ಎನ್. ರಂಗನಾಥಶರ್ಮಾ
ಎನ್. ರಂಗನಾಥಶರ್ಮಾ
ವಿದ್ವಾನ್ ರಂಗನಾಥಶರ್ಮಾ ಅವರು ಸಂಸ್ಕೃತ, ಕನ್ನಡ ಎರಡು ಭಾಷೆಗಳಲ್ಲೂ ಮಹಾನ್ ವಿದ್ವಾಂಸರೆನಿಸಿದ್ದವರು.
ರಂಗನಾಥ ಶರ್ಮರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ 1916ರ ಏಪ್ರಿಲ್ 7ರಂದು ಜನಿಸಿದರು. ಇವರ ತಂದೆ ವಿದ್ವಾನ್ ತಿಮ್ಮಪ್ಪನವರು. ತಾಯಿ ಜಾನಕಮ್ಮನವರು. ರಂಗನಾಥಶರ್ಮರ ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿಯೂ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿಯೂ ನೆರವೇರಿತು. ತಂದೆ ಹಾಗೂ ಚಿಕ್ಕಪ್ಪನವರು ಸಂಸ್ಕೃತದಲ್ಲಿ ಮಹಾನ್ ಪಂಡಿತರೆನಿಸಿದ್ದು ರಂಗನಾಥಶರ್ಮರ ಮೇಲೆ ಅಗಾಧ ಪ್ರಭಾವ ಬೀರಿತ್ತು.
ಕಿತ್ತು ತಿನ್ನುವ ಬಡತನದ ಮಧ್ಯೆಯೂ ಬಾಲಕ ರಂಗನಾಥಶರ್ಮರಲ್ಲಿ ಓದಿನ ಹಂಬಲ ಮನೆಮಾಡಿತ್ತು. ಅವರಿಗೆ ಇಂಗ್ಲಿಷ್ ಕಲಿಯುವುದಕ್ಕೆ ತುಂಬಾ ಆಸೆ ಇತ್ತು. ಆದರೆ ಹೈಸ್ಕೂಲು ಸೇರಲು ಅವಕಾಶ ಇದ್ದುದು ಸಮೀಪವೆಂದರೆ ಶಿವಮೊಗ್ಗದಲ್ಲಿ ಮಾತ್ರ. ಜೊತೆಗೆ ಊಟ-ವಸತಿಯ ಯೋಚನೆಯೂ ದೊಡ್ಡದಾಗಿತ್ತು. ಹೀಗಾಗಿ, ಕನ್ನಡ-ಸಂಸ್ಕೃತಗಳನ್ನು ಅಧ್ಯಯನ ಮಾಡಿದರೆ ಉಪಾಧ್ಯಾಯರ ವೃತ್ತಿಯಾದರೂ ದೊರೆತು ಹೊಟ್ಟೆ ಹೊರೆದೀತೆಂಬ ಯೋಚನೆಯಲ್ಲಿ ಅಗಡಿ ‘ಆನಂದವನ ಆಶ್ರಮ’ವನ್ನು ಸೇರಿದರು. ಅಲ್ಲಿ ಸಂಸ್ಕೃತ ಕಲಿಯುವವರಿಗೆ ಉಚಿತ ಊಟ-ವಸತಿ ಇದ್ದದ್ದು ಅವರಿಗೆ ಆಕರ್ಷಕವಾದ ಆಹ್ವಾನವಾಗೇನೋ ಒಲಿದುಬಂದಿತ್ತು. ಆದರೆ ಬಯಲು ಸೀಮೆಯ ಹುಡುಗನಿಗೆ ಅದು ಒಗ್ಗದ ಹವಾಮಾನವಾಗಿತ್ತು. ಹೀಗಾಗಿ ಮರಳಿ ಊರಿಗೆ ಬಂದು ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಅಲ್ಲಿ ಕಾವ್ಯಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದಿನ ದಾರಿ ಹಿಡಿದದ್ದು ಬೆಂಗಳೂರಿನ ಜಯಚಾಮರಾಜೇಂದ್ರ ಕಾಲೇಜಿನತ್ತ. ಅಲ್ಲಿ ಹನ್ನೊಂದು ವರ್ಷ ಸತತ ಸಂಸ್ಕೃತ ಕಲಿಕೆ ನಡೆಸಿ ವ್ಯಾಕರಣ, ಅಲಂಕಾರ ಶಾಸ್ತ್ರದಲ್ಲಿ ಪಾಂಡಿತ್ಯ ಗಳಿಸಿದರು. ಜೊತೆಗೆ ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆ ಪದವಿಗಳನ್ನು ತಮ್ಮದಾಗಿಸಿಕೊಂಡರು. ವಾರಾನ್ನ, ಭಿಕ್ಷಾನ್ನ, ಸ್ವಯಂ ಪಾಕಗಳ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅವರು ಓದಿನಲ್ಲಿ ಮಾತ್ರ ಸದಾ ಮುಂದೆ ಇದ್ದರು. ಊಟಕ್ಕೆ ತಟ್ಟೆ ಇಲ್ಲದೆ, ಎಲೆಗೆ ಕಾಸಿಲ್ಲದೆ ನೆಲದ ಮೇಲೆ ಊಟ ಮಾಡಿದ ದಿನಗಳೂ ಇತ್ತು.
1943ರ ವರ್ಷದಲ್ಲಿ ಹಾಸನದ ಮಾಧ್ಯಮಿಕ ಹಾಗೂ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ ವಿದ್ವಾನ್ ರಂಗನಾಥಶರ್ಮರು ಕಡೆಗೆ ತಾವು ಓದಿದ ಬೆಂಗಳೂರಿನ ಜಯಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ 28ವರ್ಷಗಳ ಕಾಲ ನಿರಂತರ ಸೇವೆ ಮಾಡಿ ವ್ಯಾಕರಣ ಶಾಸ್ತ್ರ, ಅಲಂಕಾರ ಶಾಸ್ತ್ರ ಬೋಧಕರಾಗಿ, ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಹಲವಾರು ಹಳೆಗನ್ನಡ ಕೃತಿಗಳನ್ನು ಆಧುನಿಕ ಕನ್ನಡಕ್ಕೆ ತಂದಿರುವ ರಂಗನಾಥ ಶರ್ಮರ ಶ್ರೀಮದ್ವಾಲ್ಮೀಕಿರಾಮಾಯಣ, ವಿಷ್ಣು ಪುರಾಣ, ಶ್ರೀಮದ್ಭಾಗವತ ಮುಂತಾದ ಕೃತಿಗಳು ಅತ್ಯಂತ ಜನಪ್ರಿಯವಾದವು. ಡಿವಿಜಿ, ವಿ.ಸೀ, ಸೇಡಿಯಾಪು, ಕೆ.ಕೃಷ್ಣಮೂರ್ತಿ ಮುಂತಾದ ನಮ್ಮ ನಾಡಿನ ಪ್ರಸಿದ್ಧ ಸಾಹಿತಿಗಳ ಆತ್ಮೀಯರಾಗಿದ್ದ ರಂಗನಾಥ ಶರ್ಮರು ಭಾವ- ಬುದ್ಧಿಗಳ ಹದವಾದ ಮಿಶ್ರಣವುಳ್ಳ ಸಜ್ಜನರಾಗಿದ್ದರು.
