ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯಶ್


 ಯಶ್


ಕನ್ನಡದ ನಟರೊಬ್ಬರು ತಮ್ಮ ಸಾಧನೆ, ಯಶಸ್ಸುಗಳಿಂದ ಎಲ್ಲೆಡೆ ಧ್ವನಿಸುತ್ತಿರುವ ಅಪರೂಪತೆ 'ಯಶ್' ಎಂಬ ಪ್ರತಿಭೆ. ಎರಡು  ವರ್ಷ ಹಿಂದೆ ನಾನಿರುವ ದುಬೈನಲ್ಲಿನ ಸಹೋದ್ಯೋಗಿ ಹುಡುಗ ಒಬ್ಬ ಬಂದು ಹೇಳಿದ "ಸಾರ್, ನಾನು ಕನ್ನಡತ್ತ ಕೆಜಿಎಫ್ ಪಡು ಪಾತ್ತೆ, ಸೂಪರ್ರ್ ಇರುಕ್ಕ್, ನೀಂಗ ಪಾತ್ತೀಂಗ್ಳಾ ?".  ಕನ್ಮಡಿಗರ ಇತರ ಭಾಷಾ ಚಿತ್ರಗಳ ವ್ಯಮೋಹದ ಬಗ್ಗೆ ಕರುಬುತ್ತಾ ಬೆಳೆದ ನನಗೆ, ಕನ್ನಡ ಬಾರದ ತಮಿಳು ಹುಡುಗ ಬಂದು ಕನ್ನಡ ಚಿತ್ರ ಚೆನ್ನಾಗಿದೆ ಅಂದದ್ದು,  ಆಹ್ಲಾದತೆ ತಂದ ತಂಪು ಗಾಳಿಯಂತಿತ್ತು.

ಯಶ್ ಅವರ ಮೂಲ ಹೆಸರು ನವೀನ್ ಕುಮಾರ್ ಗೌಡ.  ಇವರು ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಗಳಿಗೆ 1986ರ ಜನವರಿ 8ರಂದು ಹಾಸನ ಜಿಲ್ಲೆಯಲ್ಲಿ ಜನಿಸಿದರು. ಅವರ ತಂದೆ ಬಿಎಂಟಿಸಿ ಸಾರಿಗೆ ಸೇವೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿದವರು. ಯಶ್ ಅವರು ಮಹಾರಾಜ ಹೈಸ್ಕೂಲ್‌ನಲ್ಲಿ ಶಾಲಾಶಿಕ್ಷಣವನ್ನು ಪಡೆದು, ಬಾಲ್ಯದ ದಿನಗಳನ್ನು ಮೈಸೂರಿನ ಪಡವರಹಳ್ಳಿಯಲ್ಲಿ ಕಳೆದರು. ತಮ್ಮ ಶಾಲಾಶಿಕ್ಷಣದ ನಂತರ, ಅವರು ನಾಟಕಕಾರ ಬಿ ವಿ ಕಾರಂತರಿಂದ ರೂಪುಗೊಂಡ ಬೆನಕ ನಾಟಕ ಶಾಲೆಯಲ್ಲಿ ನಟನಾಸಕ್ತಿಯ ಅಭಿರುಚಿಯನ್ನು ಪೋಷಿಸಿಕೊಂಡರು.

ರಂಗಶಾಲೆಯ ನಾಟಕಗಳು ಮತ್ತು ಕಿರುತೆರೆಯ  ನಂದ ಗೋಕುಲ, ಮಳೆಬಿಲ್ಲು, ಉತ್ತರಾಯಣ, ಪ್ರೀತಿ ಇಲ್ಲದ ಮೇಲೆ, ಶಿವ  ಮುಂತಾದ ಕಥಾನಕಗಳಲ್ಲಿ ಕನ್ನಡಿಗರ ಮನೆ ಮನೆಗಳಲ್ಲಿ ಬಂದ ಈ ಹುಡುಗ ಚಿತ್ರರಂಗದಲ್ಲಿ ಬೆಳೆದ ರೀತಿ ಕೇವಲ 'ಯಶ್' ಎಂಬ ಯಶಸ್ಸಿನದಲ್ಲ, ನಿಷ್ಠಾವಂತ ಕಾಯಕದ್ದು ಕೂಡ.

ಯಶ್ 2007 ರಲ್ಲಿ ‘ಜಂಭದ ಹುಡುಗಿ’ ಚಲನಚಿತ್ರದಲ್ಲಿನ ಪೋಷಕ ಪಾತ್ರದ ಮೂಲಕ ಪ್ರವೇಶವನ್ನು ಮಾಡಿದರು. ಮುಂದೆ 'ಮೊಗ್ಗಿನ ಮನಸು' ಚಿತ್ರ ಇವರಿಗೆ ಪೋಷಕ ನಟ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು. 

ಯಶ್ ಅವರು ರಾಕಿ, ಕಳ್ಳರ ಸಂತೆ, ಗೋಕುಲ, ಮೊದಲ ಸಲ, ತಮಸ್ಸು, ರಾಜಧಾನಿ, ಕಿರಾತಕ,ಲಕ್ಕಿ, ಡ್ರಾಮ, ಚಂದ್ರ, ಗೂಗ್ಲಿ,ರಾಜಾ ಹುಲಿ, ಗಜಕೇಸರಿ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ಮಾಸ್ಟರ್ ಪೀಸ್, ಸಂತು ಸ್ಟ್ರೇಟ್ ಫ಼ಾರ್ವರ್ಡ್, ಕೆಜಿಎಫ್ - ಚಾಪ್ಟರ್ 1, ಕೆಜಿಎಫ್ 2 ಮುಂತಾದ ಚಿತ್ರಗಳಲ್ಲಿ ಗಣನೀಯ ಯಶ ಸಾಧಿಸಿ ಮುಂದುವರೆದಿದ್ದಾರೆ.

ಯಶಸ್ಸಿನೊಂದಿಗೆ ಹಲವಾರು ಪ್ರಶಸ್ತಿಗಳೂ ಯಶ್ ಅವರಿಗೆ ಸಿದ್ಧಿಸಿವೆ. ಯಶ್ ಪ್ರತಿಭೆಗೆ ಹೆಸರಾದ ನಟಿ ರಾಧಿಕಾ ಪಂಡಿತ್ ಅವರ ಕೈಹಿಡಿದಿದ್ದು ಈ ದಂಪತಿಗಳು ಮುದ್ದುಮಕ್ಕಳ ತಂದೆತಾಯಿಯರಾಗಿದ್ದಾರೆ. ಸಮಾಜಮುಖಿ ಕೆಲಸಗಳನ್ನೂ ಮಾಡುತ್ತಿದ್ದಾರೆ. ಇವೆಲ್ಲವೂ ಕೂಡ ಜೀವನದ ಮುಖ್ಯ ಯಶಸ್ಸುಗಳೇ.

ಯಶ್ ಅವರ ಯಶದ ಪಯಣ ನಿರಂತರವಾಗಿರಲಿ.

On the birth day of our popular film star Yash 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