ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್. ಎಸ್. ವೆಂಕಟೇಶಮೂರ್ತಿ

 


ಎಚ್. ಎಸ್. ವೆಂಕಟೇಶಮೂರ್ತಿ


ಎಚ್. ಎಸ್. ವೆಂಕಟೇಶಮೂರ್ತಿ ಅವರನ್ನು ಯುವ ಕವಿಗಳು ಎನ್ನುತ್ತಿದ್ದ ನಮ್ಮ ಪೀಳಿಗೆಯವರಿಗೆ ಅವರನ್ನು ನೆನೆದಾಗ ನಾವೂ ಕೂಡಾ ಪುಟ್ಟವರು ಎಂಬ ಮುದದ ಭಾವ ಆವರಿಸಿಕೊಳ್ಳುತ್ತಿತ್ತು.  ನಾವು ಕನ್ನಡ ಸಂಪದದವರು ಏನಾದರೂ ಆಗಾಗ ಕನ್ನಡದಲ್ಲಿ ಕಾರ್ಯಕ್ರಮ ಮಾಡುವ ಬರದಲ್ಲಿ ಹಲವು ಬರಹಗಾರರು ಕಲಾವಿದರ ಬಳಿ ಹೋದಾಗೆಲ್ಲಾ ಒಂದು ರೀತಿಯ ಕಾಠಿಣ್ಯ ಎದುರಿಸುವ ಪರಿಸ್ಥಿತಿ ಸಾಮಾನ್ಯವಾಗಿರುತ್ತಿತ್ತು.  ಒಮ್ಮೆ ನನ್ನ ಗೆಳೆಯರೊಡನೆ ಇಂತಹ ಪ್ರಯತ್ನದಲ್ಲಿ ಬ್ರಿಗೇಡ್ ರಸ್ತೆಯಲ್ಲಿರುವ ಸೈಂಟ್ ಜೋಸೆಫ್ ಕಾಲೇಜಿಗೆ ಹೋಗಿ ಡಾ. ಎಚ್ ಎಸ್ ವಿ ಅವರನ್ನು ಒಂದು ರೀತಿಯ ಅನಿಶ್ಚಿತತೆ, ದಿಗಿಲಿನಿಂದ ಕಾಣಲು  ಹೋದಾಗ ಅವರು ತೋರಿದ ಪ್ರೀತಿ, ಔದಾರ್ಯ, ಸ್ನೇಹ ಗುಣ ಇವೆಲ್ಲಾ ಇಂದೂ ಆತ್ಮೀಯವಾಗಿ ಒಡಲಿನಲ್ಲಿ ಮೀಟುತ್ತಿದೆ.  ಎಚ್ಎಸ್‍ವಿ ಅವರನ್ನು ನೆನೆದಾಗ ಹಿರಿಯ ತಲೆಮಾರಿನಲ್ಲಿ ಕಾಣಬರುತ್ತಿದ್ದ ಗುಣವಿಶೇಷಣಗಳು ಅವರಲ್ಲಿ ನಲಿಯುತ್ತಿದ್ದ ನೆನಪಾಗುತ್ತದೆ. 

ಡಾ|| ಎಚ್.ಎಸ್. ವೆಂಕಟೇಶಮೂರ್ತಿಯವರು ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರು. ಅವರು ದಾವಣಗೆರೆ ಜಿಲ್ಲೆ, ಚೆನ್ನಗಿರಿ ತಾಲ್ಲೂಕಿನಲ್ಲಿರುವ ಹೋದಿಗ್ಗೆರೆ ಗ್ರಾಮದಲ್ಲಿ 1944ರ ಜೂನ್ 23ರಂದು ಜನ್ಮತಾಳಿದರು. ತಂದೆ ನಾರಾಯಣಭಟ್ಟರು ಮತ್ತು ತಾಯಿ ನಾಗರತ್ನಮ್ಮನವರು. ಅವರ ಪ್ರಾಥಮಿಕ ವಿದ್ಯಾಭ್ಯಾಸ ಹೋದಿಗ್ಗೆರೆಯಲ್ಲೂ, ಹೈಸ್ಕೂಲು ವಿದ್ಯಾಭ್ಯಾಸ ಹೊಳಲ್ಕೆರೆಯಲ್ಲೂ ನಡೆದವು. ಭದ್ರಾವತಿಯ ಪಾಲಿಟೆಕ್ನಿಕ್ಕಿನಲ್ಲಿ ಮೆಕ್ಯಾನಿಕಲ್ ಇಂಜಿನಿರಿಂಗ್ ಡಿಪ್ಲೊಮಾ ಪಡೆದು, ಮಲ್ಲಾಡಿಹಳ್ಳಿಯಲ್ಲಿ  ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

