ವೆಂಕಟಾಚಲ ಅವಧೂತರು
ವೆಂಕಟಾಚಲ ಪಾಹಿಮಾಂ ವೆಂಕಟಾಚಲ ರಕ್ಷಮಾಂ
ಲೇಖಕಿ: ಸೌಮ್ಯಾ ಸನತ್ Sowmya Sanath
ಸೊಂಟಕ್ಕೊಂದು ತುಂಡು ವಸ್ತ್ರ ಯಾವ ಆರೈಕೆ ಉಪಚಾರಗಳನ್ನೂ ಕಾಣದ ದೇಹದೊಂದಿಗೆ ಅತ್ಯಂತ ತ್ಯಾಗಮಯ ಜೀವನ ನಡೆಸಿ, ಸದಾ ಆತ್ಮನಿಷ್ಠರಾಗಿದ್ದು, ವಿರಕ್ತ ರಾಜಯೋಗಿಯಾಗಿ ಲಕ್ಷಾಂತರ ಜನರ ಸಂಕಷ್ಟಗಳನ್ನು ಪರಿಹರಿಸಿ ಎಲ್ಲರಿಗೂ ದಾರಿದೀಪವಾಗಿ "ನಾನು ದೇವನೂ ಅಲ್ಲ, ದೇವ ಮಾನವನೂ ಅಲ್ಲ, ನಾನೊಬ್ಬ ನಿಮ್ಮಂತೆಯೇ ಸಾಮಾನ್ಯ ಮನುಷ್ಯ” ಎಂದು ಹೇಳುತ್ತಲೇ ಲಕ್ಷಾಂತರ ಜನಮಾನಸದಲ್ಲಿ ಅಚಲರಾಗಿ ನೆಲೆ ನಿಂತ ಮಹಾನ್ ಚೇತನರು ಶ್ರೀ ಸದ್ಗುರುನಾಥ ವೆಂಕಟಾಚಲ ಅವಧೂತರು.
ಮಾರ್ಗಶಿರ ಮಾಸದ ಷಷ್ಠಿ ಇಂದು ಸಖರಾಯಪಟ್ಟಣದ ಗುರುದೇವ ನಮ್ಮೆಲ್ಲರ ಆರಾಧ್ಯದೈವ ಶ್ರೀ ವೆಂಕಟಾಚಲ ಗುರುಗಳ ಜನ್ಮೋತ್ಸವ. 'ಅವಧೂತ’ ಪರಿಕಲ್ಪನೆಗೆ ಸಾಕ್ಷಿಯಾಗಿ ನಿಂತವರು ಸಖರಾಯಪುರಾಧೀಶ ಸದ್ಗುರು ಶ್ರೀ ವೆಂಕಟಾಚಲ ಅವಧೂತರು. ಅಸಂಖ್ಯಾತ ಗುರು ಬಂಧುಗಳಿಂದ, ಸುತ್ತಮುತ್ತಲ ಹಳ್ಳಿಗರಿಂದ ‘ಗುರುನಾಥರು ’ ಎಂದೇ ಕರೆಸಿಕೊಳ್ಳುತ್ತಿದ್ದ ಅವರು, ಬದುಕಿನ ಅರ್ಥವನ್ನು ಸರಳಭಾಷೆಯಲ್ಲಿ ವಿವರಿಸಿದ ದಿವ್ಯಚೇತನ.