ಡಿವಿಜಿ ಅವರ 'ಮರುಳ ಮುನಿಯ ಕಗ್ಗ' ಪ್ರಕಟಗೊಂಡಿದ್ದು ಡಿವಿಜಿಯವರು ನಿಧನರಾದ ನಂತರ. ಡಿವಿಜಿ ಅವರ ಸಂಗ್ರಹದಲ್ಲಿದ್ದ ಮರುಳಮುನಿಯನನ್ನು ಪತ್ತೆ ಮಾಡಿ ಕನ್ನಡ ಲೋಕಕ್ಕೆ ನೀಡಿದ್ದು ಅವರ ಸುದೀರ್ಘ ಕಾಲದ ಒಡನಾಡಿಗಳಾಗಿದ್ದ ವಿದ್ವಾಂಸ ಎನ್.ರಂಗನಾಥ ಶರ್ಮರು. ಒಂದರ್ಥದಲ್ಲಿ ಮಂಕುತಿಮ್ಮನ ತಮ್ಮ ಎಂದರೆ ಅವರೆ.
ವಿದ್ವಾನ್ ರಂಗನಾಥಶರ್ಮರು ಸಂಸ್ಕೃತ, ಕನ್ನಡ ಭಾಷೆಗಳೆರಡರಲ್ಲೂ ರಚಿಸಿದ ಕೃತಿಗಳ ಸಂಖ್ಯೆ ಐವತ್ತಕ್ಕೂ ಹೆಚ್ಚಿನದು.
ಸಂಸ್ಕೃತ ಗ್ರಂಥಗಳು: ಗುರು ಪರಂಪರಾಚರಿತಮ್, ಸಂಸ್ಕೃತ ಪ್ರಥಮ ಪ್ರವೇಶ, ಶ್ರೀಬಾಹುಬಲಿ ವಿಜಯಂ (ನಾಟಕ), ಏಕಚಕ್ರಂ (ನಾಟಕ) ಮುಂತಾದುವು.
ಕನ್ನಡ ಗ್ರಂಥಗಳು: ಭಾಷಾಂತರ ಪಾಠ, ಲೌಕಿಕ ನ್ಯಾಯಗಳು, ಹೊಸಗನ್ನಡ ವ್ಯಾಕರಣ, ವಾಲ್ಮೀಕಿ ಮುನಿಗಳ ಹಾಸ್ಯ ಪ್ರವೃತ್ತಿ, ವರದಹಳ್ಳಿ ಶ್ರೀಧರ ಸ್ವಾಮಿಗಳು, ಶ್ರೀರಾಮಚಂದ್ರ, ಸೂಕ್ತಿ-ವ್ಯಾಪ್ತಿ ಮೊದಲಾದುವು.
ಅನುವಾದಗಳು: ಶ್ರೀಮದ್ವಾಲ್ಮೀಕಿ ರಾಮಾಯಣ (ಏಳು ಕಾಂಡಗಳು) ಅಮರ ಕೋಶ, ವಿದುರ ನೀತಿ, ಶ್ರೀಮದ್ ಭಾಗವತ (ದಶಮಸ್ಕಂದ), ಪ್ರಾರ್ಥನಾ ಶ್ಲೋಕಗಳು, ವಿಷ್ಣು ಪುರಾಣ, ಶ್ರುತಿ ಸಾರ ಸಮುದ್ಧರಣ, ವಾಕ್ಯ ಪದೀಯ ಮುಂತಾದವು.
ಇವುಗಳೆಲ್ಲದರ ಜೊತೆಗೆ ಶರ್ಮರು ಹಲವಾರು ಗ್ರಂಥಗಳ ಸಂಪಾದನೆಯನ್ನೂ ಮಾಡಿದ್ದಾರೆ.
