ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ನಂ. ಚಂದ್ರಯ್ಯ


 ಬಿ. ನಂ. ಚಂದ್ರಯ್ಯ


ಪ್ರಾಧ್ಯಾಪಕ, ಭಾಷಾವಿಜ್ಞಾನಿ ಮತ್ತು ವಿದ್ವಾಂಸರಾಗಿ ಹೆಸರಾಗಿದ್ದವರು ಡಾ. ಬಿ. ನಂ. ಚಂದ್ರಯ್ಯನವರು.

ಚಂದ್ರಯ್ಯವರು 1936ರ ಸೆಪ್ಟೆಂಬರ್ 13ರಂದು  ತುಮಕೂರು ಜಿಲ್ಲೆಯ ಕೆಸ್ತೂರಿನಲ್ಲಿ ಜನಿಸಿದರು. ತಂದೆ ನಂಜುಂಡಾರಾಧ್ಯ, ತಾಯಿ ಅಕ್ಕ ಹೊನ್ನಮ್ಮ. ಚಂದ್ರಯ್ಯನವರ ಪ್ರಾರಂಭಿಕ ಶಿಕ್ಷಣ ಬಸಪ್ಪನ ಪಾಳ್ಯ, ಕೊರಟಗೆರೆ ಮತ್ತು ತುಮಕೂರಿನಲ್ಲಿ ನಡೆಯಿತು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಕನ್ನಡ ಮತ್ತು ಎಂ.ಎ. ಪದವಿ ಪಡೆದರು. 'ಹರಿಜನರು ಮಾತನಾಡುವ ಕನ್ನಡ’ (ಮೈಸೂರು ಸುತ್ತಮುತ್ತ) ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಗಳಿಸಿದರು. ಸಂಸ್ಕೃತ ಕೋವಿದ ಮತ್ತು ಹಿಂದಿ ರಾಷ್ಟ್ರಭಾಷಾ ಪ್ರವೀಣ ಪರೀಕ್ಷೆಗಳಲ್ಲೂ ತೇರ್ಗಡೆಯಾದರು. 

ಚಂದ್ರಯ್ಯನವರು ಮೊದಲಿಗೆ ಶ್ರೀ ಜಗದ್ಗುರು ರೇಣುಕಾಚಾರ‍್ಯ ಕಾಲೇಜಿನಲ್ಲಿ ಉದ್ಯೋಗ ಆರಂಭಿಸಿ ಮುಂದೆ ತಿಪಟೂರಿನ ಕಲ್ಪತರು ಕಾಲೇಜು, ಮೈಸೂರಿನ ಯುವರಾಜ ಕಾಲೇಜು, ಮಹಾರಾಜ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ, ಮಂಡ್ಯ ಸ್ನಾತಕೋತ್ತರ ಕೇಂದ್ರದಲ್ಲಿ ರೀಡರ್ ಆಗಿ, ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದರು. 

ಚಂದ್ರಯ್ಯನವರು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಡನೆ ಪ್ರಾರಂಭದಿಂದಲೂ ಒಡನಾಟಹೊಂದಿದ್ದರು. ಮೈಸೂರಿನ ಐಟಿಐ, ಐ.ಎ.ಎಸ್., ಐ.ಪಿ.ಎಸ್. ಅಧಿಕಾರಿಗಳಿಗೆ ಮತ್ತು ಹಲವಾರು ಇಲಾಖೆಯವರಿಗೆ ಆಡಳಿತದಲ್ಲಿ ಕನ್ನಡ ಬಳಸುವ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಜರ್ಮನಿಯ ಸ್ಟುಟ್‌ಗರ್ಟ್‌ನ ಕೊಲ್ನ್ ವಿಶ್ವವಿದ್ಯಾಲಯ, ಅಮೆರಿಕದ ಬಾಸ್ಟನ್ ವಿಶ್ವವಿದ್ಯಾಲಯದ ಸಮ್ಮೇಳನ, ಭೂಪಾಲ್‌ನಲ್ಲಿ ನಡೆದ ಸಮ್ಮೇಳನ ಮುಂತಾದುವುಗಳಲ್ಲಿ ಪ್ರಬಂಧ ಮಂಡನೆ ಮಾಡಿದರು. 