ಗುರುನಾಥರು 48ನೇ ವಯಸ್ಸಿಗೆ ಬಾಹ್ಯ ಪ್ರಪಂಚಕ್ಕೆ ಸದ್ಗುರುವಾಗಿ ಪ್ರಕಟರಾದರು. ಶ್ರೀನಿವಾಸಯ್ಯ ಮತ್ತು ಶಾರದಮ್ಮ ದಂಪತಿಗಳಿಗೆ ಸತತವಾಗಿ 3 ಹೆಣ್ಣುಮಕ್ಕಳಾದಾಗ, ತಮ್ಮ ಮನೆದೇವರು ತಿರುಪತಿ ವೆಂಕಟರಮಣಸ್ವಾಮಿಯನ್ನು ಗಂಡು ಸಂತಾನ ಕೊಡಬೇಕೆಂದು ಕೋರಿದ ಫಲವೋ ಎಂಬಂತೆ 1940ನೇ ಇಸವಿ ವಿಕ್ರಮಸಂವತ್ಸರ ಮಾರ್ಗಶಿರ ಮಾಸದ ಷಷ್ಠಿಯಂದು ಗಂಡು ಮಗು ಹುಟ್ಟಿದಾಗ, ಅದೇ ವೆಂಕಟೇಶ್ವರನ ಕೃಪೆಯಿಂದ ಜನಿಸಿದರು ಎಂಬ ನಂಬಿಕೆಯಿಂದ "ವೆಂಕಟಾಚಲ" ಎಂದು ನಾಮಕರಣ ಮಾಡಿದರು.
ಸಹಜವಾದ ಸಂಪ್ರದಾಯದಂತೆ ಮೂರನೇ ವರ್ಷಕ್ಕೆ ಬಾಲಕ ವೆಂಕಟಾಚಲನಿಗೆ ಚೌಲ ಕಾರ್ಯವನ್ನು ಮಾಡಿದ್ದಲ್ಲದೇ, ಸಮಯ ಸಿಕ್ಕಾಗಲೆಲ್ಲಾ ಮಗನನ್ನು ತಮ್ಮ ತೊಡೆಯಮೇಲೆ ಕುಳ್ಳಿರಿಸಿಕೊಂಡು ರಾಮಾಯಣ, ಮಹಾಭಾರತಗಳಲ್ಲದೇ, ಪುರಾಣ ಪುರುಷರ ಕಥೆಗಳನ್ನು ಹೇಳುತ್ತಿದ್ದರು. ಉಳಿದೆಲ್ಲಾ ಕಥೆಗಳಿಗಿಂತಲೂ ಬಾಲಕ ವೆಂಕಟಾಚಲರಿಗೆ ಧ್ರುವಕುಮಾರನ ಕತೆ ಅತ್ಯಂತ ಪ್ರಭಾವ ಬೀರಿ ಮತ್ತೆ ಮತ್ತೇ ಅದೇ ಕಥೆಯನ್ನು ಹೇಳಲು ತಮ್ಮ ತಂದೆಯವರಿಗೆ ದುಂಬಾಲು ಬೀಳುತ್ತಿದ್ದಂತೆ. ಒಮ್ಮೆ ಅದೇ ಕೇಳುತ್ತಿರುವಾಗಲೇ, ನಾನೂ ಸಹಾ ಧ್ರುವನಂತೆ ನಕ್ಷತ್ರವಾಗಬಹುದೆ? ಎಂದು ಕುತೂಹಲದಿಂದ ತಂದೆಯನ್ನು ಕೇಳಿದ ಬಾಲಕನಿಗೆ, ಅವರ ತಂದೆಯವರು ಖಂಡಿತವಾಗಿಯೂ ನೀನು ಸಹಾ ಧ್ರುವನಂತೆ ಭಕ್ತಿಯನ್ನು ಬೆಳೆಸಿಕೊಂಡು, ಯಾರ ಮನಸ್ಸನ್ನೂ ಯಾವುದೇ ಕಾರಣದಿಂದಲೂ ನೋಯಿಸದೇ, ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡಿದಲ್ಲಿ ನೀನೂ ಸಹಾ ಧ್ರುವನಂತೆ ಪ್ರಖ್ಯಾತನಾಗಬಹುದು ಎಂದು ಹೇಳಿದ್ದರಂತೆ. ಅಂದು ತಂದೆಯವರು ಹೇಳಿದ ಮಾತು ಮುಂದೆ ನಿಜವಾಗಿ ವೆಂಕಟಾಚಲರನ್ನು ಕಾಣಲು ಪ್ರತಿ ದಿನವೂ ಸಹಸ್ರಾರು ಜನರು ಅವರ ಮನೆಗೆ ಬರುವಷ್ಟು ಪ್ರಖ್ಯಾತರಾದದ್ದು ಈಗ ಇತಿಹಾಸ.
