ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಟಿ. ಗಟ್ಟಿ


 ಕೆ. ಟಿ. ಗಟ್ಟಿ

ಪ್ರೊ. ಕೆ. ಟಿ. ಗಟ್ಟಿಯವರು ಕಾದಂಬರಿಕಾರರಾಗಿ, ಭಾಷಾತಜ್ಞರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾದವರು. ಇಂದು ಅವರ ಸಂಸ್ಮರಣೆ ದಿನ. 

ಕೆ. ಟಿ. ಗಟ್ಟಿ 1938ರ ಜುಲೈ 22 ರಂದು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದರು. 1957ರಿಂದಲೇ ಸಾಹಿತ್ಯ ಕೃಷಿ ಪ್ರಾರಂಭಿಸಿದ ಗಟ್ಟಿಯವರಿಗೆ ತಂದೆ ತಾಯಿಗಳೇ ಪ್ರೇರಣೆ. ವೃತ್ತಿಯಲ್ಲಿ ಕೃಷಿಕರಾದರೂ ಯಕ್ಷಗಾನ ಪ್ರಿಯರಾದ ತಂದೆ ಧೂಮಪ್ಪನವರು ಕೂಡ್ಲು ಯಕ್ಷಗಾನ ನಾಟಕ ಮಂಡಲಿಯೊಡನೆ ಊರೂರು ಸುತ್ತುತ್ತಿದ್ದು, ಸಿಕ್ಕಿದ ಪುಸ್ತಕಗಳನ್ನು ಮನೆಗೆ ತಂದಿಡುತ್ತಿದ್ದುದು ಗಟ್ಟಿಯವರಿಗೆ ಓದಲು ಪ್ರಚೋದನೆ ನೀಡಿತು.  ತಾಯಿ ಪರಮೇಶ್ವರಿಯವರು ಮನೆಯಲ್ಲಿ ಹಾಡುತ್ತಿದ್ದ ತುಳು-ಮಲಯಾಳಂ ಪಾಡ್ದನಗಳು ಸಾಹಿತ್ಯದಲ್ಲಿ ಮತ್ತಷ್ಟು ಆಸಕ್ತಿ ಬೆಳೆಯುವಂತೆ ಮಾಡಿದವು.

ಕೆ. ಟಿ. ಗಟ್ಟಿ ಅವರು ಕಾಸರಗೋಡಿನ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಕ್ರಮಬದ್ಧವಾಗಿ ಕಲಿತದ್ದು ಎಂಟನೆಯ ತರಗತಿಯವರೆಗೆ ಮಾತ್ರ. ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಉತ್ತೀರ್ಣರಾದ ನಂತರ ಕಾಸರಗೋಡಿನ ಚಳುವಳಿಯಲ್ಲಿ ಭಾಗಿಯಾದರು. ನಂತರ ಪಿ.ಯು. ಹಾಗೂ ಬಿ.ಎ. ಪದವಿಯನ್ನು ಕೇರಳ ವಿಶ್ವವಿದ್ಯಾಲಯದಿಂದ ಪಡೆದರು. ಮಾಯಿಪ್ಪಾಡಿಯ ಸರಕಾರಿ ಬೇಸಿಕ್‌ ಟ್ರೈನಿಂಗ್‌ ಶಾಲೆಯಿಂದ ಎರಡು ವರ್ಷಗಳ ಶಿಕ್ಷಕರ ತರಬೇತಿ ಪಡೆದರು. ತಲಚೇರಿಯ ಸರಕಾರಿ ಟ್ರೈನಿಂಗ್‌ ಕಾಲೇಜಿನಿಂದ ಒಂದು ವರ್ಷದ ಬಿ.ಎಡ್‌. ಪದವಿ ಪಡೆದರು.

