ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ.ಜಿ. ಸೋಮಶೇಖರ್


ಕೆ. ಜಿ. ಸೋಮಶೇಖರ್ 


ಮಹಾನ್ ಛಾಯಾಗ್ರಾಹಕ ಕೆ. ಜಿ. ಸೋಮಶೇಖರ್ ಅವರು ಈ ಲೋಕವನ್ನಗಲಿದ ದಿನ ಡಿಸೆಂಬರ್ 4, 2016. ಅವರು ಈ ಲೋಕದಲ್ಲಿ ಇದ್ದದ್ದು 79 ವರ್ಷ.

ಡಿಜಿಟಲ್ ಯುಗಕ್ಕಿಂತ ಮೊದಲೇ ಬಹುತೇಕ ಮಹತ್ವದ ಸಾಹಿತಿ, ಕಲಾವಿದರನ್ನೆಲ್ಲಾ ಮನೋಜ್ಞವಾಗಿ ತೆರೆದಿಟ್ಟ ಕ್ಯಾಮರಾ ಕಣ್ಣು ಸೋಮಶೇಖರ್ ಅವರದ್ದು.

ನೋಡನೋಡುತ್ತಿದ್ದಂತೆಯೇ ಕಳೆದುಹೋಗುವ ಬದುಕಿನ ಕ್ಷಣಗಳನ್ನು ನಮಗಾಗಿ ಹಿಡಿದುಕೊಡುವುದು ಛಾಯಾಚಿತ್ರಗಳ ವೈಶಿಷ್ಟ್ಯ. ಹಾಗೆ ಹಿಡಿದುಕೊಡುವ ಕೆಲಸ ಬರಿಯ ಕ್ಯಾಮೆರಾ ಒಂದರಿಂದಲೇ ಆಗುವಂಥದ್ದಲ್ಲ; ಕ್ಯಾಮೆರಾ ಹಿಂದಿನ ಕಣ್ಣಿನ ಜೊತೆಗೆ ಆ ಕಣ್ಣಿನಿಂದ ನೋಡುವ ಕಲಾತ್ಮಕ ಮನಸ್ಸು ಸೇರಿದಾಗಲೇ ಛಾಯಾಚಿತ್ರಗಳು ಕಲಾಕೃತಿಗಳಾಗುವುದು ಸಾಧ್ಯ. ಛಾಯಾಚಿತ್ರಗಳಿಗೆ ಹಾಗೊಂದು ಕಲಾಕೃತಿಯ ರೂಪಕೊಡುವ ಶಕ್ತಿ ಎಲ್ಲೋ ಕೆಲವರಿಗಷ್ಟೆ ಇರುತ್ತದೆ. ಸೃಜನಶೀಲತೆ ಹಾಗೂ ತಾಂತ್ರಿಕ ನೈಪುಣ್ಯಗಳೆರಡೂ ಒಟ್ಟುಸೇರಿದಾಗ ರೂಪುಗೊಳ್ಳುವ ಶಕ್ತಿ ಅದು. ಅಂತಹ ಅಪರೂಪದ ಶಕ್ತಿ ಇದ್ದವರಲ್ಲಿ ಕೆ.ಜಿ. ಸೋಮಶೇಖರ್ ಒಬ್ಬರು. 

ಜೀವನದ ಬಹುಭಾಗದಲ್ಲಿ ಛಾಯಾಗ್ರಹಣ ಅವರ ಸಂಗಾತಿಯಾಗಿ ಬಂದಿತ್ತು.  ಈ ಸಹಯಾನದ ಸಂದರ್ಭದ ಹಲವು ಘಟನೆಗಳನ್ನು, ಅನುಭವಗಳನ್ನು ನಮ್ಮೊಡನೆ ಹಂಚಿಕೊಳ್ಳುವ ಅವರ ಕುರಿತಾದ ಕೃತಿ 'ನನ್ನ ಬದುಕು, ನನ್ನ ಫೊಟಾಗ್ರಫಿ’ ಪತ್ರಕರ್ತ ಬಿ.ಎಸ್. ಜಯಪ್ರಕಾಶ ನಾರಾಯಣ ಅವರಿಂದ ನಿರೂಪಿತಗೊಂಡು  ಈ  ಬೆಂಗಳೂರಿನ ‘ಆಕೃತಿ ಪುಸ್ತಕ’  ಪ್ರಕಾಶನದಿಂದ ಪ್ರಕಟಿಗೊಂಡಿದೆ.

