ಭಾರತಿ ಮೋಹನ ಕೋಟಿ
ಭಾರತಿ ಮೋಹನ ಕೋಟಿ
ಮಹಾನ್ ಸಾಹಿತಿಗಳಾದ ಶಾಂತರಸ ಹೆಂಬೆರಾಳು ಅವರ ಸುಪುತ್ರಿಯಾದ ಭಾರತಿ ಮೋಹನ ಕೋಟಿ ಅವರು ಸ್ವಯಂ ಬರಹಗಾರ್ತಿಯಾಗಿ ಮತ್ತು ಉಪನ್ಯಾಸಕಿಯಾಗಿ ಅಪಾರ ಸಾಧನೆ ಮಾಡಿದವರಾಗಿದ್ದಾರೆ.
ಭಾರತಿ ಅವರು 1959ರ ಫೆಬ್ರವರಿ 23ರಂದು ರಾಯಚೂರಿನಲ್ಲಿ ಜನಿಸಿದರು. ತಂದೆ ಶಾಂತರಸ ಹೆಂಬೆರಾಳು. ತಾಯಿ ಲಕ್ಷ್ಮೀದೇವಿ ಶಾಂತರಸ ಹೆಂಬೆರಾಳು. ಭಾರತಿ ಅವರು ಎಂ ಎ (ರಾಜ್ಯಶಾಸ್ತ್ರ) ಮತ್ತು ಎಲ್ ಎಲ್ ಬಿ ಶೈಕ್ಷಣಿಕ ಸಾಧನೆಗಳನ್ನು ಪೂರೈಸಿದರು.
ಭಾರತಿ ಮೋಹನ ಕೋಟಿ ಅವರು ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೊಪ್ಪಳ, ಮಾಗಡಿಯಲ್ಲಿ ಸೇವೆ ಸಲ್ಲಿಸಿ ನಂತರ ಗದಗಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 30 ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಎಲ್ಲ ಬಗೆಯ ಓದು, ಬರವಣಿಗೆ, ಪ್ರವಾಸ, ಸಮಾಜ ಸೇವೆ, ಬಡ ವಿದ್ಯಾರ್ಥಿ/ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲ ಸಹಕಾರ ನೀಡುವುದು, ವೈದ್ಯಕೀಯ ವಿಷಯಗಳ ವಿಶೇಷ ಓದು ಮತ್ತು ಅಂಥ ಲೇಖನಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸುವುದು ಮುಂತಾದವು ಭಾರತಿ ಮೋಹನ ಕೋಟಿ ಅವರ ಆಪ್ತ ಹವ್ಯಾಸಗಳಾಗಿವೆ.
ಭಾರತಿ ಅವರ ಪತಿ ಮೋಹನ ಟಿ ಕೋಟಿ ಅವರು ಗದಗ್ನ ಎ ಪಿ ಎಂ ಸಿ ಯಲ್ಲಿ ವರ್ತಕರು ಹಾಗೂ ಅಲ್ಲಿನ ಎಂ ಎಲ್ ಸಿ ಬ್ಯಾಂಕಿನ ಅಧ್ಯಕ್ಷರು. ಈ ದಂಪತಿಗಳ ಹಿರಿಯ ಮಗಳು ಶಿಲ್ಪಾ ನಿಲೇಶ ರಾಜೂರೆ ಎಂ ಬಿ ಎ ಅವರು ಅಮೇರಿಕೆಯ ಡಲ್ಲಾಸನಲ್ಲಿ ಸಾಫ್ಟವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಕಿರಿಯ ಮಗಳು ಶ್ವೇತಾ ಸುರೇಶ ಪಾಟೀಲ ಎಂ ಎ (ಕನ್ನಡ), ಅವರು ಬೆಂಗಳೂರಿನಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿರುವುದರ ಜೊತೆಗೆ ಆಸಕ್ತರಿಗೆ ಕನ್ನಡವನ್ನು ಬೋಧಿಸುತ್ತಿದ್ದು, ಸಾಹಿತ್ಯಾಸಕ್ತರಾಗಿ ಮತ್ತು ಬರಹಗಾರ್ತಿಯಾಗಿಯೂ ಸಾಧನೆ ಮಾಡಿದ್ದಾರೆ. ಅವರು'ಪುಟಾಣಿ ಕಂಗಳಲಿ ನೂರು ಬಣ್ಣಗಳು' ಪ್ರವಾಸ ಕಥನ ಹಾಗೂ 'ಗಿಲಕಿ' ಮಕ್ಕಳ ಕವಿತಾ ಸಂಕಲನ ಪ್ರಕಟಿಸಿದ್ದಾರಲ್ಲದೆ, ಅವರ ವಿವಿಧ ಲೇಖನ ಪ್ರಬಂಧಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಭಾರತಿ ಮೋಹನ ಕೋಟಿ ಅವರ ಪ್ರಕಕಟಿತ ಕೃತಿಗಳಲ್ಲಿ 'ಮರಳುಗಾಡಿನ ಕುಸುಮ' (ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ) ವಿವಿಧ ಸಾಮಾನ್ಯ ಮಹಿಳೆಯರ ಅಸಾಮಾನ್ಯ ಬದುಕಿನ ಆತ್ಮವೃತ್ತಾಂತಗಳಾಗಿವೆ. 