ಶೃಂಗೇರಿಯ ಶಾರದಾ ಪೀಠದ 34ನೇ ಜಗದ್ಗುರುಗಳಾದ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳಿಂದ ಭಾರೀ ಪ್ರಭಾವಿತರಾಗಿ ಶೃಂಗೇರಿ ಪೀಠದೊಡನೆ ನಿಕಟ ಸಂಪರ್ಕವಿಟ್ಟುಕೊಂಡಿದ್ದಲ್ಲದೇ, ಪ್ರತೀ ತಿಂಗಳು ಶೃಂಗೇರಿ ಮಠಕ್ಕೆ ಹೋಗಿ ಗುರುವಂದನೆ ಮಾಡಿ ಬರುವುದನ್ನು ಕಡ್ಡಾಯವಾಗಿ ರೂಢಿಯಲ್ಲಿಟ್ಟುಕೊಂಡು ಗುರುವಿನ ಪೂರ್ಣಾಶೀರ್ವಾದವನ್ನು ಹೊಂದಿದ್ದರು. ಪ್ರತಿನಿತ್ಯ ತಪ್ಪದೆ ಸಖರಾಯಪಟ್ಟಣದಿಂದ ಶೃಂಗೇರಿ ಗುರುಗಳಿಗೆ ಭಿಕ್ಷೆ ಹೋಗುತ್ತಿತ್ತು.
ತಂದೆ ಸತ್ತ ಕೆಲವೇ ದಿನಗಳಲ್ಲೇ ಪ್ರೀತಿಯ ಸೋದರನೂ ಇಹಲೋಕ ತ್ಯಜಿಸಿದ್ದು ವೆಂಕಟಾಚಲರ ಬದುಕಿನಲ್ಲಿ ತಿರುವನ್ನು ತಂದಿತು ಎಂದರು ತಪ್ಪಾಗದು. ಜೀವನ ಎಂದರೆ ನಶ್ವರ, ಹಾಗಾಗಿ ಇರುವಷ್ಟು ಸಮಯದಲ್ಲೇ ಎಷ್ಟು ಸಾಧ್ಯವೋ ಅಷ್ಟು ಪರೋಪಕಾರವನ್ನು ಮಾಡಬೇಕು ಎಂದನಿಸಿದ್ದಲ್ಲದೇ, ಅವರ ಮನಸ್ಸು ವಿರಕ್ತಿಯೆಡೆಗೆ ಸೆಳೆದು ಅಂದಿನಿಂದ ನೀಳವಾದ ಗಡ್ಡ ಕತ್ತರಿಸಿದ ಕೂದಲು ಮತ್ತು ಉಡಲು ಒಂದು ಪಂಚೆ ಅಥವಾ ಟವೆಲ್ ಅಷ್ಟೇ ಅವರ ವೇಷಭೂಷಣವಾಯಿತು. ಇಷ್ಟರ ಮಧ್ಯದಲ್ಲೇ ಅವರು ಯಾರಿಗೆ ಏನೇ ಹೇಳಿದರೂ ಆವೆಲ್ಲವೂ ಅಕ್ಷರಶಃ ಸತ್ಯವಾಗುತ್ತಿದ್ದ ಕಾರಣ, ಅವರನ್ನು ಜನರು ಗುರುನಾಥ ಎಂದು ಕರೆಯಲಾರಂಭಿಸಿದ್ದಲ್ಲದೇ, ಅವರ ಬಳಿ ದುಃಖವನ್ನು ಹೇಳಿಕೊಂಡು ಪರಿಹಾರವನ್ನು ಬಯಸಿ ಬಂದವರ ಮಾತುಗಳನ್ನು ಅತ್ಯಂತ ತಾಳ್ಮೆಯಿಂದ ಕೇಳಿ ಅವರಿಗೆ ಸಮಾಧಾನಕರ ರೀತಿಯಲ್ಲಿ ತಾಯಿಯಂತೆ ಪರಿಹಾರವನ್ನು ಸೂಚಿಸುತ್ತಿದ್ದದ್ದಲ್ಲದೆ, ಯಾವುದೇ ಕಾರಣಕ್ಕೂ ಆಡಂಬರ ಮತ್ತು ತೋರಿಕೆಯ ಪ್ರೀತಿಯನ್ನು ಸಹಿಸುತ್ತಿರಲಿಲ್ಲ. ಬದಲಾಗಿ ಪರಿಶುದ್ಧವಾದ ಭಕ್ತಿಯೊಂದೇ ದೇವರನ್ನು ಮುಟ್ಟುವ ದಾರಿ ಎಂದೇ ಎಲ್ಲರಿಗೂ ತಿಳಿ ಹೇಳುತ್ತಿದ್ದರು.
