ಭಾಸ
ಭಾಸ
ಭಾಸ ಪ್ರಸಿದ್ಧ ಸಂಸ್ಕೃತ ನಾಟಕಕಾರ. ಸಂಸ್ಕೃತ ಸಾಹಿತ್ಯವನ್ನು ತನ್ನ ನಾಟಕಗಳಿಂದ ಶ್ರೀಮಂತಗೊಳಿಸಿ, ಕಾಳಿದಾಸ, ಬಾಣ ಮುಂತಾದ ಮಹಾಕವಿಗಳಿಂದಲೇ ಗೌರವ ಗಳಿಸಿದ.
ಭಾಸನ ಕಾಲದೇಶ ಕೃತಿಗಳ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿವೆ. ಕಾಲದ ಚರ್ಚೆಯಂತೂ ಕ್ರಿ.ಪೂ. 3ನೆಯ ಶತಮಾನದಿಂದ ಕ್ರಿ.ಶ.4ನೆಯ ಶತಮಾನದ ತನಕ ಚಾಚಿಕೊಂಡಿದೆ. ಈತ ವ್ಯಾಸ ವಾಲ್ಮೀಕಿಗಳಿಗಿಂತ ಈಚಿನವನೆಂಬುದರಲ್ಲೂ ಕಾಳಿದಾಸ ಬಾಣರಿಗಿಂತ ಹಿಂದಿನವನೆಂಬುದರಲ್ಲೂ ಸಂದೇಹವಿಲ್ಲ.
ಸ್ವಾರಸ್ಯದ ವಿಷಯವೆಂದರೆ ಕ್ರಿ.ಶ. 1912ರ ತನಕ ಭಾಸಕವಿ ವಿರಚಿತವೆಂದು ಪರಿಚಿತವಾಗಿದ್ದುದು ಸುಭಾಷಿತ ಗ್ರಂಥಗಳಲ್ಲಿ ಹಂಚಿಹೋಗಿದ್ದ ಹದಿಮೂರು ಬಿಡಿ ಶ್ಲೋಕಗಳು ಮಾತ್ರ. ಭಾಸನ ವಿಚಾರವಾಗಿ ಅವನಿಗಿಂತ ಈಚಿನ ಕವಿಗಳಾದ ಕಾಳಿದಾಸ, ಬಾಣ ಮತ್ತು ರಾಜಶೇಖರ ಮುಂತಾದವರ ಕೃತಿಗಳಲ್ಲಿ ಗೌರವಪೂರ್ಣ ಮೆಚ್ಚುಗೆಯ ಉಲ್ಲೇಖಗಳಿವೆ.
ತಿರುವಾಂಕೂರಿನ ಪಂಡಿತ ಗಣಪತಿಶಾಸ್ತ್ರಿಗಳು ಪ್ರಾಚೀನ ಗ್ರಂಥಗಳ ಅನ್ವೇಷಣೆಯಲ್ಲಿದ್ದಾಗ ಅವರಿಗೆ ದೊರಕಿದ 13 ನಾಟಕಗಳು ಬಾಸ ರಚಿತವಾದದ್ದು ಎಂದು ನಂಬಲಾಗಿದೆ. ಜೀವರಾಮ ಕಾಳಿದಾಸಶಾಸ್ತ್ರಿ ಎಂಬ ವಿದ್ವಾಂಸರು 1941ರಲ್ಲಿ ಯಜ್ಞಫಲ ಎಂಬ ಸಂಸ್ಕೃತ ನಾಟಕವನ್ನು ಭಾಸರಚಿತವೇ ಎಂದು ಪ್ರತಿಪಾದಿಸಿದ್ದಾರೆ. ಈ ನಾಟಕದ ವಸ್ತು ರಾಮಾಯಣದ ಬಾಲಕಾಂಡದ ಕಥೆ; ಇದೂ ಸೇರಿದರೆ ಭಾಸರಚಿತವೆನ್ನಬಹುದಾದ ನಾಟಕಗಳು ಹದಿನಾಲ್ಕು ಎಂದಾಯಿತು.
ಭಾಸನ ನಾಟಕಗಳು ಕಾಳಿದಾಸಾದಿ ರಚಿತವಾದ ನಾಟಕಗಳಿಗಿಂತ ಸ್ವರೂಪತಃ ಭಿನ್ನವಾಗಿದ್ದರೂ ರಸಭಾವಪರಿಪುಷ್ಟಿ, ರಚನಾಕೌಶಲ, ಕಲಾನೈಪುಣ್ಯಗಳ ದೃಷ್ಟಿಯಿಂದ ಅವೆಲ್ಲಕ್ಕೂ ಆದರ್ಶಪ್ರಾಯವಾಗಿವೆ. ಈ ನಾಟಕಗಳಲ್ಲಿ ಬರುವ ಎಷ್ಟೋ ಮಾತುಗಳು ನಿತ್ಯಸತ್ಯಗಳಾಗಿದ್ದು ಸೂಕ್ತಿರತ್ನಗಳೆಂದು ಪರಿಗಣಿಸಲು ಅರ್ಹವಾಗಿವೆ. ವರ್ಣನೆಗಳು ಸ್ವಲ್ಪ ದೀರ್ಘವಾಗಿದ್ದರೂ ಕಣ್ಣಿಗೆ ಕಟ್ಟಿದಂತೆ ಸ್ಪಷ್ಟವಾಗಿ ಮನಮೋಹಕವಾಗಿವೆ.
