ರಾ. ಸತ್ಯನಾರಾಯಣ
ರಾ. ಸತ್ಯನಾರಾಯಣ
ರಾ. ಸತ್ಯನಾರಾಯಣ ಅವರು ಸಂಗೀತ, ನೃತ್ಯ, ವಿಜ್ಞಾನ, ಪುರಾತತ್ವ ಶಾಸ್ತ್ರಗಳಲ್ಲಿ ಖ್ಯಾತರಾಗಿದ್ದ ವಿದ್ವಾಂಸರು.
ರಾ. ಸತ್ಯನಾರಾಯಣ 1927ರ ಮೇ 8ರಂದು ಮೈಸೂರಿನಲ್ಲಿ ಜನಿಸಿದರು. ಅವರದ್ದು ಸಂಗೀತಗಾರರ ಮನೆತನ. ತಂದೆ ರಾಮಯ್ಯ. ತಾಯಿ ವರಲಕ್ಷಮ್ಮ. ಅಣ್ಣಂದಿರಾದ ರಾ.ಚಂದ್ರಶೇಖರಯ್ಯ, ರಾ. ಸೀತಾರಾಮ್ರವರು ಮೈಸೂರು ಸಹೋದರರೆಂದೇ ಗಾಯನದಲ್ಲಿ ಪ್ರಖ್ಯಾತರಾದರೆ ರಾ. ವಿಶ್ವೇಶ್ವರನ್ ವೀಣೆಯಲ್ಲಿ ಪ್ರಸಿದ್ಧರು. ನಾಲ್ವರು ಮಕ್ಕಳ ಸುಪ್ತವಾಗಿದ್ದ ಸೃಜನಶೀಲತೆಗೆ ನೀರೆರೆದವರು ತಾಯಿಯೇ. ಪ್ರತಿಯೊಬ್ಬರಿಗೂ ಅವರವರಿಗೆ ಇಷ್ಟವಾದ ಹಾದಿಯಲ್ಲಿ ತರಬೇತಿ. ಮನೆಯಲ್ಲಿ ಸಾಂಸ್ಕೃತಿಕ ವಾತಾವರಣ.
ಎಸ್.ಎಸ್.ಎಲ್.ಸಿ.ಯಲ್ಲಿ ರ್ಯಾಂಕ್ ಪಡೆದ ಸತ್ಯನಾರಾಯಣ ಪ್ರತಿವರ್ಷವೂ ಹಲವಾರು ಬಹುಮಾನಗಳನ್ನು ಗಳಿಸುತ್ತಿದ್ದವರು. ಅರಮನೆಯ ಸ್ಕಾಲರ್ಶಿಪ್ ಜನರಲ್ ಮೆರಿಟ್ ಸ್ಕಾಲರ್ಶಿಪ್ಗಳಿಂದ ಶಾಲೆಯ ಶಿಕ್ಷಣ ಪಡೆದರು.
ಬರೆವಣಿಗೆಯೂ ಅಷ್ಟೆ, ಭಿನ್ನವಾದ ವಿಚಾರಗಳಿಂದ ಕೂಡಿದ ಉತ್ತರ. ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿ ಅಲ್ಲದೆ ಹಲವಾರು ವಿಶ್ವವಿದ್ಯಾಲಯಗಳ ಡಿ.ಲಿಟ್ ಸಾಧನೆಗಳು ಇವರ ಜೊತೆಗೂಡಿದ್ದವು.
