ನಾಟ್ಯಾರಾಧನಾ 7
ಶಿವಮೊಗ್ಗದಲ್ಲಿ ‘ನಾಟ್ಯಾರಾಧನಾ’
ಪ್ರತಿವರ್ಷ ಆಗಸ್ಟ್ ಅವಧಿಯ ಶ್ರಾವಣದ ಹಬ್ಬಗಳ ಸಾಮೀಪ್ಯದಲ್ಲಿದ್ದಂತೆಯೇ ಶಿವಮೊಗ್ಗೆಯ
ಕಲಾವಲಯದಲ್ಲೊಂದು ವಿಶೇಷ ಸಡಗರ ಮೂಡುತ್ತದೆ.
ಭಾರತದ ವಿವಿಧ ರಾಜ್ಯಗಳಿಂದ ವಿವಿಧ ಪ್ರಸಿದ್ಧ ನಾಟ್ಯ ತಂಡಗಳು ಶಿವಮೊಗ್ಗೆಗೆ ಬಂದು
ಇಲ್ಲಿನ ಸಹಚೇತನ ನಾಟ್ಯಾಲಯ ಸಂಸ್ಥೆಯು ನಡೆಸುವ ‘ನಾಟ್ಯಾರಾಧನೆ’ಗೆ ವಿಶಿಷ್ಟ ಮೆರುಗು ತರುತ್ತವೆ. ಕಳೆದ
ಆರು ವರ್ಷಗಳಲ್ಲಿ ಯಶಸ್ವಿಯಾಗಿ ಆರು ಸಂಭ್ರಮದ ‘ನಾಟ್ಯಾರಾಧನಾ’ ಮಹೋತ್ಸವಗಳನ್ನು ನಡೆಸಿರುವ ಶಿವಮೊಗ್ಗದ ‘ಸಹಚೇತನ ನಾಟ್ಯಾಲಯ’ವು
ಇದೇ ಆಗಸ್ಟ್ 26, 27 ಮತ್ತು 28ರಂದು ಶಿವಮೊಗ್ಗದ ಕುವೆಂಪು ರಂಗಮಂದಿರಲ್ಲಿ ತನ್ನ ಏಳನೆಯ ‘ನಾಟ್ಯಾರಾಧನಾ’ ಮಹೋತ್ಸವವನ್ನು ಹಮ್ಮಿಕೊಂಡಿದೆ.
ಈ ವರ್ಷದ ನಾಟ್ಯಾರಾಧನೆಯಲ್ಲಿ ಸಹಚೇತನ ನಾಟ್ಯಾಲಯದ
ನೃತ್ಯ ಗುರು ಸಹನಾ ಎಸ್ ಪ್ರಭು ಮತ್ತು ಅವರ
ನಾಟ್ಯಾಲಯದ ವಿದ್ಯಾರ್ಥಿಗಳು, ತಮ್ಮ
ಕಾರ್ಯಕ್ರಮದ ಮೊದಲ ಅಂಗವಾಗಿ ‘ಜಗಜ್ಜನನಿಯ
ನೃತ್ಯೋಲ್ಲಾಸ’ವನ್ನು ತಮ್ಮ ಉಲ್ಲಾಸ
ದರ್ಶನವನ್ನಾಗಿಸಿಕೊಂಡು, ‘ಲಾಸ್ಯ
ವರ್ಧಿನಿ' ರೂಪಕವನ್ನು
ನಿರೂಪಿಸುತ್ತಿದ್ದಾರೆ. ಎರಡನೇ ದಿನದ ಕಾರ್ಯಕ್ರಮದಲ್ಲಿ ತಮ್ಮ ಹಿರಿಯ ವಿದ್ಯಾರ್ಥಿಗಳೊಡನೆ ತಾಂಡವೇಶ್ವರನ ಆಶಂಸನವನ್ನು ‘ಈಶಾನಾಮೋದಃ’
ರೂಪಕವಾಗಿ ನಿರೂಪಿಸುತ್ತಿರುವ ನೃತ್ಯಗುರು
ಸಹನಾ ಚೇತನ್ ಅವರು,