ಭಾಸನ ನಾಲ್ಕು ಅಂಕಗಳ ಪ್ರತಿಜ್ಞಾಯೌಗಂಧರಾಯಣ. ಇದು ಆತನ ನಾಟಕಗಳಲ್ಲಿ ಅತ್ಯುತ್ತಮವಾದುದೆಂದು ಪ್ರಸಿದ್ಧಿಗಳಿಸಿರುವ ಆರು ಅಂಕಗಳ ಸ್ವಪ್ನವಾಸವದತ್ತೆ ನಾಟಕದ ಪೂರ್ವಾರ್ಧದಂತಿದೆ. ಈ ಎರಡು ನಾಟಕಗಳನ್ನೂ ನಾಟಕೀಯವಾಗಿ ಹೆಣೆಯುವುದರಲ್ಲಿ ಶೃಂಗಾರ-ವೀರಾದಿ ರಸಗಳಿಗೆ ಸಮಪ್ರಾಶಸ್ತ್ಯವನ್ನು ತುಂಬುವುದರಲ್ಲಿ ವಿದೂಷಕನ ಪಾತ್ರದಿಂ ಹಾಸ್ಯಮಯವಾದ ವಾತಾವರಣ ಕಲ್ಪಿಸುವುದರಲ್ಲಿ ಭಾಸ ತನ್ನ ಕಲಾಪ್ರೌಢಿಮೆ ಮೆರೆದಿದ್ದಾನೆ. ಈ ಎರಡು ನಾಟಕಗಳಿಗೆ ನೀಡಿರುವ ಹೆಸರುಗಳಲ್ಲೇ ತನ್ನ ಚಿತ್ಯಪೂರ್ಣ ಪ್ರತಿಭೆ ಪ್ರದರ್ಶಿಸಿದ್ದಾನೆ.
ಉಜ್ಜಯಿನಿಯ ರಾಜ ಮಹಾಸೇನನ ಕುತಂತ್ರಕ್ಕೆ ಬಲಿಯಾಗಿ, ಕಟ್ಟಿಗೆಯ ಆನೆಯನ್ನು ನಿಜವಾದ ಆನೆಯೆಂದು ಹಿಡಿಯಹೋಗಿ ಅವನ ಸೈನಿಕರಿಗೆ ಸೆರೆಸಿಕ್ಕಿ ಬಂದಿಯಾದ ವತ್ಸರಾಜ ಉದಯನನು ಬವಣೆಗೆ ಸಿಲುಕುತ್ತಾನೆ. ಆತ ಮಹಾಸೇನನ ಮಗಳಾದ ವಾಸವದತ್ತೆಗೆ ವೀಣೆ ಕಲಿಸುವ ಶಿಕ್ಷಕನಾದಾಗ ಅವರ ನಡುವೆ ಪ್ರೇಮ ಏರ್ಪಡುತ್ತದೆ. ಯೌಗಂಧರಾಯಣ ವತ್ಸರಾಜ ಉದಯನನ ಮಹಾನ್ ಬುದ್ಧಿಶಾಲಿ ಮಂತ್ರಿ. ಈತ ಉಜ್ಜಯಿನಿಯ ರಾಜನ ಮೋಸಕ್ಕೆ ತಕ್ಕ ಪ್ರತೀಕಾರವನ್ನು ಮೋಸದಿಂದಲೇ ಮಾಡುವೆನೆಂದು ಪ್ರತಿಜ್ಞೆ ಮಾಡಿ, ಉದಯನ ವಾಸವದತ್ತೆಯರಿಬ್ಬರನ್ನೂ ಇನ್ನೊಂದು ಆನೆಯ ತಂತ್ರದಿಂದಲೇ ಉಜ್ಜಯಿನಿಯಿಂದ ಬಿಡಿಸಿಕೊಂಡು ಬಂದು ತನ್ನ ಪ್ರತಿಜ್ಞೆಯನ್ನು ನೆರವೇರಿಸುತ್ತಾನೆ ಎಂಬುದು ಪ್ರತಿಜ್ಞಾಯೌಗಂಧರಾಯಣದ ಕಥಾವಸ್ತು. ಈ ಕಥೆಯಲ್ಲಿ ರಾಜತಂತ್ರ ಕೌಶಲಕ್ಕೆ ಹೆಚ್ಚಿನ ಸ್ಥಾನ; ಪ್ರೇಮ ಗೌಣ.
