ಜಾನ್ ಬಿ ಹಿಗ್ಗಿನ್ಸ್
ಜಾನ್ ಬಿ ಹಿಗ್ಗಿನ್ಸ್ ಭಾಗವತರ್
ಅಮೆರಿಕದವರಾದರೂ ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ, ಕಲಿತು ಅದರಲ್ಲಿ ಉತ್ತುಂಗಕ್ಕೆ ಏರಿ ಅಷ್ಟೇ ಬೇಗ ಈ ಲೋಕದಿಂದ ಕಣ್ಮರೆಯಾದವರು ಜಾನ್ ಬಿ ಹಿಗ್ಗಿನ್ಸ್. ಹೀಗೆ ಸಾಧನೆ ಮಾಡಿದ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜರುಗಳಿಂದಲೇ ಹಿಗ್ಗಿನ್ಸ್ ಭಾಗವತರ್ ಎಂಬ ಸಂಬೋಧನೆಗೆ ಪಾತ್ರರಾದವರು.
ಜಾನ್ ಬೋರ್ತ್ವಿಕ್ ಹಿಗ್ಗಿನ್ಸ್ 1939ರ ಸೆಪ್ಟೆಂಬರ್ 18ರಂದು ಅಮೆರಿಕದ ಮೆಸಾಚುಸೆಟ್ಸ್ ಪ್ರದೇಶದ ಆ್ಯಾಂಡೋವರ್ ಎಂಬಲ್ಲಿ ಜನಿಸಿದರು.. ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಅದೇ ಊರಿನ ಫಿಲಿಪ್ಸ್ ಅಕಾಡೆಮಿಯಲ್ಲಿ ನೆರವೇರಿತು. ಅದೇ ಶಾಲೆಯಲ್ಲಿ ಅವರ ತಂದೆ ಇಂಗ್ಲಿಷ್ ಅಧ್ಯಾಪಕರಾಗಿದ್ದರೆ, ತಾಯಿ ಸಂಗೀತದ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಮುಂದೆ ಹಿಗ್ಗಿನ್ಸ್ ವೆಸ್ಲಿಯನ್ ವಿಶ್ವವಿದ್ಯಾಲಯಲ್ಲಿ ಸಂಗೀತ ಮತ್ತು ಚರಿತ್ರೆಯಲ್ಲಿ ಬಿ.ಎ. ಪದವಿಯನ್ನೂ, 1964ರಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. ಮುಂದೆ ಸ್ವಲ್ಪ ಕಾಲ ಮಿನೆಸೋಟಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ಮಾಡಿದರು.
ಜಾನ್ ಹಿಗ್ಗಿನ್ಸ್ ತಮ್ಮ ಊರಿನ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದ ಸಂದರ್ಭದಲ್ಲಿ ವಿಶ್ವದ ವಿವಿಧ ಸಂಸ್ಕೃತಿಗಳಲ್ಲಿರುವ ಸಂಗೀತ ಅಧ್ಯಯನವನ್ನು ಕೈಗೊಂಡರು. ಈ ಸಂದರ್ಭದಲ್ಲಿ ಅವರು ಭಾರತೀಯ ಸಂಗೀತವನ್ನೂ ಅಧ್ಯಯನ ಮಾಡಿದರು. ಆ ವಿಷಯದಲ್ಲಿ ಅವರಿಗೆ ಮಾರ್ಗದರ್ಶನ ನೀಡಿದವರು ಪ್ರೊಫೆಸರುಗಳಾದ ರಾಬರ್ಟ್ ಬ್ರೌನ್ ಮತ್ತು ಟಿ. ರಂಗನಾಥನ್ ಅವರುಗಳು. ಅಂದಿನ ದಿನಗಳಲ್ಲಿ ಕೂಡಾ ಭಾರತೀಯ ಸಂಗೀತದ ಕುರಿತಾಗಿ ಅಧ್ಯಯನ ಕೈಗೊಳ್ಳುತ್ತಿದ್ದ ಅನೇಕ ಅಮೆರಿಕದ ವಿದ್ಯಾರ್ಥಿಗಳು ಇದ್ದರಾದರೂ ಅವರಲ್ಲಿ ಬಹುತೇಕರು ಅಧ್ಯಯನಕ್ಕಾಗಿ ಅಧ್ಯಯನ ಕೈಗೊಳ್ಳುತ್ತಿದ್ದವರು. ಜಾನ್ ಹಿಗ್ಗಿನ್ಸ್ ಅವರಿಗೆ ಅಂತಹ ಸೀಮಿತ ಜ್ಞಾನ ರುಚಿಸಲಿಲ್ಲ. ಫುಲ್ಬ್ರೈಟ್ ಫೆಲೋಶಿಪ್ ಪಡೆದುಕೊಂಡು ಸಂಗೀತ ಕಲಿಯಲಿಕ್ಕೆ ಭಾರತಕ್ಕೇ ಬಂದಿಳಿದರು.
