ಭವ್ಯ ಬೊಳ್ಳೂರು
ಭವ್ಯ ಬೊಳ್ಳೂರು
ಭವ್ಯ ಬೊಳ್ಳೂರು ಅಂದರೆ ತಕ್ಷಣ ನೆನಪಾಗುವುದು ಅವರ ವೈವಿಧ್ಯಪೂರ್ಣ ಬರಹಗಳು ಮತ್ತು ಬಗೆ ಬಗೆ ಬಣ್ಣಗಳ ಪ್ರಕೃತಿ ಚಿತ್ರಗಳು. ಜೊತೆಗೆ ಗಂಭೀರತೆಯ ನಡುವೆ ಮಿಂಚುವ ಮಂದಹಾಸದಲ್ಲಿ ಅವರು ಆಗಾಗ್ಗೆ ಕಾಣುವ ವಿವಿಧ ಬಣ್ಣಗಳಲ್ಲಿನ ಚಿತ್ರಗಳು ಕೂಡ ಸಂತೋಷ ನೀಡುವಂತಹವು.
ಭವ್ಯ ಬೊಳ್ಳೂರು ಅವರ ಹುಟ್ಟು ಹಬ್ಬ ಅಕ್ಟೋಬರ್ 24. ಹುಟ್ಟೂರು ಚೊಕ್ಕಾಡಿ. ಸುಳ್ಯದ ಸಮೀಪದ ಮರ್ಕಂಜ ಗಂಡನ ಮನೆ. ಅಲ್ಲೇ ಅವರ ವಾಸ. ಚೊಕ್ಕಾಡಿ ಶಾಲೆಯಲ್ಲಿ ಇವರ ಓದು ಆರಂಭಗೊಂಡಿತು.
ಭವ್ಯ ಉಜಿರೆಯ ಎಸ್.ಡಿ.ಎಮ್. ಕಾಲೇಜಿನಲ್ಲಿ ಪದವಿಯ ಓದಿಗೆ ಪತ್ರಿಕೋದ್ಯಮ, ಕನ್ನಡ ಮೇಜರ್ ಮತ್ತು ಮನಃಶಾಸ್ತ್ರವನ್ನು ವಿಷಯವನ್ನಾಗಿ ತೆಗೆದುಕೊಂಡಿದ್ದರು. ಮುಂದೆ ಕುವೆಂಪು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಭವ್ಯ ಮೊದಲು ಟಿವಿ 9 ಚಾನೆಲ್ಗೆ ವೃತ್ತಿಗೆ ಬಂದರು. ನಂತರ ಸಮಯ ನ್ಯೂಸ್ ಚಾನೆಲ್, ಸ್ವಚ್ಚ ಭಾರತ ಮಿಷನ್ ಅಭಿಯಾನ್, ವಿಶ್ವವಾಣಿ, ಪಾಕೆಟ್ ಎಫ್.ಎಂ. ಮುಂತಾದೆಡೆ ಸೃಜನಶೀಲ ಸಂಪಾದಕಿ(creative editor) ಆಗಿ ಜಬಾಬ್ದಾರಿ ನಿರ್ವಹಿಸಿದವರು. ಕಳೆದ ವರ್ಷ ಮಂಗಳೂರು - ಮೈಸೂರು ಹೆದ್ದಾರಿಯಲ್ಲಿ 'ಉಡುಪಿ ಶ್ರೀಕೃಷ್ಣ ವಿಹಾರ (SKV)’ ಎಂಬ ಜನಾದಾರಣೀಯ ಹೋಟೆಲ್ ಆರಂಭಿಸಿ ಉದ್ಯಮಿಯಾಗಿದ್ದಾರೆ.
ಭವ್ಯ ಅವರಿಗೆ ಸಾಹಿತ್ಯಾಸಕ್ತಿ ಚಿಕ್ಕ ವಯಸ್ಸಿನಲ್ಲೇ ಮೂಡಿತ್ತು. ಆಗಲೇ ಕೈಗೆ ಸಿಕ್ಕಿದ್ದನ್ನೆಲ್ಲಾ ಓದುವ ಹವ್ಯಾಸ ಜೊತೆಗೂಡಿತ್ತು. ಈ ಪರಿಯ ಅವರ ಅಧ್ಯಯನ, ನಿರಂತರ ಮುಂದುವರೆದಿದೆ. ಅವರ ಓದಿನ ಹವ್ಯಾಸ ಅವರನ್ನು ಸೃಜನಶೀಲ ಬರಹಗಾರ್ತಿಯನ್ನಾಗಿಯೂ ರೂಪಿಸಿದೆ.
ಭವ್ಯ ಬೊಳ್ಳೂರು ಅನೇಕ ಲೇಖನ, ಕವನ, ಕಥೆಗಳನ್ನು ಬರೆದಿದ್ದಾರೆ. ಅವರ ಬರಹಗಳು ಅನೇಕ ನಿಯತಕಾಲಿಕಗಳಲ್ಲಿ ಮೂಡಿವೆ. ಕೃಷಿ ಕುರಿತಂತೆ ಇವರು ಲೇಖನಗಳನ್ನು ಬರೆದಿದ್ದಾರೆ. ಕೃಷಿ, ಪ್ರಕೃತಿ ಕುರಿತಾಗಿಯೇ ಅವರು 'ಮರಳಿ ಮಣ್ಣಿಗೆ' ಎಂಬ ಬ್ಲಾಗ್ ಬರೆಯುತ್ತ ಬಂದಿದ್ದಾರೆ. ತಾವು ಕಾರ್ಯನಿರ್ವಹಿಸಿದ ಸಂವಹನ ಕ್ಷೇತ್ರಗಳಲ್ಲಿ ಅಧ್ಯಾತ್ಮ, ಸೆಲ್ಫ್ ಹೆಲ್ಪ್ , ಸಾಹಿತ್ಯ, ಪ್ರವಾಸ ಮತ್ತು ತಂತ್ರಜ್ಞಾನಗಳ ಕುರಿತಾಗಿ ಬಹಳಷ್ಟು ಲೇಖನಗಳನ್ನು ಮೂಡಿಸಿದ್ದಾರೆ.
ಮನೆ ಕೆಲಸ, ಮಕ್ಕಳು, ಕೃಷಿ, ಹೋಟೆಲ್ ಉದ್ಯಮ ನಿರ್ವಹಣಾ ಜವಾಬ್ದಾರಿಗಳ ಜೊತೆಗೆ ಪ್ರವೃತ್ತಿಯ ಬರವಣಿಗೆ ಕೆಲಸವನ್ನು ಮಾಡುವ ಭವ್ಯ ಅವರ ಬಹುಮುಖಿ ಆಸಕ್ತಿ, ಪರಿಸರ ಪ್ರೇಮ ಮತ್ತು ಜೀವನದ ಕುರಿತಾದ ಲವ ಲವಿಕೆಯ ಆಸಕ್ತಿಗಳು ಮೆಚ್ಚುಗೆ ಮೂಡಿಸುವಂತದ್ದು.
ಪ್ತತಿಭಾನ್ವಿತೆ, ಉತ್ಸಾಹಿ ಭವ್ಯ ಅವರಿಗೆ ಅಕ್ಕರೆಯ ಹುಟ್ಟು ಹಬ್ಬದ ಶುಭಹಾರೈಕೆ.
Happy birthday Bhavya Bollur🌷🌷🌷

ಕಾಮೆಂಟ್ಗಳು