ಆದರೆ, ಅವರ ಹೃದಯದಲ್ಲಿದ್ದ ಕನ್ನಡ ಭಾಷೆಯನ್ನು ಅಧ್ಯಯನ ಮಾಡುವ ಮತ್ತು ಬರಹಗಾರನಾಗುವ ಉತ್ಕಟಾಕಾಂಕ್ಷೆ ಸುಮ್ಮನಿರಗೊಡಲಿಲ್ಲ. ಧಾರವಾಡ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಬಿ.ಎ. ಪದವಿ ಪಡೆದು, ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿ ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ. ಪದವಿಯನ್ನು ಪಡೆದರು. 1973ರಲ್ಲಿ ಪ್ರೊ. ಜಿ.ಎಸ್.ಶಿವರುದ್ರಪ್ಪನವರ ನೇತೃತ್ವದಲ್ಲಿ ಕಥನ ಕವನಗಳು ಎಂಬ ವಿಷಯ ಕುರಿತು ಥೀಸಿಸ್ ಬರೆದು ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್.ಡಿ. ಪದವಿಯನ್ನೂ ಗಳಿಸಿದರು.

'ಪರಿವೃತ್ತ', 'ಬಾಗಿಲು ಬಡಿವ ಜನಗಳು', 'ಮೊಖ್ತಾ', 'ಸಿಂದಬಾದನ ಆತ್ಮಕಥೆ', 'ಒಣ ಮರದ ಗಿಳಿಗಳು', 'ಮರೆತ ಸಾಲುಗಳು', 'ಸೌಗಂಧಿಕ', 'ಇಂದುಮುಖಿ', 'ಹರಿಗೋಲು', 'ವಿಸರ್ಗ', 'ಎಲೆಗಳು ನೂರಾರು', 'ಅಗ್ನಿಸ್ತಂಭ', 'ಎಷ್ಟೊಂದು ಮುಖ', 'ಅಮೆರಿಕದಲ್ಲಿ ಬಿಲ್ಲುಹಬ್ಬ', 'ವಿಮುಕ್ತಿ',  'ಭೂಮಿಯೂ ಒಂದು ಆಕಾಶ', 'ಮೂವತ್ತು ಮಳೆಗಾಲ' ಮುಂತಾದವು ಎಚ್ಎಸ್‍ವಿ ಅವರ ಕವನ ಸಂಕಲನಗಳು.  ‘ತಾಪಿ’, 'ಅಮಾನುಷರು', 'ಕದಿರನ ಕೋಟೆ', 'ಅಗ್ನಿಮುಖಿ' ಕಾದಂಬರಿಗಳು.  'ಬಾನಸವಾಡಿಯ ಬೆಂಕಿ", ‘ಪುಟ್ಟಾರಿಯ ಮತಾಂತರ’ ಕಥಾ ಸಂಕಲನಗಳು.   ಬುದ್ಧಚರಣ ಅವರ ಇತ್ತೀಚಿನ ಮಹಾಕಾವ್ಯ.

