ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಾನಪದ ಸಿರಿಯಜ್ಜಿ


 ಜಾನಪದ ಸಿರಿಯಜ್ಜಿ

ಜಾನಪದ ಸಿರಿಯಜ್ಜಿ  ಅಂದರೆ ಹಲವು ಸಹಸ್ರ ಜಾನಪದ ಗೀತೆಗಳು ಪುಟಪುಟನೆ ಹೊಮ್ಮುತ್ತಿದ್ದ ನಿರಂತರ ಚಿಲುಮೆಯಂತೆ! ಇಂದು ಈ ಮಹಾಮಾತೆಯ ಸಂಸ್ಮರಣೆ ದಿನ. 

ಸುಮಾರು ನೂರು ವರ್ಷ ಬದುಕಿದ್ದ ಈ ಅಜ್ಜಿಯ ಬಾಯಲ್ಲಿ ಜಾನಪದದ ಹಾಡುಗಳು ನಲಿದು ಕುಣಿಯುತ್ತಿದ್ದವು.  ಈ ಅಜ್ಜಿಗೆ ಗೊತ್ತಿದ್ದ ಹಾಡುಗಳ ಸಂಖ್ಯೆಯನ್ನು ಕೆಲವರು ಸಾವಿರ ಎಂದೂ ಕೆಲವರು ಹತ್ತು ಸಾವಿರ ಎಂದೂ ಬರೆದಿದ್ದಾರೆ.  ಅಂತೂ ಈ ಅಜ್ಜಿ ಕನ್ನಡ ಸಾಹಿತ್ಯ ಪ್ರಪಂಚದ ಅನರ್ಘ್ಯರತ್ನ ಎಂಬುದಂತೂ ನಿಜವಿತ್ತು.   ಅದರಲ್ಲೂ ಅವೆಲ್ಲವನ್ನೂ ಕಂಪ್ಯೂಟರಿಗಿರುವ ವೇಗಕ್ಕಿಂತ ಹೆಚ್ಚಿನ ರೀತಿಯಲ್ಲಿ ತೆಗೆದಿರಿಸುತ್ತಿದ್ದ ಆಕೆಯ ಸ್ಮೃತಿವೇಗಕ್ಕೆ ಸರಿಸಾಟಿಯೇ ಇರಲಿಲ್ಲ.  ಹೀಗಾಗಿ ಆಕೆ  ಅಸಾಧಾರಣ ಸ್ಮರಣಶಕ್ತಿಯ ಜನಪದಸಿರಿ ಸಿರಿಯಜ್ಜಿ ಎಂದೇ ಪ್ರಖ್ಯಾತರಾಗಿದ್ದವರು. 

ಚಳ್ಳಕೆರೆ ತಾಲ್ಲೂಕು ಯಲಗಟ್ಟೆ ಗೊಲ್ಲರಹಟ್ಟಿ ಅಜ್ಜಿಯ ಹುಟ್ಟೂರು. ಈರಪ್ಪ-ಕಾಡಮ್ಮ ದಂಪತಿಗಳ ಮಗಳು ಈಕೆ. ವಿದ್ಯಾಭ್ಯಾಸದಿಂದ ವಂಚಿತಳಾದರೂ  ವಿದ್ವತ್ತಿನ ಗಣಿಯಾಗಿ  ಸಾವಿರಾರು ಪದಗಳ ಒಡತಿಯಾಗಿ ಜನಮನ ಗೆದ್ದಾಕೆ.  ಈ ಜಿಲ್ಲೆಯ ಕಾಡುಗೊಲ್ಲರ ಜನಾಂಗವು ಈ ನಾಡಿನ ಒಂದು  ಸಂಸ್ಕೃತಿಯ ಜೀವಂತ ಪಳೆಯುಳಿಕೆ.  ಈ ಜನಾಂಗವು  ಸಂಪ್ರದಾಯ, ನಂಬಿಕೆ ಮತ್ತು  ಆಚರಣೆಗಳಿಂದಾಗಿ ತನ್ನದೇ ಆದ ವೈಶಿಷ್ಟವನ್ನು ಮೆರೆದಿತ್ತು. ಹಬ್ಬಹರಿದಿನಗಳ ಆಚರಣೆ, ಮದುವೆಯ ಸಮಾರಂಭಗಳಲ್ಲಿ ಹೀಗೆ ವೇದಿಕೆ ಅಥವಾ ಕೇಳುಗರು ಸಿಕ್ಕಹಾಗೆಲ್ಲಾ ಸಿರಿಯಜ್ಜಿಯ ಹಾಡು ಗಂಗೆಯಂತೆ ಅಲೆಅಲೆಯಾಗಿ ಹರಿದುಬರುತ್ತಿತ್ತು.  ಬಾಲ್ಯದಲ್ಲಿ ಸಸಿ ನಾಟಿ ಮಾಡುವಾಗ, ಕಳೆ ಕೀಳುವಾಗ, ಧಾನ್ಯ ಕುಟ್ಟುವಾಗ, ಬೀಸುವಾಗ ಹಬ್ಬ-ಹರಿದಿನ ಹಾಗೂ ಮದುವೆ- ಮುಂಜಿಗಳಲ್ಲಿ ತಮ್ಮ ಅಜ್ಜಿ ಮತ್ತು ತಾಯಿ ಹಾಡುತ್ತಿದ್ದ ಹಾಡುಗಳನ್ನು ಅಜ್ಜಿ ತಮ್ಮ 'ಸಿರಿಕಂಠ'ದಲ್ಲಿ ಆಸ್ತಿಯೆಂಬಂತೆ ಜೋಪಾನವಾಗಿಟ್ಟುಕೊಂಡಿದ್ದರು. ಮದುವೆ ಸಂಪ್ರದಾಯ, ಜುಂಜಪ್ಪ, ಕ್ಯಾತಪ್ಪ, ಎತ್ತಪ್ಪ, ಚಿತ್ತಯ್ಯ, ಕಾಟಯ್ಯ, ಈರಣ್ಣ, ಕದರಿ ನರಸಿಂಹ, ಗೌರಸಮುದ್ರದ ಮಾರಮ್ಮ, ತಿರುಪತಿ ತಿಮ್ಮಪ್ಪ, ಕೊಂಡದ ಚಿತ್ತವ್ವ, ಕಾಟವ್ವ, ನಾಗಮ್ಮ ಮುಂತಾದ ಇಷ್ಟದೈವಗಳ ಮೇಲೆ ಪದ ಕಟ್ಟಿ ಹಾಡುವ ಕಲೆ, ಜ್ಞಾನ ಭಂಡಾರ ಸಿರಿಯಜ್ಜಿಗೆ ದೈವದತ್ತ ಕೊಡುಗೆಯಾಗಿತ್ತು.

