ನಂಜುಂಡಾರಾಧ್ಯ
ಎಂ. ಜಿ. ನಂಜುಂಡಾರಾಧ್ಯ
ಪ್ರೊ. ಎಂ. ಜಿ. ನಂಜುಂಡಾರಾಧ್ಯರು ಕನ್ನಡ ಮತ್ತು ಸಂಸ್ಕೃತ ಸಾಹಿತ್ಯಲೋಕದಲ್ಲಿ ಹೆಸರಾದ ವಿದ್ವಾಂಸರು.
ನಂಜುಂಡಾರಾಧ್ಯ ಅವರು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಗುಂಡ್ಲಹಳ್ಳಿಯಲ್ಲಿ 1914ರ ಆಗಸ್ಟ್ 1ರಂದು ಜನಿಸಿದರು. ತಂದೆ ಗಂಗಾಧರಯ್ಯ. ತಾಯಿ ವೀರಮ್ಮ.
ನಂಜುಂಡಾರಾಧ್ಯರ ಪ್ರಾಥಮಿಕ ಶಿಕ್ಷಣ ಅವರ ಗುಂಡ್ಲಹಳ್ಳಿಯಲ್ಲಿ ನಡೆಯಿತು. ಪ್ರೌಢ ವ್ಯಾಸಂಗಕ್ಕಾಗಿ ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಸಂಸ್ಕೃತ ಪಾಠಶಾಲೆಗೆ ಸೇರಿದರು. ಅಲ್ಲಿ ಅಲಂಕಾರಶಾಸ್ತ್ರ, ವಿಶಿಷ್ಟಾದ್ವೈತ ವೇದಾಂತಗಳಲ್ಲಿ ವಿದ್ವಾನ್ ಪದವಿ ಪಡೆದ ನಂಜುಂಡಾರಾಧ್ಯರು ಹಿಂದಿ ರಾಷ್ಟ್ರಭಾಷಾ ವಿಶಾರದ ಮತ್ತು ಕನ್ನಡದಲ್ಲಿ ವಿದ್ವಾನ್ ಪದವಿ ಪಡೆದು ತ್ರಿಭಾಷಾ ಪಂಡಿತರಾದರು.
ವಿದ್ಯಾರ್ಥಿ ದೆಸೆಯಿಂದಲೇ ಮಹಾತ್ಮಗಾಂಧಿ, ಸ್ವಾಮಿ ವಿವೇಕಾನಂದ, ಸ್ವಾಮಿ ದಯಾನಂದ ಸರಸ್ವತಿ, ರಾಮಕೃಷ್ಣ ಪರಮಹಂಸ, ಹರ್ಡೇಕರ್ ಮಂಜಪ್ಪ ಮೊದಲಾದವರ ಪ್ರಭಾವಗಳಿಂದ ಆದರ್ಶ ಬಾಳನ್ನು ಬಾಳಿದರು.
ಶ್ರೀ ಜಯಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಉಪಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂಜುಂಡಾರಾಧ್ಯರು, ನಂತರದಲ್ಲಿ ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಶಕ್ತಿ ವಿಶಿಷ್ಟಾದ್ವೈತ ವೇದಾಂತ ಮತ್ತು ವೀರಶೈವಾಗಮದ ಅಧ್ಯಾಪಕರಾಗಿ ಮತ್ತು ಪ್ರಾಧ್ಯಾಪಕರಾಗಿ 33 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದರು.
ನಂಜುಂಡಾರಾಧ್ಯರು ಸಂಸ್ಕೃತದಲ್ಲಿ ಕೈವಲ್ಯೋಪನಿಷತ್, ಮುಂಡಕೋಪನಿಷತ್, ಈಶಾವಾಸ್ಯೋಪನಿಷತ್, ಬ್ರಹ್ಮಸೂತ್ರ ವೃತ್ತಿ, ತತ್ತ್ವ ಪ್ರಕಾಶ ಮುಂತಾದ ಕೃತಿಗಳನ್ನು ಸಂಪಾದಿಸಿದರು.