ಎಚ್ಎಸ್‍ವಿ ಅವರ ನಾಟಕಗಳೆಂದರೆ 'ಹೆಜ್ಜೆಗಳು', 'ಒಂದು ಸೈನಿಕ ವೃತ್ತಾಂತ', 'ಕತ್ತಲೆಗೆ ಎಷ್ಟು ಮುಖ', 'ಚಿತ್ರಪಟ', 'ಉರಿಯ ಉಯ್ಯಾಲೆ', 'ಅಗ್ನಿವರ್ಣ', 'ಸ್ವಯಂವರ' ಮುಂತಾದವು. ಸಾಹಿತ್ಯ ಚರಿತ್ರೆಯಲ್ಲಿ ಎಚ್ಎಸ್‍ವಿ ಅವರ ‘ಕೀರ್ತನಕಾರರು’ ಕನ್ನಡ ಸಾಹಿತ್ಯದ ಮಹತ್ವದ ಕೃತಿ.  ಎಚ್ಎಸ್‍ವಿ ಅವರ ವಿಮರ್ಶಾ ಕೃತಿಗಳಲ್ಲಿ 'ನೂರು ಮರ, ನೂರು ಸ್ವರ', 'ಮೇಘದೂತ', 'ಕಥನ ಕವನ', 'ಆಕಾಶದ ಹಕ್ಕು'  ಪ್ರಧಾನವಾಗಿವೆ.  'ಕ್ರಿಸ್ಮಸ್ ಮರ'  ಅನುಭವ ಕಥನ.  'ಶತಮಾನದ ಕಾವ್ಯ' ಅವರ ಸಂಪಾದನೆ.  ಕಾಳಿದಾಸನ ‘ಋತುಸಂಹಾರ’ದ ಅನುವಾದ ‘ಋತುವಿಲಾಸ’.  'ಸಿ.ವಿ.ರಾಮನ್', 'ಹೋಮಿ ಜಹಾಂಗೀರ ಭಾಭಾ', 'ಸೋದರಿ ನಿವೇದಿತಾ', 'ಬಾಹುಬಲಿ' ಮುಂತಾದವು ವ್ಯಕ್ತಿಚಿತ್ರಗಳ ಬರವಣಿಗೆಗಳಾಗಿವೆ.  'ಚಿನ್ನಾರಿ ಮುತ್ತ', 'ಕ್ರೌರ್ಯ', 'ಮತದಾನ',  ‘ಒಂದೂರಲ್ಲಿ’ ಮುಂತಾದ ಚಿತ್ರಗಳಿಗೆ ಸಾಹಿತ್ಯ ಒದಗಿಸಿರುವುದಲ್ಲದೆ ಕಿರುತೆರೆ ಧಾರಾವಾಹಿಗಳಿಗೂ ಗೀತೆಗಳನ್ನು ರಚಿಸಿದ್ದರು. ಇವರ ಹಲವಾರು ಭಾವಗೀತೆಗಳು ಧ್ವನಿಸುರುಳಿಗಳಾಗಿ ಕನ್ನಡಿಗರ ಮನ ಸೂರೆಗೊಂಡಿವೆ. 'ಹಸಿರು ರಿಬ್ಬನ್' ಎಂಬ ಚಲನಚಿತ್ರವನ್ನೂ ನಿರ್ದೇಶಿಸಿದ್ದರು.

ಎಚ್ಎಸ್‍ವಿ ಅವರು ವಿವಿಧ ಪ್ರಾಕಾರಗಳಲ್ಲಿ ಸಮರ್ಥವಾದ ಸಾಹಿತ್ಯ ಸಾಧನೆಗಳ ಪ್ರತೀಕವಾಗಿದ್ದರು.  ನಮ್ಮ ನಾಡಿನಲ್ಲಿ ಇಂದು ವಿರಳವಾಗುತ್ತಿರುವ ಕನ್ನಡದ ಮೂಲ ಸಾಂಸ್ಕೃತಿಕ ಪರಂಪರೆಗಳ ಮೇರು ಪ್ರತಿನಿಧಿಯಾಗಿದ್ದರು.  ಅವರಿಗೆ ಬರವಣಿಗೆ ಎಂಬುದೊಂದು ಪ್ರೀತಿ.  ಅಲ್ಲಿ ‘ನಾನು’ ಎಂಬ ಅವರು ಕಳೆದುಹೋಗಿರುತ್ತಿದ್ದರು ಅಥವಾ ಅವರು ಅವರ ಬರವಣಿಗೆಯಲ್ಲಿ ಕಾಣುವ ಹನಿ ಹನಿಯಲ್ಲೂ ತಮ್ಮನ್ನು ಪ್ರೀತಿಯಿಂದ ಅಧ್ಯಾತ್ಮವಾಗಿರಿಸಿಕೊಂಡಿರುತ್ತಿದ್ದರು.  ಅವರ ‘ಅನಾತ್ಮ ಕಥನ’ ಓದುತ್ತಿದ್ದಂತೆ ಅವರಲ್ಲಿ ತಾವು ಕಂಡಿದ್ದರಲ್ಲೆಲ್ಲಾ ಪ್ರೀತಿಯೇ ಆಗಿಬಿಡುವ ಮನೋಜ್ಞ ಸರಳತೆ  ಆತ್ಮೀಯವಾಗಿ ಹಿಡಿದಿಟ್ಟುಕೊಳ್ಳುತ್ತದೆ.  ಅವರನ್ನು ವಂಚಿಸಿದವರ ಕಥೆ ಹೇಳುವಾಗ ಕೂಡಾ ಅವರ ಬಗ್ಗೆ ಅವರಲ್ಲಿರುವುದು ಒಂದು ರೀತಿಯ 'ಪ್ರೀತಿಯೇ ಏನೋ' ಎಂಬ ಭಾವ ಹುಟ್ಟಿಸುತ್ತಾರೆ.

‘ಸೌಗಂಧಿಕಾ’ದಲ್ಲಿ ದ್ರೌಪದಿಯ ಬಗೆಗಿನ   ‘ಪಕ್ಕ ನೋಡಿದರಲ್ಲಿ ಏನಿದೆ ಮಣ್ಣು, ಸಣ್ಣಗೆ ಕಣ್ಣು ಕೊಂಕಿಸಿ, ತೆರೆದ ಕಿಟಕಿಯ ಹೊರಗೆ ಆಚೆ ನೋಟ ಚಾಚಿದಳು’ ಎಂಬ ಮಾತಿರಲಿ, ‘ಸೋನಿ ಅಂದರೆ ಸೋನಿ, ಬೆಳದಿಂಗಳ ಬಟ್ಟಲು’ ಎಂಬ ಪುಟ್ಟ ಮಕ್ಕಳ ‘ಸೋನಿ ಪದ್ಯ’ವೇ ಇರಲಿ ಎಚ್ಎಸ್‍ವಿ ಅವರ ಕವಿತ್ವ ತನ್ನ ಚಿರಯೌವನವನ್ನು ಉಳಿಸಿಕೊಂಡಿತ್ತು.   ಎಚ್ಎಸ್‍ವಿ ಬರವಣಿಗೆಗಳಲ್ಲಿ ಪಂಪ, ರನ್ನ, ಕುಮಾರವ್ಯಾಸರ ಹೆಜ್ಜೆಗುರುತುಗಳು ಪಡಿಮೂಡುವುದರ ಜೊತೆ ಜೊತೆಗೆ  ಮಾಸ್ತಿ, ಬೇಂದ್ರೆಯವರ ಒಳದನಿ, ಅಡಿಗ, ಅನಂತಮೂರ್ತಿ, ಲಂಕೇಶರ ನವಪ್ರಜ್ಞೆಗಳ ಹೊಳಹುಗಳು ಕೂಡಾ ಮಿಂಚಿವೆ.  

ಎಚ್ಎಸ್‍ವಿ ಅವರ ‘ಶಿಶಿರದ ಪಾಡು’ವಿನ ‘ರಾಮನಿರುವತನಕ ರಾಮಾಯಣವು ಮುಗಿಯುವುದೆ?  ಅಂತೆಯೇ  ಸೀತೆಯ ಚಿಂತೆ ಸಾಯುವನಕ’ ಎಂಬ ಮಾತಿನಲ್ಲಿ  ಸೀತೆಯು ಪಟ್ಟ ಪಾಡಿನ ದಟ್ಟವರ್ಣನೆಯಿದೆ.  ಬಹುಶಃ ‘ಚಿತ್ರಪಟ ರಾಮಾಯಣ’ದಲ್ಲಿನ ಕ್ರಾಂತಿಕಾರಕ ಚಿಂತನೆಗಳ ಮೊಳಕೆಯ ಬೀಜ ಈ ಮಾತುಗಳಲ್ಲಿವೆ ಎನಿಸುತ್ತದೆ. ಎಚ್ಎಸ್‍ವಿ ಅವರು ಹುಟ್ಟುವ ಮುಂಚೆಯೇ ತಂದೆಯನ್ನು ಕಳೆದುಕೊಂಡು ಅಮ್ಮ ಮತ್ತು ಅಜ್ಜಿಯರ ಪ್ರೀತಿಯಲ್ಲಿ ಬೆಳವಣಿಗೆ ಕಂಡವರು.  ‘ಬಂದ ಬಾಗಿಲು ಮಣ್ಣು, ಬಿಡುವ ಬಾಗಿಲು ಮಣ್ಣು, ನಡುವೆ ಕಾಪಾಡುವುದು ತಾಯಿಯ ಕಣ್ಣು’ ಎಂಬ ಕೆ ಎಸ್ ನರಸಿಂಹಸ್ವಾಮಿಗಳ ಆತ್ಮೀಯ ಧ್ವನಿ ಎಚ್ಎಸ್‍ವಿ ಅವರ ಮಾತೃ ಮಮತೆಗಳಲ್ಲಿ ಕಾಣಸಿಗುತ್ತದೆ.   ‘ರಾಗ ವಿ-ರಾಗ’ದಲ್ಲಿ ಅವರು ಮೂಡಿಸುವ  ಅಕ್ಕಮಹಾದೇವಿ ಅರಸುವ ಅಧ್ಯಾತ್ಮವೆಂಬ ವಿರಾಗಕ್ಕೂ, ಚನ್ನಮಲ್ಲಿಕಾರ್ಜುನನು ರಾಣಿ ಅಮೃತಮತಿಯಲ್ಲಿ ಮುಖಾಮುಖಿಯಾಗುವ ರಾಗಕ್ಕೂ ತರುವ ತಾದ್ಯಾತ್ಮ ವಿಶಿಷ್ಟವೆನಿಸುತ್ತದೆ.