ಮಹಾಮಹೋಪಾಧ್ಯಾಯ, ವಿದ್ಯಾವಾರಿಧಿ ಮುಂತಾದ ಬಿರುದುಗಳಿಗೆ ಮೌಲ್ಯತಂದ ವಿದ್ವಾನ್ ಎನ್.ರಂಗನಾಥ ಶರ್ಮರು ನಮ್ಮ ಕಾಲದಲ್ಲಿ ಇದ್ದ ಹಿರಿಯ ವ್ಯಾಕರಣ ವಿದ್ವಾಂಸರಾಗಿದ್ದರು. ವಿದ್ವಾನ್ ರಂಗನಾಥಶರ್ಮರಿಗೆ ಅನೇಕ ಗೌರವ ಪ್ರಶಸ್ತಿಗಳು ಸಂದಿದ್ದವು. ಇವುಗಳಲ್ಲಿ ಆದಿಚುಂಚನಗಿರಿಯಲ್ಲಿ ನಡೆದ ಕರ್ನಾಟಕ ಸಂಸ್ಕೃತ ಪರಿಷತ್ತಿನ ಐದನೆಯ ಸಮ್ಮೇಳನದ ಅಧ್ಯಕ್ಷತೆ, ಸಂಸ್ಕೃತ ಅಧ್ಯಾಪನೆಗೆ ರಾಷ್ಟ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಸ್ಕೃತ ವಿದ್ವಾಂಸರಿಗೇ ಮೀಸಲಾದ ರಾಷ್ಟ್ರ ಪ್ರಶಸ್ತಿ, ಡಿ.ವಿ. ಜಿ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ ಮುಖ್ಯವಾದುವು ಸೇರಿವೆ. 1994ರ ವರ್ಷದಲ್ಲಿ ವಿದ್ವಾನ್ ರಂಗನಾಥ ಶರ್ಮರಿಗೆ ‘ರಂಗಾಭಿನಂದನ’ ಎಂಬ ಅಭಿನಂದನ ಗ್ರಂಥವನ್ನು ಸಲ್ಲಿಸಲಾಗಿತ್ತು.
2013 ವರ್ಷದ ಮಾರ್ಚ್ 24ರಂದು ಡಿ. ವಿ. ಜಿ ಅವರ ಆತ್ಮೀಯ ಒಡನಾಡಿಯಾಗಿದ್ದ ವಿದ್ವಾನ್ ರಂಗನಾಥಶರ್ಮರಿಗೆ, ಮೈಸೂರಿನಲ್ಲಿ ನಡೆದ ಡಿವಿಜಿ ಅವರ 125ನೇ ಜನ್ಮದಿನದ ನೆನಪಿನ ಸಮಾರಂಭದಲ್ಲಿ ಡಿ. ವಿ. ಜಿ. ಪ್ರಶಸ್ತಿ ಗೌರವವನ್ನು ಸಲ್ಲಿಸಲಾಯಿತು. ಆಗ 97 ವರ್ಷ ತುಂಬಿದ್ದ ವಿದ್ವಾನ್ ರಂಗನಾಥಶರ್ಮರು ಸುಮಾರು ಒಂದು ಘಂಟೆಯ ಕಾಲ ವಿದ್ವತ್ಪೂರ್ಣವೂ ಉಲ್ಲಾಸಪೂರ್ಣವೂ ಆದ ಉಪನ್ಯಾಸವನ್ನು ನೀಡಿದ್ದುದು, ಆ ಹಿರಿಯರ ಚೈತನ್ಯಪೂರ್ಣ ವ್ಯಕ್ತಿತ್ವಕ್ಕೆ ಮೆರುಗು ಇಟ್ಟಂತೆ ಇತ್ತು.