ಕನ್ನಡದಲ್ಲಿ ನಂಜುಂಡಾರಾಧ್ಯರು ಸಂಪಾದಿಸಿದ ಕೃತಿಗಳಲ್ಲಿ ಬಸವಪ್ಪಶಾಸ್ತ್ರಿಗಳ ಸಮಗ್ರ ಕೃತಿಗಳ ಬೃಹತ್ ಸಂಪುಟ, ಶಿವಾಗಮ, ಸೌರಭ, ಭಾರತೀಯದರ್ಶನ, ಶಕ್ತಿ ವಿಶಿಷ್ಟಾದ್ವೈತದರ್ಶನ, ದರ್ಶನ ದೀಪ್ತಿ, ದೇವರ ದಾಸಿಮಯ್ಯ, ವೀರಶೈವ ಪೂರ್ವ ಪ್ರಯೋಗರತ್ನಮ್, ಹರಿಹರ ಕವಿಯ ಗಿರಿಜಾ ಕಲ್ಯಾಣಂ ಮಹಾಪ್ರಬಂಧಂ ಮುಂತಾದವು ಸೇರಿವೆ.
ವಿಮರ್ಶೆಯಲ್ಲೂ ಮಹತ್ವದ ಕೆಲಸ ಮಾಡಿದ ನಂಜುಂಡಾರಾಧ್ಯರು ಮಹಾಕವಿ ಭಾರವಿ, ಕವಿ ಮುರಾರಿ, ಕವಿ ಶ್ರೀಹರ್ಷ, ಭಟ್ಟನಾರಾಯಣ, ಮಾಘಕವಿ ಮುಂತಾದ ಮಹಾನ್ ಕವಿಗಳ ಕಾಯಕದ ಬಗ್ಗೆ ವಿಶಾಲವ್ಯಾಪ್ತಿಯ ಬೆಳಕು ಚೆಲ್ಲಿದ್ದಾರೆ.
ಪಕ್ಷ್ಮಲಾಕ್ಷಿ, ವಿಜಯನಾದ ನಂಜುಂಡಾರಾಧ್ಯರ ಖಂಡಕಾವ್ಯಗಳು. ಅರ್ಜುನ ವಿಜಯ, ಚಂದ್ರಗುಪ್ತನ ಭಾಗ್ಯ, ಸತ್ಯವ್ರತಿ ಭೀಷ್ಮ ಇವರ ಗದ್ಯ ಕೃತಿಗಳು. ಶಿವನ ಸೋಲು, ದಸ್ಯುಮಹರ್ಷಿ, ಐಲೂಷ ನಂಜುಂಡಾರಾಧ್ಯರು ರಚಿಸಿದ ನಾಟಕಗಳು.
ನಂಜುಂಡಾರಾಧ್ಯರು ರಚಿಸಿದ ಜೀವನಚರಿತ್ರೆಗಳಲ್ಲಿ ಬಸವಪ್ಪಶಾಸ್ತ್ರಿ, ಹೇಮರೆಡ್ಡಿ ಮಲ್ಲಮ್ಮ ಮುಂತಾದುವು ಸೇರಿವೆ. ಹೀಗೆ ನಂಜುಂಡಾರಾಧ್ಯರು 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು.
ನಂಜುಂಡಾರಾಧ್ಯರು ಮಧುರವಾಣಿ, ಸರಸ್ವತಿ ಸುಷ್ಮಾ, ಗಾಂಢೀವ, ಪರಿಷತ್ಪತ್ರಿಕೆ ಮುಂತಾದುವುಗಳಿಗೆ ವಿದ್ವತ್ಪೂರ್ಣ ಲೇಖನಗಳನ್ನು ಬರೆದರು. ಅನೇಕ ಸಂಸ್ಕೃತ ವಿದ್ವದ್ಗೋಷ್ಠಿಗಳಲ್ಲಿ ಭಾಗಿಯಾಗಿದ್ದರು.
ನಂಜುಂಡಾರಾಧ್ಯರಿಗೆ ಮೈಸೂರು ಅರಮನೆಯಿಂದ ಆಸ್ಥಾನ ವಿದ್ವಾನ್, ಭಾರತ ಸರಕಾರದ ಆದರ್ಶ ಶಿಕ್ಷಕ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿಗಳಲ್ಲದೆ, ರಂಭಾಪುರಿ ಸಂಸ್ಥಾನ ಮಠ, ಸುತ್ತೂರು ಮಠ, ಚಿತ್ರದುರ್ಗದ ಬೃಹನ್ಮಠ, ಹುಬ್ಬಳ್ಳಿ ಮೂರು ಸಾವಿರ ಮಠಗಳಿಂದ ಸನ್ಮಾನ ಗೌರವಗಳು ಸಂದಿದ್ದವು.
ಪ್ರೋ. ನಂಜುಂಡಾರಾಧ್ಯರು 1991ರ ನವಂಬರ್ 7ರಂದು ಈ ಲೋಕವನ್ನಗಲಿದರು.
On the birth anniversary of great scholar Prof. M. G. Nanjundaradhya
ಕಾಮೆಂಟ್ಗಳು