ಕವಿ ಡುಂಡಿರಾಜ್ ಅವರ ಕೆಲವು ಹನಿಗವನಗಳು
ಕವಿ ಡುಂಡಿರಾಜ್ ಅವರ ಹನಿಗವನಗಳು
ಅಸಾಧ್ಯ:
ಸಂಕ್ರಾಂತಿಯಂದು
ಎಳ್ಳು ಬೆಲ್ಲ ತಿಂದು
ಒಳ್ಳೆ ಮಾತಾಡಬೇಕು
ತಗೊಳ್ಳಿ ತಿನ್ನಿ ತಿನ್ನಿ
ಅಂದರೆ
ಏನು ಬೇಕಾದರೂ ತಿಂತೀನಿ
ಮಾತಾಡುವುದು ಅಸಾಧ್ಯ
ಅಂದರಂತೆ ನಮ್ಮ ಪ್ರಧಾನಿ!
ನಗದು :
ಕ್ಯಾಶ್ ಕೌಂಟರಿನ
ಹುಡುಗಿಯರ
ಮುಖದಲ್ಲಿ ನಗು
ಹುಡುಕಿದರೂ ಸಿಗದು
ಅದಕ್ಕೇ ಇರಬೇಕು
ಹಾಕಿದ್ದಾರೆ ಬೋರ್ಡು
“ನಗದು”!!!
ಸುಸ್ತು :
ನಡೆಯಲಿಲ್ಲ
ಓಡಲಿಲ್ಲ
ಕಾರಲ್ಲಿ ಬಂದರೂ
ಇಷ್ಟೊಂದು ಸುಸ್ತೆ?
ಹೌದು ಮಾರಾಯ್ರೇ
ಹಾಗಿದೆ ನಮ್ಮ ರಸ್ತೆ.
ತರಬೇತಿ :
ಭರತ ನಾಟ್ಯ
ಡಿಸ್ಕೋ ನೃತ್ಯ
ಕಥಕ್ಕಳಿ
ಕಲಿ ಕಲಿ
ಅನ್ನುತ್ತದೆ
ರಸ್ತೆ ಕುಳಿ
ಹೋಲಿಕೆ :
ನಡು ವಯಸ್ಸಿನ
ಗೃಹಿಣಿಯಾದರೂ
ಈಕೆ
ಶಿಲಾಬಾಲಿಕೆ
ಬೇಕಿದ್ದರೆ ನೀವೇ ನೋಡಿ
ಸದಾಕೈಯಲ್ಲಿ ಕನ್ನಡಿ!
ಅಂತಿಮ :
ಸತ್ತ ಮೇಲೆ
ಸತ್ತವರನ್ನು ಮರೆಯುತ್ತಾರೆ ಜನ
ಆದ್ದರಿಂದಲೇ
ಸತ್ತ ತಕ್ಷಣ
ಅಂತಿಮ ನಮನ!
ಯಾಕೆ :
ವಿದ್ಯುತ್ತಿಗಾಗಿ
ನೀರಿಗಾಗಿ
ಯಾಕೆ ಸುಮ್ಮನೆ
ಆಣೆಕಟ್ಟು
ಹೆಂಗಸರ ಕಣ್ಣುಗಳಲ್ಲಿ
ಎರಡೂ ಇವೆಯಲ್ಲ
ಬೇಕಾದಷ್ಟು
ಉದಾರಿ :
ನಾನು ಪ್ರೀತಿಸಿದ ಹುಡುಗಿ
ತುಂಬಾ ಉದಾರಿಯಾಗಿದ್ದಳು
ಒಂದು ಕೇಳಿದರೆ
ಹತ್ತು ಕೊಡುತ್ತಿದ್ದಳು
“ಉಂಗುರ ತೋಡಿಸಲು
ಬೆರಳು ಕೊಡು”
ಎಂದಾಗ
ಕೈ ಕೊಟ್ಟಳು.
ಈಕೆ :
ನಕ್ಕರೆ ಈಕೆ
ದಂತದ ಗೊಂಬೆ
ಅತ್ತರೆ
ಅಯ್ಯೋ
ಆಗುಂಬೆ
ಏಕತಾನ :
ಬ್ಯಾಂಕ್ ಜೀವನದ
ಏಕತಾನದಿಂದ
ರೋಸಿ ಹೋಗಿ
ಎಲ್ಲ ಮರೆತು ಹಾಯಾಗಿ
ಸುತ್ತಾಡಿ ಬರಲೆಂದು
ರೈಲು ಹತ್ತಿದರೆ ಅಲ್ಲೂ
ಅದೇ ಸೊಲ್ಲು
ಚಕ್ ಬುಕ ಚಕ್ ಬುಕ್
ಚೆಕ್ ಬುಕ್
ಸತ್ಯ :
ಸುಳ್ಳಿಗೆ ಸುಳ್ಳು
ಸೇರಿದರೆ
ಸತ್ಯ.
ಉದಾಹರಣೆಗೆ
ನಮ್ಮ ದಾಂಪತ್ಯ!
ಕಷ್ಟ :
ಅಯ್ಯೋ ಪಾಪ!
ಪಾಂಚಾಲಿಯ ಕಷ್ಟ
ಹೇಳತೀರದು
ಎಲ್ಲರ ಹಾಗೆ ಗಂಡ
ಒಂದಲ್ಲ ಐದು.
ಸ್ವರ ಬಿದ್ದು ಹೋಗಿ
ನೋಯುತ್ತಿದೆ ಗಂಟಲು
ಗಂಡಂದಿರನ್ನು
ಬೈದು ಬೈದು
ಎದ್ದೇಳಿ ಬೆಳಗಾಯಿತು :
ಹೇಳುತ್ತಲೆ ಇದ್ದಳು ಕನ್ನಡಾಂಬೆ
ಎದ್ದೇಳಿ ಕನ್ನಡಿಗರೆ ಬೆಳಗಾಯಿತು,
ಬೆಳಗಾಯಿತು
ಈಗಲೂ ಹೇಳುತ್ತಿದ್ದಾಳೆ
ಇನ್ನಾದರೂ ಏಳಿ ಬೆಳ್ಳಗಾಯಿತು
ಗಡ್ಡ ಬೆಳ್ಳಗಾಯಿತು
ಸತ್ಯಪ್ರಿಯತೆ :
ಹೇಗಿದೆ ನೋಡಿ
ಭಾರತೀಯರ ಸತ್ಯಪ್ರಿಯತೆ
ಕಳ್ಳ ನೊಟಿನಲ್ಲೂ
ಅಚ್ಚಾಗಿರತ್ತೆ
ಸತ್ಯಮೇವ ಜಯತೆ !!!
Tag: Dundiraj hanigavanagalu, Dundiraj hanigavana
ಕಾಮೆಂಟ್ಗಳು