ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹರಿಹರ


ಹರಿಹರ


ಹರಿಹರ 12ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಕವಿ.

ಹಂಪಿ ಪ್ರದೇಶದ ಮಹಾಜೀವ (ಮಹದೇವ ಭಟ್ಟ ಎಂಬ ಉಲ್ಲೇಖವೂ ಇದೆ) ಎಂಬ ಭಕ್ತನ ಮಗ ಹರಿಹರನು ತನ್ನ ತಾರುಣ್ಯದಲ್ಲಿ ಜೀವನೋಪಾಯಕ್ಕೆ ಹೊಯ್ಸಳರ ರಾಜಧಾನಿ ದೋರಸಮುದ್ರಕ್ಕೆ (ಹಳೇಬೀಡಿಗೆ) ಹೋಗಿ ಕರಣಿಕನಾಗಿ ಕೆಲಸ ಮಾಡುತ್ತ ಲೆಕ್ಕ ಪತ್ರಗಳಲ್ಲಿ ಅಂಕಿಗಳನ್ನು ಬಳಸದೆ 'ವಿರೂಪಾಕ್ಷ' 'ವಿರೂಪಾಕ್ಷ' ಎಂದು ಬರೆಯುತ್ತಿದ್ದುದರಿಂದ ತನ್ನ ಕೆಲಸವನ್ನು ಕಳೆದುಕೊಳ್ಳಬೇಕಾಯಿತು.  ಅದರಿಂದ ಬೇಸರಪಡದ ಅವನು ಉತ್ಸಾಹದಿಂದ ಹೊರಟ.  ದಾರಿಯಲ್ಲಿ ಹರಿಹರ ಪುಣ್ಯಕ್ಷೇತ್ರದ ಶಿವಾಲಯದಲ್ಲಿ ಭೂತವಿದೆಯೆಂಬ ಜನರ ಭಯವನ್ನು ನಿವಾರಿಸಿದ.  ಪುನಃ ಹಂಪಿಯಲ್ಲಿ ಬಂದು ನೆಲೆಸಿದ. ತಾಯಿ ಶರ್ವಾಣಿ, ತಂಗಿ ರುದ್ರಾಣಿ. ಈಕೆ ರಾಘವಾಂಕನ ತಾಯಿ. ಗುರು ಮಾಯಿದೇವ. ಈತನ ಆರಾಧ್ಯ ದೈವ ಹಂಪೆಯ ವಿರೂಪಾಕ್ಷ.

ಹರಿಹರನ ಕೃತಿಗಳಲ್ಲಿ ಗಿರಿಜಾ ಕಲ್ಯಾಣ ಎಂಬ ಚಂಪೂಕಾವ್ಯ, ಪಂಪಾಶತಕ, ರಕ್ಷಾಶತಕ, ಮುಡಿಗೆಯ ಅಷ್ಟಕ, ಶಿವ ಶರಣರ ರಗಳೆಗಳು ಸೇರಿವೆ. 

ಹಂಪಿ ಮನೋಹರ ಪ್ರಕೃತಿ ಸೌಂದರ್ಯದ ನಡುವೆ ವಿರಾಜಮಾನವಾಗಿರುವ ಪವಿತ್ರ ಶೈವ ಕ್ಷೇತ್ರ.  ವಿರೂಪಾಕ್ಷ ದೇವಾಲಯದ ಪಕ್ಕದ ಹೇಮಕೂಟದ ಮೇಲೆ ತಪಸ್ವಿಯಾಗಿದ್ದ ಶಿವನು ಹಣೆಗಣ್ಣನ್ನು ತೆರೆದು ಮನ್ಮಥನನ್ನು ಸುಟ್ಟು ಗಿರಿಜೆಯನ್ನು ವಿವಾಹವಾದನು ಎಂಬ ಕಥೆಯೇ ಹರಿಹರ ಕವಿಯ 'ಗಿರಿಜಾ ಕಲ್ಯಾಣ' ಚಂಪೂ ಕಾವ್ಯದ ವಸ್ತು.  

