ಗೋಕುಲ ನಿರ್ಗಮನ 24
ಗೋಕುಲ ನಿರ್ಗಮನ 24
(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)
ಅಕ್ರೂರ
ಭಾವವಂಶವೇ ಕೊನೆಗಂಡಿತು ಎನೆ ಘಾತವಾಯಿತೀ ವಂಶದ ಪಾತ
ಕೃಷ್ಣ
(ಬಿದ್ದ ಮುರಳಿಯನ್ನು ನಿರ್ವೇದದಿಂದ ನೋಡುತ್ತಾ)
ಏಕಿಂತು ಮುಳಿಸಾಂತೆ ಬಡ ಕೊಳಲ ಮೇಲೆ ಕಲ್ಪಲತೆಗೈರಾವತಂ ಮುಳಿವವೋಲೆ ಗೊಲ್ಲರಾವೆಮಗಿದುವೆ ತಕ್ಕ ಭೂಷಣವು -
ಜನ ನಗುವುದೆಂದೆಸೆಯೆ ಲೋಕದೂಷಣವು
ಬಲರಾಮ
ಶೂರರೆಂದಾಹ್ವಾನ ಗೊಲ್ಲರೆಂದಲ್ಲ ಮಧುರೆಗಿದು ತರವಲ್ಲ ನಗುವರೆಂದಲ್ಲ
ಹಳ್ಳಿ ಹಳುವಿನ ಬಿನದಕೀ ಕೊಳಲು ಲೇಸು ಹೊಳಲ ಬಲುಗದ್ದಲದೊಳಿದರ ಬೆಲೆಯೇಸು
ಕೃಷ್ಣ
(ಕೊಳಲ ಕಡೆ ನೋಡುತ್ತಾ, ಬಿಡುವ ನಿರ್ಧಾರಕ್ಕೆ ಮೊದಲು ಮೋಹವಾಂತು)
ನನ್ನಂಗವೊಂದ ನೀ ಚಿವುಟಿ ತೆಗೆದಂದದೊಳು
ಕೊಳಲ ಕಿತ್ತೊಗೆದೆಯಣ್ಣ
ಇಂದುವರೆಗೆನಗಾದ ಸೊಗವೆಲ್ಲ ಪಾಲ್ಗೊಂಡು
ಗೋಳಿಡುವ ತೆರವಾಯ್ತು ಬನ್ನ ನನ್ನಿರವಿನೊಂದಂಶ ನನ್ನುಳಿದು ಬಿದ್ದಿತಿಲ್ಲಿ
ಈ ಹಾನಿಗೆನ್ನ ಬಗೆ ನೆತ್ತರಿಡುತಿಹುದೊ ಇಲ್ಲಿ
ಬಲರಾಮ
ಇಂತೇತಕಳಲುತಿಹೆ ಮತ್ತೆ ಕೈಕೊಳ್ಳು ಕಂಸಸಭೆಯನು ನಲಿಸಲಹುದಿದರ ಸೊಲ್ಲು_
ಕೃಷ್ಣ
( ಸ್ವಲ್ಪ ಹೊತ್ತು ಕೊಳಲನ್ನು ನಿಟ್ಟಿಸಿ, ಬಿಡುವ ನಿರ್ಧಾರಕ್ಕೆ ಬಂದು)
ಹೊಳಲಿಗೆ ಕೊಳಲಿದು ತರವಲ್ಲ
ಮಧುರೆಗಿದರ ಸವಿ ಸಲ್ಲ
ರಾಗ - ಮೋಹನ
ಹಳಿಯದಿರೆ ಜರೆಯದಿರೈ
ಮುರಳೀ ನೀನಿಲ್ಲೆ ಇರೈ
ನಾ ಬಹವರೆಗೂ ಇಲ್ಲೆ ಇರೈ