ಚಂದ್ರಯ್ಯನವರು 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.‍ ಚಿತ್ರಲೇಖಾ, ಮಲ್ಲಿಕಾ, ಆಲದ ನೆರಳು ಮುಂತಾದವು ಕಾದಂಬರಿಗಳು.  ಬುದ್ಧನ ಜಾತಕ ಕಥೆಗಳು ಕಥಾ ಸಂಕಲನ. ಸ್ಕಂದ ಗುಪ್ತ, ವಿಕ್ರಮಾದಿತ್ಯ, ರಾಜ್ಯಶ್ರೀ, ಧ್ರುವ ಸ್ವಾಮಿನಿ, ಕಿತ್ತೂರುರಾಣಿ ಚೆನ್ನಮ್ಮ ಮುಂತಾದವು ನಾಟಕಗಳು. ನೀಲಾಂಬಿಕೆಯ ಸಂದೇಶ, ಅಂಬಲಿಯ ಜಂಗಮ, ಅಕ್ಬರ್ ತಾನ್‌ಸೇನ್, ಯೇಸುವಿನ ಬಿತ್ತು ಬೀಜ, ಶತಮಾನಂ ಭವತಿ (ಷಟ್ಪದಿಯ ವಚನ, ಚುಟುಕ, ಭಾವಗೀತೆಗಳ ಸಮಗ್ರ ಕಾವ್ಯ), ಆಯುಃ ಪರಿಮಿತಿ ಮೊದಲಾದುವು ಷಟ್ಪದಿಯ ಖಂಡ ಕಾವ್ಯಗಳು. 'ಅಲೆ' ಇವರ ಕವನ ಸಂಗ್ರಹ. ಚನ್ನಬಸವಾಂಕ, ಮಹಾದೇವಿಯಕ್ಕ, ಯಜಮಾನ ವೀರ ಸಂಗಪ್ಪನವರು, ಡಾ. ಜ.ಚ.ನಿ, ಜಸ್ಟಿಸ್ ಟಿ.ಎನ್. ಮಲ್ಲಪ್ಪನವರು ಮುಂತಾದುವು ಜೀವನ ಚರಿತ್ರೆಗಳು.

ಬಿ. ನಂ. ಚಂದ್ರಯ್ಯನವರಿಗೆ ಡಾ. ಜ.ಚ.ನಿ. ವಿದ್ಯಾಸಂಸ್ಥೆಯಿಂದ ಭಾರತೀಯ ಭಾಷಾ ವಿಜ್ಞಾನಿ ಪ್ರಶಸ್ತಿ, ಅಲಹಾಬಾದ್ ಸಂಸ್ಥೆಯಿಂದ ಸಾಹಿತ್ಯ ಮಹೋಪಾಧ್ಯಾಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ  ಪ್ರಶಸ್ತಿ, ದೇವಾಂಗ ಮಹಾಸಂಸ್ಥಾನ ಮಠದಿಂದ ಕನ್ನಡ ಸಾಹಿತ್ಯರತ್ನ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.  'ಸಮನ್ವಯ’ ಮತ್ತು ‘INDIAN ALTERNATIVES IN LINGUISTICS’ ಎಂಬವು ಇವರಿಗೆ ಅರ್ಪಿವಾದ ಗೌರವ ಗ್ರಂಥಗಳು.

ಪ್ರೊ. ಚಂದ್ರಯ್ಯನವರು 2021ರ ಫೆಬ್ರುವರಿ 19ರಂದು ನಿಧನರಾದರು.

On the birthday of Prof B. N. Chandraiah

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