ಸೋಮಶೇಖರರ ಪರಿಚಯ ಬಹಳ ಜನರಿಗೆ ಇರಲಿಕ್ಕಿಲ್ಲ. ಆದರೆ ಅವರು ಕ್ಲಿಕ್ಕಿಸಿದ ಸುಮಾರು 2000 ಶ್ರೇಷ್ಠ ಛಾಯಾಚಿತ್ರಗಳಲ್ಲಿ ಕೆಲವನ್ನಾದರೂ ನೋಡದ ಕನ್ನಡಿಗರು ಇರಲಿಕ್ಕಿಲ್ಲ. ಮೇಲ್ಕಂಡ ಕೃತಿಯ ಮುನ್ನುಡಿಯಲ್ಲಿ ಡಾ. ಎಸ್.ಆರ್. ರಾಮಸ್ವಾಮಿಯವರು ಹೇಳಿರುವಂತೆ ಇಂದು ಯಾವುದೇ ಪತ್ರಿಕೆಯಲ್ಲಿಯೋ ಪ್ರಕಟಣೆಯಲ್ಲಿಯೋ ಸಭಾಗಾರದಲ್ಲಿಯೋ ವೇದಿಕೆಯಲ್ಲಿಯೋ ಡಿ.ವಿ.ಜಿ, ಕುವೆಂಪು, ಮಾಸ್ತಿ, ವಿ.ಸೀ., ಶಿವರಾಮ ಕಾರಂತ, ಜಿ.ಪಿ. ರಾಜರತ್ನಂ, ಗೋಪಾಲಕೃಷ್ಣ ಅಡಿಗ, ಮಲ್ಲಿಕಾರ್ಜುನ ಮನಸೂರ ಮೊದಲಾದವರ ಅತ್ಯಂತ ಚೇತೋಹಾರಿ ಚಿತ್ರಗಳು ಕಂಡವೆಂದರೆ ಅವು ಬಹುತೇಕ ಸೋಮಶೇಖರ್ ತೆಗೆದಿರುವವೇ ಆಗಿರುತ್ತವೆ.

