ಜಯಲಕ್ಷ್ಮೀ ಪಾಟೀಲ್
ಜಯಲಕ್ಷ್ಮೀ ಪಾಟೀಲ್
ಇಂದು ಬಹುಮುಖಿ ಸೃಜನಶೀಲರಾದ ಜಯಲಕ್ಷ್ಮೀ ಪಾಟೀಲ್ ಅವರ ಜನ್ಮದಿನ.
ಜೂನ್ 8, ಜಯಲಕ್ಷ್ಮೀ ಪಾಟೀಲ್ ಅವರ ಜನ್ಮದಿನ.
ಬಿಜಾಪುರ ಜಿಲ್ಲೆಯ ನಿಂಬಾಳದವರಾದ ಅವರು, ಯಾದಗಿರಿಯಲ್ಲಿ ಜನಿಸಿದರು. ವಿಜ್ಞಾನ ಪದವಿ ಪಡೆದ ಅವರಿಗೆ ಓದಿನ ಜೊತೆಗೆ ಅಭಿನಯ, ಬರೆವಣಿಗೆ, ಸಂಗೀತ, ನೃತ್ಯ ಮುಂತಾದ ಸಾಂಸ್ಕೃತಿಕ ಆಸಕ್ತಿಗಳೂ ಜೊತೆಗೂಡಿದ್ದವು.
ಕಲಾವಿದೆ, ಕವಯಿತ್ರಿ, ಕಾದಂಬರಿಗಾರ್ತಿ, ಜನಪರ ಧ್ವನಿ, ಸಂಘಟನಾಗಾರ್ತಿ, ಪ್ರತಿಭೆಗಳ ಪೋಷಕಿ ಹೀಗೆ ವಿವಿಧ ನೆಲೆಗಳಲ್ಲಿ ಕಾಣುವ ಜಯಲಕ್ಷ್ಮೀ ಪಾಟೀಲರು ಅಚ್ಚರಿ ಹುಟ್ಟಿಸುವಷ್ಟು ವಿವಿಧ ಕಾಳಜಿಗಳ ಪ್ರತಿನಿಧಿಗಳಾಗಿದ್ದಾರೆ. ರಂಗಭೂಮಿಯಲ್ಲಿ ಹಲವು ವಿಶಿಷ್ಟ ಪಾತ್ರಗಳಿಗೆ ಜೀವ ತುಂಬಿ, ಹಲವಾರು ನಾಟಕಗಳನ್ನೂ ನಿರ್ದೇಶಿಸಿ, ‘ಹೆಜ್ಜೆ’ ಎಂಬ ತಂಡವನ್ನು ಬೆಳೆಸಿದ್ದಾರೆ. ಅವರು ಅಭಿನಯಿಸಿದ ಚಲನ ಚಿತ್ರಗಳಲ್ಲಿ ರಾಷ್ಟ್ರೀಯ ಸ್ವರ್ಣ ಕಮಲ ಪ್ರಶಸ್ತಿ ಪಡೆದ ‘ಪುಟಾಣಿ ಪಾರ್ಟಿ’, ರಾಜ್ಯಪ್ರಶಸ್ತಿ ಪಡೆದ ‘ಬನದ ನೆರಳು’ ಮುಂತಾದವು ಸೇರಿವೆ. ‘ಮುಕ್ತ ಮುಕ್ತ’, ‘ಮಹಾ ಪರ್ವ’, ‘ಮೌನ ರಾಗ’ ಮುಂತಾದ ಪ್ರಸಿದ್ಧ ಧಾರವಾಹಿಗಳನ್ನೊಳಗೊಂಡಂತೆ ಅನೇಕ ಕಿರುತೆರೆಯ ಧಾರಾವಾಹಿಗಳಲ್ಲಿ ಅವರು ನಟಿಸುತ್ತಾ ಹೆಸರಾಗಿದ್ದಾರೆ. ಹಲವು ಕಿರು ಚಿತ್ರಗಳನ್ನೂ ನಿರ್ಮಿಸಿದ್ದಾರೆ.