ಸ್ವಪ್ನವಾಸವದತ್ತದಲ್ಲಿ ರಾಜತಂತ್ರ ಕೌಶಲಕ್ಕೆ ಕಡಿಮೆಯಿಲ್ಲದ ಮಹತ್ತ್ವದ ಸ್ಥಾನ ಶೃಂಗಾರರಸಕ್ಕೆ ಮೀಸಲಾಗಿರುವುದರಿಂದ ಈ ನಾಟಕ ಮತ್ತಷ್ಟು ಮನರಂಜಕವಾಗಿದೆ. ವಾಸವದತ್ತೆಯ ಮೇಲಿನ ಅತಿಪ್ರೇಮವೇ ಉದಯನನ ರಾಜ್ಯ ಶತ್ರುವಶವಾಗುವುದಕ್ಕೆ ಕಾರಣವೆನಿಸಿದಾಗ, ಮಂತ್ರಿ ಯೌಗಂಧರಾಯಣ ರಾಜ್ಯವನ್ನುಳಿಸಿ ನಿಷ್ಕಂಟಕವಾಗಿಸಲು ನೆರೆಯ ಮಗಧರಾಜ ಪುತ್ರಿ ಪದ್ಮಾವತಿಯ ವಿವಾಹಪ್ರಯತ್ನವನ್ನು ಕೈಕೊಳ್ಳಬೇಕಾಯಿತು. ಅದು ಸಫಲವಾಗಲು ಅಡ್ಡಿಯಾಗಿದ್ದ ವಾಸವದತ್ತೆಯನ್ನು ಸತ್ತಳೆಂದು ಸುಳ್ಳುಸುದ್ದಿ ಹರಡಬೇಕಾಯಿತು. ಗಂಡನಿಗೆ ಲೇಸಾಗಲೆಂದು ವಾಸವದತ್ತೆ ಮಂತ್ರಿಯ ಈ ಯೋಜನೆಗೆ ಒಪ್ಪಿ ತಾನು ಪದ್ಮಾವತಿಯ ಪರಿಚರಿಕೆಯಾಗಿ ಕೆಲವೊಂದು ಕಾಲ ಕಳೆಯುವುದಕ್ಕೂ ಪದ್ಮಾವತಿ ತನ್ನ ಗಂಡನನ್ನೇ ಮದುವೆಯಾಗುವುದಕ್ಕೂ ಒಪ್ಪುವುದು ಅವಳ ತ್ಯಾಗದ ವೈಶಿಷ್ಟ್ಯವನ್ನು ತೋರಿಸುವಂತಿದೆ. ಇದು ಬಹು ಗುಪ್ತವಾಗಿರುವ ಸಂಗತಿಯಾದ್ದರಿಂದ ಉದಯನನೇ ಆದಿಯಾಗಿ ನಾಟಕದಲ್ಲಿ ಮತ್ತಾರಿಗೂ ಗೊತ್ತಾಗಿರುವುದಿಲ್ಲ. ಪದ್ಮಾವತೀ ಪರಿಣಯವಾದ ಮೇಲೆ ಕಡೆಗೆ ಯೌಗಂಧರಾಯಣನೇ ಮತ್ತೆ ವಾಸವದತ್ತೆಯ ಪುನಸ್ಸಮಾಗಮನವನ್ನೂ ಉದಯನನಿಗೆ ಮಾಡಿಸಿ ಕ್ಷಮೆಕೇಳುತ್ತಾನೆ.
ಇಡೀ ನಾಟಕದ ರಸಸ್ಥಾನವೆಲ್ಲ ವಿಪ್ರಲಂಭ ಶೃಂಗಾರಕ್ಕೇ ಮೀಸಲಾಗಿದೆ. ನಾಯಕನಿಗೆ ತನ್ನ ಮೆಚ್ಚಿನ ಮಡದಿ ನಿಜವಾಗಿಯೂ ಮೃತಳಾದಳೆಂಬ ಭಾವನೆ ಬೇರೂರಿಬಿಟ್ಟರೆ, ಅವನು ಪುನರ್ವಿವಾಹವಾದ ಮೇಲೆ ಮತ್ತೆ ಮೊದಲ ಪತ್ನಿಯನ್ನು ಪ್ರೀತಿಸಲು ಸಾಧ್ಯವೆ? ಇದು ಈ ನಾಟಕದ ಪ್ರೇಮಸಮಸ್ಯೆ.
ಯೌಗಂಧರಾಯಣನ ರಾಜತಂತ್ರ ಇದನ್ನು ಸಾಧಿಸಲಾರದು, ಅದಕ್ಕಾಗಿ ಉದಯನನ ಸ್ಮೃತಿಪಟಲದಲ್ಲಿ ವಾಸದತ್ತೆಯ ನೆನಪು ಆಗಾಗ ಮರುಕಳಿಸುತ್ತಿರುವಂತೆ ತೋರಿಸಲು ಭಾಸ ತುಂಬ ಎಚ್ಚರ ವಹಿಸಿ ತನ್ನ ಪ್ರತಿಭೆಯನ್ನು ಮೆರಿದಿದ್ದಾನೆ. ಮೇಲ್ನೋಟಕ್ಕೆ ವಿದೂಷಕನ ಪರಿಹಾಸದ ಪ್ರಶ್ನೆಯಂತೆ ಕಂಡರೂ ನಿನಗೆ ಅಂದಿನ ವಾಸವದತ್ತೆ ಮೆಚ್ಚಿನವಳೋ? ಇಂದಿನ ಪದ್ಮಾವತಿಯೋ? ಎಂಬ ಜಟಿಲ ಪ್ರಶ್ನೆ ಇಡಿಯ ನಾಲ್ಕನೆಯ ಅಂಕವನ್ನೆಲ್ಲ ತುಂಬಿದೆ; ರಾಜನ ಹೃದಯದಲ್ಲಿ ವಾಸವದತ್ತೆಗಿರುವ ಸ್ಥಾನವನ್ನು ಗಟ್ಟಿಮಾಡಿದೆ.