ಸೋಮಶೇಖರರ ಆಸಕ್ತಿಗಳು ಒಂದೆರಡಲ್ಲ. ಶಾಲಾದಿನಗಳಲ್ಲೇ ಅವರಿಗೆ ಸಿನೆಮಾ ನೋಡುವ ಹವ್ಯಾಸ ವಿಪರೀತವಾಗಿತ್ತಂತೆ. ಸಂಗೀತವೂ ಇಷ್ಟದ ವಿಷಯ. ಚಿತ್ರಕಲೆಯ ಕುರಿತೂ ಬಹಳ ಆಸಕ್ತಿ. ಇಂಟರ್‌ಮೀಡಿಯೆಟ್ ವ್ಯಾಸಂಗಕ್ಕೆಂದು ಬೆಂಗಳೂರಿನ ವಿಜಯಾ ಕಾಲೇಜಿಗೆ ಸೇರಿದರೂ ಸರಿಯಾಗಿ ಕ್ಲಾಸಿಗೆ ಹೋಗದ ಈ ಶಿಷ್ಯನನ್ನು ಅಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಪ್ರೊ. ಜಿ.ವಿ. ಒಮ್ಮೆ ಕರೆದು ‘ಸುಮ್ಮನೆ ಕಾಲಕಳೆಯುವ ಬದಲು ಚಿತ್ರಕಲೆಯನ್ನಾದರೂ ಕಲಿ’ ಎಂದರಂತೆ. ಕಲಾರಂಗದಲ್ಲಿ ತಮ್ಮ ಬದುಕು ರೂಪಿಸಿಕೊಳ್ಳಲು ಸೋಮಶೇಖರರಿಗೆ ಪ್ರೇರಣೆಯಾದದ್ದು ಇದೇ ಮಾತು. ಮುಂದೆ ಬಹಳ ವರ್ಷಗಳ ನಂತರ ಚಿತ್ರಕಲೆಯನ್ನು ಬಿಟ್ಟು ಛಾಯಾಗ್ರಹಣದತ್ತ ಹೊರಳಿಕೊಳ್ಳಲು ಕಾರಣವಾದದ್ದು ಅವರ ಕಣ್ಣಿನ ಸಮಸ್ಯೆ ಎನ್ನುವುದಂತೂ ಇದಕ್ಕಿಂತ ಅಚ್ಚರಿಯ ವಿಷಯ. ಅನಿವಾರ್ಯತೆಯಿಂದ ಆಯ್ದುಕೊಂಡ ಕ್ಷೇತ್ರದಲ್ಲಿ ಇಷ್ಟರಮಟ್ಟಿಗೆ ಸಾಧನೆ ಮಾಡಿರುವವರು ಬಹಳ ಜನ ಇರಲಾರರೇನೋ.

ಕಾಲೇಜು ಬಿಟ್ಟ ನಂತರ ಸೋಮಶೇಖರರು ಕೆಲಸಗಳಿಗೆ ಪ್ರಯತ್ನಿಸಿದ್ದು, ಹವ್ಯಾಸಗಳ ಬೆನ್ನುಹತ್ತಿದ್ದನ್ನೆಲ್ಲ ಕುರಿತು ಓದುವಾಗ ಅವರು ಯಾರ ಬಲವಂತಕ್ಕೋ ಮಣಿದು ತಮಗೆ ಹಿಡಿಸದ ಯಾವ ಕೆಲಸವನ್ನೂ ಮಾಡದಿರುವುದು ಹಾಗೂ ತಮಗಿಷ್ಟವಾದ ಕೆಲಸಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡಿರುವುದು ನಮ್ಮ ಗಮನಕ್ಕೆ ಬರುತ್ತದೆ. 

ವಿವಿಧ ಕ್ಷೇತ್ರಗಳ ಸಾಧಕರ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಅಭಿಯಾನ ಕೈಗೊಂಡು ಸೋಮಶೇಖರ್ ಮಾಡಿರುವ ಅಗಾಧ ಪ್ರಮಾಣದ ಕಾಯಕಕ್ಕಾಗಿ ‘ಅವರಿಗೆ ಲಭಿಸಿರುವ ಕ್ಯಾಶ್ ಮತ್ತು ಕ್ರೆಡಿಟ್ ಎರಡೂ ಅಲ್ಪವೇ’ ಎನ್ನುವುದು ಅವರ ಕುರಿತಾದ ಮೇಲ್ಕಂಡ  ಕೃತಿಯ ಮುನ್ನುಡಿಕಾರರು ಹೇಳಿರುವ ಮಾತು.  ಭಾರತದಂತಹ ಕಾಪಿರೈಟ್ಸ್ಗೆ ಕಿಂಚಿತ್ತೂ ಕವಡೆಯಿಲ್ಲದ ದೇಶದಲ್ಲಿ, ಸಾಮಾನ್ಯರಿರಲಿ, ಸರ್ಕಾರಿ ವ್ಯವಸ್ಥೆಗಳು ಸಹಾ ಎಲ್ಲವನ್ನೂ ದುರುಪಯೋಗಪಡಿಸಿಕೊಂಡಿರುವುದು ಕಣ್ಣಿಗೆ ರಾಚುತ್ತದೆ. 

