ಯಾಜ್ಞವಲ್ಕ್ಯ
ಯಾಜ್ಞವಲ್ಕ್ಯ
ಯಾಜ್ಞವಲ್ಕ್ಯರು ಬ್ರಹ್ಮರ್ಷಿಗಳು. ಇವರು ವೈಶಂಪಾಯನ ಮಹರ್ಷಿಗಳ ಸೋದರಳಿಯಂದಿರು ಹಾಗೂ ಶಿಷ್ಯರು. ತಂದೆ ಬ್ರಹ್ಮರಾತರು.
ವೈಶಂಪಾಯನರು ಶಿಷ್ಯರನ್ನು ತಿರಸ್ಕರಿಸಿದ್ದರಿಂದ ಯಾಜ್ಞವಲ್ಕ್ಯರು ಶಾಪಕ್ಕೊಳಗಾದರಂತೆ. ಅವರಿಂದ ಕಲಿತ ವೇದಗಳನ್ನು ಈತ ವಮನ ಮಾಡಲು ಉಳಿದ ಮುನಿಗಳು ಅದನ್ನು ತಿತ್ತಿರಿಪಕ್ಷಿಯ ರೂಪದಿಂದ ಸ್ವೀಕರಿಸಿದರು. ಬಳಿಕ ಯಾಜ್ಞವಲ್ಕ್ಯರು ಸೂರ್ಯನಿಂದ ಶುಕ್ಲಯಜುರ್ವೇದವನ್ನು ಕಲಿತರಂತೆ.
ಮಹಾ ವಿದ್ವಾಂಸರಾದ ಯಾಜ್ಞವಲ್ಕ್ಯರು ವಾದದಲ್ಲಿ ಅಸಾಮಾನ್ಯರಾಗಿದ್ದರಂತೆ. ಹೀಗೆ ಅವರು ಅಪಾರ ಸಂಪತ್ತು ಮತ್ತು ಕೀರ್ತಿಯನ್ನೂ ಗಳಿಸಿದ್ದರು. ಇವರು ಜನಕರಾಜನ ಯಜ್ಞಸಭೆಯಲ್ಲಿ ವಾದದಲ್ಲಿ ಪ್ರಾಣಪಣ ಒಡ್ಡಿ ತರ್ಕಮಾಡಿದ ಸಂದರ್ಭದಲ್ಲಿ ಶಾಕಲ್ಯಮುನಿಯ ಸಾವು ಸಂಭವಿಸುತ್ತದೆ. ಬ್ರಹ್ಮವಿದ್ಯೆಯ ವಿಷಯವಾಗಿ ಜನಕರಾಜನೊಂದಿಗೆ ಚರ್ಚಿಸಿ ವಿಶೇಷವಾಗಿ ಮನ್ನಣೆಪಡೆದರು. ವಿಶ್ವಾವಸು ಎಂಬ ಗಂಧರ್ವನೊಂದಿಗೆ ಸಂವಾದ ನಡೆಸಿದರು.
ಯಾಜ್ಞವಲ್ಕ್ಯರಿಗೆ ಕಾತ್ಯಾಯಿನಿ ಮತ್ತು ಮೈತ್ರೇಯಿ ಎಂಬ ಇಬ್ಬರು ಪತ್ನಿಯರಿದ್ದರು. ಅವರ ಮಡದಿ ಮೈತ್ರೇಯಿ ಆ ಕಾಲದ ಪ್ರಖ್ಯಾತ ಬ್ರಹ್ಮವಾದಿನಿಯಾಗಿದ್ದರು. ಆಕೆ ಪತಿಯೊಡನೆ ಆತ್ಮತತ್ತ್ವ ಜಿಜ್ಞಾಸೆಗೆ ಉಪಕ್ರಮಿಸಿದ್ದು ಬೃಹದಾರಣ್ಯಕೋಪನಿಷತ್ತಿನಲ್ಲಿ ಮೂಡಿದೆ. ಇದರಲ್ಲಿ ಯಾಜ್ಞವಲ್ಕ್ಯರ ಆತ್ಮತತ್ತ್ವ ಬೋಧೆ ಹೃದಯಂಗಮವಾಗಿ ಪ್ರಕಟಗೊಂಡಿದೆ. ಅಧ್ಯಾತ್ಮವಿದ್ಯೆಯಂತಹ ಶ್ರೇಷ್ಠ ಅಸಾಧಾರಣ ಬ್ರಹ್ಮವಿದ್ಯೆಯನ್ನು ತಮ್ಮ ಪತ್ನಿ ಮೈತ್ರೇಯಿಗೆ ಬೋಧಿಸಿ, ಸ್ತ್ರೀಯರೂ ಬ್ರಹ್ಮಜ್ಞಾನ ಪಡೆಯಲು ಅರ್ಹರು ಎಂದು ಸಾರಿದರು. ಗಾರ್ಗಿ ಎಂಬ ಮಹಾನ್ ಸಾಧಕಿಯ ಜೊತೆಯಲ್ಲಿ ಸಹಾ ಇವರು ಅಧ್ಯಾತ್ಮ ಚರ್ಚೆಯಲ್ಲಿ ಪಾಲ್ಗೊಂಡ ವಿಷಯಗಳು ಪುರಾಣಗಳಲ್ಲಿ ಕಾಣಬರುತ್ತವೆ.