ಅದರ ಮುಂದಿನ ವಿವರಣೆಯೇ ನಾಟಕದ ರಸಕೇಂದ್ರವಾದ ಐದನೆಯ ಅಂಕದ ಸ್ವಪ್ನದೃಶ್ಯವೆನ್ನೆಬಹುದು. ಇಲ್ಲಿ ಅರಿವು-ಮರೆವು. ಎಚ್ಚರ-ಕನಸು ಇವು ನೆಳಲು ಬೆಳಕುಗಳಂತೆ ಬರುತ್ತ, ಹೋಗುತ್ತ, ವಾಸವದತ್ತೆ ಇದ್ದಾಳೆ, ಇಲ್ಲ ಎಂಬ ಅದ್ಫುತ ಸಮ್ಮಿಶ್ರವಾತಾವರಣದಲ್ಲಿ ಪರ್ಯವಸಾನಗೊಳ್ಳುತ್ತದೆ. ನಾಟಕವೇ ಒಂದು ತೋರಿಕೆ; ಅದರಲ್ಲಿ ಸತ್ಯ ಮಿಥ್ಯೆಗಳ ಸಮ್ಮಿಶ್ರಣ ಮತ್ತಷ್ಟು ಪ್ರಭಾವಶಾಲಿಯಾಗುತ್ತದೆ. ಇಲ್ಲಿ ಜಾಗೃತ ಪ್ರಪಂಚದ ವಾಸವದತ್ತೆಗೂ ಉದಯನನ ಸ್ವಪ್ನ ಪ್ರಪಂಚ ವಾಸವದತ್ತೆಗೂ ನಾಟಕೀಯ ಸಂವಿಧಾನ ತಂತ್ರದಿಂದಲೇ ಅಭೇದ ಪ್ರಾಪ್ತವಾಗಿ, ರೋಮಾಂಚಕಾರಿಯಾಗಿದೆ. ಅವಳು ರಾಜನ ತೋಳನ್ನೆತ್ತಿ ಹಾಸಿಗೆಯ ಮೇಲಿರಿಸುವಾಗ. ಈ ಸ್ಪರ್ಶಸುಖ ಪ್ರತ್ಯಕ್ಷವಾದ ಮೇಲೆ ಯಾರೇನೆಂದರೂ ರಾಜನ ಮನಸ್ಸಿನಲ್ಲಿ ಅವಳ ಪುನಸ್ಸಮಾಗಮ ಪ್ರತೀಕ್ಷೆ ದೃಢವಾಗುತ್ತದೆ. ಎರಡನೆಯ ಮದುವೆಯಾಗಿದ್ದರೂ ರಾಜನಿಗೆ ಮೊದಲ ಪ್ರೇಮಸ್ವಲ್ಪವೂ ಮಾಸಿಲ್ಲವೆಂಬ ಪೂರ್ಣ ಭರವಸೆ ವಾಸವದತ್ತೆಗೆ ದೊರೆತು ಸಮಾಧಾನ ತರುತ್ತದೆ. ಉದಯನ ವಾಸವದತ್ತೆಯರ ಈ ವಿಪ್ರಲಂಭ ಶೃಂಗಾರ ಸಂಸ್ಕೃತ ನಾಟಕ ಸಾಹಿತ್ಯದಲ್ಲೇ ಒಂದು ಅನರ್ಘ್ಯ ರಸಘಟ್ಟಿ.
ಪದ್ಮಾವತಿ, ವಾಸವದತ್ತೆ, ಯೌಗಂಧರಾಯಣ, ವಿದೂಷಕ-ಈ ಎಲ್ಲ ಪಾತ್ರಗಳ ಹೃದಯಾಂತರಾಳದಲ್ಲಿ ಮೂಡುವ ಒಳತೋಟಿ ಈ ನಾಟಕದ ಉತ್ಕರ್ಷಕ್ಕೆ ಹೆಚ್ಚಿನ ಸಾಮಗ್ರಿ ಒದಗಿಸಿದೆ. ಭಾಸನ ಮನೋವೈಜ್ಞಾನಿಕ ಅಂತರ್ದೃಷ್ಟಿ ಸ್ವಪ್ನವಾಸದತ್ತದಲ್ಲಿ ನಿಜವಾಗಿಯೂ ಸಫಲತೆ ಕಂಡುಕೊಂಡಿದೆಯೆನ್ನಬಹುದು. ಇಬ್ಬರು ನಾಯಕಿಯರನ್ನೂ ವಿಭಿನ್ನ ರೀತಿಗಳಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸುವಂತೆ ಚಿತ್ರಿಸಿರುವುದು ಭಾಸನ ವೈಶಿಷ್ಟ್ಯವೇ ಸರಿ. ತಿಳಿಯಾದ, ಲಘುವಾದ ಇಲ್ಲಿಯ ವಿದೂಷಕನ ಹಾಸ್ಯ ಕೂಡ ಈ ನಾಟಕದ ಮೇಲ್ಮೈಗೆ ಪೋಷಕವಾಗಿದೆ.