ವೆಂಕಟಾಚಲ ಅವಧೂತರು
ಭಾರತೀಯ ಧರ್ಮಗಳಲ್ಲಿ ಅಹಂಕಾರ-ಪ್ರಜ್ಞೆ, ದ್ವಂದ್ವತೆ ಮತ್ತು ಸಾಮಾನ್ಯ ಲೌಕಿಕ ಕಾಳಜಿಗಳನ್ನು ಮೀರಿದ, ಮತ್ತು ಪ್ರಮಾಣಿತ ಸಾಮಾಜಿಕ ಶಿಷ್ಟಾಚಾರವನ್ನು ಪರಿಗಣಿಸದೆ ವರ್ತಿಸುವ ಒಂದು ರೀತಿಯ ಅತೀಂದ್ರಿಯವಾದ ಜ್ಞಾನ ಹೊಂದಿರುವ ಸಂತರೆ ಅವಧೂತರು. ಇವರು ಸ್ವಯಂಘೋಷಿತ ಅವಧೂತರಲ್ಲ. ಪ್ರಪ್ರಥಮ ಬಾರಿಗೆ ಶ್ರೀ ಶೃಂಗೇರಿ ಶಾರದಾ ಪೀಠದ 36ನೇ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಇವರನ್ನು ಅವಧೂತರೆಂದು ಕರೆದರು. ಆನಂತರ ಇವರು "ಶ್ರೀ ವೆಂಕಟಾಚಲ ಅವಧೂತ"ರೆಂದು ಪ್ರಕಟವಾದರು.
ಪ್ರತಿಯೊಂದು ಜೀವಿಯೂ ಪೂರ್ಣತ್ವವನ್ನು ಪಡೆಯಲು ಮುನ್ನಡೆಯುತ್ತಿರುವುದಾದರೂ ತಾಮಸಿಕವಾದ ಮನಸ್ಸಿಗೆ ದೇವರಿದ್ದಾನೆ ಎಂಬ ಭಾವನೆ ಬರಲು ಎಷ್ಟೋ ಜನ್ಮಗಳು ಬೇಕು. ದೇವರನ್ನು ಆರಾಧಿಸುವಂಥ ಮನಸ್ಥಿತಿ ಬರಲು ಇನ್ನೆಷ್ಟೋ ಜನ್ಮಗಳು ಬೇಕು. ಹಾಗೆಯೇ ಮುಂದುವರಿದು ತನ್ನ ನಿಜಸ್ಥಿತಿಯನ್ನು ಅರಿಯುವಂತಾಗಲು ಮತ್ತೆಷ್ಟೋ ಜನ್ಮಗಳು ಬೇಕಾಗುತ್ತವೆ. ಹೀಗೆ ಹಿಂದೆಷ್ಟೋ ಜನ್ಮಗಳು ವ್ಯರ್ಥವಾಗಿ ಹೋಗಿರುವ ಕಾರಣ ಸತ್ಯವನ್ನರಿಯಲು ಈ ಕ್ಷಣದಿಂದಲೇ ಪ್ರಾಮಾಣಿಕವಾಗಿ ಪ್ರಯತ್ನಿಸಿ. ನಿಮ್ಮ ಬೆಂಗಾವಲಿಗೆ ನಾನಿರುತ್ತೇನೆ' ಎಂದು ಗುರುನಾಥರು ಹೇಳುತ್ತಿದ್ದರಲ್ಲದೆ ಸಾಧಕರಿಗೆ ಬರುವಂತಹ ಸಾಧಕ ಭಾದಕಗಳನ್ನು ಸರಳೋಪಾಯದಿಂದ ಪರಿಹರಿಸುತ್ತಿದ್ದರು.
