ಸಿದ್ಧಗಂಗೆಯ ಶ್ರೀಚರಣಕ್ಕೆ
ಹರನ ಕರುಣೋದಯದ ತೆರದಲಿ
ಬೆಳಗು ತೆರೆಯುವ ಹೊತ್ತಿಗೆ
ವೇದಘೋಷದ ದಿವ್ಯಲಹರಿಯು ಮನವ ತೊಳೆಯಲು
ಮೆಲ್ಲಗೆ
ಬರುವ ಶ್ರೀಗುರುಪಾದುಕೆಯ ದನಿ
ಅನುರಣಿತವಾಗಲು ಮೌನಕೆ
ಸಿದ್ಧಗಂಗೆಯ ನೆಲವು ಜಲವು
ನಮಿಸಿ ನಿಲುವುದು ಸುಮ್ಮಗೆ
ಬೆಟ್ಟ-ಬಂಡೆಯ ನಡುವೆ ಗಿಡಮರ
ಹೂವನೆತ್ತಿರೆ ಪೂಜೆಗೆ
ದೇಗುಲದ ಪೂಜಾರತಿಯ ಗಂಟೆಯ
ಮೊಳಗು ಮುಟ್ಟಲು ಬಾನಿಗೆ
ಧೂಪಗಂಧವು ಮಂದ ಮಂದಾನಿಲದ ಮನಸಿಗೆ
ಸಂಭ್ರಮವನುಕ್ಕಿಸೆ
ಬೆಳಗು ಇಳಿವುದು ಸಿದ್ಧಗಂಗೆಯ
ಕ್ಷೇತ್ರಕೆ
ಇಲ್ಲಿ ಇಲ್ಲ ಪವಾಡದದ್ಭುತ
ಅಥವಾ ಉತ್ಸವದಬ್ಬರ
ಮುಡಿಯನೆತ್ತಿದ ಸರಳ ಸಾಧಾರಣದ ಬದುಕಿನ
ಗೋಪು
ಅದರ ಮೇಲಿದೆ ತ್ಯಾಗಧ್ವಜ ಕೈಬೀಸಿ
ಕರೆವುದು ಪಥಿಕರ
ಪರಮ ನಿರಪೇಕ್ಷೆಯಲಿ ದಿನವು ಸೇವೆಗಾಗಿದೆ
ಸರ್ವರ
ಭಿಕ್ಷೆ ಹೊರಟಿದೆ ಜಂಗಮದ ಜೋಳಿಗೆ
ಲಕ್ಷ ಜನಗಳ ಪೊರೆದಿದೆ
ತೀರ್ಥವಾಗಿದೆ ಭಕ್ತರಿಗೆ,
ಚಿರಸ್ಫೂರ್ತಿಯಾಗಿದೆ ಬುದ್ಧಿಗೆ
ಬಂದ ಹಣತೆಗೆ
ಎಣ್ಣೆ ಬತ್ತಿಯ ದೀಪ್ತಿದಾನವ ಮಾಡಿದೆ
ರಕ್ಷೆಯಾಗಿದೆ ಮುಗಿಲನೇರಿದ ಎಷ್ಟೊ
ರೆಕ್ಕೆಯ ಹಾದಿಗೆ
ಸದ್ದುಗದ್ದಲವಿರದ ಸಾಧನೆ ಇಲ್ಲಿ
ಗದ್ದುಗೆ ಏರಿದೆ
ಕಾಯಕವೆ ಕೈಲಾಸ ಎನ್ನುವ ಮಾತು ಕೃತಿಯೊಳು
ಮೂಡಿದೆ
ಕಾವಿ ಉಡುಗೆಯನುಟ್ಟು ನಭವೇ ಕಿರಣ ಹಸ್ತವ
ಚಾಚಿದೆ
ಎಲ್ಲ ನನ್ನವರೆನುವ ಭಾವದ ಕರುಣೆಯೇ
ಕಣ್ತೆರೆದಿದೆ.
(ಸಿದ್ಧಗಂಗೆಯ ಶ್ರೀಚರಣಕ್ಕೆ)
ಸಾಹಿತ್ಯ: ಜಿ. ಎಸ್. ಶಿವರುದ್ರಪ್ಪ
Tag: Siddagangeya Sricharanake
ಕಾಮೆಂಟ್ಗಳು