ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಫೋಟೋಗ್ರಾಫರ್



ಫೋಟೋಗ್ರಾಫರ್

ಮದುವೆ ಫೋಟೋ ತೆಗೆಯಲು ಹೋಗುತ್ತೇನೆ
ದುಡ್ಡಿಗಾಗಿ, ಖುಷಿಗಾಗಿ;
ಸೀರೆ ಸರಭರ; ಡೋಲು ಢಮಢಮ;
ತಿಂಡಿ ಕಾಫಿ ಸರಬರಾಯಿ.
ನನ್ನನ್ನು ತಿಂಡಿಕಾಫಿಗೆ
ಯಾರೂ ಕರೆಯುವುದಿಲ್ಲ.
ಒಂದು ಮೂಲೆಯ ಖಾಲಿಕುರ್ಚಿಯಲ್ಲಿ ಕೂಡುತ್ತೇನೆ
ನೋಡುತ್ತಾ:
ಬಾಗುಮುದುಕರ ಒಣಹರಟೆ;
ಮೊಲೆತ ಯುವತಿಯರ ಚಿಲಿಪಿಲಿ ಧಿಮಾಕು;
ಗಂಡಸರ ಆತಂಕ.
 
ಕಾಶೀಯಾತ್ರೆ, ಜೀರಿಗೆ ಬೆಲ್ಲ, ಧಾರೆ, ಮಾಂಗಲ್ಯಧಾರಣೆ,ಇತ್ಯಾದಿ
ಮುಗಿಯುವ ಹೊತ್ತಿಗೆ
ಹಲವು ಲಲನಾಮಣಿಯರ ವದನಾರವಿಂದಗಳು,
ನೋಟ, ನಗೆ, ನಾಟಕಗಳು,
ನಾಮಧೇಯಗಳು,
ಪರವಿತವಾಗುತ್ತವೆ.
 
ನನ್ನ ಸೈಡ್ ವಿಸ್ಕರ್ಸ್, ಗಾಗಲ್ಸ್, ರೇಷ್ಮೆ ಜುಬ್ಬ,
ಬಿಗಿ ಪ್ಯಾಂಟ್ಸ್, ಮೊನಚು ಶೂಸ್,
ಟೋನಿ ಕರ್ಟಿಸ್ ನಗೆ
ಹಲವು ತರುಣಿಯರ ಕುತೂಹಲ, ಮೆಚ್ಚಿಗೆಗೆ,
ತರುಣರ ಗುಮಾನಿ ಉರಿಗೆ
ಗುರಿಯಾಗುತ್ತವೆ.
 
ತಲೆಯೆತ್ತಿದರೆ,
ಮಹಡಿಕಟ್ಟೆಗೆ ಬಿನ್ನೊರಗಿ,
ಮೈಮರೆತು,
ಕಾಲೆತ್ತಿದ ಯುವತಿಯ ಬೆತ್ತಲೆ
ಬಿಳಿ ಮೀನಖಂಡದವರೆಗೆ
ಏರಿ,
ಎಲ್ಲೋ ಝಲ್ಲೆನಿಸಿ
ನಿಲ್ಲುತ್ತದೆ
ನನ್ನ ಕ್ಯಾಮರಾಕಣ್ಣು.
 
ಊಟಕ್ಕೆ ಕರೆದಾಗ ಸಭ್ಯತೆಗೆ
ಒಲ್ಲೆನೆನ್ನುತ್ತೇನೆ.
 
ಸಂಜೆ,
ಆರತಕ್ಷತೆ ದೊಂಬಿಯಲ್ಲಿ,
ಗಾನಕೂಟದ ಕೋಲಾಹಲದಲ್ಲಿ,
ಸುತ್ತ ನೆರೆಯುತ್ತಾರೆ,
ಲಲ್ಲೆಗೆರೆಯುತ್ತಾರೆ,
ಬಯಕೆ ಉರಿಯುತ್ತಾರೆ,
ಬೆಡಗು ಮೆರೆಯುತ್ತಾರೆ,
ಪರಿಚಯದ ಸಿಹಿ ನಕ್ಕು,
ಕುಡಿನೋಟದ ಹುಡಿ ಹಾರಿಸಿ,
ಜೀವನ ಸಾರ್ಥಕವೆನಿಸುತ್ತಾರೆ
ರೂಪಸಿ ರಜಸ್ವಲೆಯರು.
 
ಅವರ ಅಂಚುಅಂಚಿಗೂ
ಮಿಂಚು ಹಾರಿಸಿ,
ಅವರ ರೂಪ ಹೀರುತ್ತೇನೆ
ಕ್ಯಾಮರಾದೊಳಕ್ಕೆ.
ರಾತ್ರಿ, ನಿದ್ರೆಗೆ ಮುಂಚೆ,
ಅವರೆಲ್ಲರ ಚಹರೆಗಳನ್ನೂ,
ಒಂದೊಂದಾಗಿ ಮೆಲುಕಾಡಿಸಿ,
ರಾಧಾ... ಪದ್ಮಾ... ಪಂಕಜಾ... ಮಾಲಾ... ವಿಶಾಲಾ... ಸುನೀತಾ...
ಕನಸ ಕರೆಯುತ್ತೇನೆ;
ವ್ಯರ್ಥ ! ವ್ಯರ್ಥ !
 
ಕೊನೆಗೆ,
ಮಾರನೆ ಸಂಜೆ,
ಅವರವರ ಫೋಟೋಗಳನ್ನು ಅವರವರಿಗೆ
ಒಪ್ಪಿಸಿ,
ಮೆಚ್ಚಿಗೆಯ ಕಣ್ಣಾಡಿ ಪರಸ್ಪರ,
ಬಿಕ್ಕಿ, ನಕ್ಕು,
ಅವರವರ ಊರುಗಳಿಗೆ ಅವರೆಲ್ಲಾ ಹೊರಟು
ಬಿಟ್ಟಮೇಲೆ,
ನನ್ನ ಬಳಿ ಉಳಿಯುವುದು
ಅದರೆಲ್ಲರ ಮಾಸುವ ನೆನಪು
ನೆಗೆಟಿವ್ ಗಳು
ಮಾತ್ರ.
 
- ಬಿ ಅರ್ ಲಕ್ಷ್ಮಣರಾವ್.



 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