ಬೆಳಗೆರೆ ಕೃಷ್ಣಶಾಸ್ತ್ರಿಗಳ ಪ್ರೊತ್ಸಾಹದಿಂದಾಗಿ, ಸಿರಿಯಜ್ಜಿಯ ಜನಪದ ಹಾಡುಗಳ ಭಂಡಾರವೇ ಈ ನಾಡಿನಲ್ಲಿ ತೆರೆದುಕೊಂಡಿತು. ‘ಮಹಾಸತಿ ಕಾಟವ್ವ’, ‘ಕತ್ತಲೆ ದಾರಿದೂರ’ ಎನ್ನುವ ಇವರ  ಕತನಗೀತಗಳು ಜನಮನ ಗೆದ್ದವು. ಗೊಲ್ಲ ಜನಾಂಗದ ದೇವರ ಹಾಡುಗಳು ಜನರನ್ನು ಭಕ್ತಿಪರವಶರನ್ನಾಗಿಸಿದವು. ಡಾ.ಎ.ಕೆ. ರಾಮಾನುಜನ್, ಜೀಶಂಪ, ಡಾ.ಎಚ್.ಎಲ್. ನಾಗೇಗೌಡ, ಬೆಳಗೆರೆ ಕೃಷ್ಣಶಾಸ್ತ್ರೀ, ಡಾ.ತೀ.ನಂ. ಶಂಕರನಾರಾಯಣ, ಡಾ.ಕೃಷ್ಣಮೂರ್ತಿ ಹನೂರು, ಡಾ.ಎಂ. ಚಿದಾನಂದಮೂರ್ತಿ, ಡಾ.ಮಲ್ಲೇಪುರಂ ಜಿ. ವೆಂಕಟೇಶ್ ಮುಂತಾದ ಅನೇಕ ಮಹಾನ್ ವಿದ್ವಾಂಸರು ಈಕೆಯನ್ನು ಭೇಟಿಮಾಡಿ ಆಕೆಯ ಅಗಾಧ ಪ್ರತಿಭೆಗೆ ತಲೆದೂಗಿದ್ದರು.  ಜನಪದ ವಿದ್ವಾಂಸ ಡಾ.ಕೃಷ್ಣಮೂರ್ತಿ ಹನೂರು ಅವರು ಸಿರಿಯಜ್ಜಿಯಿಂದ ಸಂಗ್ರಹಿಸಿದ್ದ ಜಾನಪದ ಕಥನ ಗೀತೆಗಳನ್ನು ಕನ್ನಡ ವಿಶ್ವವಿದ್ಯಾಲಯವು 'ಸಾವಿರ ಸಿರಿ ಬೆಳಗು' ಎಂಬ ಹೆಸರಿನಲ್ಲಿ ಪುಸ್ತಕವಾಗಿ ಪ್ರಕಟಿಸಿತ್ತು. ಸಿರಿಯಜ್ಜಿಯ 'ಬದುಕು ಮತ್ತು ಕಾವ್ಯ' (ಲೇಖಕ: ಡಾ.ಮೀರಾಸಾಬಿಹಳ್ಳಿ ಶಿವಣ್ಣ) ಕುರಿತ ಪುಸ್ತಕವನ್ನು ಬೆಂಗಳೂರು ವಿಶ್ವವಿದ್ಯಾಲಯದ  ಗಾಂಧಿ ಅಧ್ಯಯನ ಸಂಸ್ಥೆ ಪ್ರಕಟಿಸಿತ್ತು.