ಗಟ್ಟಿಯವರು ಶಿಕ್ಷಕರಾಗಿ ಸೇರಿದ್ದು ಕಾಸರಗೋಡಿದ ಸರಕಾರಿ ಪ್ರೌಢಶಾಲೆಯಲ್ಲಿ. ಬಿಡುವಿನ ವೇಳೆಯಲ್ಲಿ ಖಾಸಗಿಯಾಗಿ ಕುಳಿತು ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಸ್ನಾತಕೋತ್ತರ ಪದವಿ ಪಡೆದರು.  1968ರಲ್ಲಿ ಮಣಿಪಾಲದ ಎಂ.ಐ.ಟಿ. ಸಂಸ್ಥೆ ಸೇರಿ ಆರು ವರ್ಷಗಳ ಕಾಲ ಇಂಗ್ಲಿಷ್‌ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದುದರ ಜೊತೆಗೆ  ಒಂದು ವರ್ಷ ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲೂ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ನಿಯುಕ್ತರಾಗಿ ಇಥಿಯೋಪಿಯಾದಲ್ಲಿರುವಾಗಲೇ ಲಂಡನ್ನಿನ ಟ್ರಿನಿಟಿ ಕಾಲೇಜಿನಿಂದ ಇಂಗ್ಲಿಷ್‌ ಕಲಿಕೆಯಲ್ಲಿ ಡಿಪ್ಲೊಮಾ ಮತ್ತು ಆಕ್ಸ್ಫರ್ಡಿನ ಕಾಲೇಜ್‌ ಆಫ್‌ ಪ್ರಿಸೆಪ್ಟರ್ಸ್‌ನಿಂದ  ಡಿಪ್ಲೊಮಾ ಪಡೆದರು.

ಕೆ. ಟಿ. ಗಟ್ಟಿಯವರ ಮೊದಲ ಕಾದಂಬರಿ ‘ಶಬ್ದಗಳು’ ಧಾರಾವಾಹಿಯಾಗಿ ‘ಸುಧಾ’ ವಾರ ಪತ್ರಿಕೆಯಲ್ಲಿ ಪ್ರಕಟವಾದುದು 1976ರಲ್ಲಿ. ಇದು ಸುಧಾ ವಾರಪತ್ರಿಕೆಯ ಪ್ರಸಾರದ ಸಂಖ್ಯೆಯನ್ನೂ ಹೆಚ್ಚುಮಾಡಿದ್ದಲ್ಲದೆ ಜನಪ್ರಿಯ ಕಾದಂಬರಿ ಎನಿಸಿ ಅಂದಿನ ದಿನಗಳಲ್ಲೇ ಸತತವಾಗಿ ನಾಲ್ಕು ಮುದ್ರಣಗಳನ್ನು ಕಂಡ ಖ್ಯಾತಿಗೂ ಪಾತ್ರವಾಗಿತ್ತು.  1978ರಲ್ಲಿ ಬರೆದ ‘ಸಾಫಲ್ಯ’ ಕಾದಂಬರಿಯೂ ಸೇರಿ 2004ರವರೆಗೆ ಅವರ 14ಕಾದಂಬರಿಗಳು ಸುಧಾ ವಾರಪತ್ರಿಕೆಯೊಂದರಲ್ಲಿಯೇ ಧಾರಾವಾಹಿಯಾಗಿ ಪ್ರಕಟಗೊಂಡವು. ಇದಲ್ಲದೆ ತುಷಾರ ಮಾಸ ಪತ್ರಿಕೆಯಲ್ಲಿ ‘ಮನೆ’, 'ಕಾಮಯಜ್ಞ' ಕಾದಂಬರಿಗಳು, ಗೆಳತಿ ಪತ್ರಿಕೆಯಲ್ಲಿ ‘ಪೂಜಾರಿ’, ಕಾದಂಬರಿ ಪತ್ರಿಕೆಯಲ್ಲಿ ‘ಅವಿಭಕ್ತರು’, ತರಂಗ ವಾರಪತ್ರಿಕೆಯಲ್ಲಿ ‘ನಿರಂತರ’, ಮಲ್ಲಿಗೆ ಮಾಸಪತ್ರಿಕೆಯಲ್ಲಿ ‘ನವಂಬರ್ 10’, ಕರ್ಮವೀರ ವಾರಪತ್ರಿಕೆಯಲ್ಲಿ ‘ಸನ್ನಿವೇಶ’, ಪ್ರಜಾವಾಣಿ ದಿನಪತ್ರಿಕೆಯಲ್ಲಿ ‘ಕಾರ್ಮುಗಿಲು’, ಮಂಗಳ ವಾರಪತ್ರಿಕೆಯಲ್ಲಿ ‘ರಸಾತಳ’ ಹೀಗೆ  ವಿವಿಧ ಪತ್ರಿಕೆಗಳಲ್ಲಿ ಅವರ ಅನೇಕ ಕಾದಂಬರಿಗಳು  ಧಾರಾವಾಹಿಗಳಾಗಿ ಪ್ರಕಟವಾಗಿವೆ.  ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ತೇ, ಕೂಪ, ಪೂಜಾರಿ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಗಿನ ಮನೆ ಇವೇ ಮುಂತಾದವು ನೆನಪಿಗೆ ಬರುವ ಅವರ ಇನ್ನಿತರ ಕಾದಂಬರಿಗಳು.  ಹೀಗೆ  ಅವರ ಕಾದಂಬರಿಗಳ ಐವತ್ತರ ಸಂಖ್ಯೆಯನ್ನು ಮೀರಿವೆ.