ರಾ. ಸತ್ಯನಾರಾಯಣ ಅವರು ಕೈಲಾಸಂ ಅವರ ಟೊಳ್ಳುಗಟ್ಟಿ, ಬಂಡ್ವಾಳವಿಲ್ಲದ ಬಡಾಯಿ, ಅಮ್ಮಾವ್ರಗಂಡ ಮುಂತಾದ ನಾಟಕಗಳ ಪ್ರಯೋಗ ಮಾಡಿದರು. ಮೊದ್ದುಮಣಿ ಪಾತ್ರಗಳಿಗೆ ಹೇಳಿ ಮಾಡಿಸಿದ ಮುಖ ಅವರದ್ದು. ಅವರು ಉತ್ತಮ ಭಾಷಣಕಾರರು. ಥಿಯರಿ ಆಫ್ ರಿಲೆಟಿವಿಟಿ ಬಗ್ಗೆ ಭಾಷಣಕೊಡಬೇಕಾದ ಸಂದರ್ಭದಲ್ಲಿ ಬಂದ ಹಲವಾರು ಪ್ರಶ್ನೆಗಳಿಂದ ತಲಸ್ಪರ್ಶಿ ಅಧ್ಯಯನ ನಡೆಸಬೇಕೆಂಬ ಛಲ ಬಂತು. ತಾಯಿಯ ಪ್ರೇರಣೆಯಿಂದ ’ವರಲಕ್ಷ್ಮೀ ಮ್ಯೂಸಿಕ್ ಅಕಾಡೆಮಿ’ ಪ್ರಾರಂಭಿಸಿ ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿದರು. ಮನೆಯಲ್ಲಿ ನಡೆಸುತ್ತಿದ್ದ ರಾಮೋತ್ಸವಕ್ಕೆ ಮೈಸೂರು ವಾಸುದೇವಾಚಾರ್ಯ, ದ್ವಾರಂ, ವೆಂಕಟಗಿರಿಯಪ್ಪ ಮುಂತಾದ ಮಹನೀಯರೆಲ್ಲ ಪಾಲ್ಗೊಳ್ಳುತ್ತಿದ್ದರು. ಸಂಗೀತಗಾರರಾದ ಟೈಗರ್ ವರದಾಚಾರ್, ಬೂದಲೂರು ಕೃಷ್ಣಮೂರ್ತಿ ಮುಂತಾದವರೊಡನೆಯೂ ಸಂಪರ್ಕ ಇತ್ತು. ಮನೆಯಲ್ಲಿ ಸದಾ ಸಂಗೀತದ ಚರ್ಚೆ. ಗಾಯನಕ್ಕೆ ಬೇಕಾದ ಶಾಸ್ತ್ರ ಸಂಬಂಧ, ವಾದನ ಶೈಲಿ, ಲಕ್ಷ್ಯ-ಲಕ್ಷಣಗಳೆರಡಕ್ಕೂ, ವಾದನ-ಬೋಧನೆಗಳಿಗೂ ಮಹತ್ತರ ಕೊಡುಗೆ ನೀಡಿದರು.
ಮೈಸೂರು ಶಾರದಾ ವಿಲಾಸ್ ಕಾಲೇಜಿನ ವಿಜ್ಞಾನ ಉಪನ್ಯಾಸಕರಾಗಿ, ರಸಾಯನ ಶಾಸ್ತ್ರದ ಪ್ರೊಫೆಸರಾಗಿ ಸತ್ಯನಾರಾಯಣ ಅವರ ಸೇವೆ ಸಂದಿತ್ತು. ಕರ್ನಾಟಕದ ಸಂಗೀತವಾಹಿನಿ, MUSIC OF MADHWA MONKS, ನೃತ್ಯ ನಿರ್ಣಯ, ಬೃಹದ್ದೇಶಿ, ಪುಂಡರೀಕ ಮಾಲಾಗಳಿಗೆ ಪ್ರವೇಶಿಕಾ ಗ್ರಂಥಗಳನ್ನು ರಚಿಸಿದರು. ಯೋಗ, ವ್ಯಾಕರಣ, ಮಂತ್ರ-ತಂತ್ರ, ಸಂಗೀತಶಾಸ್ತ್ರ, ಪ್ರಯೋಗನೃತ್ಯ, ವೇದವೇದಾಂತ, ಮೀಮಾಂಸೆ, ಛಂದಸ್ಸು ಹೀಗೆ ಪ್ರತಿಯೊಂದು ವಿಷಯದಲ್ಲೂ ಅಧಿಕೃತವಾಗಿ ಮಾತನಾಡಬಲ್ಲ ವ್ಯಕ್ತಿತ್ವ ರಾ. ಸತ್ಯನಾರಾಯಣ ಅವರದಾಗಿತ್ತು.
ರಾ. ಸತ್ಯನಾರಾಯಣ ಅವರಿಗೆ ಪದ್ಮಶ್ರೀ, ಕಾಶಿ ವಿಶ್ವವಿದ್ಯಾಲಯದಿಂದ ಮಹಾ ಮಹೋಪಾಧ್ಯಾಯ, ರಾಜ್ಯ ಸಂಗೀತ ವಿದ್ವಾನ್, ಸಂಗೀತ ನಾಟಕ ಅಕಾಡೆಮಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು. ಇವರ ಶಿಷ್ಯರು ಭಾರತವಲ್ಲದೆ, ಜರ್ಮನಿ, ಇಟಲಿ ಸೇರಿದಂತೆ ಪ್ರಪಂಚದ ನಾನಾ ಭಾಗಗಳಲ್ಲಿ ಇದ್ದಾರೆ.
ರಾ. ಸತ್ಯನಾರಾಯಣ ಅವರು 2020ರ ಜನವರಿ 17ರಂದು ಈ ಲೋಕವನ್ನಗಲಿದರು.
On the Birth Anniversary of Great Musicologist and multifaceted Scholar Dr. R. Sathyanarayana 🌷🙏🌷
ಕಾಮೆಂಟ್ಗಳು