ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಕನ್ಯಾ ರಾಮಗೋಪಾಲ್


ಸುಕನ್ಯಾ ರಾಮಗೋಪಾಲ್

ಸಾಮಾನ್ಯವಾಗಿ ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ಘಟಂ ವಾದನದಲ್ಲಿ ಪುರುಷ ಕಲಾವಿದರೇ ಕಾಣುವುದು ಹೆಚ್ಚು. ಈ ಕಲೆಯಲ್ಲಿ ಪ್ರಥಮ ಮಹಿಳಾ ಕಲಾವಿದರೆಂದು ಪ್ರಖ್ಯಾತಿ ಪಡೆದಿರುವವರು ಸುಕನ್ಯಾ ರಾಮಗೋಪಾಲ್.

ಸುಕನ್ಯಾ ರಾಮಗೋಪಾಲ್ 1957ರ ಸೆಪ್ಟೆಂಬರ್ 13ರಂದು ಚೆನ್ನೈನಲ್ಲಿ ಜನಿಸಿದರು. ತಂದೆ ಸುಬ್ರಹ್ಮಣ್ಯಂ ಮತ್ತು ತಾಯಿ ರಂಗನಾಯಕಿ. ಅವರದ್ದು ಸಂಗೀತಗಾರರ ಮತ್ತು ವಿದ್ವಾಂಸರ ಮನೆತನ. ಅವರ ತಾತ ಡಾ. ಯು. ವಿ. ಸ್ವಾಮಿನಾಥ ಅಯ್ಯರ್ ಮಹಾನ್ ವಿದ್ವಾಂಸರು.

ಸುಕನ್ಯಾ ತಮ್ಮ ಹನ್ನೆರಡನೇ ವಯಸ್ಸಿನಿಂದಲೇ ಮೃದಂಗವಾದನ ಕಲಿಕೆಯನ್ನಾರಂಭಿಸಿದರು. ಪ್ರಸಿದ್ಧ ವಿಕ್ಕು ವಿನಾಯಕಂ ಅವರಿಂದ ಮೃದಂಗ ಮತ್ತು ಘಟಂ ಶಿಕ್ಷಣವನ್ನು ಪಡೆದ ಸುಕಾನ್ಯಾ ಅವರು ವಿದ್ವಾನ್ ಗುರುಮೂರ್ತಿ ಅವರಿಂದ ಪಿಟೀಲು ವಾದನವನ್ನೂ ಕಲಿತರು.

ಕರ್ನಾಟಕ ಸಂಗೀತದಲ್ಲಿ ದಿಗ್ಗಜರೆನಿಸಿರುವ ಬಹುತೇಕ ಕಲಾವಿದರಿಗೆ ಘಟಂ ಸಹಯೋಗ ನೀಡಿರುವ ಸುಕನ್ಯಾ ರಾಮಗೋಪಾಲ್ ಆಕಾಶವಾಣಿಯ ‘ಎ’ ದರ್ಜೆ ಮಾನ್ಯತೆ ಗಳಿಸಿದವರು. ಅವರ ಹಲವಾರು ಏಕವ್ಯಕ್ತಿ ಕಾರ್ಯಕ್ರಮಗಳು ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಪ್ರಸಾರಗೊಂಡು ಜನಪ್ರಿಯತೆ ಗಳಿಸಿವೆ.

ನಿರಂತರ ಪ್ರಯೋಗಶೀಲರಾದ ಸುಕನ್ಯಾ ರಾಮಗೋಪಾಲ್ ಆರು ಘಟಂ ವಾದ್ಯಗಳನ್ನು ವಿವಿಧ ಶ್ರುತಿ – ಲಯಗಳಿಗೆ ಹೊಂದಿಸಿ ಜಲತರಂಗ್‌ ರೀತಿ ನುಡಿಸಿ ‘ಘಟಂ ತರಂಗ್‌’ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವುದರ ಮೂಲಕ ವಿಶ್ವದೆಲ್ಲೆಡೆ ಕೀರ್ತಿಗಳಿಸಿದ್ದಾರೆ. ತಮ್ಮ ಹತ್ತು ಬೆರಳುಗಳನ್ನೂ ಉಪಯೋಗಿಸಿ ಮೃದು – ಮಧುರ ಸ್ವರ ಹೊರಹೊಮ್ಮಿಸಬಲ್ಲ ಅಮೂಲ್ಯ ಪ್ರತಿಭೆ ಅವರದ್ದು.

ಹಾಡುಗಾರರು ಪಕ್ಕವಾದ್ಯವನ್ನು ಆಯ್ಕೆಮಾಡಿಕೊಳ್ಳುವಂತೆ ತಮ್ಮ ಪ್ರಮುಖ ಘಟಂ ವಾದನಕ್ಕೆ ಪಿಟೀಲು, ಮೃದಂಗ, ಕೊಳಲು, ತಬಲ, ಮೋರ್ಚಿಂಗ್ ನುಡಿಸಬಲ್ಲ ಸಮರ್ಥ ಮಹಿಳಾ ಕಲಾವಿದರನ್ನೇ ಆಯ್ಕೆಮಾಡಿ ಸುಕನ್ಯಾ ರಾಮಗೋಪಾಲ್ ಅವರು ನೀಡುತ್ತಿರುವ ‘ಸ್ತ್ರೀ ತಾಳ ತರಂಗ್‌’ ಅವರ ಮತ್ತೊಂದು ಮಹತ್ವದ ಸಾಧನೆಯಾಗಿದೆ. ಅವರ ಏಕವ್ಯಕ್ತಿ ಘಟಂ ವಾದನ, ಸ್ತ್ರೀ ತಾಳತರಂಗ್‌ ಕಾರ್ಯಕ್ರಮಗಳು ಭಾರತದೆಲ್ಲೆಡೆಯ ಪ್ರಸಿದ್ಧ ವೇದಿಕಗಳಲ್ಲಷ್ಟೇ ಅಲ್ಲದೆ, ಯುನೈಟೆಡ್ ಕಿಂಗ್ಡಂ, ಅಮೆರಿಕಾ, ಫ್ರಾನ್ಸ್, ಜರ್ಮನಿ, ಸ್ವಿಜರ್‌ಲ್ಯಾಂಡ್‌, ಕೆನಡಾ, ಆಸ್ಟ್ರೇಲಿಯಾ ಹೀಗೆ ವಿಶ್ವದಾದ್ಯಂತ ಕೀರ್ತಿಗಳಿಸಿವೆ.

ಈ ಮಹಾನ್ ಕಲಾವಿದರಿಗೆ ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಚೆನೈನ ನಾರದಗಾನ ಸಭಾ ಪ್ರಶಸ್ತಿ, ಮುಂಬಯಿಯ ಬಂದುಪ್‌ ಆರ್ಟ್ ಸೊಸೈಟಿಯ ಲಯ ಕಲಾನಿಧಿ ಪ್ರಶಸ್ತಿ, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್‌ ರಾಗತರಂಗಿಣಿ ಪ್ರಶಸ್ತಿ, ಎಚ್‌.ವಿ. ಪುಟ್ಟಾಚಾರ್‌ ಸ್ಮಾರಕ ಪ್ರಶಸ್ತಿ, ಲಯಕಲಾ ಪ್ರತಿಭಾಮಣಿ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಈ ಮಹಾನ್ ಸಂಗೀತ ಸಾಧಕರಿಗೆ ಗೌರವಪೂರ್ವಕ ಹಾರ್ದಿಕ ಶುಭ ಹಾರೈಕೆಗಳು.

Happy birthday to great percussionist Sukkanya Ramgopal 🌷🙏🌷


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