ಗಟ್ಟಿಯವರು ವಿದೇಶಕ್ಕೆ ಹೊರಡುವ ಮುನ್ನ ಬರೆದ ಕಾದಂಬರಿ ‘ಶಬ್ದಗಳು’.  ಅವರು  ಇಥಿಯೋಪಿಯಾದಲ್ಲಿದ್ದಾಗ  ನಡೆದ ಒಂದು  ಘಟನೆ ಅವರ ಮನಸ್ಸಿನ ಮೇಲೆ ಅಚ್ಚೊತ್ತಿತು. ಇವರು ಪ್ರೀತಿಯಿಂದ ಬೆಳೆಸಿದ ನಿಂಬೆಗಿಡವನ್ನು  ಕುರಿಯೊಂದು ಬಂದು ತಿನ್ನತೊಡಗಿದಾಗ ಕೋಪಗೊಂಡು ಓಡಿಸಿದ ಮೇಲೆ ಗಟ್ಟಿಯವರೆಗೆ  ಒಂದು ಪ್ರಶ್ನೆ ಕಾಡಿತಂತೆ. ಬೇರೆಯವರ ದೇಶ, ಅವರ ಮಣ್ಣು, ಅವರ ಗಿಡ, ಅವರ ಕುರಿ - ನಾನು ಓಡಿಸಿದ್ದು ಸರಿಯಾ?  ಹೀಗೆ ಅನುಭವಿಸಿದ ಈ ತುಮುಲಗಳಿಂದ  ಹುಟ್ಟಿ ಬಂದದ್ದೇ ಅವರ  ‘ಅರಗಿನ ಅರಮನೆ’ ಕಾದಂಬರಿ.  1982ರಲ್ಲಿ ಸ್ವದೇಶಕ್ಕೆ ಮರಳಿಬಂದ ಗಟ್ಟಿಯವರು ಪೂರ್ಣಾವಧಿ ಲೇಖಕರಾಗಿ ಬದುಕಲು ನಿರ್ಧರಿಸಿ, ದ.ಕ. ಜಿಲ್ಲೆಯ ಉಜಿರೆಯ ಬಳಿ ಜಮೀನು ಖರೀದಿಸಿ ‘ವನಸಿರಿ’ಯಲ್ಲಿ ಕೃಷಿ, ಸಾಹಿತ್ಯ ಕೃಷಿ ಎರಡರಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ಗಟ್ಟಿಯವರು ಆಗಾಗ್ಗೆ ಪತ್ರಿಕೆಗಳಿಗೆ  ಬರೆದ ಕಥೆಗಳು ‘ಮನುಷ್ಯನ ವಾಸನೆ ಮತ್ತು ಇತರ ಕಥೆಗಳು’, ‘ನೀಲಿ ಗುಲಾಬಿ ಮತ್ತು ಇತರ ಕಥೆಗಳು’, ‘ಭೂಗತ ಮತ್ತು ಇತರ ಕಥೆಗಳು’, ‘ವಿಶ್ವ ಸುಂದರಿ ಮತ್ತು ಇತರ ಕಥೆಗಳು’ ಹಾಗೂ ‘ಪ್ರೀತಿ ಎಂಬ ಮಾಯೆ ಮತ್ತು ಇತರ ಕಥೆಗಳು’ ಎಂಬ ಸಂಕಲನಗಳಲ್ಲಿ ಸೇರಿವೆ.  ಶಿಕ್ಷಣ, ಸಾಹಿತ್ಯ, ಸಾಮಾಜಿಕ ಈ ವಿಷಯಗಳ ಬಗ್ಗೆ ಚಿಂತನೆಗೆ ಹಚ್ಚುವ ಅವರ ಹಲವಾರು ಮೌಲಿಕ ಲೇಖನಗಳು ಆಗಾಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ‘ಮೂರನೆಯ ಧ್ವನಿ’ (ಸಾಹಿತ್ಯ ಚಿಂತನ), ‘ನಿನ್ನೆ ನಾಳೆಗಳ ನಡುವೆ’ (ಸಾಮಾಜಿಕ ಚಿಂತನ), ‘ನಮ್ಮ ಬದುಕಿನ ಪುಟಗಳು’, ‘ನಮ್ಮೊಳಗಿನ ಆಕಾಶ’, ‘ನಾಲ್ಕುದಿಕ್ಕು ಮತ್ತು ಅಂತರಾಳದ ತಂತಿ’ (ವೈಚಾರಿಕ ಲೇಖನಗಳ ಕೃತಿಗಳು) ಪ್ರಕಟಗೊಂಡಿವೆ.  ‘ಝೇಂಕಾರದ ಹಕ್ಕಿ’  ಎಂಬ ಗಟ್ಟಿಯವರ  ಕವನಗಳ ಸಂಗ್ರಹವು 1994ರಲ್ಲಿ ಪ್ರಕಟಗೊಂಡಿದ್ದು ಇಂಗ್ಲಿಷ್‌ ಗೀತೆಗಳ ಅನುವಾದ ‘ನನ್ನ ಪ್ರೇಮದ ಹುಡುಗಿ’  2001ರಲ್ಲಿ ಪ್ರಕಟವಾಗಿದೆ. ತಂದೆತಾಯಿಯಿಂದ ಬಳುವಳಿಯಾಗಿ ಬಂದ ರಂಗಭೂಮಿಯ ಬಗೆಗಿನ ಒಲವಿನಿಂದ ಗಟ್ಟಿಯವರು  ರಚಿಸಿದ  ನಾಟಕ ಕೃತಿಗಳೆಂದರೆ ನಾಟ್ಕ, ಕೆಂಪುಕಾಗೆ, ಸತ್ಯಕ್ಕೆ ಜಯ, ಕುರುಡರು, ನಗರ ಪರ್ವ, ಬೊಂಬೆಯಾಟ, ಜುಜುಬಿದೇವರ ಜುಗಾರಿ ಮುಂತಾದವು.  ಹೀಗೆ ಮೂಡಿ ಬಂದ ಇಪ್ಪತ್ತಕ್ಕೂ ಹೆಚ್ಚು ನಾಟಕಗಳಲ್ಲಿ  ಕೆಲವು ಬಾನುಲಿಯಲ್ಲೂ ಪ್ರಸಾರಗೊಂಡು ಜನಪ್ರಿಯ ನಾಟಕಗಳೆನಿಸಿವೆ.  ಪ್ರೌಢರಿಗಷ್ಟೇ ಅಲ್ಲದೆ ಮಕ್ಕಳಿಗಾಗಿಯೂ ಅವರು 30ಕ್ಕೂ ಹೆಚ್ಚು  ನಾಟಕಗಳನ್ನು  ರಚಿಸಿದ್ದು ಅವು  ಇಂಗ್ಲಿಷ್‌, ಹಿಂದಿ, ತೆಲುಗು, ತಮಿಳು, ಪಂಜಾಬಿ ಮುಂತಾದ ಇತರ ಭಾಷೆಗಳಿಗೂ ಅನುವಾದಗೊಂಡಿವೆ.