ಭವರೋಗ ವೈದ್ಯರು .
ಗುರುನಾಥರು ‘ಸ್ವಾತ್ಮಾರಾಮಂ, ನಿಜಾನಂದಂ, ಶೋಕ-ಮೋಹವಿವರ್ಜಿತಂ’ ಎಂಬ ಮಾತಿಗೆ ಸಾಕ್ಷಿಯಾಗಿ ಆನಂದವೇ ದೇವರು, ಆನಂದ ನೀಡುವ ಕಾರ್ಯಮಾಡಿ ಆನಂದ ಹೊಂದಿ ಅಂತಹ ಆನಂದವನ್ನು ಎಲ್ಲರೂ ತಾವು ತಮ್ಮಲ್ಲಿ ಕಂಡು ಕೊಳ್ಳಬೇಕಲ್ಲದೆ ಬೇರೆಯವರಿಗೆ ಹಿತವಾಗುವ ಕಾರ್ಯಗಳನ್ನು ಮಾಡಿ ಅದರಿಂದ ತೃಪ್ತಿಯನ್ನು ಅನುಭವಿಸಿ ಆನಂದ ಹೊಂದುವುದೆಂದು ಗ್ರಹಿಸಬೇಕು.' ಎನ್ನುತ್ತಾ ಭವವನ್ನೇ ಗೆದ್ದು ಇತರರಿಗೂ ದಾರಿ ತೋರಿಸಿದ ಭವರೋಗ ವೈದ್ಯರೇನಿಸಿದರು.
ದಯಾಮಯ ಗುರು ಕರುಣಾಮಯ
ಸದ್ಗುರು ತೋರುವ ದಯೆ ಹಾಗೂ ಪ್ರೀತಿಯನ್ನು ಈ ಜಗದಲ್ಲಿ ಬೇರೆ ಯಾರೂ ಕೊಡಲಾರರು. ಮಹಾತ್ಮರು ಹೇಳುವುದೇನೆಂದರೆ ಮಾತೃವಾತ್ಸಲ್ಯಕ್ಕಿಂತಲೂ ಸದ್ಗುರು ತೋರುವ ಪ್ರೀತಿವಾತ್ಸಲ್ಯ ಮಹತ್ತಾದುದು. ತಾಯಿ ತನ್ನ ಮಕ್ಕಳನ್ನು ಒಂದು ಜನ್ಮದಲ್ಲಿ ಮಾತ್ರ ಸಲಹಬಲ್ಲಳು. ಆದರೆ ಸದ್ಗುರುವು ಶಿಷ್ಯನನ್ನು ಅವನು ಭವಸಾಗರ ದಾಟುವವರೆಗೂ ಕಾಪಾಡುತ್ತಾನೆ. ಹಾಗೆಯೇ ಕಾಮಧೇನು, ಕಲ್ಪವೃಕ್ಷಗಳು, ಭಕ್ತರು ಕೇಳಿದ್ದನ್ನು ಕೊಡುವ ಶಕ್ತಿ ಹೊಂದಿರುತ್ತವಲ್ಲದೆ ಆದರಿಂದ ಭಕ್ತರ ಏಳಿಗೆಯಾಗುವುದೋ ಇಲ್ಲವೋ ಎಂಬ ಪರಿಕಲ್ಪನೆ ಅವುಗಳಿಗೆ ಇರುವುದಿಲ್ಲ. ಆದರೆ ಸದ್ಗುರುವು ಶಿಷ್ಯರ ಮನದೊಳಗಿನ ಕಾಮನೆಯನ್ನು ಅಳಿಸಿ ಎಂಥ ಪರಿಸ್ಥಿತಿಯಲ್ಲೂ ಯಾರಿಗೂ ತೊಂದರೆಯಾಗದಂತಹ, ಯಾರಿಂದಲೂ ಏನೂ ಯಾಚಿಸದಂತಹ ಮನವನ್ನು ಕೊಟ್ಟು ಶಿಷ್ಯನನ್ನು ಉದ್ಧರಿಸುತ್ತಾನೆ. ಅದಕ್ಕೆ ಸದ್ಗುರುವು ಕಾಮಧೇನು-ಕಲ್ಪವೃಕ್ಷಕ್ಕಿಂತ ಮಿಗಿಲೆಂದು ಬಲ್ಲವರು ಹೇಳುತ್ತಾರೆ. ಅಂತಹ ಸದ್ಗುರುವಿನ ಕೃಪೆಗೆ ಪ್ರೇಮದ ಅಮೃತಸ್ಪರ್ಶವನ್ನು ನೀಡಿದವರು ಸಖರಾಯ ಪಟ್ಟಣದ ಸದ್ಗುರುಗಳಾದ ಶ್ರೀ ವೆಂಕಟಾಚಲ ಅವಧೂತರು.
ಕಾರುಣ್ಯ ಮೂರ್ತಿ
'ವಿದ್ಯೆಗೆ ವಿನಯವೇ ಭೂಷಣ' ಎಂಬ ನಾಣ್ಣುಡಿಯು ಎಲ್ಲರಿಗೂ ತಿಳಿದಿರುವುದೇ. ಇಂದು ಸ್ವಲ್ಪ ವಿದ್ಯಾವಂತರೋ, ವೇದಾಂತಿಗಳೋ, ಪ್ರವಚನಕಾರರೋ, ಸಿದ್ಧಪುರುಷರೋ, ಮಠಾಧೀಶರೋ ಆದರೆ ಸಾಕು. ವಿನಯ ಎಂಬುದು ಅಂಥವರಲ್ಲಿ ಕಾಣುವುದೇ ಅಪರೂಪವಾಗಿರುತ್ತದೆ. ಕೆಲವೊಮ್ಮೆ 'ಯಾವ ವಿದ್ಯೆಯನ್ನು ಕಲಿತರೆ ಎಲ್ಲಾ ವಿದ್ಯೆಗಳೂ ಕರಗತವಾಗಿಬಿಡುತ್ತವೋ' ಅಂತಹ ಬ್ರಹ್ಮವಿದ್ಯೆಯ ಧಣಿ ಗುರುನಾಥರು. ಆತ್ಮಾನುಭವ ಪಡೆದ ಭಗವತ್ ಸ್ವರೂಪಿ, ಕೆಲವೊಮ್ಮೆ ಹೋದ ಶಿಷ್ಯರಿಗೆ ತಾವು ಊಟಮಾಡುತ್ತಿದ್ದುದನ್ನು ತಿನ್ನಿಸುವುದು, ಅವರೂ ತಿನ್ನುವುದು. ಕೆಲವೊಮ್ಮೆ ಕೈತುತ್ತು