ರಾಮಾಯಣ ನಾಟಕಗಳಲ್ಲೆಲ್ಲ ಭಾಸನ 'ಪ್ರತಿಮಾನಾಟಕ'ದ ಸಂವಿಧಾನ ಕೌಶಲ ಆಧುನಿಕರಿಗೆ ಕೂಡ ಮೆಚ್ಚುವಷ್ಟು ರಮಣೀಯವಾಗಿದೆ. ಕೈಕೆ, ರಾಮ, ಭರತ, ಲಕ್ಷ್ಮಣ, ಸೀತೆ ಈ ಎಲ್ಲರ ಪಾತ್ರಗಳೂ ರಾಮಾಣಯಣಕ್ಕಿಂತ ಉಜ್ಜ್ವಲತರವಾಗಿ ಕಳಂಕರಹಿತವಾಗಿ ಶೋಭಿಸುವಂತೆ ಭಾಸ ತನ್ನ ನೂತನ ಕಥಾ ಸೃಷ್ಟಿ ಮಾಡಿದ್ದಾನೆ. ದಶರಥನಿಗೆ ಪುತ್ರಶೋಕದಿಂದ ಸಾವೆಂಬ ಶಾಪವಿದ್ದುದರಿಂದ ರಾಮ ಕಾಡಿಗೈದುವಂತೆ ವಸಿಷ್ಠಾದಿಗಳೇ ಕೈಕೇಯಿಯನ್ನೊಲಿಸಿಕೊಂಡು ಯೋಜನೆ ಮಾಡುತ್ತಾರೆ. ಇಲ್ಲಿಯ ಕೈಕೇಯಿ ರಾಜ್ಯದಾಹದಿಂದ ಕುರುಡಾಗಿ ವೈಧವ್ಯ ತಂದುಕೊಂಡ ನೀಚೆಯಲ್ಲ; ಭರತನೇ ಆದಿಯಾಗಿ ಎಲ್ಲರಿಂದಲೂ ಬೈಸಿಕೊಂಡರೂ ರಾಮನ ಕ್ಷೇಮಚಿಂತನೆಗಾಗಿಯೇ ಮಹಾತ್ಯಾಗ ಮಾಡಿದ ಮಹಿಳಾ ಮಣಿ, ಹೀಗೆ ರಾಮಾಯಣದ ಮೂಲಕಥೆಯಲ್ಲಿ ಇಷ್ಟೊಂದು ಧಾರಾಳವಾಗಿ ಬದಲಾವಣೆ ಮಾಡಿಕೊಳ್ಳುವ ಕಲ್ಪನಾಸಾಮರ್ಥ್ಯ ಮತ್ತಾವ ಸಂಸ್ಕೃತ ಕವಿಯಲ್ಲೂ ನಮಗೆ ಕಾಣಸಿಗದು. ದಶರಥನ ಸತ್ಯಪರಿಪಾಲನೆಗಾಗಿ ಕೈಕೇಯಿಯ ಶುಲ್ಕವನ್ನು ಅವನು ತೀರಿಸಲೇಬೇಕಾಗಿಯೂ ಇದ್ದಿತಂತೆ. ಇಲ್ಲಿ ಉಡಲರಿಯದ ಸೀತೆಗೆ ನಾರುಮಡಿಗಳನ್ನು ಕೈಕೆ ತಂದು ಉಡಿಸುವುದಿಲ್ಲ. ನಾಟ್ಯಶಾಲೆಯನ್ನು ನೋಡಲು ಹೋಗಿದ್ದ ಸೀತೆ ಬಾಲಚಾಪಲ್ಯದಿಂದ ಅಭಿಷೇಕದ ದಿನವೇ ಮುನ್ಸೂಚನೆಯೋ ಎಂಬಂತೆ ದೈವಪ್ರೇರಿತಳಾಗಿ ನಾರುಸೀರೆಯನ್ನುಟ್ಟಿರುತ್ತಾಳೆ. ರಾಜ್ಯ ತಪ್ಪಿತೆಂದು ರಾಮನಿಗಾಗಲಿ ಸೀತೆಗಾಗಲಿ ಇಲ್ಲಿ ಎಳ್ಳಷ್ಟೂ ದುಃಖವಿಲ್ಲ. ಅದಕ್ಕೆ ಪ್ರತಿಯಾಗಿ ತಮಗೆ ಬೇಗೆ ಧರ್ಮಾಚರಣೆಯ ಸದವಕಾಶ ಲಭಿಸಿತೆಂಬ ಹರ್ಷವಿದೆ. ಭರತನಿಗೆ ದಶರಥನ ಮರಣವೃತ್ತಾಂತ ಇಲ್ಲಿ ಕೈಕೆಯಿಯ ಬಾಯಿಂದ ತಿಳಿಯುವುದಿಲ್ಲ; ಊರ ಹೊರಗೇ ಪ್ರತಿಮಾಗೃಹದ ಪೂಜಾರಿಯಿಂದ ಕ್ರಮಕ್ರಮವಾಗಿ, ಪ್ರಾಸಂಗಿಕವಾಗಿ ತಿಳಿಯುತ್ತದೆ. ಸೀತೆ ಸುವರ್ಣಮೃಗಕ್ಕೆ ಆಸೆಪಟ್ಟು, ಲಕ್ಷ್ಮಣನನ್ನು