆದ ಮೇಲೆ ವಿಶಾಲ ಮೈಸೂರಿನ (ಈಗಿನ ಕರ್ನಾಟಕ) ಕಾಂಗ್ರೆಸ್ ಸರ್ಕಾರದಲ್ಲಿ (1962) ಕಾರ್ಮಿಕ, ಸಾರಿಗೆ ಹಾಗೂ ಪ್ರವಾಸೋದ್ಯಮ ಮಂತ್ರಿಯಾಗಿ ಕೆಲಸ ಮಾಡಿದರು. ಅನಂತರ ಪಶು ಸಂಗೋಪನೆ, ವಾರ್ತೆ ಮೀನುಗಾರಿಕೆ ಮತ್ತು ರೇಷ್ಮೆ ಮಂತ್ರಿಯಾಗಿದ್ದರು. 1969ರಲ್ಲಿ ಕಾಂಗ್ರೆಸ್ಸು ಒಡೆದಾಗ ಆಡಳಿತ ಕಾಂಗ್ರೆಸ್ಸಿನ ಸಂಘಟಕರಾಗಿ ಮುಂದುವರೆದರು.
ದೇವರಾಜ ಅರಸು 1970ರಲ್ಲಿ ಆಡಳಿತ ಕಾಂಗ್ರೆಸ್ಸಿನ ರಾಜ್ಯ ಘಟಕದ ಸಂಚಾಲಕರಾಗಿ ಪಕ್ಷ ಸಂಘಟನೆಯ ಹೊಣೆ ವಹಿಸಿದರು. ಅದೇ ವರ್ಷ ಕೇಂದ್ರ ರೇಷ್ಮೆ ಬೋರ್ಡಿನ ಅಧ್ಯಕ್ಷರಾದರು. ಕಾಂಗ್ರೆಸ್ ವಿಭಜನೆಯ ಅನಂತರ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ನಿಲುವಿನ ಬಗ್ಗೆ ರಾಜ್ಯದಲ್ಲಿ ಪ್ರಚಾರದ ಹೊಣೆ ಹೊತ್ತು ಆಡಳಿತ ಪಕ್ಷಕ್ಕೆ ಬೆಂಬಲ ರೂಢಿಸಿದರು. ಜನತೆಯ ಆಶೋತ್ತರಗಳ ಬಗ್ಗೆ ಪರಿಪೂರ್ಣ ಪರಿಜ್ಞಾನ ಪಡೆದಿದ್ದ ಅರಸು ಅವರು ತಮ್ಮ ಗುರಿ ಸಾಧನೆಯಲ್ಲಿ ಎದುರಾದ ಎಲ್ಲ ಅಡ್ಡಿ ಆತಂಕಗಳನ್ನೂ ಎದುರಿಸಿದರು. ಆಡಳಿತ ಕಾಂಗ್ರೆಸ್ ಬಲವಾಯಿತು. ವಿಧಾನ ಮಂಡಲದಲ್ಲಿ ಆ ಪಕ್ಷದ ಸದಸ್ಯರ ಸಂಖ್ಯೆ ಬೆಳೆಯಿತು. 1971ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ರಾಜ್ಯದ ಎಲ್ಲ 27 ಸ್ಥಾನಗಳೂ ಆಡಳಿತ ಕಾಂಗ್ರೆಸ್ಸಿಗೆ ಬಂದುವು. ಅರಸು ಅವರ ಜನಪ್ರಿಯತೆ ಬೆಳೆಯಿತು. ಅವರ ಸಾಮರ್ಥ್ಯ ಪ್ರಕಾಶಕ್ಕೆ ಬಂತು.