ಹಾಕುವುದು. ಕೆಲವೊಮ್ಮೆ ತಾವೇ ಸ್ವತಃ ಬಡಿಸುವುದು. ಕೆಲವೊಮ್ಮೆ ಭಕ್ತರುಗಳ ಪಾದಪೂಜೆ ಮಾಡುವುದು, ಅದೇ ತೀರ್ಥವೆಂದು ತೆಗೆದುಕೊಳ್ಳುವುದು, ಕೆಲವೊಮ್ಮೆ. 'ನನ್ನನ್ನು ನೋಡಲು ಎಷ್ಟು ದೂರದಿಂದ ಬಂದೆಯಯ್ಯಾ?' ಎಂದು ವಿಚಾರಿಸುವುದು ಪ್ರೀತಿಯಿಂದ, ತುಂಬಾ ದಣಿವಾಯಿತೆ? ಎಂದು ಇತ್ಯಾದಿಯಾಗಿ ಪ್ರೀತಿಯಿಂದ ವಿಚಾರಿಸುತ್ತಿದ್ದರಂತೆ , ಯಾರಾದರೂ ಸದ್ಗುರುಗಳಿಗೆ ಪಾದಪೂಜೆ ಮಾಡಬೇಕು. ಗಂಧ ಹಚ್ಚಬೇಕು ಎಂಬ ಭಾವನೆ ಹೊತ್ತು ಗುರುನಿವಾಸಕ್ಕೆ ಬರುತ್ತಿದ್ದಂತೆ, ಅವರಿಗೇ ಪಾದಪೂಜೆ ಮಾಡಿ, ಗಂಧ ಹಚ್ಚಿ, ಆರತಿ ಮಾಡಿ ನಮಸ್ಕರಿಸುತ್ತಿದ್ದರಂತೆ. ಸದ್ಗುರುನಾಥರು ತಾನು ಯಾವಾಗಲೂ ಏನೂ ಬಯಸದೆ ತನ್ನಲ್ಲಿದ್ದ ಆನಂದವನ್ನು ಬಂದವರಿಗೆಲ್ಲಾ ಉಣಬಡಿಸುತ್ತಾ, ತನ್ನದೇ ಆದ ವಿಶಿಷ್ಟ ರೀತಿಯಿಂದ ತನ್ನಲ್ಲಿಗೆ ಬಂದವರಿಗೆ ತಾಯಿಯಂತೆ ವಾತ್ಸಲ್ಯ ತೋರುತ್ತಾ, ತಂದೆಯಂತೆ ಕೆಲವೊಮ್ಮೆ ಶಿಕ್ಷಿಸಿ, ಪ್ರೀತಿಯಿಂದ ಸನ್ಮಾರ್ಗದಲ್ಲಿ ನಡೆಯುವ ದಾರಿ ತೋರುತ್ತಾ ಗುರುವಾಗಿ ಅಜ್ಞಾನದ ಅಂಧಕಾರವನ್ನು ಕಳೆದು ತನ್ನನ್ನೇ ತಾನು ಧಾರೆಯೆರೆದ ಮಹಾನ್ ಸಂತ.
ಇಂಥ ಮಹಾಪುರುಷರನ್ನು ಕಂಡ ಪ್ರತಿಯೊಬ್ಬರೂ ಧನ್ಯ ಧನ್ಯ ಧನ್ಯ.