ಕೆ ಟಿ ಗಟ್ಟಿಯವರು ಹಲವಾರು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ದುಡಿದಿದ್ದರ ಅನುಭವದಿಂದ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಭಾಷ್ಯಾಧ್ಯಯನ, ವ್ಯಾಕರಣ, ಇಂಗ್ಲಿಷ್‌ ಭಾಷೆಯ ಪ್ರಯೋಗ ಉಚ್ಚಾರಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ತಂದೆತಾಯಿಗಳಿಗೂ ಉಪಯುಕ್ತವಾಗುವಂತಹ ಅನೇಕ ಕೃತಿಗಳನ್ನು  ಇಂಗ್ಲಿಷ್‌ ಹಾಗೂ ಕನ್ನಡ ಭಾಷೆಗಳಲ್ಲಿ ರಚಿಸಿದ್ದರು. ಕನ್ನಡ ಕೃತಿಗಳೆಂದರೆ ಉತ್ಕೃಷ್ಟತೆಗಾಗಿ ತಾಯಿ-ತಂದೆ, ಗುರುಗಳಾಗಿ ತಾಯಿ-ತಂದೆ, ಇಂಗ್ಲಿಷ್‌ ಮತ್ತು ಕನ್ನಡ ಭಾಷಾಧ್ಯಯನ, ನಿಮ್ಮ ಮಗುವಿಗೆ ಇಂಗ್ಲಿಷ್‌ ಹಾಗೂ ಕನ್ನಡ ಕಲಿಸುವ ವಿಧಾನ, ಕನ್ನಡ ಆಲಿಸಿ ಕಲಿಸಿ, ಇಂಗ್ಲಿಷ್‌ ಆಲಿಸಿ ಕಲಿಸಿ ಮುಂತಾದ ಪುಸ್ತಕಗಳಲ್ಲದೆ ಇಂಗ್ಲಿಷ್‌ನಲ್ಲಿ ಇಂಗ್ಲಿಷ್‌ ಕನ್ನಡ ಬೈಲಿಂಗ್ಟಲ್‌, ಪೇರೆಂಟಿಂಗ್‌ ಫಾರ್  ಎಕ್ಸೆಲೆನ್ಸಿ, ಬೈಲಿಂಗ್ವಲ್‌ ಮಾಸ್ಟರ್, ಹೌಟು ಟೀಚ್‌ ಯುವರ್ ಚೈಲ್ಡ್‌ ಇಂಗ್ಲಿಷ್‌ ಅಂಡ್‌ ಕನ್ನಡ,  ಲರ್ನ್ ಕನ್ನಡ ಥ್ರೂ ಇಂಗ್ಲಿಷ್‌, ಲರ್ನ್ ಇಂಗ್ಲಿಷ್‌ ಥ್ರೂ ಕನ್ನಡ ಇವೇ ಮೊದಲಾದ  ಕೃತಿಗಳನ್ನು  ರಚಿಸಿದ್ದು  ಇವು ಶಿಕ್ಷಣ ಕ್ಷೇತ್ರಕ್ಕೆ ಬಹಳಷ್ಟು ಉಪಕಾರಿ ಎನಿಸಿವೆ. ಮೇಲ್ಕಂಡ ಕೃತಿಗಳಲ್ಲದೆ ಅಂಡಮಾನ್‌ ಪ್ರವಾಸದ ‘ನಿಸರ್ಗ ಕನ್ಯೆ ಅಂಡಮಾನ್‌’, ಪ್ರಬಂಧ ಸಂಕಲನ ‘ಗುಳಿಗೆಗಳು’  ಮತ್ತು ಗಟ್ಟಿಯವರ ಆತ್ಮಕಥೆ ‘ತೀರ’  ಪ್ರಕಟವಾಗಿವೆ.