ತಮ್ಮ ಬರೆವಣಿಗೆಗಳೆಲ್ಲದರಲ್ಲಿ ಕನ್ನಡದ ಮೂಲತನವನ್ನು ಕಾಣಿಸಿಕೊಡುತ್ತಿದ್ದ ಎಚ್ಎಸ್‍ವಿ ಅವರಿಗೆ ಇಂದಿನ ಕನ್ನಡ ಶಾಲೆಗಳ ಪರಿಸ್ಥಿತಿಯ ಬಗ್ಗೆ, ಮುಂದಿನ ಪೀಳಿಗೆಗಳು ತಮ್ಮ ಇತಿಹಾಸದಿಂದ ವಂಚಿತವಾಗುವ ಪರಿಸ್ಥಿತಿ ಏರ್ಪಾಡುತ್ತಿರುವ ಬಗೆಗೆ ಅತೀವ ಖೇದವಿತ್ತು.  

ಎಚ್ ಎಸ್ ವಿ ಅವರು ತಮ್ಮ  ಪಾಂಡಿತ್ಯಪೂರ್ಣ ಬರವಣಿಗೆಗಳ ಪರಿದಿಯಾಚೆಗೆ, ಸಾಮಾನ್ಯನಿಗೆ ಹತ್ತಿರವಾಗುವಂತೆ ‘ಚಿನ್ನಾರಿ ಮುತ್ತ’ದಂತಹ ಸೊಗಸಾದ ಹಾಡುಗಳನ್ನು ಬರೆದಿದ್ದಾರೆ.  ‘ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತೆವು’, ‘ಲೋಕದ ಕಣ್ಣಿಗೆ ರಾಧೆಯು ಕೂಡಾ ಎಲ್ಲರಂತೇ ಒಂದು ಹೆಣ್ಣು’ ಎಂಬಂತಹ ಭಾವಗೀತೆಗಳಲ್ಲಿ ಅತ್ಯಂತ ಆತ್ಮೀಯ ಭಾಷೆಯಲ್ಲಿ ಮಹತ್ತನ್ನು ಹೇಳುವ ಸೌಂದರ್ಯ ಕೂಡಾ ಮೇಳವಿಸಿದೆ.   