ವಿನೋದ ಪೂರ್ಣ ಮನೋಭಾವದವರಾದ ಶರ್ಮರು
"ಚೆಪ್ಪಲಿಯೊ ಇರಲಿಲ್ಲ, ರೊಕ್ಕ ಮೊದಲೇ ಇಲ್ಲ
ಇಪ್ಪತ್ತು ಮನೆಗಳಲಿ ಭಿಕ್ಷೆಯನು ಬೇಡಿ
ಸೊಪ್ಪು ಸಿಪ್ಪೆಗಳನ್ನು ಚಪ್ಪರಿಸಿ ತಿಂದೆಯೆಲೊ
ಮುಪ್ಪಿನಲಿ ತೆಪ್ಪಗಿರು ಬೊಪ್ಪ ಮೇಲಿಹನು"
ಎಂದು ಹೇಳಿಕೊಳ್ಳುತ್ತಿದ್ದರಂತೆ
ಇಳಿಯ ವಯಸ್ಸಿನಲ್ಲಿ ಕಣ್ಣು ಕೊಂಚ ಮಂಜಾಗಿದ್ದರೂ, ಏರು ಧ್ವನಿಯಲ್ಲಿ ಮಾತನಾಡಿದರೆ ಕೇಳಿಸಿಕೊಳ್ಳುವಷ್ಟು ಕಿವಿ ಚುರುಕಾಗಿತ್ತು. ನೆನಪಿನ ಶಕ್ತಿ ಚೆನ್ನಾಗಿತ್ತು. ಮನೆಗೆ ಬಂದವರನ್ನು ಗೇಟಿನವರೆಗೂ ಬಂದು ಬೀಳ್ಕೊಡುವ ಹುಮ್ಮಸ್ಸು ಸದಾ ಉಳಿಸಿಕೊಂಡಿದ್ದರು.
ಒಮ್ಮೆ ಶತಾವಧಾನಿ ಗಣೇಶ್, ಪತ್ರಕರ್ತ ಸಂತೋಷಕುಮಾರ ಗುಲ್ವಾಡಿ ಹಾಗೂ ಸೂರ್ಯ ಪ್ರಕಾಶ ಪಂಡಿತರು ಶರ್ಮರ ಮನೆಗೆ ಹೋಗಿದ್ದರು. ಸಾಕಷ್ಟು ನೈವೇದ್ಯ ಸೇವಿಸಿ, ಮಾತನಾಡಿ ಹೊರಟಾಗ ಗೇಟಿನವರೆಗೂ ಶರ್ಮರು ಬಂದರು. ಆಗ ಅಲ್ಲಿದ್ದ ವಾಹನವನ್ನು ಗಮನಿಸಿ ಗುಲ್ವಾಡಿ ಅವರಿಗೆ ನೀವೇ ಡ್ರೈವ್ ಮಾಡಿಕೊಂಡು ಬಂದಿರಾ ಎಂದು ಪ್ರಶ್ನಿಸಿದರು. ಇಲ್ಲ ಡ್ರೈವರ್ ಇದ್ದಾನೆ ಎಂದು ಗುಲ್ವಾಡಿ ಉತ್ತರಿಸಿದಾಗ ಛೇ ಎಂತಹ ಕೆಲಸವಾಯಿತು. ಇಷ್ಟು ಹೊತ್ತು ಹೊರಗೆ ಕಾದಿದ್ದ ಚಾಲಕನಿಗೆ ಏನೂ ಕೊಡಲಿಲ್ಲವಲ್ಲ ಎಂದು ಪೇಚಾಡಿದ ಶರ್ಮರು ಯಾರು ಎಷ್ಟೇ ಸಮಜಾಯಿಷಿ ಹೇಳಿದರೂ ಕೇಳದೆ ಚಾಲಕನನ್ನು ಕರೆದು ಹಣ್ಣು ಹಂಪಲು ಕೊಟ್ಟು ತಣಿಸಿದರು. ಶರ್ಮರದ್ದು ಕೊನೆಯವೆಗೂ ಅಂತದ್ದೇ ಮಗುವಿನಂತ ಮನಸ್ಸು. ಇಂತಹ ಶ್ರೇಷ್ಠ ಬದುಕು ಸಹಾ ಕೊನೆಗೊಂಡಿತು ಎಂಬುದೇ ವಿಧಿಯ ನಿಯಮ. ರಂಗನಾಥ ಶರ್ಮರು 2014 ವರ್ಷದ ಜನವರಿ 24ರಂದು ತಮ್ಮ ಇಹಲೋಕದ ಬದುಕನ್ನು ಬೀಳ್ಕೊಟ್ಟರು.
On the birth anniversary of great scholar Vidwan N. Ranganatha Sharma
ಕಾಮೆಂಟ್ಗಳು