ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾರಾಯಣಸ್ವಾಮಿ


 ಆರ್. ಕೆ. ನಾರಾಯಣಸ್ವಾಮಿ


ವಿದ್ವಾನ್  ಆರ್. ಕೆ. ನಾರಾಯಣಸ್ವಾಮಿ ಸಂಗೀತಲೋಕದ ಮಹಾನ್ ಹೆಸರು.

ನಾರಾಯಣಸ್ವಾಮಿ 1914ರ ಜೂನ್ 6 ರಂದು,  ಸಂಗೀತಕ್ಕೆ ಹೆಸರಾದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರುದ್ರಪಟ್ಟಣದಲ್ಲಿ ಜನಿಸಿದರು.

ನಾರಾಯಣಸ್ವಾಮಿ ಅವರ ತಂದೆ ಕೃಷ್ಣ ಶಾಸ್ತ್ರಿಗಳು. ತಾಯಿ ಸರಸಮ್ಮ. ಕೃಷ್ಣ ಶಾಸ್ತ್ರಿಗಳು ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಉದ್ದಾಮ ಪಂಡಿತರಷ್ಟೇ ಅಲ್ಲದೆ ಹಾಡುಗಾರಿಕೆ ಮತ್ತು ಪಿಟೀಲು ವಾದನದಲ್ಲೂ ನಿಪುಣರು. ಸಂಗೀತ ಇವರ ಮನೆತನಕ್ಕೆ ಬಂದ ಬಳುವಳಿ.  ನಾರಾಯಣಸ್ವಾಮಿ ಅವರಿಗೆ ಐದನೆಯ ವಯಸ್ಸಿನಿಂದಲೇ ತಂದೆಯವರಿಂದ ಸಂಗೀತ ಪಾಠವಾಯಿತು. ಇವರು ಚಿಕ್ಕ ವಯಸ್ಸಿನಲ್ಲಿಯೇ ತಾಯಿಯ ಪ್ರೀತಿಯಿಂದ ವಂಚಿತರಾಗಿ ಮೈಸೂರು ಸೇರಿದರು. ಓದಿದ್ದು ಇಂಟರ್‌ಮೀಡಿಯೇಟ್‌ವರೆಗೆ. 

ಮುಂದೆ ನಾರಾಯಣಸ್ವಾಮಿ ಅವರು ಸಂಗೀತದಲ್ಲಿ ಹೆಚ್ಚಿನ ತರಬೇತಿಗಾಗಿ ಮದರಾಸಿಗೆ ತೆರಳಿದರು. ಸಂಗೀತ ವಿದ್ವಾಂಸರಾಗಿದ್ದ ಮುಸರಿ ಸುಬ್ರಹ್ಮಣ್ಯಂ ಅಯ್ಯರ್‌ ಅವರಲ್ಲಿ ಅವರ ಸಂಗೀತಾಭ್ಯಾಸ ನಡೆಯಿತು. ತ್ಯಾಗರಾಜ ಪರಂಪರೆಯ ಸಂಪ್ರದಾಯ ಬದ್ಧ ಸಂಗೀತದ ಕಲಿಕೆ ಇವರದ್ದಾಯಿತು. 1945ರಲ್ಲಿ ಮೈಸೂರಿಗೆ ಹಿಂದಿರುಗಿ ಪ್ರಾಕ್ತನ ಇಲಾಖೆಯಲ್ಲಿ ಉದ್ಯೋಗ ಹಿಡಿದರು.

ಆರ್. ಕೆ. ನಾರಾಯಣಸ್ವಾಮಿ ಅವರಿಗೆ ಗುರುಗಳ ರೀತಿಯ ಹಾಡುಗಾರಿಕೆ ರೂಢೀಗತವಾಗಿತ್ತು. ಅವಧಾನ ತಾಳಕಲೆ ಕರತಲಾಮಲಕ (ಎರಡು ಕೈಯಲ್ಲೂ ವಿವಿಧ ತಾಳ ಹಾಕುತ್ತಾ ಹಾಡುವ ಕಲೆ) ಆಗಿತ್ತು. 