ನಂತರದಲ್ಲಿ ತಮ್ಮ ಏಕ
ಕಲಾವಿದೆ ರೂಪಕದಲ್ಲಿ ನೃತ್ಯರಸಿಕರನ್ನು ‘ಮುರಳಿಯಾನ’ಕ್ಕೆ ಕರೆದೊಯ್ಯಲಿದ್ದಾರೆ. ಅತಿಥಿ ದೇವೋ ಭವ ಎಂಬ ಹೃದಯಾಳವುಳ್ಳ ಈ ‘ನಾಟ್ಯಾರಾಧನೆ’ಯಲ್ಲಿ ಕೇವಲ ನಾಟ್ಯಾಲಯದ ಕಲಾವಿದರ ನೃತ್ಯ ಪ್ರದರ್ಶನವಷ್ಟೇ ಅಲ್ಲದೆ, ಅತಿಥಿ ತಂಡಗಳಾದ ಕೋಲ್ಕತ್ತಾದ ಡಾ. ಮಾಹುವಾ
ಮುಖರ್ಜಿ ಮತ್ತು ತಂಡದವರಿಂದ ‘ಗೌಡಿಯ ನೃತ್ಯ’ ಹಾಗೂ ಮಣಿಪುರದ
ಇಬುದೌ ಲೋಯಲಕ್ಷ ಡಾನ್ಸ್
ಗ್ರೂಪ್ ತಂಡದಿಂದ ಮಣಿಪುರದ ಸಾಹಸ ಕಲೆಯಾದ ’ಥಾಂಗ್ ಥಾ’ ಪ್ರದರ್ಶನಗಳು ಮೂರನೆಯ ದಿನದ ನಾಟ್ಯಾರಾಧನೆಯ
ಕಾರ್ಯಕ್ರಮಗಳಾಗಿ ಶಿವಮೊಗ್ಗೆಯ ನೃತ್ಯಾರಾಧಕ ಅತಿಥಿ ಬಂಧುಗಳ
ಹೃದಯಾಳಗಳನ್ನು ಸೂರೆಗೊಳ್ಳಲಿವೆ.
ಕಳೆದ ವರ್ಷಗಳಲ್ಲಿ ‘ನಾಟ್ಯಾರಾಧನ’ದ ಇದೇ ವೇದಿಕೆಯಲ್ಲಿ ಭರತನಾಟ್ಯ, ಕೂಚಿಪುಡಿ,
ಮೋಹಿನಿಯಾಟ್ಟಂ, ಕಥಕ್, ಮಣಿಪುರಿ,
ಕಲರಿ ಪಯಟ್, ಸತ್ರಿಯಾ, ಗೋತಿಪುವಾ, ಛಾವ್ ಮುಂತಾದ ಭಾರತೀಯ ವಿವಿಧ ಸಾಂಸ್ಕೃತಿಕ ನೃತ್ಯಪ್ರಾಕಾರಗಳು, ಆಯಾ ಕಲೆಗೆ ಪ್ರಸಿದ್ಧವಾದ ದೇಶದ
ಪ್ರತಿಷ್ಟಿತ ಕಲಾವಿದರ ತಂಡಗಳಿಂದ ಇದೇ ವೇದಿಕೆಯಲ್ಲಿ ಪ್ರಸ್ತುತಗೊಂಡಿವೆ. ಹೀಗೆ ವೈಶಿಷ್ಟ್ಯಪೂರ್ಣ ನಾಟ್ಯರೂಪಕಗಳ ಅರ್ಪಣೆಯ ಮೂಲಕ ನಾಟ್ಯಾರಾಧನೆಯಲ್ಲಿ ತೊಡಗಿರುವ
ನಿಷ್ಠಾವಂತ ಸಂಸ್ಥೆಯಾದ ‘ಸಹಚೇತನ ನಾಟ್ಯಾಲಯ’ವು
ಹಿರಿಯ ಸಾಂಸ್ಕೃತಿಕ ಔನ್ನತ್ಯದ ಧ್ಯೇಯವನ್ನು ತನ್ನ ಉಸಿರಾಗಿಸಿರಿಸಿಕೊಂಡಿದೆ.
2005ರ ವರ್ಷದಲ್ಲಿ ಪುಟ್ಟದಾಗಿ ಆರಂಭವಾದ ಸಹಚೇತನ
ನಾಟ್ಯಾಲಯವು ಇಂದು ನೂರಾರು ವಿದ್ಯಾರ್ಥಿಗಳು,
ಸಹಸ್ರಾರು ಕಲಾಭಿಮಾನಿಗಳ ಒಡನಾಟದಲ್ಲಿ ಸುದೃಢವಾಗಿ ಮುನ್ನಡೆಯುತ್ತಿದೆ. “ಸಾಂಪ್ರದಾಯಿಕ ನೃತ್ಯ
ಶೈಲಿಗಳನ್ನು ಕಾಪಾಡಿಕೊಂಡು ಬರುವುದರ ಜೊತೆ ಜೊತೆಗೆ, ಅದರ ಉನ್ನತಿ
ಮತ್ತು ಏಳ್ಗೆಗಾಗಿ ನಿರಂತರವಾಗಿ ಶ್ರಮಿಸುವುದು ಹಾಗೂ ಶಾಸ್ತ್ರೀಯ ಸಂಪ್ರದಾಯವನ್ನು
ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದು ನಮ್ಮ ಉದ್ದೇಶ. ಅದಕ್ಕಾಗಿ ಪಟ್ಟಣಗಳಲ್ಲಷ್ಟೇ ಅಲ್ಲದೆ ಗ್ರಾಮೀಣ ಮತ್ತು
ಹಿಂದುಳಿದ ಮಕ್ಕಳಲ್ಲಿಯೂ ಸಹಾ ನೃತ್ಯ ಕಲೆಯನ್ನು ಬೆಳೆಸುವ ಆಶಯಗಳೊಂದಿಗೆ ನಾವು ನಮ್ಮ
ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ” ಎನ್ನುತ್ತಾರೆ ಈ ಸಂಸ್ಥೆಯ
ಕೇಂದ್ರಬಿಂದುವಾಗಿರುವ ನೃತ್ಯ ಗುರು ಸಹನಾ ಎಸ್ ಪ್ರಭು.
ಈ ನಿಟ್ಟಿನಲ್ಲಿ ಅವರು ತಮ್ಮ ಕಲಾಶಾಲೆಗೆ ಬರುವ ಆಸಕ್ತರಿಗೆ ಕಲಿಸುವುದಷ್ಟೇ ಅಲ್ಲದೆ, ಹಿಂದುಳಿದ ಬಡಾವಣೆಯ ಮಕ್ಕಳಿಗೂ ಉಚಿತ
ನೃತ್ಯ ತರಬೇತಿಗಳನ್ನು ನೀಡುತ್ತಿದ್ದಾರೆ.
ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಮಕ್ಕಳಿಗೆ ಕಲಾಪ್ರಕಾರಗಳಲ್ಲಿ ತರಬೇತಿ
ನೀಡುತ್ತಿದ್ದಾರೆ. ಶಾಲಾ ಪಠ್ಯಕ್ಕೆ ನೃತ್ಯವನ್ನು
ಅಳವಡಿಸಿ ಮಕ್ಕಳಿಂದಲೇ ಕಾರ್ಯಕ್ರಮಗಳು ಮೂಡುವಂತೆ ಮಾಡಿ, ಪಠ್ಯ ಮತ್ತು
ಕಲೆ ಮಾಧ್ಯಮಗಳೆರಡಕ್ಕೂ ಆಕರ್ಷಣೆ ತರುವ ಕಾರ್ಯ ಮಾಡುತ್ತಿದ್ದಾರೆ, ಚಿಂದಿ
ಆಯುವ ಮಕ್ಕಳ ಕೇಂದ್ರವಾದ ‘ಮಾಧವನೆಲೆ’ಯ
ಮಕ್ಕಳಿಗೆ ಉಚಿತವಾಗಿ ಕಲಾ ತರಬೇತಿ ಮತ್ತು ಕಲಾವೇದಿಕೆಗಳನ್ನು ಸೃಷ್ಟಿಸುತ್ತಿದ್ದಾರೆ.