ಹರಿಹರನ ರಗಳೆಗಳು ನಡುಗನ್ನಡ ಅಥವಾ ಮಧ್ಯಕಾಲೀನ ಕನ್ನಡದಲ್ಲಿ ಪರಿಣಾಮಕಾರಿಯಾಗಿ ರಚಿತವಾಗಿವೆ. ಅವನ ಶೈಲಿಯು ವಾತಾವರಣ ಸೃಷ್ಟಿಗೆ ಸಹಾಯಕವಾಗಿದ್ದು, ಸಂಸ್ಕೃತ ಪದಗಳ ಬಳಕೆಯು ಬಹಳ ಕಡಿಮೆಯಾಗಿದೆ. ಅವನ ಮೇಲೆ ಹನ್ನೆರಡನೆಯ ಶತಮಾನದ ಶಿವಶರಣರ ಹಾಗೂ ವಚನ ಸಾಹಿತ್ಯದ ದಟ್ಟವಾದ ಪ್ರಭಾವವಿದೆ. ಈ ರಗಳೆಗಳಲ್ಲಿ, ಪ್ರಾಯಶಃ ಕನ್ನಡ ಸಾಹಿತ್ಯದಲ್ಲಿಯೇ ಮೊದಲ ಬಾರಿಗೆ, ಶ್ರೀ ಸಾಮಾನ್ಯನ ಬದುಕು ಕೇಂದ್ರಸ್ಥಾನವನ್ನು ಪಡೆಯುತ್ತದೆ. ಕುಂಬಾರ, ಕೃಷಿಕ, ಬೇಟೆಗಾರ, ಚಮ್ಮಾರ, ಅಗಸ ಮತ್ತು ಬೆಸ್ತರು ಹರಿಹರನ ಪ್ರಸಿದ್ಧವಾದ ರಗಳೆಗಳ ಕೇಂದ್ರ ಪಾತ್ರಗಳು. ಶಿವಭಕ್ತಿಯೆನ್ನುವುದು ಅವರೆಲ್ಲರನ್ನೂ ಒಗ್ಗೂಡಿಸುವ ಸೂತ್ರ.

ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ಹರಿಹರನು ಕನ್ನಡದ ಮುಖ್ಯ ಕವಿಗಳಲ್ಲಿ ಒಬ್ಬ. ತನ್ನ ಕಾವ್ಯವಸ್ತುವಿಗಾಗಿ, ಸಂಸ್ಕೃತ ಮತ್ತು ಪ್ರಾಕೃತ ಮೂಲಗಳನ್ನು ಬಿಟ್ಟು ತಮಿಳು ಮೂಲವನ್ನು ಆರಿಸಿಕೊಂಡವರಲ್ಲಿ ಹರಿಹರನೇ ಮೊದಲಿಗ. ಹನ್ನೊಂದನೆಯ ಶತಮಾನದಲ್ಲಿ ಶೆಕ್ಕಿಯಾರ್ ಎನ್ನುವವರು ರಚಿಸಿದ ‘ಪೆರಿಯಪುರಾಣ’ವು ಹರಿಹರನಿಗೆ ಪುರಾತನ ಶಿವಗಣದ ರಗಳೆಗಳನ್ನು ಬರೆಯಲು ಆಕರವಾಯಿತು. ಪೆರಿಯ ಪುರಾಣ ಎಂದರೆ ದೊಡ್ಡ ಕಥೆ ಎಂದು ಅರ್ಥ. ‘ತಿರುತ್ತೊಂಡರ್ ಪುರಾಣಂ‘ ಎನ್ನುವುದು ಅದರ ಇನ್ನೊಂದು ಹೆಸರು. ಅದು ಚೋಳದೇಶದ ಹಿರಿಯ ಶೈವ ಸಂತರಾದ ನಾಯನಾರರುಗಳ ಜೀವನಚಿತ್ರಗಳನ್ನು ಕೊಡುತ್ತದೆ. ಅದು ಪಶ್ಚಿಮ ಏಷಿಯಾದ ದೇಶಗಳೊಂದಿಗೆ ನಮಗಿದ್ದ ವಾಣಿಜ್ಯ ಸಂಬಂಧಗಳಿಗೆ ಪುರಾವೆ ನೀಡುತ್ತದೆ. ಮಧ್ಯ ಕರ್ನಾಟಕದಲ್ಲಿದ್ದ ಹರಿಹರನಿಗೆ ಈ ಕಾವ್ಯವು ಅದು ಪ್ರಕಟವಾದ ಹೊಸತರಲ್ಲಿಯೇ ಸಿಕ್ಕಿತ್ತೆನ್ನುವುದು ಕುತೂಹಲಕಾರಿಯಾದ ಸಂಗತಿ. ಹರಿಹರನ ಈ ತೀರ್ಮಾನದ ಪರಿಣಾಮವಾಗಿ, ಅವನ ರಗಳೆಗಳ ಸ್ಥಳ, ಜೀವನ ವಿವರಗಳು ಮತ್ತು ನಿರೂಪಣ ವಿಧಾನಗಳು ಸಂಪೂರ್ಣವಾಗಿ ಬದಲಾಗುತ್ತವೆ. ಅವು ದ್ರಾವಿಡ ಜೀವನಶೈಲಿಗೆ ನಿಕಟವಾಗುತ್ತವೆ. ಪುರಾತನರ ರಗಳೆಗಳ ವಿಚಾರದಲ್ಲಂತೂ ಈ ಮಾತು ಇನ್ನಷ್ಟು ನಿಜ. ಬದಲಾಗಿ ನೂತನರ ರಗಳೆಗಳು ಮಧ್ಯಕಾಲೀನ ಕರ್ನಾಟಕದ ಜೀವನಕ್ರಮಕ್ಕೆ ಕನ್ನಡಿ ಹಿಡಿಯುತ್ತವೆ. ಅಲ್ಲಿನ ವಿವರಗಳನ್ನು ಎಚ್ಚರಿಕೆಯಿಂದ ಗಮನಿಸಿ,ಸಂವೇದನಶೀಲವಾಗಿ ಚಿತ್ರಿಸಲಾಗಿದೆ.