ಜ್ಞಾನದಾತ ಸದ್ಗುರುನಾಥ :
ಗುರು ಎಂಬುದು ಏನು? ಗುರುವಿನ ಮಹತ್ವ ಏನು? ಸದ್ಗುರುವಿನ ಸೇವೆ ಹೇಗೆ ಮಾಡಬೇಕು, ಗುರುವಿನ ಕೃಪೆಗೆ ಹೇಗೆ ಪಾತ್ರರಾಗಬೇಕು ಎಂಬುದನ್ನು ಭಕ್ತವೃಂದಕ್ಕೆ ಉಪದೇಶಿಸುತ್ತಿದ್ದರು. "ನಮಸ್ಕಾರಕ್ಕಲ್ಲಯ್ಯ ಗುರು ನಿನ್ನ ನಿತ್ಯದ ಸಾಧನೆಗೆ ಗುರು, ಆಚರಣೆಗೆ ಸನ್ಯಾಸಕ್ಕಿಂತ ಗೃಹಸ್ಥಾಶ್ರಮವೇ ಶ್ರೇಷ್ಠ, ಪರಮಾರ್ಥದಲ್ಲಿ ಏನೂ ಇಲ್ಲ, ಎಲ್ಲವೂ ಲೌಕಿಕದಲ್ಲಿದೆ. ಕುಟುಂಬ ಅಥವಾ ಸಂಸಾರವೆಂದರೆ ಕೇವಲ ಗಂಡ-ಹೆಂಡತಿ ಮಕ್ಕಳು ಮಾತ್ರವಲ್ಲಾ. ಸಂಸಾರ ಎಂದರೆ ಇಡೀ ಪ್ರಪಂಚ. ಹಾಗಾಗಿ ಹೇಗೆ ಸಮುದ್ರವು ತನ್ನ ಬಳಿ ಏನನ್ನೂ ಇಟ್ಟುಕೊಳ್ಳದೆ, ಎಲ್ಲವನ್ನೂ ಹೊರಗೆ ಹಾಕುತ್ತದೆಯೋ ಹಾಗೆಯೇ ಮನ್ನಸನ್ನು ಇಟ್ಟುಕೊಳ್ಳಬೇಕು ಪಾದಪೂಜೆಗಿಂತ ಪದ ಪೂಜೆ ಮುಖ್ಯ ಎಂದು ಪದೇ ಪದೇ ಹೇಳುತ್ತಿದ್ದದ್ದಲ್ಲದೇ, ಕೊಟ್ಟವರನ್ನು ಮರೀಬೇಡ, ನಂದೇ ಹೆಚ್ಚು ಅಂತ ಮೆರೀಬೇಡ, ಯಾರ ಮನಸ್ಸನ್ನೂ ಮುರೀಬೇಡ, ಮನಸ್ಸು ಮಾಗಬೇಕು, ಬಾಳು ಹಣ್ಣಾಗಬೇಕು ಎಂದು ಹೇಳುತ್ತಲೇ, 2010ರಲ್ಲಿ ತಮ್ಮ ಭೌತಿಕ ದೇಹವನ್ನು ತ್ಯಜಿಸಿ ವಿಶ್ವವ್ಯಾಪಿಯಾದರು. ದೇಹ ಬಿಡುವಾಗ ಯಾವ ಉದ್ವಿಗ್ನತೆಯಾಗಲಿ, ಸಂಕಷ್ಟಗಳಾಗಲಿ ಅವರಲ್ಲಿ ಇರಲಿಲ್ಲ. ಅವರು ಸಾವನ್ನು ಗೆದ್ದಿದ್ದರು. .ವೆಂಕಟಾಚಲ ಎಂಬ ಹೆಸರಿನಿಂದ ಜನಿಸಿ, ಸಮಸ್ತ ಜನರಿಂದ ‘ಗುರುನಾಥ’ ಎಂದೇ ಕರೆಸಿಕೊಂಡ ಅವರು ಅನಂತದಲ್ಲಿ ಲೀನಗೊಂಡು ಇಲ್ಲಿಗೆ 14 ವರ್ಷಗಳು ಕಳೆದಿವೆ. ಅವರು ಸಾಮಾನ್ಯರೊಡನೆ ಸಾಮಾನ್ಯರಂತೆ ಇದ್ದು, ಯೋಗಿಗಳೊಡನೆ ಯೋಗಿಗಳೇ ಆಗಿ, ಆಡಂಬರದಿಂದ ಸದಾ ಮುಕ್ತರಾಗಿ ‘ಅವಧೂತ’ ಸ್ಥಿತಿಯ ಮರ್ಮವನ್ನು ಜನತೆಗೆ ತೋರಿಸಿಕೊಟ್ಟ ಮಹಾತ್ಮರು.
||ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
ಕೃತಜ್ಞತೆ: ಲೇಖಕಿ ಸೌಮ್ಯಾ ಸನತ್ ಅವರಿಗೆ
Venkatachala Avadhoota
ಕಾಮೆಂಟ್ಗಳು