ಧಿಕ್ಕರಿಸುವ ಪ್ರಸಂಗವೇ ಇಲ್ಲಿ ಇಲ್ಲ. ತಂದೆಯ ಶ್ರಾದ್ಧಕ್ಕೆ ಸುವರ್ಣಮೃಗ ಪ್ರಶಸ್ತವೆಂಬ ರಾಮನ ಭಾವನೆಯಿಂದಲೇ ಆ ಮಾಯಾಮೃಗದ ವೃತ್ತಾಂತ ಸೀತಾಪಹರಣಕ್ಕೆ ನಿಮಿತ್ತವಾಗುತ್ತದೆ. ಹೂವಿನ ಹೃದಯ ಭರತನಿಗೆ ಕೆಟ್ಟಸುದ್ದಿಗಳನ್ನು ಕ್ರಮಕ್ರಮವಾಗಿ ಅರುಹಲೆಂದು ಭಾಸ ಯೋಜಿಸಿರುವ ಪ್ರತಿಮಾಗೃಹದ ವೃತ್ತಾಂತ ನಿಜವಾಗಿಯೂ ಶ್ಲಾಘನೀಯವಾಗಿದೆ. ಮಾವನ ಮನೆಯಲ್ಲೆ ಬಹುಕಾಲ ಕಳೆದು ಗಡಿಬಿಡಿಯಿಂದ ಅಯೋಧ್ಯೆಗೆ ಬರುವ ಭರತನಿಗೆ
ದಿಲೀಪ, ಅಜ, ಮುಂತಾದ ರಾಜರ ಪ್ರತಿಮೆಗಳಿರುವ ಆಲಯದಲ್ಲಿ ಮತ್ತೊಂದು ಪ್ರತಿಮೆ ಇರುವುದು ಅವನಲ್ಲಿ ಕೆಟ್ಟ ಸಂಶಯಕ್ಕೆ ನಿಮಿತ್ತವಾಗುತ್ತದೆ. ಸತ್ತವರ ಪ್ರತಿಮೆಗಳಷ್ಟೇ ಇರುತ್ತವೆಂದ ಮೇಲಂತೂ ದಶರಥನೂ ಸತ್ತಾಗಿರಬೇಕೆಂಬುದು ಮನಸ್ಸಿನಲ್ಲಿ ಸುಳಿದು ಅವನು ಮೂರ್ಛೆ ಹೋಗುತ್ತಾನೆ. ಸ್ವಪ್ನವಾಸವದತ್ತದ ಸ್ವಪ್ನದೃಶ್ಯದಂತೆಯೇ ಪ್ರತಿಮಾನಾಟಕದ ಪ್ರತಿಮಾದೃಶ್ಯವಾದರೂ ಭಾಸನ ಅಸಾಧಾರಣ ನಾಟಕ ತಂತ್ರಕ್ಕೆ ಮಾನದಂಡದಂತಿದೆ.
ಅವಿಮಾರಕ ಏಳು ಅಂಕಗಳ ಒಂದು ಅದ್ಭುತ-ಶೃಂಗಾರ ನಾಟಕ. ಪ್ರಾಯಶಃ ಇದು ಭಾಸನ ಪ್ರಥಮ ರಚನೆಯಿರಬೇಕು. ಕ್ಷತ್ರಿಯ ಕುಮಾರನೊಬ್ಬ ಚಂಡಾಲ ವೇಶದಲ್ಲಿದ್ದು, ಮದ್ದಾನೆಗೆ ಸಿಕ್ಕಿದ ರಾಜಪುತ್ರಿಯನ್ನು ರಕ್ಷಿಸಿ, ಗುಪ್ತವಾಗಿ ಅವಳ ಅಂತಃಪುರದಲ್ಲಿದ್ದು ರಾಜಕೋಪಕ್ಕೆ ಹೆದರಿ ಓಡುತ್ತ, ವಿದ್ಯಾಧರನೊಬ್ಬ ಕರುಣಿಸಿದ ಅದ್ಭುತ ಉಂಗುರದ ಪ್ರಭಾವದಿಂದ ಆಕೆಯನ್ನು ಮದುವೆಯಾಗುವ ಅದ್ಭುತ ಸಾಹಸಮಯ ರಮ್ಯ ಕಥಾಪ್ರಸಂಗ ಇಲ್ಲಿದೆ. ಅವಳ ತಂಗಿಗೂ ನಾಯಕನ ತಮ್ಮನಿಗೂ ಹೀಗೆಯೇ ಮದುವೆಯಾಗುತ್ತದೆ. ಉದ್ದದ ಕಥೆ ಅತಿ ಮಾನುಷವೂ ಅಸಾಧಾರಣವೂ ಆದ ಸಂವಿಧಾನದಲ್ಲಿ ಅವಾಸ್ತವಿಕತೆಯಿಂದ ತುಂಬಿದೆ. ವಸ್ತು ರಚನಾ ಕೌಶಲವಾಗಲಿ, ರಸಪರಿಪೋಷವಾಗಲಿ ಈ ನಾಟಕದಲ್ಲಿ ಕಂಡುಬರುವುದಿಲ್ಲ.