1972ರ ವಿಧಾನಸಭಾ ಚುನಾವಣೆಯಲ್ಲೂ ಆಡಳಿತ ಕಾಂಗ್ರೆಸ್ಸಿಗೆ ಬಲು ಹೆಚ್ಚಿನ ಬಹುಮತ ದೊರೆಯಿತು. ಅವರು ವಿಧಾನ ಸಭೆಯ ಕಾಂಗ್ರೆಸ್ ಪಕ್ಷದ ನಾಯಕರಾಗಿ ಆಯ್ಕೆ ಹೊಂದಿದರು. ಆ ವರ್ಷದ ಮಾರ್ಚ್ 20ರಂದು ರಾಜ್ಯದ ಮುಖ್ಯ ಮಂತ್ರಿಯಾದರು. ಜೂನ್ 13ರಂದು ಉಪಚುನಾವಣೆಯಲ್ಲಿ ಇವರು ವಿಧಾನಸಭೆಗೆ ಆಯ್ಕೆ ಹೊಂದಿದರು.
ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಪ್ರಗತಿಪರ ತಿರುವುಕೊಟ್ಟು ಹೊಸ ಚೈತನ್ಯ ತುಂಬಿ, ರಾಜ್ಯದ ಸಮಗ್ರ ಅಭಿವೃದ್ಧಿಯ ವ್ಯವಸ್ಥೆಯಲ್ಲಿ ಹೊಂದಿಕೊಳ್ಳುವಂತೆ ಆಡಳಿತವನ್ನು ರೂಪಿಸಿದರು. ರಾಜ್ಯಕ್ಕೆ ಸ್ಥಿರ ರಾಜಕೀಯ ನಾಯಕತ್ವ ನೀಡಿ, ಭದ್ರ ಆರ್ಥಿಕ ತಳಹದಿ ಹಾಕಿ, ಸಂರಕ್ಷಿತ ಸಾಮಾಜಿಕ ಚೌಕಟ್ಟು ನಿರ್ಮಿಸುವ ಕಾರ್ಯದಲ್ಲಿ ನಿರತರಾದರು.
ಅತ್ಯಂತ ಪ್ರಗತಿಶೀಲ ಭೂ ಸುಧಾರಣಾ ಶಾಸನ ದೇವರಾಜ ಅರಸು ಸರ್ಕಾರದ ಬಹು ದೊಡ್ಡ ಸಾಧನೆ. ಶತಮಾನಗಳಿಂದ ಬೆಳಕಿಗಾಗಿ ಹಾತೊರೆಯುತ್ತಿದ್ದ ಹಿಂದುಳಿದವರ ಸಾಮಾಜಿಕ ಆರ್ಥಿಕ ಸುಧಾರಣೆಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದರು. ಈ ಪೈಕಿ ಮುಖ್ಯವಾದ್ದು ಇದಕ್ಕಾಗಿ ನೇಮಕವಾದ ಹಾವನೂರು ಆಯೋಗ. ಆ ಆಯೋಗ ಒಂದು ಗಮನಾರ್ಹ ವರದಿ ನೀಡಿತು. 