ಆ ಬನದೇವಿಯ ಕೈಯೊಳಿರೈ
ಬೃಂದಾವನ ನೀ ಸಂರಕ್ಷಿಸುತಿರು
ನನ್ನೀ ಮೋಹದ ಮುರಳಿಯನು
ಬನದೆಲರೇ ನೀ ಒಮ್ಮೆಗೆಯೊಮ್ಮೆಗೆ ನುಡಿಸುತ್ತಿರು ಮೆಲ್ದನಿಗಳನು
ಹಕ್ಕಿಗಳೇ ನೀವಿದರಿಂಪಂ ಕೊಂಡಿರಿ ಯಮುನೇ ನೀನಾಂತಿರು ಲಯವ
ಭಾವಂಗಳ ತೇಜಂಗಳ ಕೊಂಡಿರಿ ಚಂದ್ರತಾರೆಗಳೆ ಇದರುಲಿವ
ಗೆಳತಿಯರೇ ನೀವಿದರೊಲವ
ಅಣ್ಣಾ ನಡೆ ಮುರಳಿಯ ಬಿಟ್ಟೆ
ನಡೆ ನಡೆಯಿರಿ ಮಧುರೆಗೆ – ಇನ್ನದ ಮುಟ್ಟೆ
ಹಾಡು : ರಾಗ - ಹಿಂದೋಳ
ಕೊಳಲು ಬನದೊಳಿರಲಿ - ನಾ
ಹೋಗಿಬರುವೆ ಮುರಲೀ ||ಪ||
ಬಹೆನೊ ಬಾರೆನೋ ಬಲ್ಲೆನೇ - ವಿಧಿ,
ಯಿತ್ತುದೊಲ್ಲೆನೆಂದೆಂಬೆನೇ
ಹಳುವೊ ಹೊಳಲೊ ಹರಿ ಕರೆವೆಡೆಗೋಗೊಡು ತಡಿ ಮುಂದಿಡದೆಯೆ ಹಿಂದೆಗೆವೆನೆ ನಾ - ಕೊಳಲು
ಮಿಕ್ಕ ಜಗಕಿದರ ಮಧುರ ಭಾವಗಳ್ ತಕ್ಕುವಲ್ಲವೇನೋ
ಅಹಂಮದವುಕ್ಕಿ ಸೊಕ್ಕಿ ನಡೆವರಿಗೆ
ಉಕ್ಕೆ ತಕ್ಕುದೇನೋ – ಕೊಳಲು
ಮನದ ರಥ ಮಧುರೆ ನೇರಕೆ
ಪಯಣ ಸಜ್ಜಾಗೆ ದೂರಕೆ
ಸನಿಯದೀ ಬನ
ನೇಹದೀಜನ
ಬೇರೆ ಲೋಕದವರೋ
ಎಂದೆ ಕಾಣುತಿಹರೋ - ಕೊಳಲು
ಬಗೆಯ ಕಳವಳ ಎದೆಯ ತಳಮಳ
'ಮರಳಿ ಬಾರೆ' ಎನ್ನೆ
ಎಚ್ಚರಕ್ಕೆ ಬಹ ಕನಸಿನಂತಹಾ
ಇಂದೆ ಆಯ್ತು ನಿನ್ನೆ - ನಾ
ಹೋಗಿಬರುವೆನೆನ್ನೆ – ಕೊಳಲು
ಎನ್ನ ವಂಶವೇ ಆತ್ಮದಂಶವೇ
ನಿನ್ನ ಬನದಿ ಬಿಡುವೆ
ಆದೊಡೆದೆಯೊಳಿಡುವೆ
ನೆನೆವ ಹಕ್ಕಿ ಹಾಡೆ
ಇರಳು ಚುಕ್ಕಿ ಸೂಡೆ
ಹೊನಲು ದನಿಗೈಯೆ ಹಳುವು ಮರ್ಮರಿಸೆ
ಸುಗ್ಗಿ ಗಾಳಿಯಾಡೆ
ಏಕೊ ಹಿಗ್ಗುಮೂಡೆ – ಕೊಳಲು
ಆಲದೆಲೆಯ ಮೇಲೆ