ಕವಯಿತ್ರಿಯಾಗಿ ‘ನೀಲ ಕಡಲ ಭಾನು’ ಕಾವ್ಯ ಸಂಕಲನ ಮತ್ತು ಕಾದಂಬರಿಗಾರ್ತಿಯಾಗಿ 'ಮುಕ್ಕು ಚಿಕ್ಕಿಯಕಾಳು', ನಾಟಕ ಕರ್ತೃವಾಗಿ ವಿಜಯ್ ತೆಂಡೂಲ್ಕರ್ ಅವರ ಮರಾಠಿ ಕೃತಿಯ ಕನ್ನಡ ಅನುವಾದವಾದ 'ಬೇಬಿ' ಕೃತಿಗಳೇ ಅಲ್ಲದೆ ಜಯಲಕ್ಷ್ಮೀ ಪಾಟೀಲರು ಮಹಿಳಾಪರ ಹಾಗೂ ವಿವಿಧ ಚಿಂತನೆಗಳ ವೈವಿಧ್ಯಮುಖಿ ಬರೆವಣಿಗೆಗಳಲ್ಲೂ ಕಾಣಬರುತ್ತಾರೆ. ಅವರ ಸಾರಥ್ಯದಲ್ಲಿನ ದಶಕವನ್ನು ಮೀರಿ ಸಾಗಿರುವ ‘ಈ ಹೊತ್ತಿಗೆ’ ಸಂಘಟನೆ ಪ್ರತೀ ತಿಂಗಳು ವಿಶಿಷ್ಟ ಸಾಹಿತ್ಯಕ ಚರ್ಚೆಯ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದರ ಜೊತೆಗೆ, ಹಿರಿಯ ಸಾಹಿತ್ಯ ಸಾಧಕರ ಪಾಲ್ಗೊಳ್ಳುವಿಕೆಗಳ ಮೂಲಕ ದೊಡ್ಡ ಪ್ರಮಾಣದ ಸಾಹಿತ್ಯಾಸಕ್ತಿಯ ಸಂಚಲನವನ್ನು ನಿರ್ಮಿಸುತ್ತಿದೆ. ಜೊತೆಗೆ ಪ್ರತಿಭಾನ್ವಿತ ಬರೆಹಗಾರರನ್ನು ಸೃಷ್ಟಿಸುವ ಮಹತ್ಕಾರ್ಯವನ್ನೂ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಹಲವು ರೀತಿಯ ಕಮ್ಮಟಗಳು ಈ ವೈವಿಧ್ಯತೆಗಳಿಗೆ ವಿಶಿಷ್ಟ ಸೇರ್ಪಡೆಯಾಗಿವೆ. ವಿವಿದೆಡೆಗಳಿಂದ ಪ್ರತಿಭಾವಂತರನ್ನು, ತಂಡಗಳನ್ನು ಕರೆಸಿ ರಂಗಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಜಯಲಕ್ಷ್ಮೀ ಪಾಟೀಲ್ 'ಹೊರಳು ನೋಟ' ಅಂತಹ ಹಲವು ಅಂಕಣ ಮೂಡಿಸಿದ್ದಾರೆ.
ಜಯಲಕ್ಷ್ಮೀ ಪಾಟೀಲ್ ಅವರ ಮತ್ತೊಂದು ಮಹತ್ವದ ಕಾರ್ಯವೆಂದರೆ ಅವರು ಮಹಿಳೆಯರು ಮತ್ತು ಶೋಷಣೆಗೆ ಒಳಗಾದವರ ಬೆಂಬಲಕ್ಕೆ ಸ್ಥಾಪಿಸಿರುವ ‘ಜನ ದನಿ’. ಈ ಮೂಲಕ ನೊಂದವರಿಗೆ ಬೆಂಬಲ ಮತ್ತು ಮಾರ್ಗದರ್ಶನ ಹಾಗೂ ಸಮಾಜದಲ್ಲಿ ಶೋಷಣೆಗೆ ಒಳಗಾಗದಂತೆ ಜಾಗೃತಿ ಮೂಡಿಸುವ ಕೈಂಕರ್ಯವನ್ನು ವಿಶಿಷ್ಟ ಜನಪರ ಕಾಳಜಿಗಳೊಂದಿಗೆ ಅವರು ನಡೆಸಿಕೊಂಡು ಬರುತ್ತಿದ್ದಾರೆ.
ಹಲವಾರು ವ್ಯಕ್ತಿಗಳು ಹಲವು ರೀತಿಯ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮಾತು ಸಾಮಾಜಿಕ ಆಸಕ್ತಿಯ ಒಂದೊಂದು ಅಂಗಗಳಲ್ಲಿ ಗಮನ ಹರಿಸುವುದುಂಟು. ಆದರೆ ಹೀಗೆ ವೈವಿಧ್ಯರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜನರ ಮಧ್ಯದಲ್ಲಿದ್ದುಕೊಂಡು ಅವರಲ್ಲೊಂದಾಗಿ ಜನಪರ ದನಿಯಾದ ವೈಶಿಷ್ಟ್ಯವುಳ್ಳವರು ಅಪರೂಪ. ಹೀಗೆ ಅಪರೂಪದವರಾಗಿದ್ದರೂ ನಿಜರೂಪದಲ್ಲಿ ಎಲ್ಲರಲ್ಲೊಂದಾಗಿ ವಿಶಿಷ್ಟರಾಗಿರುವ ಜಯಲಕ್ಷ್ಮೀ ಪಾಟೀಲರಿಗೆ ಜನ್ಮದಿನದ ಶುಭ ಹಾರೈಸುತ್ತಾ ಅವರ ಕಾರ್ಯಚಟುವಟಿಕೆಗಳಿಗೆ ನಿರಂತರ ಯಶಸ್ಸು ಮತ್ತು ಬೆಂಬಲವನ್ನು ಹಾರೈಸೋಣ. ಅವರಿಂದ ಪ್ರೇರಿತರಾಗಿ ಒಳ್ಳೆಯ ಕೆಲಸ ಮಾಡುತ್ತಿರುವ ಅನೇಕರನ್ನು ಸುಸ್ಪಷ್ಟವಾಗಿ ಗುರುತಿಸಬಹುದಾದಷ್ಟು ಅವರ ಕಾರ್ಯ ನಿಚ್ಚಳವಾದದ್ದು. ಅವರು ನಮಗೆಲ್ಲ ನಿರಂತರ ಪ್ರೇರಣೆ.
On the birth day of multifaceted talent and a great heart for social cause Jayalaxmi Patil Madam
ಕಾಮೆಂಟ್ಗಳು