1975ರ ಜುಲೈ 1ರಂದು ಪ್ರಧಾನಿ ಇಂದಿರಾ ಗಾಂಧಿಯವರು ಸಾರಿದ ಇಪ್ಪತ್ತು ಅಂಶಗಳ ಕಾರ್ಯಕ್ರಮದ ಅಡಿಯಲ್ಲಿ ಭೂ ಹಂಚಿಕೆ, ಗ್ರಾಮಾಂತರ ಬಡವರಿಗಾಗಿ ನಿವೇಶನಗಳ ಉಚಿತ ಹಂಚಿಕೆ, ಜನತಾ ವಸತಿ ಯೋಜನೆ, ಸಣ್ಣ ರೈತರ ಅಭಿವೃದ್ಧಿ, ಜೀತಪದ್ಧತಿ ರದ್ದು, ಕಾರ್ಮಿಕರ ಹಿತರಕ್ಷಣೆ ಮುಂತಾದ ಅನೇಕ ಕ್ಷೇತ್ರಗಳಲ್ಲಿ ರಾಜ್ಯದಲ್ಲಿ ಪ್ರಯತ್ನ ನಡೆಯಿತು. "ನೂರು ಅಣೆಕಟ್ಟು ಕಟ್ಟುವುದು, ಹತ್ತು ಕಾರ್ಖಾನೆ ಹಾಕುವುದು ಮಾತ್ರವೇ ಪರಿವರ್ತನೆಯಲ್ಲ. ಕೈಗೊಂಡಿರುವ ಆರ್ಥಿಕ ಹಾಗೂ ಸಾಮಾಜಿಕ ಕ್ರಮಗಳಿಂದ ಮೂಲ ಮೌಲ್ಯಗಳ ಬದಲಾವಣೆ ಆಗುತ್ತದೆ. ಇದು ನಿಜವಾದ ಪರಿವರ್ತನೆ" ಎನ್ನುತ್ತಿದ್ದರು. ಅಣೆಕಟ್ಟುಗಳು, ಕಾರ್ಖಾನೆಗಳು ಪರಿವರ್ತನೆಗೆ ಸಾಧನ ಎಂಬ ಪ್ರಾಮುಖ್ಯವನ್ನೂ ಚೆನ್ನಾಗಿ ಅರಿತಿದ್ದ
ಅವರ ಅಧಿಕಾರಾವಧಿಯಲ್ಲಿ ಜಲವಿದ್ಯುತ್ ಯೋಜನೆ, ಕುದುರೆಮುಖ ಅದಿರು ಯೋಜನೆ ಕೃಷ್ಣಾ ಘಟಪ್ರಭಾ ಮಲಪ್ರಭಾ ಕಪಿಲಾ ಹೇಮಾವತಿಗಳಂಥ ನೀರಾವರಿ ಯೋಜನೆಗಳ ಪ್ರಗತಿಗೆ ಬೆಂಬಲ ದೊರೆಯಿತು. ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಪರಿಕಲ್ಪನೆಯೂ ಆಗಲೇ ಮೂಡಿತು.
1956ರಲ್ಲಿ ಭೌಗೋಳಿಕವಾಗಿ ಕರ್ನಾಟಕ ಏಕೀಕರಣ ಆಯಿತಾದರೂ ಅದು ಮಾನಸಿಕವಾಗಿ ಪರಿಪೂರ್ಣವಾಗಿರಲಿಲ್ಲ. ದೇವರಾಜ ಅರಸು ಅವರು ಅದನ್ನು ಸಾಧಿಸಿದರು. ರಾಜ್ಯಕ್ಕೆ ಕರ್ನಾಟಕವೆಂದು ಪುನರ್ನಾಮಕರಣ ಮಾಡಿದ್ದು ಈ ನಿಟ್ಟಿನಲ್ಲಿ ಅರಸು ಅವರ ಪ್ರಮುಖ ಸಾಧನೆ. ಇಂಥ ಸೂಚನೆಯನ್ನು ಹಿಂದೆ ಅವರೇ ವಿರೋಧಿಸಿದ್ದರಾದರೂ, ಬದಲಾದ ಪರಿಸ್ಥಿತಿಯಲ್ಲಿ ಇದರ ಪ್ರಾಮುಖ್ಯವನ್ನು ಅರಿತುಕೊಂಡು ಕಾರ್ಯಶೀಲರಾದರು.