ಕೆಡೆವ ಹರಿಯ ಹೋಲೆ
ನನ್ನ ನೇಹ ಮುದ ಬಿನದಗಳೆಲ್ಲವು
ನಿನ್ನಾಸರೆವಡೆದುಳಿವಂ ಕೊಳ್ಳಲಿ.. ಕೊಳಲು ಬಹೆನೊ ಬಾರೆನೋ ಅರಿಯೆ ನಾ... ನಿ_
ಮ್ಮೊಲುಮೆ ಬೆಂಬಳಿಯೊಳಿರುವೆ ನಾ
ಹೊಳಲೊ ಹಳುವೂ ಶಿವ ಕರೆವೆಡೆಗೋಗೊಡು_ -
ತಡಿ ಮುಂದಿಡುವೆನು ಹರಸಿ ಬೀಳ್ಕೊಡಿ – ಕೊಳಲು
(ಗಂಡುಹುಡುಗರೆಲ್ಲ 'ಬನ್ನಿರೋ' ಎಂದು ಮತ್ತೆ ಹಾಡುವುದಕ್ಕೆ ಪ್ರಾರಂಭಿಸುವಾಗ ಹೆಂಗಸರು ಕೃಷ್ಣನ ನಿರ್ಧಾರಕ್ಕೆ ಬೆಚ್ಚಿ ಓಡಿಬಂದು ಕೊಳಲನ್ನೆತ್ತಿಕೊಂಡು ಕೃಷ್ಣನನ್ನು ಅಡ್ಡಗಟ್ಟುತ್ತಾ ಹಾಡುತ್ತಾರೆ.)
**********
ಬಿದ್ದ ವಂಶ ( ಕೊಳಲು ) ಕಂಡು ಭಾವವಂಶಕ್ಕೇ ಘಾತವಾಯಿತು ಎಂದು ಅಕ್ರೂರನು ನೊಂದನು.
ಕೃಷ್ಣನು ಬಲರಾಮನಿಗೆ ಈ ಬಡ ಕೊಳಲ ಮೇಲೆ ಮುನಿಸೇಕೆ? ಗೊಲ್ಲರು ನಾವು. ನಮಗೆ ಇದೇ ಭೂಷಣವೆಂದನು. ಬಲರಾಮನು ನಮಗೆ ಗೊಲ್ಲರೆಂದು ಆಹ್ವಾನ ಬಂದಿಲ್ಲ. ಶೂರರೆಂದು ಬಂದಿದೆ. ಈ ಕೊಳಲು ಪಟ್ಟಣಕ್ಕಲ್ಲ. ಹಳ್ಳಿಗೆ ಸರಿಯೆನ್ನುವನು.
ಕೃಷ್ಣನು ಕೊಳಲನ್ನು ಬಿಡುವ ನಿರ್ಧಾರಕ್ಕೆ ಬರುವನು. ಆದರೂ ಅವನಿಗೆ ನೋವು. ತನ್ನ ಒಂದು ಅಂಗವನ್ನೇ ತೆಗೆದು ಬಿಸುಟಂತೆ ಆಗಿದೆಯೆನ್ನುತ್ತಾನೆ. ಇದುವರೆಗೆ ಆದ ಸೊಗಸೆಲ್ಲ ಬಿದ್ದಂತೆ ಆಗಿದೆ. ಬಲರಾಮನು ಮತ್ತೆ ಕೃಷ್ಣನನ್ನು ಸಂತೈಸುವನು. ಹೋಗಲಿ ಮತ್ತೆ ತೆಗೆದುಕೋ. ಕಂಸಸಭೆಯನ್ನು ನಲಿಸಲಿ ಎಂದಾಗ ಕೃಷ್ಣನು ಮಧುರೆಗಿದು ಸಲ್ಲದು. ಹೊಳಲಿಗಲ್ಲ ಈ ಕೊಳಲು ಎನ್ನುವನು.