ಸಾಹಿತ್ಯ ಕ್ಷೇತ್ರದ ಗಣನೀಯ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ‘ಸಂದೇಶ’ ವರ್ಷದ ಲೇಖಕ ಪ್ರಶಸ್ತಿ, ಸಾಹಿತ್ಯ ಸವ್ಯಸಾಚಿ-2011 ಗೌರವ,   ನಾಟಕಗಳಿಗಾಗಿ ಚದುರಂಗ ಪ್ರಶಸ್ತಿ ಮತ್ತು ಸಮತಂತೋ ಪ್ರಶಸ್ತಿಗಳಲ್ಲದೆ ದ.ಕ. ಜಿಲ್ಲಾ 10ನೆಯ ಸಾಹಿತ್ಯ ಸಮ್ಮೇಳನ ಮತ್ತು ಕಾಸರಗೊಡು ಜಿಲ್ಲಾ 2ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಗೌರವವೂ ಅವರಿಗೆ ಸಂದಿದ್ದವು.

ಎಷ್ಟೊಂದು ಸಾಧನೆ ಮಾಡಿದ್ದರೂ ಯಾವುದೇ ಪ್ರಚಾರಪ್ರಿಯತೆಗೆ ತಲೆಹಾಕದೆ ತಮ್ಮ ಪಾಡಿಗೆ ತಾವಿದ್ದ ಕೆ. ಟಿ. ಗಟ್ಟಿ ಅವರು ಯಾವುದೇ ಸದ್ದುಗದ್ದಲವಿಲ್ಲದೆ 2024ರ ಫೆಬ್ರವರಿ 19ರಂದು ಈ ಲೋಕಕ್ಕೂ ವಿದಾಯ ಹೇಳಿದರು. ಶಬ್ದಗಳು ಅವರು ಬರೆದ ಹೆಸರಾಂತ ಕಾದಂಬರಿಗಳಲ್ಲೊಂದು.  ಅವರು ಒಲಿದದ್ದು ಮಾತ್ರಾ ನಿಃಶಬ್ದತೆಗೆ.  ಈ ಅವಿಸ್ಮರಣೀಯ ವ್ಯಕ್ತಿತ್ವಕ್ಕೆ ಮನದಾಳದ ಮೌನ ನಮನ 🌷🙏🌷

On Rememberance Day of popular novelist Prof. K. T. Gatti 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