ಸೋಮಶೇಖರ್ ಅವರ ಕಾರ್ಯಶ್ರದ್ಧೆ ಎಷ್ಟು ಅಂದರೆ ಪ್ರಸಿದ್ಧರ ಮನೆಗೆ ಹೋಗಿ ಬಾಗಿಲು ಕಾದು ನಿಮ್ಮದೊಂದು ಪೋಟೋ ತೆಗೆಯಬೇಕು ಎಂಬುದು ನನ್ನಾಸೆ ಎಂದು ದುಂಬಾಲು ಬೀಳುತ್ತಿದ್ದರು.  ಆಚೆ ಹೋಗು ಎಂದು ಗದರಿಸಿಕೊಂಡು ಹಿಂದಿರುಗಿದ್ದು ಎಷ್ಟೋ ಬಾರಿ ಆದರೂ ಪುನಃ ಅವರ ಮನೆ ಬಾಗಿಲು ಕಾಯುತ್ತಿದ್ದರಂತೆ.  ಒಮ್ಮೆ ಒಲ್ಲೆನೆಂದು ಹೇಳಿದ ಕುವೆಂಪು ಕೊನೆಗೆ ಈ ಹುಡುಗನನ್ನು ನಿರಾಸೆಗೊಳಿಸುವುದು ಬೇಡ ಎಂದು ಒಪ್ಪಿ ಕೊನೆಗೆ ಚಿತ್ರ ನೋಡಿ ಅತೀವ ಸಂತಸಪಟ್ಟರಂತೆ.  ಇಂದು ಸೋಮಶೇಖರ್ ಅವರ ಚಿತ್ರಗಳನ್ನು ನೋಡಿ ಸಂಭ್ರಮ ಪಟ್ಟ ಹೃದಯಗಳು ಎಷ್ಟು ಕೋಟಿಯೋ.  ಅವೆಲ್ಲ ಒಂದೊಂದು ರೂಪಾಯಿ ಸಂದಾಯಿಸಿದ್ದರೆ!

ಸಾಹಿತ್ಯವಷ್ಟೇ ಅಲ್ಲದೆ ಇನ್ನೂ ಹಲವು ಕ್ಷೇತ್ರದ ಸಾಧಕರನ್ನು ಸೋಮಶೇಖರ್ ತಮ್ಮ ಕ್ಯಾಮೆರಾದಿಂದ ಚಿತ್ರಿಸಿದ್ದಾರೆ. ಚಿತ್ರನಟ ಅಶೋಕ್ ಕುಮಾರರ ಸರಳತೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಹಾಸ್ಯಪ್ರಜ್ಞೆಗಳನ್ನೆಲ್ಲ ಸೋಮಶೇಖರ್  ಸುಂದರವಾಗಿ ಸೆರೆಹಿಡಿದಿದ್ದರು. 

ಸೋಮಶೇಖರ್ ಅವರ ವಿದಾಯದಿಂದ  ನಮ್ಮ ನಾಡು ಒಬ್ಬ ಶ್ರೇಷ್ಠ  ಸಾಹಿತ್ಯ ಮತ್ತು ಸಂಸ್ಕೃತಿಯ ಒಂದು ಮಹತ್ವದ ಕಣ್ಣನ್ನು ಕಳೆದುಕೊಂಡಿತು.  ಈ ಮಹಾನ್ ಕಲಾತ್ಮಕ ಚೇತನದ  ಆತ್ಮ ಅವಿತು, ಅಂದು ತನ್ನ ಕಣ್ಣು ಕಂಡ ಶ್ರೇಷ್ಠತೆಗಳನ್ನು ನೋಡಿ ಆನಂದಿಸುತ್ತಿರುವ ಹೃದಯಗಳ ಕಂಡು ಶಾಂತಿ ಅನುಭವಿಸುತ್ತಿರಬೇಕು.  

Tag: K.G. Somashekhar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