ಹರಿಹರನ ಮತ್ತೊಂದು ಮಹತ್ವದ ಸಾಧನೆಯೆಂದರೆ, ತನ್ನ ಪಾತ್ರಗಳ ಬಹಳ ವಾಸ್ತವಿಕವಾದ ಚಿತ್ರಣ ಮತ್ತು ಅವುಗಳನ್ನು ದೈವೀಕರಣಗೊಳಿಸುವ ಹಂಬಲಗಳ ನಡುವೆ ಅವನು ತಂದುಕೊಂಡಿರುವ ಸಮತೋಲನ. ಅವನ ಮಹತ್ವದ ಕೃತಿಗಳಾದ ‘ಬಸವರಾಜದೇವರ ರಗಳೆ' ಮತ್ತು ‘ನಂಬಿಯಣ್ಣನ ರಗಳೆ’ಗಳು ಈ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸಿವೆ.

ಹರಿಹರನ ರಗಳೆಗಳಂತೂ ಆತನ ಹೆಸರನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಜರಾಮರಗೊಳಿಸಿರುವ ಅಮರ ಕೃತಿಗಳು. ಹರಿಹರನ ನೈಜಪ್ರತಿಭೆಯು ಇಲ್ಲಿ ಗೋಚರಿಸುತ್ತದೆ. ಅವನ ರಗಳೆಗಳ ಸಂಖ್ಯೆಗಳ ಬಗ್ಗೆ ಗೊಂದಲವಿದೆಯಾದರೂ, ಅವುಗಳ ಸಂಖ್ಯೆಯು 106 ಎಂದು ಬಹುತೇಕರ ಅಭಿಪ್ರಾಯವಾಗಿದೆ. ವಿವಿಧ ಗಾತ್ರದ, ಬೇರೆ ಬೇರೆ ಶಿವಶರಣರ ಕಥೆಗಳನ್ನು ಈ ರಗಳೆಗಳಲ್ಲಿ ಹೇಳಲಾಗಿದೆ. ಮುಖ್ಯವಾಗಿ 63 ಪುರಾತನರ, ಅಂದರೆ ತಮಿಳಿನ 'ಪೆರಿಯ ಪುರಾಣ'ದಲ್ಲಿ ಹೇಳಲಾಗಿರುವ 64 ಶಿವಭಕ್ತರ ಕಥೆಗಳು ಇಲ್ಲಿವೆ. ಬಸವರಾಜದೇವರ ರಗಳೆ, ತಿರುನೀಲಕಂಠದೇವರ ರಗಳೆ, ನಂಬಿಯಣ್ಣನ ರಗಳೆ, ಮಹಾದೇವಿಯಕ್ಕನ ರಗಳೆ, ಪ್ರಭುದೇವರ ರಗಳೆ, ಕುಂಬಾರ ಗುಂಡಯ್ಯನ ರಗಳೆ, ಮಾದಾರ ಚೆನ್ನಯ್ಯ ರಗಳೆ, ಇಳೆಯಾಂಡ ಗುಡಿಮಾರ ರಗಳೆ ರೇವಣಸಿದ್ಧೇಶ್ವರ ರಗಳೆಗಳು ಮುಂತಾದವು ಹರಿಹರನ ಪ್ರಮುಖ ರಗಳೆಗಳು.

ತಮ್ಮ ಕಥನಾಯಕರನ್ನು ನೂರಕ್ಕೆ ನೂರರಷ್ಟು ದೈವೀಕರಿಸಿದ ಅವನ ಉತ್ತರಾಧಿಕಾರಿಗಳಿಗೆ ಹೋಲಿಸಿದಾಗ ಅವನ ಮಹತ್ವವು ನಿಚ್ಚಳವಾಗುತ್ತದೆ. ಹರಿಹರನು ಗದ್ಯ ಮತ್ತು ಪದ್ಯಗಳೆರಡರ ಬಳಕೆಯಲ್ಲಿಯೂ ಸಮರ್ಥನಾಗಿದ್ದನು. ಬಸವಣ್ಣ ಮತ್ತು ನಂಬಿಯಣ್ಣರನ್ನು ಕುರಿತ ರಗಳೆಗಳಲ್ಲಿ ಅವನು ಬೇರೆ ಬೇರೆ ಅಧ್ಯಾಯಗಳಲ್ಲಿ ಗದ್ಯ ಪದ್ಯಗಳನ್ನು ಬಳಸುತ್ತಾನೆ. ಹೀಗೆ ಕನ್ನಡ ಕವಿಗಳ ಸಾಲಿನಲ್ಲಿ ಹರಿಹರನು ಬಹಳ ಮಹತ್ವದ ಸ್ಥಾನವನ್ನು ಪಡೆದಿದ್ದಾನೆ.

Harihara

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