ಹೀಗೆ ಕಲೆ ಮತ್ತು ಸಮಾಜಸೇವೆಗೆ ತಮ್ಮನ್ನೂ ತಮ್ಮ
ಸಂಸ್ಥೆ ಸಹಚೇತನ ನಾಟ್ಯಾಲಯವನ್ನೂ ಮುಡಿಪಾಗಿಟ್ಟಿರುವ ನೃತ್ಯ ಗುರು ಸಹನಾ ಎಸ್ ಪ್ರಭು ಅವರು ತಮ್ಮ
ಎಳೆಯ ಹತ್ತನೇ ವಯಸ್ಸಿನಿಂದಲೇ ನೃತ್ಯದ ವ್ಯಾಮೋಹವನ್ನು ಬೆಳೆಸಿಕೊಂಡವರು. ನೃತ್ಯ, ನಾಟಕ ಮತ್ತು
ಚಿತ್ರಕಲೆಗಳಲ್ಲಿ ಆಸಕ್ತರಾದ ಸಹನಾ ತಮ್ಮ ಕಾಲೇಜು ವ್ಯಾಸಂಗದ ದಿನಗಳಲ್ಲಿ ಎನ್ ಎಸ್ ಎಸ್
ಅಭ್ಯರ್ಥಿಯಾಗಿ ನವದೆಹಲಿಯ ಗಣರಾಜ್ಯೋತ್ಸವ ಪೆರೇಡಿನಲ್ಲಿ ಪಾಲ್ಗೊಂಡ ಕೀರ್ತಿವಂತರು. ನಾಟ್ಯ ಕಲೆಯಲ್ಲಿ ಶಿಸ್ತುಬದ್ಧ ಸಾಧನೆಯನ್ನು ಮಾಡಿರುವ ಸಹನಾ ಚೇತನ್ ದೇಶದಾದ್ಯಂತ ಪ್ರತಿಷ್ಟಿತ
ವೇದಿಕೆಗಳಲ್ಲಿ ನೃತ್ಯ ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ಕಲಾರಸಿಕರ
ಮನಸೂರೆಗೊಂಡಿರುವುದೇ ಅಲ್ಲದೆ, ಇನ್ನೂ ಯುವ ವಯಸ್ಸಿನಲ್ಲೇ ನೃತ್ಯ
ಗುರುವೆನಿಸಿದ್ದು, ನೂರಾರು ಪ್ರತಿಭಾವಂತ ನೃತ್ಯ ಕಲಾವಿದರನ್ನು
ತಯಾರುಮಾಡಿದ್ದಾರೆ. ಅವರ ಗುರು ಮಾರ್ಗದರ್ಶನದ
ಲಾಭವನ್ನು ಭಾರತೀಯ ಕಲಾಸಕ್ತಿಯುಳ್ಳ ಹಲವಾರು ವಿದೇಶಿಯರೂ ಪಡೆದುಕೊಂಡಿದ್ದಾರೆ.