ತೀವ್ರವಾದ ಪಾರಂಪರಿಕತೆಯ ಆಳದ ಕಾವ್ಯವನ್ನು ಅವರು ಹೇಗೆ ಹೊಕ್ಕಬಲ್ಲವರಾಗಿದ್ದರೋ ಅಂತೆಯೇ ಆಧುನಿಕ ಚಿತ್ರಣಗಳು ಕೂಡಾ ಅವರ ಕಾವ್ಯದಲ್ಲಿ ಪುಟಿ ಪುಟಿದು ಬರುತ್ತವೆ.  “ಹಕ್ಕಿ ಪಕ್ಕಿ ಜೊತೆಗೆ ವೃತ್ತ ಪತ್ರಿಕೆ... ಗುಡಿ ಗೋಪುರ ಕಾರ್ಖಾನೆಯ ಮುಡಿಗೆ” ಎಂಬಂತಹ ನಿರೂಪಣೆಗಳಲ್ಲಿ ಹಾಡುವ ಹಕ್ಕಿಯ ಜೊತೆಗೆ, ದಿನಪತ್ರಿಕೆ, ದೇಗುಲ, ಗೋಪುರ, ಕಾರ್ಖಾನೆಗಳೆಲ್ಲವೂ ತಮ್ಮ ಪ್ರಾತಿನಿಧ್ಯವನ್ನು ಸಮರ್ಥವಾಗಿ ಚೆಲ್ಲಬಲ್ಲವು.  

‘ಋತುವಿಲಾಸ’ ಕೃತಿಗೆ ಸಂದ  ಕೇಂದ್ರ ಸಾಹಿತ್ಯ ಆಕಾಡೆಮಿ ಪುರಸ್ಕಾರವನ್ನು ಒಳಗೊಂಡಂತೆ ಎಚ್ಎಸ್‍ವಿ ಅವರಿಗೆ ಸಂದ ಪ್ರಶಸ್ತಿಗಳು ಅನೇಕ.  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯೂ ಅವರಿಗೆ ಸಂದಿತ್ತು. ಇವೆಲ್ಲಕ್ಕೂ ಮಿಗಿಲಾದದ್ದು ಅವರಲ್ಲಿ ಸಮುದಾಯದ ಬಗೆಗೆ ಹುದುಗಿದ್ದ ಆತ್ಮೀಯ ದೃಷ್ಟಿಕೋನ.  

ಎಚ್. ಎಸ್. ವೆಂಕಟೇಶ ಮೂರ್ತಿ ಅವರನ್ನೂ ಬಹಳ ಹತ್ತಿರದಿಂದ ಆಪ್ತವಾಗಿ ಕಾಣುವ ಸೌಭಾಗ್ಯ ನನ್ನದಾಗಿತ್ತು.  ನಾನು ಅವರ ಕುರಿತು ಲೇಖನ ಬರೆದಿರುವುದನ್ನು ಯಾರಿಂದಲೋ ತಿಳಿದು, ನನ್ನ ಆಪ್ತವಾಗಿ ಸಂಪರ್ಕಿಸಿದ್ದರು.  ಆಗಾಗ "ಶ್ರೀಧರ್, ನಿಮ್ಮ ಬರಹಗಳೆಲ್ಲ ಪುಸ್ತಕ ರೂಪದಲ್ಲಿ ಬರುವ ಅವಶ್ಯಕತೆ ತುಂಬಾ ಇದೆ" ಎಂದು ಹೇಳುತ್ತ,  ನನ್ನೊಳಗೆ ಆಪ್ತವಾದ ಮೌಲ್ಯಯುತ ಭಾವಕ್ಕೆ ಎಡೆ ನೀಡುತ್ತ ಬಂದಿದ್ದರು.  ಇತ್ತೀಚೆಗೆ ಅವರ ಆರೋಗ್ಯ ವೆತ್ಯಾಸವಾಗುತ್ತಿದ್ದಾಗ,  ಎಲ್ಲೋ ನಾವು ಏನನ್ನೋ ಕಳೆದುಕೊಳ್ಳಲಿದ್ದೇವೆ ಎಂಬ ಕನಲಿಕೆ ಆವರಿಸುತ್ತಿತ್ತು.  ಕಾಲಪುರುಷ 2025ರ ಮೇ 30ರಂದು ಅದನ್ನು ಆಗಿಸಿಬಿಟ್ಟ. ಆದರೆ, ಅವರ ಪ್ರೀತಿ ಕನ್ನಡಿಗರ ಹೃದಯದಲ್ಲಿ ಎಂದೆಂದೂ ಅಮರ. 

ಎಚ್ಎಸ್‍ವಿ ಸಾರ್.... ಮಾತಿಲ್ಲ.  ಹೃದಯ ನಮಿಸಿದೆ ❤️🌷🙏🌷❤️
Great poet  H S Venkatesha Murthy Sir  🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