ಚಾರುದತ್ತ ಒಂದು ಸುಂದರ ಸಾಮಾಜಿಕ ನಾಟಕ. ಇದರ ಮೊದಲ ನಾಲ್ಕು ಅಂಕಗಳು ಮಾತ್ರ ಸಿಕ್ಕಿರುವುದರಿಂದ ಇದು ಅಸಮಗ್ರಸ್ಥಿತಿಯಲ್ಲಿದೆ. ಶೂದ್ರಕನ ಮೃಚ್ಛಕಟಿಕಕ್ಕೆ ಈ ನಾಟಕವೇ ಆಧಾರವೆಂಬುದು ಕೆಲವರ ಅಭಿಪ್ರಾಯ. ಪ್ರೇಮಕ್ಕೆ ಹಣ ಮುಖ್ಯವಲ್ಲ, ಗುಣ ಮುಖ್ಯ ಎಂಬುದೇ ಈ ನಾಟಕದ ತಿರುಳು. ಮೃಚ್ಛಕಟಿಕದಲ್ಲಿ ಆರ್ಯಕಪಾಲಕರಿಗೆ ಸಂಬಂಧಿಸಿದ ರಾಜ್ಯಕ್ರಾಂತಿ ಪ್ರಕರಣ ಚಾರುದತ್ತ ವಸಂತಸೇನೆಯರ ಪ್ರಣಯದೊಡನೆ ಹಣೆದುಕೊಂಡಿದ್ದರೆ, ಚಾರುದತ್ತನಾಟಕದಲ್ಲಿ ಆ ವೃತ್ತಾಂತವೇ ಇಲ್ಲದಿರುವುದು ಎರಡು ನಾಟಕಗಳಿಗೂ ಇರುವ ಪ್ರಧಾನ ಭೇದ. ಉದಾರಿಯಾದ ಚಾರುದತ್ತ ನಿರಪೇಕ್ಷವಾಗಿ ಆತನ ಹೃದಯಕ್ಕೆ ಅಂಟಿಕೊಂಡ ಇನ್ನೊಂದು ಜೀವವಾದ ವಸಂತಸೇನೆ, ತನ್ನ ಮೂಢತೆ ಹಾಗೂ ನಿಕಟವಾದ ನಡತೆಯಿಂದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವ ಶಕಾರ-ಇವೆಲ್ಲ ಪಾತ್ರಗಳು ನಾಟಕಕ್ಕೆ ಕಳೆಕಟ್ಟುತ್ತವೆ. ಮೃತ್ ಶಕಟಿಕಾ ವೃತ್ತಾಂತವೂ ಶೂದ್ರಕನ ಸ್ವತಂತ್ರ ಕಲ್ಪನೆಯಿರಬೇಕು. ಅಭಿನವಗುಪ್ತ ಉಲ್ಲೇಖಿಸಿರುವ ದರಿದ್ರ ಚಾರುದತ್ತವೂ ಭಾಸನ ಈ ಚಾರುದತ್ತವೂ ಒಂದೇ ಇರಬಹುದು.
ಮೂರು ಅಂಕಗಳ ಪಂಚರಾತ್ರದ ಕಥಾವಸ್ತು ಉತ್ತರಗೋಗ್ರಹಣ ಮತ್ತು ಅಭಿಮನ್ಯು-ಉತ್ತರೆಯರ ವಿವಾಹವೇ ಆದರೂ ವಸ್ತುವಿನ ಧಾಟಿ ಮತ್ತು ನಿರ್ವಹಣಾರೀತಿ ಪೂರ್ಣವಾಗಿ ಕವಿಕಲ್ಪಿತ. ಮಹಾಭಾರತದ ಕಥೆಯ ಆಧಾರದ ಮೇಲೆ ಭಾಸ ರಚಿಸಿರುವ ಆರು ನಾಟಕಗಳಲ್ಲಿ ಇದೇ ಅತ್ಯುತ್ತಮವಾದುದು. ದುರ್ಯೋಧನ ಅನುಷ್ಠಿಸಿದ ಒಂದು ಯಾಗದ ಕೊನೆಯಲ್ಲಿ ದ್ರೋಣಾಚಾರ್ಯ ಪಾಂಡವರಿಗೆ ಅರ್ಧ ರಾಜ್ಯ ಪ್ರದಾನವನ್ನೇ ತಮಗೆ ಗುರುದಕ್ಷಿಣಾರೂಪವಾಗಿ ಅಪೇಕ್ಷಿಸಿದುದೂ, ಆ ದಕ್ಷಿಣೆ ಕೊಡಬೇಕಾದರೆ ಅಜ್ಞಾತವಾಸದಲ್ಲಿದ್ದ ಪಾಂಡವರ ಸಮಾಚಾರವನ್ನು ಐದು ದಿನಗಳೊಳೆಗೆ (ಪಂಚರಾತ್ರ) ತಿಳಿದುಹೇಳಬೇಕೆಂದು ದುರ್ಯೋಧನ ಷರತ್ತು ಹಾಕಿದುದೂ, ಗೋಗ್ರಹಣಯುದ್ಧದಿಂದ ಅದನ್ನು ಸಾಧಿತವಾಗಲು ದುರ್ಯೋಧನ ಪಾಂಡವರಿಗೆ ಅರ್ಧರಾಜ್ಯಕೊಡುವುದೂ, ಮಹಾಭಾರತಯುದ್ಧಕ್ಕೇ ಅವಕಾಶವಿಲ್ಲದಂತೆ ಮಾಡುವ ಮೂಲಕಥೆಯ ಹೊರಕಟ್ಟನ್ನೇ ಪಲ್ಲಟಗೊಳಿಸುವುದು ನಾಟಕೀಯ ಅಂಶಗಳು. ಸ್ತ್ರೀಪಾತ್ರಗಳೇ ಇಲ್ಲದ ವೀರರಸ ಪ್ರಧಾನವಾದ ಈ ನಾಟಕದಲ್ಲಿ ದುರ್ಯೋಧನ ಧರ್ಮವೀರ, ದ್ರೋಣ ದಯಾವೀರ, ಇತರರು ಯುದ್ಧವೀರರು.