ಯಾಜ್ಞವಲ್ಕ್ಯರು ಬರೆದ ಸ್ಮತಿ ಯಾಜ್ಞವಲ್ಕ್ಯ ಸ್ಮತಿ ಎಂದು ಹೆಸರಾಗಿದೆ. ಶತಪಥ ಬ್ರಾಹ್ಮಣ, ಯೋಗಯಾಜ್ಞವಲ್ಕ್ಯ ಮತ್ತು ಸಮ್ಹಿತ ಇವರ ಇತರ ಕೃತಿಗಳು.
ಯಾಜ್ಞವಲ್ಕ್ಯರು ತಮ್ಮ ಜೀವನದ ಉತ್ತರಾರ್ಧದಲ್ಲಿ ಐಹಿಕ ಜೀವನ ಅರ್ಥಹೀನವೆಂದು ಬಗೆದು ಎಲ್ಲವನ್ನೂ ತ್ಯಜಿಸಿ ಕೊನೆಗೆ ಪರಿವ್ರಾಜಕರಾದರು. ವಾಯು, ವಿಷ್ಣುಪುರಾಣಗಳಲ್ಲಿ ಮತ್ತು ಭಾರತ, ಭಾಗವತಗಳಲ್ಲಿ ಯಾಜ್ಞವಲ್ಕ್ಯರ ಬಗ್ಗೆ ಪ್ರಸ್ತಾಪವಿದೆ.
ಯಾಜ್ಞವಲ್ಕ್ಯರು ಅಂದರೆ ಕನ್ನಡಿಗರಿಗೆ ಮೂಡುವ ವಿಶಿಷ್ಟ ಸ್ಮೃತಿ ದೇವುಡು ಅವರದ್ದು. ದೇವುಡರವರ ‘ಮಹಾದರ್ಶನ’ – ಅಲೌಕಿಕತೆಯನ್ನು ಅತಿಶಯವಾಗಿ ಸಾಕ್ಷಾತ್ಕರಿಸಿಕೊಂಡು ಅದ್ಭುತ ಶೈಲಿಯಲ್ಲಿ ಅರಳಿದ ಅವರ ಕಡೆಯ ಬೃಹತ್ಕಾದಂಬರಿ. ಋಷಿ ಯಾಜ್ಞವಲ್ಕ್ಯರು ಬ್ರಹ್ಮವಿದ್ಯೆ ಸಾಧಿಸಿದ ಮಹಾನ್ ಕಥೆ ಇದಾಗಿದೆ. ‘ಮಹಾದರ್ಶನ’ ಎಂಬ ಹೆಸರು ಕಥಾವಸ್ತುವಿಗೆ ಪೂರಕವಾದ ಘಟನಾವಳಿಗಳಿಗೆ ತಕ್ಕಂತೆ ಅರ್ಥಸ್ವಾರಸ್ಯದಿಂದ ಬೆಳೆಯುತ್ತ ಹೋಗಿ ಯಜ್ಞವಲ್ಕ್ಯ ಹಾಗೂ ಯಾಜ್ಞವಲ್ಕ್ಯ ಇಬ್ಬರಿಗೂ ಅನ್ವಯಿಸುವಂತಿದೆ.
ಮಹಾನ್ ಋಷಿಪರಂಪರೆಗೆ ನಮನ.
Yajnavalkya
ಕಾಮೆಂಟ್ಗಳು