ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ಸಿ. ನಂದೀಮಠ


 ಎಸ್. ಸಿ. ನಂದೀಮಠ


ಎಸ್.ಸಿ. ನಂದೀಮಠರು ಮಹಾನ್ ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ, ಬರಹಗಾರರಾಗಿ, ಆಡಳಿತಗಾರರಾಗಿ ಹೆಸರಾದವರು.

ಶಿವಲಿಂಗಯ್ಯ ಚೆನ್ನಬಸವಯ್ಯ ನಂದೀಮಠರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ನಂದಿ ಗ್ರಾಮದಲ್ಲಿ 1900ರ ಡಿಸೆಂಬರ್12ರಂದು ಜನಿಸಿದರು. ಗೋಕಾಕ್ ಮತ್ತು ಬೆಳಗಾವಿಗಳಲ್ಲಿ ಆರಂಭದ ಶಿಕ್ಷಣವನ್ನು ಮುಗಿಸಿದ ನಂದೀಮಠ ಅವರು, 1924ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿಯನ್ನೂ, 1926ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪಡೆದುಕೊಂಡರು. 

ನಂದೀಮಠರು ಕೊಲ್ಲಾಪುರದ ರಾಜಾರಾಮ ಕಾಲೇಜಿನಿಲ್ಲಿ ಅಧ್ಯಾಪಕರಾಗಿ ಸ್ವಲ್ಪಕಾಲ ಕೆಲಸ ಮಾಡಿದರು. ಅನಂತರ ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿಗೆ ತೆರಳಿದರು. ಅಲ್ಲಿ ಬಾರ್ನೆಟ್‌ ಅವರ ಮಾರ್ಗದರ್ಶನದಲ್ಲಿ ವೀರಶೈವ ಧರ್ಮ ಹಾಗೂ ತತ್ವಜ್ಞಾನಗಳ ಕೈಪಿಡಿ ಎಂಬ ವಿಷಯ ಕುರಿತ ಪ್ರೌಢ ಪ್ರಬಂಧವನ್ನು ಮಂಡಿಸಿ 1930ರಲ್ಲಿ ಪಿಎಚ್.ಡಿ. ಪದವಿ ಪಡೆದರು. ತವರಿಗೆ ಮರಳಿ ಮುಂಬೈ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಅಧ್ಯಾಪಕರಾಗಿ ಕೆಲಸ ಮಾಡಿದರು. ಅನಂತರ ಬೆಳಗಾವಿಯಲ್ಲಿ ಲಿಂಗರಾಜ ಕಾಲೇಜಿನ ಸ್ಥಾಪನೆಗಾಗಿ ಶ್ರಮಿಸಿದ ಇವರು ಆ ಕಾಲೇಜಿನ ಮೊದಲ ಪ್ರಾಂಶುಪಾಲರಾಗಿ 1933ರಿಂದ 1944ರವರೆಗೆ ಸೇವೆ ಸಲ್ಲಿಸಿ ಅಭಿವೃದ್ಧಿಯತ್ತ ಕೊಂಡೊಯ್ದರು. ಇದಲ್ಲದೆ ಬಾಗಲಕೋಟೆಯಲ್ಲಿ ಬಸವೇಶ್ವರ ಕಾಲೇಜನ್ನು ಸ್ಥಾಪಿಸಿ ಬೆಳೆಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಇವರು ಸಿಂಡಿಕೇಟ್, ಸೆನೆಟ್, ಅಕಾಡೆಮಿಕ್ ಕೌನ್ಸಿಲುಗಳ ಸದಸ್ಯರಾಗಿಯೂ ಸ್ಮರಣೀಯ ಸೇವೆ ಸಲ್ಲಿಸಿದರು. ಮುಂಬಯಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿದ್ದುಕೊಂಡು ಉತ್ತರ ಕರ್ನಾಟಕ್ಕೆ ಪ್ರತ್ಯೇಕವಾದ ವಿಶ್ವವಿದ್ಯಾಲಯವನ್ನು ಪಡೆಯಲು ಶ್ರಮಿಸಿದರು. 

ಪ್ರೊ. ನಂದೀಮಠರು ಕರ್ನಾಟಕ ವಿಶ್ವವಿದ್ಯಾಲಯ ಆರಂಭವಾಗುವಾಗ ಅದರ ರೂಪರೇಷೆಗಳನ್ನು ಮತ್ತು ಕಾಯಿದೆ, ಕಾನೂನುಗಳನ್ನು ರೂಪಿಸುವಲ್ಲಿ ಮಹತ್ವದ ಕೆಲಸ ಮಾಡಿದ ನಾಲ್ಕಾರು ಶಿಕ್ಷಣ ತಜ್ಞರ ಸಮಿತಿಯಲ್ಲಿ ಒಬ್ಬರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಕುಲ ಸಚಿವರಾಗಿಯೂ, ಕುಲಪತಿಗಳಾಗಿಯೂ ಇವರು ಸ್ವಲ್ಪಕಾಲ ಕಾರ್ಯ ನಿರ್ವಹಿಸಿದರು. 

ಪ್ರೊ. ನಂದೀಮಠರು ಸಂಸ್ಕೃತವಷ್ಟೇ ಅಲ್ಲದೆ ಕನ್ನಡ, ಪಾಳಿ, ಪ್ರಾಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ ಪರಿಶ್ರಮಗಳನ್ನು ಪಡೆದಿದ್ದು ಹಲವಾರು ಅಮೂಲ್ಯ ಲೇಖನಗಳನ್ನೂ, ಗ್ರಂಥಗಳನ್ನೂ ಪ್ರಕಟಿಸಿದ್ದಾರೆ.  ‘ಕರ್ನಾಟಕ ಧರ್ಮಗಳು’,  ‘ಕವಿಕರ್ಣ ರಸಾಯನ’, ‘ಕುವಲಯಾನಂದ’, ‘ಗಿರಿಜಾ ಕಲ್ಯಾಣ’, ‘ಶೂನ್ಯ ಸಂಪಾದನೆ’, ‘ಶೈವ ಸಿದ್ಧಾಂತ’, ‘HandBook of Veerashaivism’ ಮುಂತಾದ ಹಲವಾರು ಮಹತ್ವಪೂರ್ಣ ಕೃತಿಗಳನ್ನು ಪ್ರೊ. ನಂದೀಮಠರು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. 

1952ರಲ್ಲಿ ಬೇಲೂರಿನಲ್ಲಿ ಜರುಗಿದ 35ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,  ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಿ.ಲಿಟ್ ಪದವಿ ಮುಂತಾದ ಹಲವಾರು ಗೌರವಗಳು ಪ್ರೊ. ನಂದೀಮಠರಿಗೆ ಸಂದಿದ್ದವು.  

ಪ್ರೊ. ನಂದೀಮಠರು 1975ರ ನವೆಂಬರ್ 21ರಂದು ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

On the birth anniversaryof great scholar, writer and administrator Prof. S.C. Nandimath 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