ಅನಸೂಯ ಜಹಗೀರದಾರ
ಅನಸೂಯ ಜಹಗೀರದಾರ
ಅನಸೂಯ ಜಹಗೀರದಾರ ಅವರು ಸಂಗೀತ ಮತ್ತು ಸಾಹಿತ್ಯಲೋಕದಲ್ಲಿ ಕ್ರಿಯಾಶೀಲರಾಗಿದ್ದಾರೆ.
ಅನಸೂಯ ಜಹಗೀರದಾರ ಅವರ ಜನ್ಮದಿನ ಡಿಸೆಂಬರ್ 19.
ಕೊಪ್ಪಳದವರಾದ ಅನಸೂಯ ಜಹಗೀರದಾರ ಎಂ.ಎ., ಬಿ.ಎಡ್ ಪದವಿ ಪಡೆದು ಕೊಪ್ಪಳ ಜಿಲ್ಲೆಯ, ಯಲಬುರ್ಗಾ ತಾಲ್ಲೂಕಿನ ಬೇವೂರು ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದಾರೆ.
ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತರಾದ ಅನಸೂಯ ಜಹಗೀರದಾರ ಹಿಂದೂಸ್ಥಾನಿ ಸಂಗೀತದಲ್ಲಿ ವಿದ್ವತ್ ಪರೀಕ್ಷೆಯಲ್ಲಿ ಉತ್ತೀರ್ಣತೆ ಸಾಧಿಸಿದ್ದಾರೆ. ಅವರು ಅನೇಕ ಶಾಸ್ತ್ರೀಯ ಮತ್ತು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ಬಂದಿದ್ದು ಆಕಾಶವಾಣಿಯಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ಸ್ವಯಂ ಗಝಲ್ ರಚಿಸಿ ಹಾಡುವುದೂ ಅವರ ವಿಶೇಷ ಅಕ್ಕರೆಗಳಲ್ಲೊಂದು.
ಸಾಹಿತ್ಯ ಕೃಷಿಯಲ್ಲಿ ಅನಸೂಯ ಜಹಗೀರದಾರ ಅವರ ವೈವಿಧ್ಯಮುಖಿ ಬರಹಗಳು ಕವನ, ಕಥೆ, ಖಂಡಕಾವ್ಯ, ಲೇಖನ, ಪ್ರಬಂಧ, ಶಿಶುಗೀತೆ, ನಾಟಕಗಳು, ಹನಿಗವನ, ಗಝಲ್, ಶಾಯರಿ, ಹಾಯಿಕು ರೂಪಗಳಲ್ಲಿ ಮೂಡಿದ್ದು ಎಲ್ಲ ಪ್ರಸಿದ್ಧ ನಿಯತಕಾಲಿಕಗಳು ಮತ್ತು ಸಾರ್ವಜನಿಕ ಜಾಲತಾಣಗಳಲ್ಲಿ ನಿರಂತರವಾಗಿ ಮೂಡಿಬರುತ್ತಿವೆ.
ಅನಸೂಯ ಅವರ 'ಒಡಲ ಬೆಂಕಿ' ಕೃತಿ 2014ರಲ್ಲಿ ಪ್ರಕಟಗೊಂಡಿದ್ದು 'ಬೆಂಕಿ ಬೆಳಕು' ಎಂಬ ಕವನ ಸಂಕಲನ, ‘ಆತ್ಮಾನುಸಂಧಾನ' ಎಂಬ ಗಝಲ್ ಸಂಕಲನ, 'ನೀಹಾರಿಕೆ' ಹನಿಗವನ ಸಂಕಲನ, ‘ಸತ್ಯವಾನರು' ಮತ್ತು 'ಪರಿವರ್ತನೆ' ಕಥಾ ಸಂಕಲನಗಳು, 'ಬಣ್ಣದ ಚುಕ್ಕಿ' ಶಿಶುಗೀತೆ, 'ದಮನಿತೆ' ಖಂಡಕಾವ್ಯ, ‘ಯಾಮಿನಿ' ಕಾದಂಬರಿ, 'ವೃತ್ತಿವೃತ್ತಾಂತ' ಲೇಖನಗಳು ಮುಂತಾದವು ಇವರ ಬರಹಗಳಲ್ಲಿ ಸೇರಿವೆ.
ಅನಸೂಯ ಜಹಗೀರದಾರ ಅವರ 'ಒಡಲಬೆಂಕಿ' ಕೃತಿಗೆ ಡಾ. ಡಿ. ಎಸ್. ಕರ್ಕಿ ರಾಜ್ಯಕಾವ್ಯ ಪುರಸ್ಕಾರ ಪ್ರಶಸ್ತಿ, ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಿಶೇಷ ಶಿಕ್ಷಕಿ ರಾಜ್ಯಪ್ರಶಸ್ತಿ ( ಕರ್ನಾಟಕ ಸರಕಾರ 2007), ರಾಜ್ಯ ಕಾವ್ಯಶ್ರೀ ಪ್ರಶಸ್ತಿ ( ಮಂಡ್ಯ ಜಿಲ್ಲೆ ಕಸ್ತೂರಿ ಸಿರಿಗನ್ನಡ ವೇದಿಕೆ ) ಶಿವಮೊಗ್ಗ ಜಿಲ್ಲೆಯ ಕನ್ನಡ ಸಾಹಿತ್ಯ ಘಟಕದ ಕುವೆಂಪು ಪುರಸ್ಕಾರ, ಅಭಿರುಚಿ ಕಥಾ ಪ್ರಶಸ್ತಿಗಳಲ್ಲದೆ ಹಲವಾರು ಸಂಘ ಸಂಸ್ಥೆಗಳ ಸನ್ಮಾನಗಳೂ ಸಂದಿವೆ.
ಅನಸೂಯ ಜಹಗೀರದಾರ ಅವರು ಹಲವಾರು ಕನ್ನಡ ಪರ ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕ ರಾ ಸ ನೌ ಸಂಘ ಜಿಲ್ಲಾ ಘಟಕ ಕೊಪ್ಪಳದಲ್ಲಿ ಹಲವಾರು ವರ್ಷದಿಂದ ನಾಮನಿರ್ದೇಶಿತ ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿದ್ದಾರೆ. ತಿರುಳ್ಗನ್ನಡ ಸಹಕಾರಿ ಪತ್ತಿನ ಸಂಘ ಕೊಪ್ಪಳ ಮಹಿಳಾ ನಿರ್ದೇಶಕರೂ, ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದಾರೆ. ಕೊಪ್ಪಳ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷರಾಗಿಯೂ ಇವರ ಸೇವೆ ಸಂದಿದೆ.
ಅನಸೂಯ ಜಹಗೀರದಾರ ಅವರಿಗೆ ಶುಭಹಾರೈಕೆಗಳು.
Happy birthday Anasuya Shastri 🌷🌷🌷
ಕಾಮೆಂಟ್ಗಳು