ಆರ್. ಕೆ. ನಾರಾಯಣಸ್ವಾಮಿ ಅವರು ಚಿಕ್ಕ ವಯಸ್ಸಿನಿಂದಲೇ ಸಂಗೀತ ಕಚೇರಿಗಳನ್ನು ನಡೆಸಿದ್ದರು. ಬಿಡಾರಂ ಕೃಷ್ಣಪ್ಪ ರಾಮಮಂದಿರದಲ್ಲಿ ಸಿ.ವಿ.ರಾಮನ್ ಉದ್ಘಾಟಿಸಿದ ಪ್ರಥಮ ಸಂಗೀತ ಸಮ್ಮೇಳನದಲ್ಲಿ ಇವರ ಹಾಡುಗಾರಿಕೆ ನಡೆದಾಗ ಪಿಟೀಲು ಚೌಡಯ್ಯನವರಿಂದ ಪ್ರಶಂಸೆ ಮತ್ತು ಪ್ರೋತ್ಸಾಹ ದೊರಕಿತು. 1957ರಲ್ಲಿ ಮದರಾಸಿನ ಆರ್‌.ಕೆ.ಎನ್. ಮ್ಯೂಸಿಕ್ ಅಕಾಡಮಿಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಸಂದರ್ಭದಲ್ಲಿ ಹಲವಾರು ಸಂಗೀತ ದಿಗ್ಗಜರಿಂದ ಪ್ರಶಂಸೆ ದೊರೆಯಿತು. ತಮ್ಮ ಸಹೋದರ ಆರ್‌.ಕೆ. ರಾಮನಾಥ್‌ರೊಡಗೂಡಿ ಕಲ್ಲಿಕೋಟೆ ಸಹೋದರರೆಂಬ ಹೆಸರಿನಿಂದ ಎಲ್ಲೆಡೆ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. 

ಆರ್. ಕೆ. ನಾರಾಯಣಸ್ವಾಮಿ ಅವರು ಆಕಾಶವಾಣಿಯಲ್ಲೂ ಹಲವಾರು ಬಾರಿ ಕಚೇರಿಗಳನ್ನು ನಡೆಸಿಕೊಟ್ಟರು. ಶಾಮಾಶಾಸ್ತ್ರಿಗಳ ಬಗ್ಗೆ ರೂಪಕವೊಂದನ್ನು ರಚಿಸಿ ಮೈಸೂರು ಆಕಾಶವಾಣಿಯಲ್ಲಿ ನಿರ್ದೇಶನ ಮಾಡಿದರು. 

ಆರ್. ಕೆ. ನಾರಾಯಣಸ್ವಾಮಿ ಅವರಿಗೆ ಕರ್ನಾಟಕ ಸಂಗೀತನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾಶ್ರೀ, ಬೆಂಗಳೂರಿನ ತ್ಯಾಗರಾಜ ಗಾನ ಸಭಾದಿಂದ ಕಲಾಭೂಷಣ. ಮೈಸೂರಿನ ಗಾನಭಾರತಿ, ಜಿ.ಎಸ್.ಎನ್. ಸಂಗೀತ ಸಭಾ, ಬೆಂಗಳೂರಿನ ಕರ್ನಾಟಕ ಕಾಲೇಜ್ ಆಫ್ ಪರ್‌ಕಷನ್, ನಾದಾಂಜಲಿ, ಶ್ರೀಕಾಂತ ಸಂಗೀತ ಸಭಾ ಮುಂತಾದುವುಗಳಿಂದ ಗೌರವ ಸನ್ಮಾನಗಳು ಅರ್ಪಣೆಯಾದವು.

ವಿದ್ವಾನ್ ಆರ್. ಕೆ. ನಾರಾಯಣಸ್ವಾಮಿ ಅವರ ಸುಪುತ್ರರಾದ ತ್ಯಾಗರಾಜನ್ ಮತ್ತು ತಾರಾನಥನ್ ಜೋಡಿ ಸಂಗೀತ ಲೋಕದಲ್ಲಿ ರುದ್ರಪಟ್ನಂ ಸಹೋದರರೆಂದು ಪ್ರಸಿದ್ಧರಾಗಿದ್ದಾರೆ. ಅವರ ಪುತ್ರಿ ಡಾ. ಆರ್. ಎನ್. ಶ್ರೀಲತಾ ಅವರೂ ವಿದುಷಿಯಾಗಿ, ಪ್ರಾಧ್ಯಾಪಕಿಯಾಗಿ ಮತ್ತು ಸಂಗೀತ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.

ವಿದ್ವಾನ್ ಆರ್. ಕೆ. ನಾರಾಯಣಸ್ವಾಮಿ  ಅವರು 2005ರ ಸೆಪ್ಟೆಂಬರ್ 4ರಂದು ಈ ಲೋಕವನ್ನಗಲಿದರು.

On the birth anniversary of great musician R. K. Narayanaswamy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