ಗುಂಡೂರಾಯರು ಮುಖ್ಯಮಂತ್ರಿಗಳಾಗಿದ್ದ  ಕಾಲದಲ್ಲಿ ಈ ಸಿರಿಯಜ್ಜಿಗೆ ‘ಜನಪದಸಿರಿ’ ಎಂಬ ಬಿರುದನ್ನಿತ್ತು ಸನ್ಮಾನಿಸಲಾಗಿತ್ತು. ನಾಡಿನ ಪ್ರತಿಷ್ಟಿತ ಪ್ರಶಸ್ತಿಯಾದಂತಹ ‘ನಾಡೋಜ’ ಪ್ರಶಸ್ತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯವು ನೀಡಿ ಗೌರವಿಸಿತು.  ಕರ್ನಾಟಕ ಜನಪದ ಅಕಾಡೆಮಿಯ ‘ಜಾನಪದಶ್ರೀ’ ಎಂಬ ಬಿರುದನ್ನು ನೀಡಿ ಪುರಸ್ಕರಿಸಿತು. ಅನೇಕ  ಸಂಘ-ಸಂಸ್ಥೆಗಳು, ಜನಪದ ಮೇಳ, ಮಠಮಾನ್ಯಗಳಿಂದ ಪ್ರಶಸ್ತಿ ಪಡೆದ ಸಿರಿಯಜ್ಜಿ  ‘ನಡೆದಾಡುವ ಜಾನಪದಕೋಶ’  ಎಂದೇ ಪ್ರಸಿದ್ಧರಾಗಿದ್ದರು. ಆಕೆಯಿಂದ  ವಿಷಯ ಪಡೆದು ದೊಡ್ಡ  ಗ್ರಂಥ ಪ್ರಕಟಿಸಿದ ದೊಡ್ಡ ಮನುಷ್ಯರು ಆಕೆಯ ಹೆಸರನ್ನು ಗ್ರಂಥದಲ್ಲಿ ಪ್ರಕಟಿಸದೆ  ಇದ್ದ ಕೃತಘ್ನತೆಯ ವಿಷಯವನ್ನು ಕೂಡಾ ಬೆಳಗೆರೆ ಕೃಷ್ಣಶಾಸ್ತ್ರಿಗಳು  ಬರೆದಿದ್ದಾರೆ. 

ಈ ಜನಪದದ ಸಿರಿ ಅಜ್ಜಿ ಈ ಲೋಕದಿಂದ ನಿರ್ಗಮಿಸಿದ್ದು  2009ರ ಸೆಪ್ಟೆಂಬರ್ 22ರಂದು.  ಎಲ್ಲಕ್ಕೂ ಅಳಿವು ಬಂದುಬಿಡುತ್ತೆ.  ಜೀವಕ್ಕಂತೂ ಮೊದಲು.  ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಮಾತು ನೆನಪಾಗುತ್ತದೆ.  ಸಿರಿಯಜ್ಜಿಯಂತಹವರು ಹೊರಟು ಹೋಗುತ್ತಾರೆ.  ಅವರ ಕಲೆ ಅಮರ ಎಂದು ಹೇಳುವುದು ಸುಲಭದ ಮಾತು.  ಈ ಕಲೆಯನ್ನು ಮುಂದೆ ಕೊಂಡೊಯ್ಯುವರು ಯಾರು ಎಂಬುದು ಬಹು ದೊಡ್ಡ ಪ್ರಶ್ನೆ.  ನಮ್ಮ ಭಾಷೆಯನ್ನೇ ಸರಿಯಾಗಿ ಬಳಸುವವರು ಕ್ಷೀಣಿಸುತ್ತಿರುವಾಗ ಕಲೆಯನ್ನು ಕೊಂಡೊಯ್ಯುವ ಜನ ಬರುತ್ತಾರೆಯೇ.  ಆಶಾವಾದಿಗಳಾಗಿ ನಮ್ಮ ಕೈಲಾದದ್ದು ಮಾಡೋಣ.  ಯಾರಿಗೆ ಗೊತ್ತು ಸಿರಿಯಜ್ಜಿಯಂತಹ ಪ್ರತಿಭೆಗಳು ಎಲ್ಲೆಲ್ಲಿ ಅರಳಲಿಚ್ಛೆಯಿಂದ ಅಡಗಿ ಕುಳಿತಿದ್ದಾವೋ!
ಕಾಣದೆ ಅಡಗಿರುವ ಆ ಮಹಾನ್ ಶಕ್ತಿಗೆ ನಮನ 🌷🙏🌷


Janapada Siriyajji


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