‘ಡಿ.ವಿ.ಜಿ ಅವರ ಅಂತಃಪುರ ಗೀತೆಗಳು’, ‘ಕಲಾ ಸುಂದರಿ’,
‘ಆದಿಕಾವ್ಯ ರಾಮಾಯಣದ ಆವಿರ್ಭಾವ’, ‘ನವರಸಗಳಲ್ಲಿ ರಾಮ’,
‘ರಾಮಸ್ಯ
ಪ್ರಿಯದರ್ಶನಂ’, ‘ಸೀತೆಯ ಸ್ವಗತ’, ‘ವಚನಸಾರ’, ವಂದೇ ಮಾತರಂ’, ‘ಕೃಷ್ಣಲೀಲೆ’, ‘ಭರತನಾಟ್ಯದ
ಮಾರ್ಗ’, ‘ದಾಕ್ಷಿಣಾತ್ಯ ತಪಸ್ವಿನಿ – ಅಕ್ಕಮಹಾದೇವಿಯ
ಜೀವನಗಾಥೆ’, ‘ಚಂದ್ರ-ರೋಹಿಣಿ’, ‘ಯಕ್ಷಮ’,
‘ಶಿವೋಹಂ’, ‘ಋತು ರಂಗ’, ‘ಕೃಷ್ಣಂ
ವಂದೇ ಜಗದ್ಗುರುಂ’, ‘ಭಾಮಿನಿ – ಸತ್ಯಭಾಮೆಯ
ಪ್ರಲಾಪ’ ಮುಂತಾದ ಅನೇಕ ರೂಪಕಗಳು ಸಹನಾ ಚೇತನರ ಸೃಜನಶೀಲ ನೃತ್ಯ
ಸಂಯೋಜನೆಗಳಲ್ಲಿ ಬೆಳಕು ಕಂಡಿವೆ. ಸಹನಾ ಪ್ರಭು
ಅವರು ಪ್ರಸಿದ್ಧ ನೃತ್ಯ ಕಲಾವಿದರಾದ ವೈಜಯಂತಿ ಕಾಶಿ ಅವರೊಂದಿಗೆ ಸಹಾ ನೃತ್ಯ ಕಾರ್ಯಕ್ರಮಗಳನ್ನು
ನೀಡಿದ್ದಾರೆ.
ಇನ್ನೂ ಯುವ ವಯಸ್ಸಿನಲ್ಲೇ ಕಲೆ, ಸಂಸ್ಕೃತಿ
ಮತ್ತು ಸಮಾಜಸೇವೆಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಹನಾ ಚೇತನ್ ಅವರು, ‘ಅಜಿತಶ್ರೀ’ ಎಂಬ ಪುರಸ್ಕಾರವನ್ನು ಪ್ರತಿಷ್ಟಾಪಿಸಿ ಯಾವುದೇ
ಪ್ರಚಾರಾಪೇಕ್ಷೆಯಿಲ್ಲದೆ ವಿವಿಧ
ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಅನೇಕ ಮಹನೀಯರನ್ನು
ಗೌರವಿಸುತ್ತಲೂ ಇದ್ದಾರೆ. ಸಹನಾ ಚೇತನ್
ಅವರನ್ನು ನಾಡಿನ ಅನೇಕ ಸಾಂಸೃತಿಕ ಮತ್ತು ಸೇವಾ ಸಂಸ್ಥೆಗಳು ಗೌರವಿಸಿವೆ.
ಸಹನಾ ಎಸ್. ಪ್ರಭು ಅವರು ಸಮಾನ ಸಾಂಸ್ಕೃತಿಕ
ಆಸಕ್ತರೊಡನೆ ‘ಸಹಚೇತನ ನಾಟ್ಯಾಲಯ’ವನ್ನು ಎಲ್ಲರೀತಿಯಲ್ಲೂ ಸಶಕ್ತವಾಗಿ, ಮಹದುದ್ಧೇಶಗಳಿಂದ
ನಡೆಸುತ್ತಿದ್ದಾರೆ. ಅವರು ಈ ಆಗಸ್ಟ್ 26, 27 ಮತ್ತು 28ರಂದು
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿರುವ
‘ನಾಟ್ಯಾರಾಧನಾ’ ಮಹೋತ್ಸವವು
ಯಶಸ್ವಿಯಾಗಲಿ. ಅವರ ಈ ಕೈಂಕರ್ಯಕ್ಕೆ ಸಕಲ
ರೀತಿಯ ಆಡಳಿತ, ಸಾಂಸ್ಥಿಕ ಮತ್ತು ಜನಬಲಗಳು ಜೊತೆಗೂಡಲಿ ಎಂಬುದು ನಮ್ಮ
ನಲ್ಮೆಯ ಹಾರೈಕೆ.
Tag: Natyaradhana 7
ಕಾಮೆಂಟ್ಗಳು