ಕರ್ನಾಟಕ ಸಂಗೀತಕ್ಕೆ ನಿರಂತರವಾಗಿ ಹೆಚ್ಚು ಪೋಷಣೆ ನೀಡುತ್ತಾ ಬಂದಿರುವ ಚೆನ್ನೈಗೆ ಬಂದಿಳಿದ ಜಾನ್ ಹಿಗ್ಗಿನ್ಸ್ ಅವರು ಮಹಾನ್ ಸಂಗೀತ ವಿದ್ವಾಂಸರಾದ ಟಿ. ವಿಶ್ವನಾಥನ್ ಅವರಲ್ಲಿ ಶಾಸ್ತ್ರೋಕ್ತವಾಗಿ ಶಿಷ್ಯವೃತ್ತಿ ಸ್ವೀಕರಿಸಿದರು. ಅವರ ಸಂಗೀತ ತಪಸ್ಸಿನ ಶ್ರದ್ಧೆ ಎಷ್ಟರಮಟ್ಟಿಗೆ ಇತ್ತೆಂದರೆ, 1966ರ ವೇಳೆಗಾಗಲೇ ಅವರು ಚೆನ್ನೈನಲ್ಲಿ ತ್ಯಾಗರಾಜ ಆರಾಧನೆಯ ವೇದಿಕೆಯನ್ನು ಏರಿದ್ದರು.
ಆ ಕಾಲದಲ್ಲಿ ನಡೆದ ಜಾನ್ ಹಿಗ್ಗಿನ್ಸ್ ಅವರ ಒಂದು ಕಾರ್ಯಕ್ರಮದ ಬಗ್ಗೆ ಸಂಗೀತ ವಿಮರ್ಶಕರೊಬ್ಬರು ನೀಡಿದ ಅಭಿಪ್ರಾಯ ಇಂತಿದೆ: “ಮದ್ರಾಸಿನಲ್ಲಿ ನಡೆವ ಉಳಿದೆಲ್ಲ ಸಂಗೀತ ಕಛೇರಿಗಳಂತೆ ಈ ಕಾರ್ಯಕ್ರಮವೂ ಅರ್ಧ ಗಂಟೆ ತಡವಾಗಿ ಪ್ರಾರಂಭಗೊಂಡಿತು. ಈ ಪರಂಗಿ ತೊಗಲಿನ ಈ ಕನೆಕ್ಟಿಕಟ್ ಯಾಂಕಿ ಹಾಡುವುದನ್ನು ನೋಡಲು ಜನಸಾಗರವೇ ಹರಿದುಬಂದಿತ್ತು. ಯಾವ ಭಾರತೀಯ ಸಂಗೀತಗಾರನಿಗೂ ಕಮ್ಮಿಯಿಲ್ಲದಂತೆ ಜಾನ್ ಅತ್ಯಂತ ಪರಿಶುದ್ಧವಾದ ಬಿಳಿ ಅಂಗಿ ಮತ್ತು ಧೋತಿಗಳಲ್ಲಿ ಶೋಭಿಸುತ್ತಾ ವೇದಿಕೆ ಹತ್ತಿದರು. ಆತನ ಗುರುಗಳಾದ ಟಿ. ವಿಶ್ವನಾಥನ್ ಅವರಾದರೋ ಅಮೆರಿಕದ ಹುಡುಗನಂತೆ ವೇಷಭೂಷಣ ಧರಿಸಿ ಪ್ರೇಕ್ಷಕರ ಸಾಲಿನಲ್ಲಿ ಆಸೀನರಾಗಿದ್ದರು. ಅಪ್ಪಟ ಭಾರತೀಯ ಸಂಗೀತಗಾರನಂತೆ ಹಾಡಿದ ಈ ಬಿಳಿಯ, ನಡುನಡುವೆ ಪಿಟೀಲು ಮತ್ತು ಮೃದಂಗ ವಾದಕರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕೊಡುತ್ತಾ. ‘ಭಲೇ!’, ‘ಶಹಭಾಷ್!!’ ಇತ್ಯಾದಿ ಸಂದರ್ಭೋಚಿತ ಮೆಚ್ಚುಗೆಗಳನ್ನು ಭಾವಾಭಿನಯ ಸಹಿತವಾಗಿ ಅವರಿಗೆ ವರ್ಗಾಯಿಸುತ್ತಿದ್ದ. ಈ ಬಿಳಿಯನ ಪೂರ್ವಜನ್ಮ ಭಾರತದಲ್ಲೇ ನಡೆದಿರಬೇಕೆಂಬ ಶಂಕೆ ಬಲವಾಗುವಂತಿತ್ತು ಆತನ ಸಂಗೀತ! ಈ ದೇಶದ ಮಣ್ಣಲ್ಲಿ-ಅದರಲ್ಲೂ ಕಾವೇರಿಯ ತಪ್ಪಲಲ್ಲಿ ಹುಟ್ಟಿ ಬೆಳೆಯದ ಪ್ರತಿಭೆಯೊಂದು ಕರ್ನಾಟಕ ಸಂಗೀತದ ವಿಷಯದಲ್ಲಿ ಇಷ್ಟು ಪ್ರಾವೀಣ್ಯ ಪಡೆಯುವುದು ಅತ್ಯಂತ ಅಪರೂಪದ ವಿದ್ಯಮಾನವೇ ಸರಿ!’’