ನಾನು ಬರುವವರೆಗೂ ಇದನ್ನು ಸಂರಕ್ಷಿಸುತ್ತಿರಿ ಎಂದು ಅರಣ್ಯವನ್ನು, ಬೃಂದಾವನವನ್ನು ಕೇಳುವನು. ನನ್ನನ್ನು ಹಳಿಯದೆ, ಮುನಿಯದೆ ಇಲ್ಲಿಯೇ ಇರು ಎಂದು ಕೊಳಲನ್ನು ಬೇಡುವನು. ಹಕ್ಕಿಗಳು ಇದರ ಇಂಪನ್ನು ಪಡೆದಿರಲಿ. ಯಮುನೆಯು ಇದರ ಲಯವನ್ನು ಹೊಂದಿರಲಿ. ಚಂದ್ರ ತಾರೆಗಳು ಇದರ ಉಲಿಯನ್ನು, ಗೆಳತಿಯರು ಇದರ ಒಲವನ್ನು ಪಡೆಯಲಿ...ನಡೆ ಅಣ್ಣಾ, ಹೋಗುವ ಎನ್ನುವನು. ಮತ್ತೆ ಬರುವೆನೋ, ಬಾರೆನೋ ವಿಧಿಗೇ ಗೊತ್ತು.
ಕಾಡೋ, ಪಟ್ಟಣವೋ ವಿಧಿ ಕರೆದಂತೆ ಓಗೊಡಬೇಕು. ಹಿಂದೆಗೆಯುವವನಲ್ಲ ನಾನು. ಪಯಣಕ್ಕೆ ಎಲ್ಲ ಸಜ್ಜಾಗಲಿ. ಈ ಬನ, ಈ ಜನ, ಈ ಕೊಳಲು...ಎಲ್ಲ ಬೇರೆ ಲೋಕದವರಂತೆ ತೋರುತ್ತಿದೆ.ಹೃದಯದಲ್ಲಿ ಏನೋ ತಳಮಳ. ಮರಳಿ ಬರಲಾರೆ ಇಲ್ಲಿಗೆ ಎಂಬ ಭಾವ.
ಎನ್ನ ಕೊಳಲೇ, ನನ್ನ ಆತ್ಮದ ಅಂಶವೇ ನೀನು. ನಿನ್ನನ್ನು ಇಲ್ಲಿ ಬಿಡುವೆ. ನಾನು ಹೊರಡುವೆ. ಹಕ್ಕಿ ಹಾಡಿದಾಗ, ಚುಕ್ಕಿ ಹೊಳೆದಾಗ ನಿನ್ನ ನೆನೆಯುವೆ. ಸುಗ್ಗಿಯ ಸೊಗಸು ಮೂಡಿದಾಗ ಆಲದೆಲೆಯ ಮೇಲೆ ಮಲಗಿದ ಹರಿಯಂತೆ ನನ್ನ ಸಂತೋಷ, ಮುದ ಎಲ್ಲವೂ ನೀನೆ. ನಿನ್ನ ಒಲುಮೆ ನನ್ನೊಳಿರಲಿ. ಹೊಳಲೋ, ಹಳುವೋ ಶಿವ ಕರೆದಲ್ಲಿಗೆ ಓಗೊಡುತ್ತ ಹೆಜ್ಜೆಗಳನ್ನು ಮುಂದಿಡುವೆನು. ಎಲ್ಲರೂ ನನ್ನ ಹರಸಿ ಬೀಳ್ಕೊಡಿ...ಎನ್ನುವನು.
ಗಂಡಸರೆಲ್ಲ ಪಯಣಕ್ಕೆ ಸಿದ್ಧತೆ ಮಾಡಲು ಹೊರಡುವರು. ಹೆಂಗಸರು ಕೃಷ್ಣನ ಮಾತುಗಳಿಗೆ ಬೆಚ್ಚಿ ಕೊಳಲನ್ನು ಎತ್ತಿಕೊಂಡು ಅವನನ್ನು ಅಡ್ಡಗಟ್ಟುವರು.
ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್ಗಳು