ದೇವರಾಜ ಅರಸು ನೇರ, ಸರಳ, ನಿರ್ದಾಕ್ಷಿಣ್ಯಪರರಾಗಿದ್ದರು. ನಿರ್ಭೀತ ಪ್ರಾಮಾಣಿಕತೆ ಇವರ ಮುಖ್ಯ ಗುಣಗಳಾಗಿದ್ದವು. ಇವರು ಆಡುತ್ತಿದ್ದುದು ಶ್ರೀ ಸಾಮಾನ್ಯನ ಭಾಷೆ. ಅವರ ಒಳಿತಿನ ಬಗ್ಗೆ ಇವರಿಗೆ ವಿಶೇಷ ಕಾಳಜಿಯಿತ್ತು. ಜೊತೆಯವರಿಗೆಲ್ಲ ಚೈತನ್ಯ ತುಂಬುವ, ದೃಢ ಆತ್ಮವಿಶ್ವಾಸದಿಂದ ಕೂಡಿದ ರಚನಾತ್ಮಕ ಆಶಾವಾದ ಇವರದಾಗಿತ್ತು. . ಕಷ್ಟಗಳಿಗೆ ತಲೆಬಾಗುವುದು ಇವರ ಜಾಯಮಾನವಾಗಿರಲಿಲ್ಲ. ಪರಿವರ್ತನೆಯ ಸಮಾಜದಲ್ಲಿ ಕಷ್ಟ ಹಿಂಸೆಗಳು ಅನಿವಾರ್ಯ ಕ್ರಿಯೆಗಳು, ಅವನ್ನು ಎದುರಿಸಲೇಬೇಕು ಎನ್ನುವುದು ಇವರ ನಿಲುವಾಗಿತ್ತು.
ಜನತಾ ಪಕ್ಷದ ಪರವಾದ ಬಿರುಗಾಳಿ ಇದ್ದರೂ ಕರ್ನಾಟಕದಲ್ಲಿ ದೇವರಾಜ ಅರಸು ಪ್ರಭಾವ ಕಾಂಗ್ರೆಸ್ಸಿಗೆ ಬಲವಾದ ಕೋಟೆಯಾಗಿತ್ತು. 1978ರಲ್ಲಿ ದೇವರಾಜ ಅರಸು ಎರಡನೇ ಬಾರಿ ಮುಖ್ಯಮಂತ್ರಿ ಆದರು.1979ರಲ್ಲಿ ಇಂದಿರಾ ಗಾಂಧಿ ಅವರೊಂದಿಗೆ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ ತೊರೆದರು.1979ರ ಜುಲೈ ಇಂದ 1980ರ ಜನವರಿವರೆಗೆ ಸಮಾಜವಾದಿ ಕಾಂಗ್ರೆಸ್ ಬಣ ನಿರ್ಮಿಸಿ ಮುಖ್ಯಮಂತ್ರಿಯಾಗಿ ಮುಂದುವರೆದರು. ಜನತಾ ಪಕ್ಷ ಕಿತ್ತಾಡಿ ಪುನಃ ಇಂದಿರಾಗಾಂಧಿ ರಾಷ್ಟ್ರಮಟ್ಟದಲ್ಲಿ ಚುಕ್ಕಾಣಿ ಹಿಡಿದಾಗ ಅರಸು ಅವರ ಮುಖ್ಯಮಂತ್ರಿತ್ವಕ್ಕೂ ಕೊನೆ ಬಂತು.
ದೇವರಾಜ ಅರಸು ಅವರಂತೆ ಜನಪರ ಬದಲಾವಣೆಗಳನ್ನು ಧೈರ್ಯವಾಗಿ ಜಾರಿಗೆ ತಂದವರಿಲ್ಲ. ಹಾಗಾಗಿ ಅವರು ಸದಾ ನೆನಪಿನಲ್ಲಿ ಉಳಿಯುವಂತಹವರು.
ಡಿ. ದೇವರಾಜ ಅರಸು 1982ರ ಜೂನ್ 6ರಂದು ಈ ಲೋಕವನ್ನಗಲಿದರು. ಜನಸಾಮಾನ್ಯರಂತೆ ಸರಳತೆಯಿಂದ ಬಾಳಿ, ಜನಪರ ಚಿಂತನೆಯಲ್ಲೇ ಜೀವಿಸಿದ ಅವರೊಬ್ಬ ಅಪೂರ್ವ ಜೀವಿ.
On the birth anniversary of great reformist politician D. Devaraj Urs
ಕಾಮೆಂಟ್ಗಳು