‘ಎಂದರೋ ಮಹಾನುಭಾವುಲು’, ‘ಕೃಷ್ಣ ನೀ ಬೇಗನೆ ಬಾರೋ’, ‘ವಾ ವಾ, ಕಂದಾ ವಾ ವಾ, ಎನ್ನೈ, ಕಾವ ವೇಲಾ ವಾ’, ‘ಗೋವರ್ಧನ ಗಿರಿ ಧಾರಾ’ ಹೀಗೆ ಹಲವು ಭಾಷೆಗಳ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳು ಮತ್ತು ಸಂಗೀತ ಪಂಡಿತರುಗಳಿಂದ ‘ಜಾನ್ ಬಿ. ಹಿಗ್ಗಿನ್ಸ್ ಭಾಗವತರ್’ ಎಂದೇ ಪ್ರಖ್ಯಾತರಾದರು.
ಹೀಗೆ ಶ್ರದ್ಧೆಯಿಂದ ಸಂಗೀತ ಕಲಿತದ್ದಕ್ಕೆ ಮತ್ತು ಕಛೇರಿ ನೀಡುವುದಕ್ಕೆ ಮಾತ್ರಾ ತಮ್ಮ ಪ್ರತಿಭೆಯನ್ನು ಮೀಸಲುಗೊಳಿಸದ ಜಾನ್ ಬಿ. ಹಿಗ್ಗಿನ್ಸ್ ಭಾಗವತರು, ಇನ್ನೂ ತಮ್ಮ 32ನೆಯ ವಯಸ್ಸಿನಲ್ಲೇ, 1971ರಲ್ಲಿ ಟೊರಾಂಟೊ ನಗರದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸಂಗೀತಾಧ್ಯಯನಕ್ಕಾಗಿಯೇ ಮೀಸಲಾದ ವಿಭಾಗ ತೆರೆದರು. ಅಲ್ಲಿನ ಪ್ರಸಿದ್ಧ ಪ್ರಾಧ್ಯಾಪಕರಾಗಿ ಹಲವು ದೇಶಗಳ ವಿದ್ಯಾರ್ಥಿಗಳ ಮನಗೆದ್ದರು. ತಮ್ಮ ಗುರುಗಳಾದ ಟಿ. ವಿಶ್ವನಾಥನ್ ಅವರ ಸಹೋದರಿ ಖ್ಯಾತ ನೃತ್ಯಗಾರ್ತಿ ಬಾಲಸರಸ್ವತಿ ಅವರಿಂದ ಹಿಗಿನ್ಸ್ ಅವರು ನೃತ್ಯ ಸಂಗೀತವನ್ನೂ ಅಧ್ಯಯನ ಮಾಡಿ ರಸೋತ್ಪತ್ತಿಯ ಬಗ್ಗೆ ಆಳವಾದ ಜ್ಞಾನ ಗಳಿಸಿದ್ದರು. 1973ವರ್ಷದಲ್ಲಿ ಅವರು, ಹಿಂದೆ ತಾವು ಕೈಗೊಂಡಿದ್ದ ವಿಶ್ವದ ವಿವಿಧ ಸಂಗೀತಗಳ ಕುರಿತಾದ ಅಧ್ಯಯನಕ್ಕೆ ಪೂರಕವಾದ ಅನುಭವದ ತಪಸ್ಸೂ ಜೊತೆಗೂಡಿದ ನಂತರದಲ್ಲಿ, ಆ ಕುರಿತಾಗಿ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಯನ್ನು ಸ್ವೀಕರಿಸಿದರು. ಕೇವಲ ಓದಿನಿಂದ ಗಳಿಸಿದ ಜ್ಞಾನದಿಂದ ಈ ಪದವಿಯನ್ನು ಪಡೆಯಲು ಯತ್ನಿಸದೆ ಆಳವಾದ ಪರಿಶ್ರಮದಿಂದ ಪಡೆದದ್ದು ಅವರ ಶ್ರೇಷ್ಠ ಗುಣಕ್ಕೆ ಸಾಕ್ಷಿ.