ಮಧ್ಯಮವ್ಯಾಯೋಗ, ದೂತವಾಕ್ಯ, ಕರ್ಣಭಾರ, ದೂತಘಟೋತ್ಕಚ, ಊರುಭಂಗ ಈ ಐದು ಮಹಾಭಾರತದ ಆಯಾ ಪ್ರಕರಣದ ಮೇಲೆ ರಚಿತವಾದ ಏಕಾಂಕ ನಾಟಕಗಳು. ಇಷ್ಟು ಏಕಾಂಕ ನಾಟಕಗಳನ್ನು ರಚಿಸಿರುವ ಸಂಸ್ಕೃತ ಕವಿ ಭಾಸನೊಬ್ಬನೇ. ಹಿಡಿಂಬೆಯ ಮಗನೂ ತನ್ನ ಜನ್ಮಾರಭ್ಯ ತಂದೆಯಾದ ಭೀಮಸೇನನನ್ನು ಕಣ್ಣಾರ ಕಂಡರಿಯದವನೂ ಆದ ಘಟೋತ್ಕಚ ತನ್ನ ತಾಯಿಯ ಆಹಾರಕ್ಕೆಂದು ಆ ಮಧ್ಯಮ ಪಾಂಡವನಾದ ತನ್ನ ತಂದೆಯನ್ನೇ ಅವಳಲ್ಲಿಗೆ ಕರೆದೊಯ್ದ ವಿಚಿತ್ರ ಪ್ರಸಂಗ ಮಧ್ಯಮವ್ಯಾಯೋಗದ ವಸ್ತು. ದೂತವಾಕ್ಯದಲ್ಲಿ ಕೃಷ್ಣನು ಪಾಂಡವರ ದೂತನಾಗಿ ದರ್ಯೋಧನನೊಡನೆ ಸಂಧಾನಕ್ಕೆ ಹೋದುದು ನಿರೂಪಿತವಾಗಿದೆ. ಬ್ರಾಹ್ಮಣವೇಷಧರಿಸಿ ಬಂದ ಇಂದ್ರನಿಗೆ ಅವನ ಬೇಡಿಕೆಯಂತೆ ದಾನವೀರ ಕರ್ಣ ತನ್ನ ಕವಚಕುಂಡಲಗಳನ್ನೇ ದಾನ ಮಾಡಿದ ಪ್ರಕರಣವನ್ನು ಕರ್ಣಭಾರ ಹೃದಯಂಗಮವಾಗಿ ಚಿತ್ರಿಸುತ್ತದೆ. ಘಟೋತ್ಕಚ ಕೃಷ್ಣದೂತನಾಗಿ ಕೌರವರಲ್ಲಿಗೆ ಹೋದ ಸನ್ನಿವೇಶ ದೂತಘಟೋತ್ಕಚದ ವಸ್ತು. ಭೀಮ - ದುರ್ಯೋಧನರ ಗದಾಯುದ್ಧದ ಪರಿಣಾಮವಾಗಿ ಸಂಭವಿಸಿದ ದುರ್ಯೋಧನನ ಊರುಭಂಗವೇ ವಸ್ತುವಾಗಿ ಉಳ್ಳ ಊರುಭಂಗದಲ್ಲಿ ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿ ದುರ್ಯೋಧನನ ಕರುಣಾಜನಕವಾದ ಮರಣ ರಂಗಮಂಚದ ಮೇಲೆಯೇ ಪ್ರದರ್ಶಿತವಾಗಿದೆ. ಸಂಸ್ಕೃತ ನಾಟಕಗಳ ಪೈಕಿ ಇದೊಂದೇ ಶೋಕಾಂತನಾಟಕ.
ಬಾಲಚರಿತ ಆರು ಅಂಕಗಳಲ್ಲಿ ಕೃಷ್ಣನ ಜನನ ಮತ್ತು ಬಾಲಲೀಲೆಗಳನ್ನು ಪ್ರದರ್ಶನಕ್ಕೆ ಅರ್ಹವಾದ ರೀತಿಯಲ್ಲಿ ನಿರೂಪಿಸುತ್ತದೆ. ಆದರೆ ಅನೇಕ ವಿವರಗಳು ಹರಿವಂಶ, ವಿಷ್ಣುಪುರಾಣ, ಭಾಗವತಗಳಲ್ಲಿ ಇರುವುದಕ್ಕಿಂತ ತೀರ ಭಿನ್ನವಾಗಿವೆ. ಕೃಷ್ಣ ಅರಿಷ್ಟರ ಯುದ್ಧ, ಕಂಸ ಅರಿಷ್ಟರ ಮರಣ ರಂಗದ ಮೇಲೆಯೇ ಪ್ರದರ್ಶಿತವಾಗಿವೆ. ನಾಟಕದ ಯಾವ ಭಾಗದಲ್ಲೂ ಗೋಪಿಕಾಸ್ತ್ರೀಯರ ವೃತ್ತಾಂತದ ಸೊಂಕೂ ಇಲ್ಲದಿರುವುದು ಗಮನಾರ್ಹ.
ಆಧಾರ: ಮೈಸೂರು ವಿಶ್ವಕೋಶದಲ್ಲಿರುವ ವಿಸ್ತೃದ ಬರಹದ ಸಂಕ್ಷಿಪ್ತ ರೂಪ
Great Sanskrit Poet Bhasa
ಕಾಮೆಂಟ್ಗಳು