'ಬಾನಿಗೊಂದು ಎಲ್ಲೆ ಎಲ್ಲಿದೆ' (ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ) ಸಂಕಷ್ಟದಲ್ಲಿದ್ದು ಬದುಕನ್ನು ಎದುರಿಸಿದ ವಿವಿಧ ಮಹಿಳೆಯರ ಆತ್ಮ ವೃತ್ತಾಂತಗಳಾಗಿವೆ. 'ಅಸ್ಥಿಪಂಜರ ಮತ್ತು ಇತರ ಕಥೆಗಳು' ಅಮೃತಾ ಪ್ರೀತಂ ಅವರ ಕಥೆಗಳ ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ. 'ಬೊಗಸೆಯೊಳಗಿನ ಸಂಜೆ' ಸ್ವರಚಿತ ಕವಿತಾ ಸಂಕಲನ. ನ್ಯಾಷನಲ್ ಬುಕ್ ಟ್ರಸ್ಟ ಆಫ್ ಇಂಡಿಯಾ ( NBT) ಅವರು ಇವರ ಹಲವಾರು ಮಕ್ಕಳ ಚಿತ್ರ ಕಥೆಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ.
ಭಾರತಿ ಮೋಹನ ಕೋಟಿ ಅವರ 'ಮರಳುಗಾಡಿನ ಕೃತಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಇಂತಿವೆ:
1. ಕರ್ನಾಟಕ ಲೇಖಕಿಯರ ಸಂಘದ 'ಅತ್ಯುತ್ತಮ ಅನುವಾದಿತ ಕೃತಿ' ಎಚ್. ವ್ಹಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ - 2003
2. ವರ್ಷದ ಶ್ರೇಷ್ಠ ಕೃತಿ 'ಮಲ್ಲಿಕಾ ಪ್ರಶಸ್ತಿ' ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು - 2004
3. ಕಲಾವಿಕಾಸ ಪರಿಷತ್ ಗದಗ ಇವರ 'ಪುಟ್ಟರಾಜ ಗವಾಯಿ ಸಾಹಿತ್ಯಿಕ ಪ್ರಶಸ್ತಿ' - 2004
4. 'ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ' ಬೆಂಗಳೂರು - 2005
5. ಬೆಂಗಳೂರಿನ ಸ್ನೇಹಸೇತು ಸಂಘದ 'ಶ್ರೇಷ್ಠ ಕೃತಿ' ಪ್ರಶಸ್ತಿ - 2004
ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದವರು ಪ್ರಥಮ ವರ್ಷ ಪದವಿಗೆ ಮರಳುಗಾಡಿನ ಕುಸುಮ ಕೃತಿಯಲ್ಲಿನ 'ಬೆನ್ ಬೆಳಕು' ಲೇಖನವನ್ನುಎರಡು ಬಾರಿ ಪಠ್ಯಕ್ರಮದಲ್ಲಿ ಸೇರಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇಲ್ಲಿ 'ಭಾರತಿ ಮೋಹನ ಕೋಟಿ ಅವರು
ಅನುವಾದ ದತ್ತಿನಿಧಿ ಪ್ರಶಸ್ತಿ ಸ್ಥಾಪಿಸಿದ್ದು ಪ್ರತಿ ವರ್ಷ ಶ್ರೇಷ್ಠ ಅನುವಾದಿತ ಕೃತಿಗೆ ರೂ. 10,000/- ಪ್ರಶಸ್ತಿ ನೀಡಲಾಗುತ್ತಿದೆ.
ಸಾಧಕರೂ ಸಹೃದಯಿ ಆತ್ಮೀಯರೂ ಆದ ಭಾರತಿ ಮೋಹನ ಕೋಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Bharathi Mohan Koti 🌷🙏🌷
ಕಾಮೆಂಟ್ಗಳು