1984 ವರ್ಷದಲ್ಲಿ ಪ್ರೊ. ಜಾನ್ ಭಾಗವತರ್ ಅವರು ದಕ್ಷಿಣ ಆಫ್ರಿಕಾದ ಡರ್ಬನ್ ನಗರದಲ್ಲಿ ಸಂಗೀತ ಸಮ್ಮೇಳನವನ್ನು ಆಯೋಜಿಸಿದ್ದರು. ಈ ಕಾರ್ಯಕ್ಕೆ ಇಂಡಿಯನ್ ಅಕಾಡೆಮಿ ಆಫ್ ಸೌತ್ ಆಫ್ರಿಕಾ ಸಂಘಟನೆಯ ಸಹಕಾರವನ್ನೂ ಪಡೆದಿದ್ದ ಅವರು ಅಲ್ಲಿದ್ದ ಭಾರತೀಯರನ್ನು ರಂಜಿಸುವಂತೆ ಹಾಡಲು ಶಾಸ್ತ್ರೀಯವಾಗಿ ಅನೇಕ ತಯಾರಿಗಳನ್ನೂ ನಡೆಸಿದ್ದರು. ಆದರೆ ದುರದೃಷ್ಟವಶಾತ್ ಕಾರ್ಯಕ್ರಮಕ್ಕೆ ಕೇವಲ ಹತ್ತು ದಿನಗಳು ಇದ್ದ ಸಂದರ್ಭದಲ್ಲಿ 1984ರ ಡಿಸೆಂಬರ್ 7ರಂದು ತಮ್ಮ ಮನೆಯ ಸಮೀಪದಲ್ಲಿ ತಮ್ಮ ನಾಯಿಯೊಡನೆ ವಾಯುವಿಹಾರದಲ್ಲಿದ್ದ ಸಂದರ್ಭದಲ್ಲಿ, ಕುಡಿದು ಕಾರು ಚಲಾಯಿಸುತ್ತಿದ್ದವನೊಬ್ಬ ಮಾಡಿದ ಅಚಾತುರ್ಯದ ಅಪಘಾತದಿಂದಾಗಿ ಅಸುನೀಗಿದರು.
ಅತಿಬೇಗನೆ ಹೆಚ್ಚು ಸಾಧನೆ ಮಾಡಿದವರೆಲ್ಲ ಬಹುಬೇಗ ಈ ಲೋಕವನ್ನು ತೊರೆಯುತ್ತಾರೆ ಎಂಬ ವಿಷಯ ಇಲ್ಲೂ ನಿಜವಾಗಿದ್ದು ವಿಶ್ವ ಭಾರತೀಯ ಸಂಗೀತಲೋಕಕ್ಕೆ ಭರಿಸಲಾಗದ ನಷ್ಟ. "ಯಾವ ತಾಯಿಯು ಹಡೆದ ಮಗನಾದರೇನು, ಸಂಗೀತ ಸರಸ್ವತಿಯ ಮಡಿಲಲ್ಲಿ ತನ್ನನ್ನು ಸಮರ್ಪಿಸಿಕೊಂಡ ಈ ಶ್ರೇಷ್ಠ ಜೀವಿಯಾದ ಜಾನ್ ಬಿ ಹಿಗ್ಗಿನ್ಸ್ ಭಾಗವತರ ನೆನಪು ಸಂಗೀತ ಪ್ರೇಮಿಗಳ ಹೃದಯದಲ್ಲಿ ನಿರಂತರ ಝೇಂಕರಿಸುತ್ತಲೇ ಇದೆ.
On the birth anniversary of great Carnatic Vocalist Prof. Jon B. Higgins
ಕಾಮೆಂಟ್ಗಳು